Advertisement

ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌: ದ್ವಿತೀಯ ದಿನ ಬೌಲರ್‌ಗಳ ಮೇಲುಗೈ; 21 ವಿಕೆಟ್‌ ಪತನ

11:31 PM Jun 07, 2022 | Team Udayavani |

ಆಲೂರು (ಕರ್ನಾಟಕ): ಆತಿಥೇಯ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಸಾಗುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದ ದ್ವಿತೀಯ ದಿನ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ 21 ವಿಕೆಟ್‌ಗಳು ಉರುಳಿವೆ. ಇದರಿಂದಾಗಿ ಪಂದ್ಯ ತೂಗುಯ್ನಾಲೆಯಲ್ಲಿದೆ.

Advertisement

ಇಲ್ಲಿನ ಕೆಎಸ್‌ಸಿಎ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಕಠಿನವಾಗಿ ಪರಿಣಮಿಸಿದೆ. ಇದರಿಂದಾಗಿ ಉಭಯ ತಂಡಗಳ ಆಟಗಾರರು ರನ್ನಿಗಾಗಿ ಒದ್ದಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ ಮುನ್ನಡೆ ಗಳಿಸಿದ ಬಳಿಕ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡಿದೆ. ದಿನದಾಟದ ಅಂತ್ಯಕ್ಕೆ ಕೇವಲ 100 ರನ್ನಿಗೆ 8 ವಿಕೆಟ್‌ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ನಿಗೆ 4 ವಿಕೆಟ್‌ ಉರುಳಿಸಿದ್ದ ಸೌರಭ್‌ ಕುಮಾರ್‌ ಮತ್ತೆ ಬಿಗು ದಾಳಿ ಸಂಘಟಿಸಿದ್ದು 32 ರನ್ನಿಗೆ 3 ವಿಕೆಟ್‌ ಹಾರಿಸಿದ್ದಾರೆ. ಅಂಕಿತ್‌ ರಜಪೂತ್‌ 15 ರನ್ನಿಗೆ 2 ವಿಕೆಟ್‌ ಕಿತ್ತಿದ್ದಾರೆ. ಇದರಿಂದಾಗಿ ಕರ್ನಾಟಕ ಅಂತಿಮ ಅವಧಿಯ ಆಟದ ವೇಳೆ ಎಂಟು ವಿಕೆಟ್‌ ಕಳೆದುಕೊಳ್ಳುವಂತಾಯಿತು.

ದಿನದಾಟದ ಅಂತ್ಯಕ್ಕೆ ಕರ್ನಾಟಕ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇನ್ನೆರಡು ವಿಕೆಟ್‌ ಉಳಿಸಿಕೊಂಡಿದ್ದು ಒಟ್ಟಾರೆ 198 ರನ್‌ ಮುನ್ನಡೆಯಲ್ಲಿದೆ. ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಶ್ರೀನಿವಾಸ್‌ ಶರತ್‌ 10 ರನ್ನುಗಳಿಂದ ಆಡುತ್ತಿದ್ದಾರೆ. ಮೂರನೇ ದಿನವೇ ಈ ಪಂದ್ಯದ ಫ‌ಲಿತಾಂಶ ಬರುವುದು ಬಹುತೇಕ ಖಚಿತವಾಗಿದೆ. ವಿಜಯಮಾಲೆ ಯಾರಿಗೆ ಎಂಬುದು ನೋಡಬೇಕಾಗಿದೆ.

ಕರ್ನಾಟಕದ ಮೂವರು ಅಗ್ರ ಆಟಗಾರರಾದ ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌ ಮತ್ತು ನಾಯಕ ಮನೀಷ್‌ ಪಾಂಡೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ಗೆ ಅವಗಣಿಸಲ್ಪಟ್ಟ ಅಗರ್ವಾಲ್‌ 5 ಬೌಂಡರಿ ಸಹಿತ 22 ರನ್‌ ಗಳಿಸಿದರೆ ನಾಯರ್‌ 10 ರನ್ನಿಗೆ ಔಟಾದರು.

