ಉಳ್ಳಾಲ: ನಾಡಿನ ಉಳಿವಿಗಾಗಿ ಎಲ್ಲರನ್ನೂ ಜತೆಗೂಡಿಸಿ ಕೊಂಡು ಶತ್ರುಗಳ ವಿರುದ್ಧ ಹೋರಾಡಿದ ಅಬ್ಬಕ್ಕಳನ್ನು ಸ್ಮರಿಸುವ ಕಾರ್ಯವನ್ನು ಅಬ್ಬಕ್ಕ ಉತ್ಸವದ ಮೂಲಕ ನಡೆಸಲಾಗುತ್ತಿದೆ. ಉಳ್ಳಾಲದ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ 8 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಸಚಿವ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ವತಿಯಿಂದ ಉಳ್ಳಾಲದ ಕಡಲ ಕಿನಾರೆಯಲ್ಲಿ ಶನಿವಾರ ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ಬಕ್ಕನ ಶೌರ್ಯ, ಸಾಹಸ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಅಬ್ಬಕ್ಕ ಉತ್ಸವವನ್ನು ಸೌಹಾರ್ದದ ಸಂಕೇತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಾಣಿಯ ಧೈರ್ಯ, ನಾಯಕತ್ವ ಗುಣ ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಲಿ ಎಂದರು.
ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್., ಮುಡಾ ಆಯುಕ್ತ ಶ್ರೀಕಾಂತ ರಾವ್, ಉಳ್ಳಾಲ ಜಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಪಸ್ಥಿತರಿದ್ದರು.
ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಆಯುಕ್ತ ರಾಜೇಶ್ ಜಿ. ವಂದಿಸಿದರು.