ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಕಾರು ಡಿವೈಡರ್ ಗುದ್ದಿ ಹಾರಿ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ತಾಯಿ ಫ್ಲೈಓವರಿನಿಂದ ಕೆಳಗೆ ರಸ್ತೆಗೆ ಬಿದ್ದು ಮೃತಪಟ್ಟಿದ್ದು, ಮಗಳು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂಪಲ ನಿವಾಸಿ ವಸಂತಿ (50) ಮೃತರು. ಪುತ್ರಿ ಶ್ರೀಜಾ (20) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಕುಂಪಲ ಕಡೆಯಿಂದ ಕಲ್ಲಾಪುವಿನತ್ತ ಸ್ಕೂಟರಿನಲ್ಲಿದ್ದ ತಾಯಿ ಮಗಳಿಗೆ, ಮಂಗಳೂರಿನಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಫ್ಲೈಓವರ್ ಮೇಲೆ ಕಾರು ಚಾಲಕ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿ ಸವಾರೆಯಾಗಿದ್ದ ವಸಂತಿ ಫ್ಲೈಓವರಿನಿಂದ ಕೆಳಗೆ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಸಂತಿ ನಾಯರ್ ಜಪ್ಪಿನ ಮೊಗರುವಿನಲ್ಲಿ ವಾಸಿಸುತ್ತಿರುವ ತಾಯಿಯನ್ನು ನೋಡಲು ಪುತ್ರಿಯೊಂದಿಗೆ ತೆರಳುತ್ತಿದ್ದರು. ವಸಂತಿ ಅವರ ಪತಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಸಂಚಾರಿ ಠಾಣಾ ಪೊಲೀಸರು ಕಾರು ಚಾಲಕ ಶಮಿತ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.