ಈ ಮೊದಲು ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 253 ರನ್ನಿಗೆ ಆಲೌಟಾಯಿತು. ಆಬಳಿಕ ಬ್ಯಾಟಿಂಗ್‌ ನಡೆಸಿದ ಉತ್ತರ ಪ್ರದೇಶ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ ಕೇವಲ 155 ರನ್ನಿಗೆ ಆಲೌಟಾಯಿತು. ರೋನಿತ್‌ ಮೊರೆ 47 ರನ್ನಿಗೆ 3 ವಿಕೆಟ್‌ ಕಿತ್ತರು.

Advertisement

ಸಂಕ್ಷಿಪ್ತ ಸ್ಕೋರು
ಕರ್ನಾಟಕ 253 ಮತ್ತು 8 ವಿಕೆಟಿಗೆ 100 (ಸೌರಭ್‌ 32ಕ್ಕೆ 3, ಅಂಕಿತ್‌ ರಜಪೂತ್‌ 15ಕ್ಕೆ 2); ಉತ್ತರ ಪ್ರದೇಶ 155 (ಪ್ರಿಯಂ ಗರ್ಗ್‌ 39, ರಿಂಕು ಸಿಂಗ್‌ 33, ರೋನಿತ್‌ ಮೊರೆ 47ಕ್ಕೆ 3).

ಪಾರ್ಕರ್‌ ದ್ವಿಶತಕ; ಮುಂಬಯಿ ಬೃಹತ್‌ ಮೊತ್ತ
ಬೆಂಗಳೂರು: ಉತ್ತರಾಖಂಡ್‌ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬಯಿ ತಂಡವು 8 ವಿಕೆಟಿಗೆ 647 ರನ್ನುಗಳ ಬೃಹತ್‌ ಮೊತ್ತ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಸುವೇದ್‌ ಪಾರ್ಕರ್‌ ಪದಾರ್ಪಣೆಗೈದ ಪಂದ್ಯದಲ್ಲಿಯೇ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಇದಕ್ಕುತ್ತರವಾಗಿ ಉತ್ತರಾಖಂಡ್‌ ಎರಡನೇ ದಿನದಾಟಿದ ಅಂತ್ಯಕ್ಕೆ 2 ವಿಕೆಟಿಗೆ 39 ರನ್‌ ಗಳಿಸಿದೆ. ನಾಯಕ ಜಯ್‌ ಬಿಸ್ತ (0) ಮತ್ತು ಮಾಯಾಂಕ್‌ ಮಿಶ್ರ (4) ಅವರನ್ನು ತಂಡ ಕಳೆದುಕೊಂಡಿದೆ. ಕಮಲ್‌ ಸಿಂಗ್‌ (27) ಮತ್ತು ಕುನಾಲ್‌ ಚಂಡೇಲ 8 ರನ್ನುಗಳಿಂದ ಆಡುತ್ತಿದ್ದಾರೆ.

ಪಾರ್ಕರ್‌ ಅವರ ವೈವಿಧ್ಯಮಯ ಹೊಡೆತಗಳಿಂದ ಕೂಡಿದ 252 ರನ್‌ ಮತ್ತು ಸರ್ಫರಾಜ್ ಖಾನ್ ಅವರ ಆಕ್ರಮಣಕಾರಿ 153 ರನ್ನುಗಳ ನೆರವಿನಿಂದ ಮುಂಬಯಿ ತಂಡವು ಉತ್ತಮ ಸ್ಥಿತಿಯಲ್ಲಿದೆ. ಪಾರ್ಕರ್‌ ಅವರು ಪದಾರ್ಪಣೆಗೈದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತದ 12ನೇ ಆಟಗಾರರಾಗಿದ್ದಾರೆ. ಸ್ವಪ್ನಿಲ್‌ ಸಿಂಗ್‌ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ದ್ವಿಶತಕ ಪೂರ್ತಿಗೊಳಿಸಿದ್ದರು.

