Advertisement

Ranji Trophy 2023-24; ಪಂಜಾಬ್‌ ವಿರುದ್ಧ ಗೆಲುವಿನ ನಗು ಚೆಲ್ಲಿದ ಕರ್ನಾಟಕ

12:47 AM Jan 09, 2024 | Team Udayavani |

ಹುಬ್ಬಳ್ಳಿ,: ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ 2023-24ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಎಲೈಟ್‌ “ಸಿ’ ವಿಭಾಗದ ಪಂದ್ಯದಲ್ಲಿ ಪಂಜಾಬ್‌ಗ 7 ವಿಕೆಟ್‌ಗಳ ಸೋಲುಣಿಸಿ 6 ಅಂಕ ಸಂಪಾದಿಸಿದೆ.

Advertisement

362 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಂಜಾಬ್‌, 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 238 ರನ್‌ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಸೋಮವಾರ ಬ್ಯಾಟಿಂಗ್‌ ಮುಂದುವರಿಸಿ 413ಕ್ಕೆ ಆಲೌಟ್‌ ಆಯಿತು. 52 ರನ್ನುಗಳ ಸಣ್ಣ ಗುರಿ ಪಡೆದ ಕರ್ನಾಟಕ ಇದನ್ನು ಸಾಧಿಸುವಾಗ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
ಕರ್ನಾಟಕದ ಮುಂದಿನ ಎದುರಾಳಿ ಗುಜರಾತ್‌. ಈ ಪಂದ್ಯ ಜ. 12ರಂದು ಅಹ್ಮದಾಬಾದ್‌ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ. ಸೋಮವಾರ ಮುಗಿದ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್‌ 111 ರನ್ನುಗಳಿಂದ ತಮಿಳುನಾಡಿಗೆ ಸೋಲುಣಿಸಿತು.

ಜೋಸ್‌, ಮಾಯಾಂಕ್‌ ಶೂನ್ಯ
ಚೇಸಿಂಗ್‌ ವೇಳೆ ಕರ್ನಾಟದಕ ಆರಂಭ ಆಘಾತಕಾರಿಯಾಗಿತ್ತು. ಮಾಯಾಂಕ್‌ ಅಗರ್ವಾಲ್‌ ಮತ್ತು ನಿಕಿನ್‌ ಜೋಸ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಾಯಕ ಅಗ ರ್ವಾಲ್‌ ಅವರಂತೂ ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್‌ ನೀಡಿ ವಾಪಸಾದರು. ಈ ಯಶಸ್ಸು ಬಲತೇಜ್‌ ಸಿಂಗ್‌ ಅವರದಾಯಿತು. ಆರ್‌. ಸಮರ್ಥ್ 21 ರನ್‌ ಮಾಡಿ ಔಟಾದರು. ಎಸ್‌. ಶರತ್‌ (ಔಟಾಗದೆ 21) ಮತ್ತು ಮನೀಷ್‌ ಪಾಂಡೆ (ಔಟಾಗದೆ 10) ಸೇರಿಕೊಂಡು ತಂಡದ ಗೆಲುವನ್ನು ಸಾರಿದರು.

7 ವಿಕೆಟ್‌ಗಳಿಂದ 175 ರನ್‌
3 ವಿಕೆಟಿಗೆ 238 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಪಂಜಾಬ್‌ ಉಳಿದ 7 ವಿಕೆಟ್‌ಗಳಿಂದ 175 ರನ್‌ ಪೇರಿಸಿತು. ಆದರೆ ಯಾರಿಂದಲೂ ಆರಂಭಿಕರಂತೆ ಕ್ರೀಸ್‌ ಆಕ್ರಮಿಸಿಕೊಂಡು ಆಡಲು ಸಾಧ್ಯವಾಗಲಿಲ್ಲ. 3ನೇ ದಿನದಾಟದಲ್ಲಿ ಪ್ರಭ್‌ಸಿಮ್ರಾನ್‌ ಸಿಂಗ್‌ (100) ಮತ್ತು ಅಭಿಷೇಕ್‌ ಶರ್ಮ (91) ಮೊದಲ ವಿಕೆಟಿಗೆ 192 ರನ್‌ ರಾಶಿ ಹಾಕಿ ಕರ್ನಾಟಕವನ್ನು ಕಾಡಿದ್ದರು.

