ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ವೇಳೆ ತಾವು ಆಡಿದ ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಮೂಲಕ ಮಾಜಿ ಸ್ಪೀಕರ್ ರಮೇಶ್ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಎಲ್ಲವನ್ನೂ ಪಕ್ಷ ರಾಜಕಾರಣಕ್ಕೆ ಸೀಮಿತವಾಗಿ ನೋಡುವ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಆ ಭಾಷಣದುದ್ದಕ್ಕೂ ನಾನು ದೇಶವನ್ನು, ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದೇನೆಯೇ ಹೊರತು, ಕಾಂಗ್ರೆಸ್ ಪಕ್ಷವನ್ನು ಅಲ್ಲ. ಇದು ಆ ಭಾಷಣದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಬಂದಾಗ ಹಸಿವಿನಲ್ಲಿದ್ದ ದೇಶ, ಇಂದು ಈ ಪ್ರಮಾಣದ ಸುಭದ್ರತೆ ಕಂಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಕುರಿತು ದೇಶ ಮರೆತರೆ ಅದು ದುರದೃಷ್ಟಕರ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ನೆಹರೂ-ಗಾಂಧಿ ಕುಟುಂಬದ ಪಾತ್ರವನ್ನೂ… ಅದೇ ನನ್ನ ಮಾತಿನ ಉದ್ದೇಶವಾಗಿತ್ತು ಎಂದಿದ್ದಾರೆ. ದೇಶದ ಅಖಂಡತೆಗೆ, ಅಭಿವೃದ್ಧಿಗಾಗಿ ಗುಂಡಿಗೆ ಬಲಿಯಾದ ಇಬ್ಬರು ಒಂದೇ ಕುಟುಂಬದಲ್ಲಿರುವ ಉದಾಹರಣೆ ಇಡೀ ಪ್ರಪಂಚದಲ್ಲಿಲ್ಲ ಎಂದಿದ್ದಾರೆ.
ಅಂತಹ ಕುಟುಂಬಕ್ಕೆ ದೇಶದ ಉದ್ಯಮಿಗಳು, ಕೈಗಾರಿಕಾ ಕ್ಷೇತ್ರದವರು, ರಾಜಕಾರಣಿಗಳು ಎಲ್ಲರನ್ನೂ ಸೇರಿಸಿ ಹೇಳಿದ್ದೆ ವಿನಃ , ಕಾಂಗ್ರೆಸ್ ಪಕ್ಷದವರು ಮಾಡಿಕೊಂಡಿದ್ದಾರೆ ಎಂದು ಅಲ್ಲ. ಆಗರ್ಭ ಶ್ರೀಮಂತ ಕುಟುಂಬದ ಹಿನ್ನೆಲೆಯ ಆ ಕುಟುಂಬ ದೇಶಕ್ಕಾಗಿ ದಶಕಗಟ್ಟಲೇ ಜೈಲಿನಲ್ಲಿತ್ತು. ಅವರ ಕುರಿತ ಕುತ್ಸಿತ ಮನೋಭಾವ ದುರಂತವಲ್ಲದೇ ಬೇರೇನೂ ಅಲ್ಲ. ಆ ಹಿನ್ನೆಲೆಯಲ್ಲಿ ಇವತ್ತು ಇಡೀ ದೇಶ ಸೋನಿಯಾ ಗಾಂಧಿಯವರ ಜೊತೆಗೆ ನಿಲ್ಲಬೇಕೆನ್ನುವುದು ನನ್ನ ಅಭಿಲಾಷೆ ಎಂದು ಹೇಳಿದ್ದಾರೆ.
ಇಷ್ಟೇ ವಿಚಾರ. ಇದನ್ನು ನಾನು ಇನ್ನೂ ನೂರು ಸಾರಿ ಹೇಳುತ್ತೇನೆ, ಪುರಾವೆಗಳೊಂದಿಗೆ, ತರ್ಕದೊಂದಿಗೆ, ಅಂತಃಕರಣದೊಂದಿಗೆ. ಈ ಸತ್ಯವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.