ಪಾರ್ಕರ್‌ ಅವರ 252 ರನ್‌ ಭಾರತದ ಪರ ಪದಾರ್ಪಣೆಗೈದ ಪಂದ್ಯದಲ್ಲಿ ದಾಖಲಿಸಿದ ನಾಲ್ಕನೇ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐದನೇ ಗರಿಷ್ಠ ಮೊತ್ತವಾಗಿದೆ. ಪಾರ್ಕರ್‌ ಇದೀಗ ಮುಂಬಯಿ ತಂಡದ ಕೋಚ್‌ ಅಮೋಲ್‌ ಅವರ ಹಾಕಿದ ಹೆಜ್ಜೆಯನ್ನು ಅನುಸರಿಸಿದ್ದಾರೆ. ಮಜುಮಾªರ್‌ ಕೂಡ ಪದಾ ರ್ಪಣೆಗೈದ ಪಂದ್ಯದಲ್ಲಿ ದ್ವಿಶತಕ (260) ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು
ಮುಂಬಯಿ 8 ವಿಕೆಟಿಗೆ 647 ಡಿಕ್ಲೇರ್‌x (ಸುವೇದ್‌ ಪಾರ್ಕರ್‌ 252, ಸರ್ಫರಾಜ್ ಖಾನ್‌ 153, ಶಾಮ್ಸ್‌ ಮುಲಾನಿ 59, ದೀಪಕ್‌ ಧಾಪೋಲ 89ಕ್ಕೆ 3); ಉತ್ತರಾಖಂಡ 2 ವಿಕೆಟಿಗೆ 39 (ಕಮಲ್‌ ಸಿಂಗ್‌ 27 ಬ್ಯಾಟಿಂಗ್‌).

ಉತ್ತಮ ಸ್ಥಿತಿಯಲ್ಲಿ ಮಧ್ಯಪ್ರದೇಶ
ಆಲೂರು: ಶುಭಂ ಶರ್ಮ ಅವರ ಅಜೇಯ ಶತಕದಿಂದಾಗಿ ಮಧ್ಯಪ್ರದೇಶ ತಂಡವು ಪಂಜಾಬ್‌ ತಂಡದೆದುರಿನ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದ ದ್ವಿತೀಯ ದಿನ ಉತ್ತಮ ಸ್ಥಿತಿಯಲ್ಲಿದೆ.

ಪಂಜಾಬ್‌ನ 219 ರನ್ನಿಗೆ ಉತ್ತರವಾಗಿ ಮಧ್ಯಪ್ರದೇಶ ತಂಡವು ಶುಭಂ ಶರ್ಮ ಮತ್ತು ಹಿಮಾಂಶು ಮಂತ್ರಿ ಅವರ ಉತ್ತಮ ಆಟದಿಂದಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟಿಗೆ 238 ರನ್‌ ಗಳಿಸಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ 19 ರನ್‌ ಮುನ್ನಡೆ ಸಾಧಿಸಿರುವ ಮಧ್ಯಪ್ರದೇಶ ಸುಸ್ಥಿತಿಯಲ್ಲಿದೆ.

ಮಧ್ಯಪ್ರದೇಶದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಯಶ್‌ ದುಬೆ ಮತ್ತು ಹಿಮಾಂಶು ಮಂತ್ರಿ ಉತ್ತಮವಾಗಿ ಆಡುವ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಪಂಜಾಬ್‌ನ ವೇಗಿಗಳಿಂದ ಈ ಜೋಡಿಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಆಬಳಿಕ ಲೆಗ್‌ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಈ ಜೋಡಿಯನ್ನು ಮುರಿದರು.

