Advertisement

ರಾತ್ರೋರಾತ್ರಿ ಮನೆ ಖಾಲಿ ಮಾಡಿದ ರಮ್ಯಾ

06:00 AM Dec 04, 2018 | Team Udayavani |

ಮಂಡ್ಯ: ಚಿತ್ರನಟ, ಮಾಜಿ ಸಚಿವ ಅಂಬರೀಶ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಮಾಜಿ ಸಂಸದೆ ರಮ್ಯಾ ಅವರು ಭಾನುವಾರ ಮಧ್ಯರಾತ್ರಿ ಮಂಡ್ಯ ನಗರದಲ್ಲಿನ ತಮ್ಮ ಮನೆಯನ್ನು ಖಾಲಿ ಮಾಡಿದ್ದಾರೆ. ವಿದ್ಯಾನಗರದ ಕೆ.ಆರ್‌.ರಸ್ತೆಯಲ್ಲಿರುವ ಮಾಜಿ ಶಾಸಕ ಸಾದತ್‌ ಅಲಿಖಾನ್‌ ಅವರ ಮನೆಯನ್ನು ರಮ್ಯಾ ಬಾಡಿಗೆಗೆ ಪಡೆದಿದ್ದರು. ಭಾನುವಾರ ತಡರಾತ್ರಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ಪೀಠೊಪಕರಣಗಳು ಸೇರಿದಂತೆ ಇತರ ಸಾಮಾನು-ಸರಂಜಾಮುಗಳನ್ನು ತುಂಬಿಸಿಕೊಂಡು ಬೆಂಗಳೂರಿಗೆ ರವಾನಿಸಿದ್ದಾರೆ. 

Advertisement

ಅಂಬರೀಶ್‌ ನಿಧನದ ಬಳಿಕ ಪಾರ್ಥಿವ ಶರೀರವನ್ನು ರಮ್ಯಾ ವಾಸವಿದ್ದ ಬಾಡಿಗೆ ಮನೆಯ ಮುಂಭಾಗದಲ್ಲೇ ಇರುವ ಸರ್‌ ಎಂ.ವಿ.ಕ್ರೀಡಾಂಗಣಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಗೆ ಅವರು ಬಂದಿರಲಿಲ್ಲ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತ್ಯಕ್ರಿಯೆಯಲ್ಲೂ ರಮ್ಯಾ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಅವರ ವಿರುದ್ಧ ಜಿಲ್ಲೆಯ ಜನರು ಹಾಗೂ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವತ: ರಮ್ಯಾ ಅಭಿಮಾನಿಗಳೂ ತಮ್ಮ ನಾಯಕಿಯ ನಿಲುವನ್ನು ಕಟುವಾಗಿಯೇ ವಿರೋಧಿಸಿದ್ದರು. ರಮ್ಯಾ ಜಿಲ್ಲೆಯ ಜನರ ಪಾಲಿಗೆ ಸತ್ತರು ಎಂದು ತಿಥಿ ಕಾರ್ಡ್‌ ಮಾಡಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟು ವ್ಯಂಗ್ಯ ಮಾಡಲಾಗಿತ್ತು. ಈ ಬೆಳವಣಿಗೆಗಳಿಂದ ರಮ್ಯಾ ವಾಸವಾಗಿದ್ದ ಬಾಡಿಗೆ ಮನೆಗೆ ಮುಂಜಾಗ್ರತೆಯಾಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಈಗ ನಗರದಲ್ಲಿದ್ದ ನಿವಾಸವನ್ನು ಖಾಲಿ ಮಾಡಿರುವ ರಮ್ಯಾ, ಮಂಡ್ಯ ಜಿಲ್ಲಾ ರಾಜಕಾರಣಕ್ಕೆ ಗುಡ್‌ಬೈ ಹೇಳಿದಂತೆ ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next