Advertisement

ಶಾಖೋತ್ಪನ್ನ ಕೇಂದ್ರಗಳಿಗೆ ವಿಶ್ರಾಂತಿ

02:56 PM Jul 24, 2022 | Team Udayavani |

ರಾಯಚೂರು: ಒಂದು ಕಾಲದಲ್ಲಿ ವರ್ಷದ ಎಲ್ಲ ದಿನಗಳು ಕೆಲಸ ಮಾಡುತ್ತಿದ್ದ ಶಾಖೋತ್ಪನ್ನ ಕೇಂದ್ರಗಳಿಗೆ ಇತ್ತೀಚೆಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಘಟಕಗಳು ಈ ಬಾರಿ ವರುಣನ ಕೃಪೆಯಿಂದ ಸ್ಥಗಿತಗೊಂಡಿವೆ.

Advertisement

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಆರ್‌ಟಿಪಿಎಸ್‌)  ಹಾಗೂ ಯರಮರಸ್‌ ಸೂಪರ್‌ ಕ್ರಿಟಿಕಲ್‌ ಥರ್ಮಲ್‌ ಪವರ್‌ ಸ್ಟೇಶನ್‌ಗಳು ಕಳೆದ ಕೆಲ ದಿನಗಳಿಂದ ಸಂಪೂರ್ಣ ಉತ್ಪಾದನೆ ನಿಲ್ಲಿಸಿವೆ. ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಎಲ್ಲೆಡೆ ಜಲ ಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಇದರಿಂದ ಜಲ ವಿದ್ಯುತ್‌ ಎಂದಿಗಿಂತ ಹೆಚ್ಚು ಉತ್ಪಾದನೆಯಾಗುತ್ತಿದೆ. ಅದರ ಜತೆಗೆ ಪವನ ಶಕ್ತಿ ಕೂಡ ಹೆಚ್ಚಾಗಿ ಬರುತ್ತಿದ್ದು, ಶಾಖೋತ್ಪನ್ನ ಕೇಂದ್ರಗಳ ಮೇಲೆ ನೇರ ಪರಿಣಾಮ ಬೀರಿದೆ. ಆರ್‌ಟಿಪಿಎಸ್‌ನ ಎಂಟು ಘಟಕಗಳಿಂದ 1720 ಮೆಗಾವ್ಯಾಟ್‌ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಿಂದ 1600 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದು. ಈಗ ಎರಡು ಕೇಂದ್ರಗಳ ಎಲ್ಲ ಘಟಕಗಳು ಸ್ಥಗಿತಗೊಂಡಿದ್ದು, ಒಂದೇ ಒಂದು ಮೆಗಾವ್ಯಾಟ್‌ ಉತ್ಪಾದನೆ ಮಾಡುತ್ತಿಲ್ಲ. ಈ ಎರಡು ಕೇಂದ್ರಗಳು ಹೊರತಾಗಿಯೂ ರಾಜ್ಯದಲ್ಲಿ 1642 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಅದರ ಜತೆಗೆ ಸೋಲಾರ್‌ ಯೂನಿಟ್‌ಗಳಿಂದಲೂ ವಿದ್ಯುತ್‌ ಸಿಗುತ್ತಿದೆ.