ಸೋಮವಾರದ ಆಟದಲ್ಲಿ ಯಾರೂ ಅರ್ಧ ಶತಕದ ಗಡಿ ತಲುಪಲಿಲ್ಲ. 43 ರನ್‌ ಮಾಡಿದ ಕೀಪರ್‌ ಗೀತಾಂಶ್‌ ಖೇರ ಅವರದೇ ಹೆಚ್ಚಿನ ಗಳಿಕೆ. ಮಾಯಾಂಕ್‌ ಮಾರ್ಕಂಡೆ ಮತ್ತು ಅರ್ಷದೀಪ್‌ ಸಿಂಗ್‌ 36 ರನ್‌ ಗಳಿಸಿದರು. ನಾಯಕ ಮನ್‌ದೀಪ್‌ ಸಿಂಗ್‌ 27, ನೇಹಲ್‌ ವಧೇರ 26, ಬಲತೇಜ್‌ ಸಿಂಗ್‌ ಅಜೇಯ 22 ರನ್‌ ಮಾಡಿದರು.
ತಲಾ 3 ವಿಕೆಟ್‌ ಉರುಳಿಸಿದ ರೋಹಿತ್‌ ಕುಮಾರ್‌ ಮತ್ತು ಶುಭಾಂಗ್‌ ಹೆಗ್ಡೆ ಕರ್ನಾಟಕದ ಯಶಸ್ವಿ ಬೌಲರ್‌ಗಳು. ವಿದ್ವತ್‌ ಕಾವೇರಪ್ಪ 2 ಹಾಗೂ ಆರ್‌. ಸಮರ್ಥ್ ಒಂದು ವಿಕೆಟ್‌ ಕೆಡವಿದರು.
ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌-152 ಮತ್ತು 413 (ಪ್ರಭ್‌ಸಿಮ್ರಾನ್‌ 100, ಅಭಿಷೇಕ್‌ 91, ಗೀತಾಂಶ್‌ 43, ಮಾರ್ಕಂಡೆ 36, ಅರ್ಷದೀಪ್‌ 36, ಮನ್‌ದೀಪ್‌ 27, ವಧೇರ 26, ಬಲತೇಜ್‌ ಅಜೇಯ 22, ಶುಭಾಂಗ್‌ 89ಕ್ಕೆ 3, ರೋಹಿತ್‌ 101ಕ್ಕೆ 3, ವಿದ್ವತ್‌ 59ಕ್ಕೆ 2, ಸಮರ್ಥ್ 17ಕ್ಕೆ 1, ವೈಶಾಖ್‌ 93ಕ್ಕೆ 1). ಕರ್ನಾಟಕ-8 ವಿಕೆಟಿಗೆ 514 ಡಿಕ್ಲೇರ್‌, 3 ವಿಕೆಟಿಗೆ 52 (ಸಮರ್ಥ್ 21, ಶರತ್‌ ಔಟಾಗದೆ 21, ಪ್ರೇರಿತ್‌ ದತ್ತ 10ಕ್ಕೆ 2, ಬಲತೇಜ್‌ 12ಕ್ಕೆ 1).

