Advertisement

ಸಾಧಾರಣ ಮೊತ್ತಕ್ಕೆ ಸೌರಾಷ್ಟ್ರ ಕುಸಿತ

06:00 AM Dec 07, 2018 | Team Udayavani |

ರಾಜ್‌ಕೋಟ್‌: ಆತಿಥೇಯ ಸೌರಾಷ್ಟ್ರ ವಿರುದ್ಧ ಮೊದಲ್ಗೊಂಡ ರಣಜಿ ಮುಖಾಮುಖೀಯಲ್ಲಿ ಕರ್ನಾಟಕ ಮೊದಲ ದಿನವೇ ಹಿಡಿತ ಸಾಧಿಸಿದೆ. ಜೈದೇವ್‌ ಶಾ ಪಡೆ 9 ವಿಕೆಟಿಗೆ 288 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ.

Advertisement

ಜಗದೀಶ್‌ ಸುಚಿತ್‌ (104ಕ್ಕೆ 5) ಹಾಗೂ ಪವನ್‌ ದೇಶಪಾಂಡೆ (78ಕ್ಕೆ 3) ಅವರ ದಾಳಿಗೆ ಸಿಲುಕಿ ಸೌರಾಷ್ಟ್ರ ಒದ್ದಾಡಿತು. ಕಮಲೇಶ್‌ ಮಕ್ವಾನ (31) ಹಾಗೂ ಯುವರಾಜ್‌ ಚೂಡಾಸಮ (9) ಶುಕ್ರವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಜೈದೇವ್‌ ಏಕಾಂಗಿ ಹೋರಾಟ
ಸೌರಾಷ್ಟ್ರ ಪರ ನಾಯಕ ಜೈದೇವ್‌ ಶಾ ಏಕಾಂಗಿಯಾಗಿ ಬ್ಯಾಟಿಂಗ್‌ ಹೋರಾಟ ನಡೆಸಿ 97 ರನ್‌ ಹೊಡೆದರು. 159 ಎಸೆತ ಎದುರಿಸಿದ ಶಾ 9 ಬೌಂಡರಿ, 3 ಸಿಕ್ಸರ್‌ ಸಿಡಿಸಿ ಸೌರಾಷ್ಟ್ರ ತಂಡದ ಬಾದ್‌ಶಾ ಎನಿಸಿದರು. ತಂಡದ ಮೊತ್ತ 250 ರನ್‌ ಆಗಿದ್ದಾಗ ದೇಶಪಾಂಡೆ ಎಸೆತದಲ್ಲಿ ಸಮರ್ಥ್ಗೆ ಕ್ಯಾಚ್‌ ನೀಡಿದ ಶಾ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡರು.ಮೊದಲು ಬ್ಯಾಟಿಂಗಿಗೆ ಇಳಿದ ಸೌರಾಷ್ಟ್ರಕ್ಕೆ ಆರಂಭಿಕರಾದ ಹಾರ್ವಿಕ್‌ ದೇಸಾಯಿ (26) ಹಾಗೂ ಸ್ನೆಲ್‌ ಪಟೇಲ್‌ (22) 30 ರನ್‌ ಜತೆಯಾಟ ನಿಭಾಯಿಸಿದರು. ಈ ವೇಳೆ ದಾಳಿಗಿಳಿದ ಸುಚಿತ್‌ ತಮ್ಮ ಸ್ಪಿನ್‌ ಕೈಚಳಕದಿಂದ ವಿಕೆಟ್‌ ಬೇಟೆ ಆರಂಭಿಸಿದರು.