ಶರಾವತಿಯಲ್ಲಿ 216 ಮೆಗಾವ್ಯಾಟ್‌, ಆಲಮಟ್ಟಿಯಲ್ಲಿ 43 ಮೆಗಾವ್ಯಾಟ್‌, ಜೋಗದಲ್ಲಿ 60 ಮೆಗಾವ್ಯಾಟ್‌, ವಾರಾಹಿಯಲ್ಲಿ 60 ಮೆಗಾವ್ಯಾಟ್‌, ನಾಗ್ಝರಿಯಲ್ಲಿ 104 ಮೆಗಾವ್ಯಾಟ್‌, ಶಿವನಸಮುದ್ರದಲ್ಲಿ 33 ಮೆಗಾವ್ಯಾಟ್‌ ಹೀಗೆ ನಾನಾ ಕಡೆ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಆದರೆ, ಬಳ್ಳಾರಿ ಶಾಖೊತ್ಪನ್ನ ಕೇಂದ್ರದಿಂದ ಅ ಧಿಕ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಎರಡು ಘಟಕಗಳಿಂದ 674 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕೋವಿಡ್‌ ವೇಳೆ ಸ್ಥಗಿತ: ಆರ್‌ಟಿಪಿಎಸ್‌ನ ಇತಿಹಾಸದಲ್ಲೇ ಎಂದಿಗೂ ಎಂಟಕ್ಕೆ ಎಂಟೂ ಘಟಕಗಳು ಸ್ಥಗಿತಗೊಂಡ ನಿದರ್ಶನ ಇರಲಿಲ್ಲ. ಕೋವಿಡ್‌ ಸಂಕಷ್ಟದ ವೇಳೆ ಎಲ್ಲೆಡೆ ಕೈಗಾರಿಕೆಗಳು ಸ್ಥಗಿತಗೊಂಡ ಕಾರಣ ವಿದ್ಯುತ್‌ ಬೇಡಿಕೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆಗ ಅನಿವಾರ್ಯವಾಗಿ ಶಾಖೋತ್ಪನ್ನ ಕೇಂದ್ರಗಳನ್ನು ನಿಲ್ಲಿಸುವ ಸನ್ನಿವೇಶ ಏರ್ಪಟ್ಟು ಮೊದಲ ಬಾರಿಗೆ ಸ್ಥಗಿತಗೊಳಿಸಲಾಗಿತ್ತು. ಅದೇ ವೇಳೆ ಸುಮಾರು 600ಕ್ಕೂ ಅ ಧಿಕ ಗುತ್ತಿಗೆ ಕಾರ್ಮಿಕರನ್ನು ಕೈ ಬಿಡಲಾಗಿತ್ತು. ಈಗ ರಾಜ್ಯದಲ್ಲಿ ಪರ್ಯಾಯ ವಿದ್ಯುತ್‌ ಮೂಲಗಳು ಹೆಚ್ಚಾಗಿರುವ ಕಾರಣ ಶಾಖೋತ್ಪನ್ನ ಕೇಂದ್ರಗಳ ಮೇಲಿನ ಅವಲಂಬನೆ ಕ್ರಮೇಣ ಕ್ಷೀಣಿಸುತ್ತಿದೆ.

ಬಿಟಿಪಿಎಸ್‌ಗೂ ಶಾಕ್‌

Advertisement

ಬಳ್ಳಾರಿ ಥರ್ಮಲ್‌ ಪವರ್‌ ಸ್ಟೇಶನ್‌ ಕೂಡ ಕೆಲ ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು. ಅಲ್ಲಿಯೂ ಮೂರು ಘಟಕಗಳಿಂದ 1750 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಲಶಕ್ತಿ ಉತ್ಪಾದನೆ ಹಂತ ಹಂತವಾಗಿ ಕಡಿಮೆಯಾಗುತ್ತಿದ್ದು, ಮಂಗಳವಾರದಿಂದ ಎರಡು ಘಟಕಗಳನ್ನು ಪುನಾರಂಭಿಸಲಾಗಿದೆ.

ರಾಜ್ಯದಲ್ಲಿ ಜಲಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿದ್ದು, ಶಾಖೋತ್ಪನ್ನ ಕೇಂದ್ರಗಳಿಗೆ ಬೇಡಿಕೆ ಕುಗ್ಗಿದೆ. ಹೀಗಾಗಿ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಟಿಪಿಎಸ್‌ನಲ್ಲಿ ವಿದ್ಯುತ್‌ ಆರಂಭಿಸಿದ್ದು, ಶೀಘ್ರದಲ್ಲೇ ಆರ್‌ಟಿಪಿಎಸ್‌ ವೈಟಿಪಿಎಸ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಲಾಗುವುದು. ಕಲ್ಲಿದ್ದಿಲು ಕೊರತೆಯಾಗಿಲ್ಲ. –ಹೆಸರು ಹೇಳಲಿಚ್ಛಿಸದ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next