Advertisement

ಮುಂಬಯಿಗೆ ಇನ್ನಿಂಗ್ಸ್‌ ಜಯ
ಪಾಟ್ನಾ: ಎಲೈಟ್‌ “ಬಿ’ ವಿಭಾಗದ ರಣಜಿ ಪಂದ್ಯದಲ್ಲಿ ಮುಂಬಯಿ ತಂಡ ಆತಿಥೇಯ ಬಿಹಾರಕ್ಕೆ ಇನ್ನಿಂಗ್ಸ್‌ ಹಾಗೂ 51 ರನ್‌ ಅಂತರದ ಸೋಲುಣಿಸಿ 7 ಅಂಕ ಗಳಿಸಿತು. ಬಿಹಾರ ಎರಡೂ ಇನ್ನಿಂಗ್ಸ್‌ಗಳಲ್ಲಿ 100 ರನ್ನಿಗೆ ಆಲೌಟ್‌ ಆದುದೊಂದು ವಿಶೇಷ.
ಮುಂಬಯಿಯ 251 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡಿದ ಬಿಹಾರ 100 ರನ್ನಿಗೆ ಕುಸಿದು ಫಾಲೋಆನ್‌ಗೆ ಸಿಲುಕಿತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬಿಹಾರದ ಬ್ಯಾಟಿಂಗ್‌ ಸುಧಾರಿಸಲಿಲ್ಲ. ಅದು ಮತ್ತೆ 100 ರನ್ನಿಗೆ ಸರ್ವಪತನ ಕಂಡಿತು.

ಶಿವಂ ದುಬೆ 4, ರಾಯ್‌ಸ್ಟನ್‌ ಡಾಯಸ್‌ 3 ವಿಕೆಟ್‌ ಉರುಳಿಸಿ ಬಿಹಾರವನ್ನು ಕಾಡಿದರು. ಮೋಹಿತ್‌ ಅವಸ್ಥಿ, ತನುಷ್‌ ಕೋಟ್ಯಾನ್‌ ಮತ್ತು ನಾಯಕ ಶಮ್ಸ್‌ ಮುಲಾನಿ ಒಂದೊಂದು ವಿಕೆಟ್‌ ಕಿತ್ತರು. ಬಿಹಾರ ಪರ ಆರಂಭಕಾರ ಶರ್ಮಾನ್‌ ನಿಗ್ರೋಧ್‌ 40, ಕೀಪರ್‌ ಬಿಪಿನ್‌ ಸೌರಭ್‌ 30 ರನ್‌ ಮಾಡಿದರು.
ಮುಂಬಯಿ ತನ್ನ ದ್ವಿತೀಯ ಪಂದ್ಯವನ್ನು ಆಂಧ್ರಪ್ರದೇಶ ವಿರುದ್ಧ ಆಡಲಿದೆ.

ನಾಯಕತ್ವ ಕಳೆದುಕೊಂಡ ಯಶ್‌ ಧುಲ್‌
ಪುದುಚೇರಿ ವಿರುದ್ಧದ ರಣಜಿ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲನುಭವಿಸಿದ ಬೆನ್ನಲ್ಲೇ ಯಶ್‌ ಧುಲ್‌ ಅವರನ್ನು ದಿಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಸೀನಿಯರ್‌ ಬ್ಯಾಟರ್‌ ಹಿಮ್ಮತ್‌ ಸಿಂಗ್‌ ಅವರಿಗೆ ಕ್ಯಾಪ್ಟನ್ಸಿ ನೀಡಲಾಗಿದೆ.

ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕರಾಗಿರುವ ಯಶ್‌ ಧುಲ್‌ ಅವರಿಗೆ 2022ರಲ್ಲಿ ದಿಲ್ಲಿ ರಣಜಿ ತಂಡದ ಸಾರಥ್ಯ ವಹಿಸಲಾಗಿತ್ತು. 21 ವರ್ಷದ ಧುಲ್‌ ಈವರೆಗೆ 43.88ರ ಸರಾಸರಿಯಲ್ಲಿ 1,185 ರನ್‌ ಬಾರಿಸಿದ್ದಾರೆ. ಆದರೆ ಪುದುಚೇರಿ ವಿರುದ್ಧ ಗಳಿಸಿದ್ದು 2 ಮತ್ತು 23 ರನ್‌ ಮಾತ್ರ.

“ಯಶ್‌ ಪ್ರತಿಭಾನ್ವಿತ ಆಟಗಾರ ನಿಜ. ಆದರೆ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲಿನ ನಾಯಕತ್ವದ ಹೊರೆಯನ್ನು ಇಳಿಸಲಾಗಿದೆ’ ಎಂಬುದಾಗಿ ಡಿಡಿಸಿಎ ಕಾರ್ಯದರ್ಶಿ ರಾಜನ್‌ ಮನ್‌ಚಂದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next