ಅನಂತರ ಕ್ರೀಸ್‌ ಇಳಿದ ಅವಿ ಬರೋಟ್‌ ಖಾತೆ ತೆರೆಯುವ ಮೊದಲೇ ಸುಚಿತ್‌ ಬೌಲಿಂಗ್‌ನಲ್ಲಿ ಬಿ.ಆರ್‌. ಶರತ್‌ ನಡೆಸಿದ ಅದ್ಭುತ ಸ್ಟಂಪ್‌ಗೆ ಬಲಿಯಾದರು. ಅರ್ಪಿತ್‌ ವಸವಾಡ  (38 ರನ್‌) ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡಿದರು. ಮೊತ್ತವನ್ನು 70ರ ತನಕ ವಿಸ್ತರಿಸಿದರು. ಈ ವೇಳೆ ಸುಚಿತ್‌ ಎಸೆತವನ್ನು ಅಂದಾಜಿಸಲಾಗದೆ ಶರತ್‌ಗೆ ಕ್ಯಾಚ್‌ ನೀಡಿದ ಹಾರ್ವಿಕ್‌ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಬಳಿಕ ಬಂದ ಶೆಲ್ಡನ್‌ ಜಾಕ್ಸನ್‌ (4) ಅವರನ್ನೂ ಸುಚಿತ್‌ ಬೇಗನೆ ಔಟ್‌ ಮಾಡಿದರು. ಸ್ಕೋರ್‌ 119 ರನ್‌ ಆಗಿದ್ದಾಗ ಪವನ್‌ ಎಸೆತದಲ್ಲಿ ವಿನಯ್‌ ಕುಮಾರ್‌ಗೆ ಕ್ಯಾಚ್‌ ನೀಡಿದ ಅರ್ಪಿತ್‌ ಐದನೆಯವರಾಗಿ  ಔಟಾದರು. 119 ರನ್ನಿಗೆ ಅಗ್ರ 5 ವಿಕೆಟ್‌ ಕಳೆದುಕೊಂಡಿದ್ದ ಸೌರಾಷ್ಟ್ರ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ  ಜೈದೇವ್‌ ಶಾ ಕಪ್ತಾನನ ಆಟವಾಡಿ ತಂಡದ ರಕ್ಷಣೆಗೆ ನಿಂತರು. ಕೆಳ ಕ್ರಮಾಂಕದಲ್ಲಿ ಪ್ರೇರಕ್‌ ಮಂಕಡ್‌ (37) ಗಮನಾರ್ಹ ಬ್ಯಾಟಿಂಗ್‌ ನಡೆಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-9 ವಿಕೆಟಿಗೆ 288 (ಶಾ 97, ವಸವಾಡ 38, ಮಂಕಡ್‌ 37, ಮಕ್ವಾನಾ ಬ್ಯಾಟಿಂಗ್‌ 31, ಹಾರ್ವಿಕ್‌ 26, ಪಟೇಲ್‌ 22, ಸುಚಿತ್‌ 104ಕ್ಕೆ 5, ದೇಶಪಾಂಡೆ 78ಕ್ಕೆ 3).

ಜೈದೇವ್‌ ಶಾ ಕ್ರಿಕೆಟ್‌ ವಿದಾಯ
ಸೌರಾಷ್ಟ್ರ ರಣಜಿ ತಂಡದ ನಾಯಕ ಜೈದೇವ್‌ ಶಾ ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ.

ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್‌ ಶಾ ಅವರ ಮಗನಾಗಿರುವ ಜೈದೇವ್‌ ಸೌರಾಷ್ಟ್ರ ಪರ 111 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇದು ರಣಜಿ ನಾಯಕತ್ವದ ದಾಖಲೆಯಾಗಿದೆ.

ಜೈದೇವ್‌ ಶಾ ನೇತೃತ್ವದಲ್ಲಿ ಸೌರಾಷ್ಟ್ರ ತಂಡ 2007-08ರ ರಣಜಿ ಟ್ರೋಫಿ ಚಾಂಪಿಯನ್‌ ಆಗಿತ್ತು. ಈ ಯಶಸ್ಸಿನಿಂದ ಅವರಿಗೆ ಇಸ್ರೇಲ್‌ಗೆ ಚುಟುಕ ಪ್ರವಾಸ ಕೈಗೊಂಡ ಭಾರತ “ಎ’ ತಂಡದ ನಾಯಕತ್ವ ಒಲಿದಿತ್ತು. 2002-03ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾಪರ್ಣೆ ಮಾಡಿದ ಶಾ ಒಟ್ಟು 119 ಪಂದ್ಯಗಳನ್ನು ಆಡಿದ್ದು, 29. 67ರ ಸರಾಸರಿಯಲ್ಲಿ 5252 ರನ್‌ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next