ಮಂತ್ರಿ ಮತ್ತು ಶುಭಂ ಶರ್ಮ ದ್ವಿತೀಯ ವಿಕೆಟಿಗೆ 120 ರನ್ನುಗಳ ಜತೆಯಾಟ ನೀಡಿದ್ದರಿಂದ ಮಧ್ಯಪ್ರದೇಶ ಮುನ್ನಡೆ ಸಾಧಿಸುವಂತಾಯಿತು. ಈ ಜೋಡಿಯನ್ನು ಮುರಿಯಲು ಮಾರ್ಕಂಡೆ ಮತ್ತೆ ಯಶಸ್ವಿಯಾದರು. 89 ರನ್‌ ಗಳಿಸಿದ ಮಂತ್ರಿ ಔಟಾದರೆ ಶುಭಂ ಶರ್ಮ 102 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದು ಷವರ ಆರನೇ ಪ್ರಥಮ ದರ್ಜೆ ಶತಕವಾಗಿದೆ.

ಸಂಕ್ಷಿಪ್ತ ಸ್ಕೋರು
ಪಂಜಾಬ್‌ 219 (ಅಭಿಷೇಕ್‌ ಶರ್ಮ 47, ಅನ್ಮೋಲ್‌ಪ್ರೀತ್‌ ಸಿಂಗ್‌ 47, ಪುನೀತ್‌ ದಾತೆ 48ಕ್ಕೆ 3, ಅನುಭವ್‌ ಅಗರ್ವಾಲ್‌ 36ಕ್ಕೆ 3); ಮಧ್ಯಪ್ರದೇಶ 2 ವಿಕೆಟಿಗೆ 238 (ಶುಭಂ ಶರ್ಮ 102 ಔಟಾಗದೆ, ಹಿಮಾಂಶು ಮಂತ್ರಿ 89, ಮಾಯಾಂಕ್‌ ಮಾರ್ಕಂಡೆ 70ಕ್ಕೆ 2).

ಬಂಗಾಲ 5 ವಿಕೆಟಿಗೆ 577
ಬೆಂಗಳೂರು: ಝಾರ್ಖಂಡ್‌ ವಿರು ದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬಂಗಾಲ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 577 ರನ್ನುಗಳ ಬೃಹತ್‌ ಮೊತ್ತ ಪೇರಿಸಿದೆ. ಸುದೀಪ್‌ ಘರಾಮಿ ಮತ್ತು ಅನುಸ್ತೂಪ್‌ ಮಜುಮಾªರ್‌ ಅವರ ಆಕರ್ಷಕ ಶತಕ ದಿನದ ವಿಶೇಷವಾಗಿತ್ತು.

ಮೊದಲ ದಿನ ಶತಕ ಪೂರ್ತಿ ಗೊಳಿಸಿದ್ದ ಘರಾಮಿ ಒಟ್ಟಾರೆ 380 ಎಸೆತ ಎದುರಿಸಿ 186 ರನ್‌ ಗಳಿಸಿ ಔಟಾದರು. 21 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿ ದ್ದರು. ಅವರು ಮಜುಮಾªರ್‌ ಜತೆಗೆ 243 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಅನುಸ್ತೂಪ್‌ ಮಜುಮಾªರ್‌ 117 ರನ್‌ ಹೊಡೆದರು. ಪಶ್ಚಿಮ ಬಂಗಾಲದ ಯುವಜನ ಸೇವೆ ಮತ್ತು ಕ್ರೀಡೆಯ ಹಾಲಿ ಸಚಿವರೂ ಆಗಿರುವ ಮನೋಜ್‌ ತಿವಾರಿ 54 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರು
ಬಂಗಾಲ 5 ವಿಕೆಟಿಗೆ 577 (ಸುದೀಪ್‌ ಘರಾಮಿ 186, ಅನುಸ್ತೂಪ್‌ 117, ಅಭಿಮನ್ಯು ಈಶ್ವರನ್‌ 65, ಅಭಿಷೇಕ್‌ ರಾಮನ್‌ 61, ಅಭಿಷೇಕ್‌ ಪೊರೆಲ್‌ 68, ಮನೋಜ್‌ ತಿವಾರಿ 54 ಬ್ಯಾಟಿಂಗ್‌).

Advertisement

Udayavani is now on Telegram. Click here to join our channel and stay updated with the latest news.

Next