Advertisement

ರಾಮಸೇತು: ರಾಮಾಯಣದ ಜೀವಂತ ಸಾಕ್ಷಿ

08:52 PM Feb 07, 2020 | mahesh |

ರಾಮಾಯಣದ ವಿಚಾರದಲ್ಲಿ ಶ್ರದ್ಧೆ ಇರುವವರಿಗಾಗಲೀ, ಇಲ್ಲದಿರುವವರಿಗಾಗಲೀ ರಾಮಸೇತುವಿನ ನಿರ್ಮಾಣದ ವಿಚಾರದ ಕುರಿತು ಸಾಕಷ್ಟೇ ಕುತೂಹಲ ಇದೆ. ಇದು ರಾಮಸೇನೆಯಿಂದ ನಿರ್ಮಾಣವಾದ್ದು ಎನ್ನುವ ಶ್ರದ್ಧಾಳುವಿನ ನಂಬುಗೆ ಒಂದೆಡೆಯಾದರೆ, ಇನ್ನೊಂದೆಡೆ ಇದು ಮಾನವ ನಿರ್ಮಾಣವೇ ಅಲ್ಲದ ಒಂದು ಪ್ರಾಕೃತಿಕ ಸಂರಚನೆ ಅನ್ನುವ ವಾದ ಇನ್ನೊಂದೆಡೆ. ಇವತ್ತಿನ ವೈಜ್ಞಾನಿಕ ಪರಿಮಿತಿಗಳನ್ನು ಬಳಸಿ ಇದೊಂದು ಮಾನವ ನಿರ್ಮಿತ ಸಂರಚನೆ ಹೌದೋ ಅಲ್ಲವೋ ಅನ್ನುವುದನ್ನು ಖಾತ್ರಿಗೊಳಿಸುವ ಕೆಲವು ಪ್ರಯತ್ನಗಳೂ ಆಗೀಗ ನಡೆದಿವೆ.

Advertisement

ಸೇತುಬಂಧದ ಕುರಿತು ರಾಮಾಯಣ ಏನು ಹೇಳುತ್ತದೆ?
ಬಿಲ್ಲಿನ ಹೆದೆಯೇರಿಸಿ ಕೋಪಗೊಂಡ ರಾಮನೆದುರು ಸಮುದ್ರರಾಜನು ನತಮಸ್ತಕನಾಗಿ “ಸೇತು ನಿರ್ಮಾಣಕ್ಕೆ ಯೋಗ್ಯವಾದ ಸ್ಥಳವೊಂದನ್ನು ನಾನು ಗುರುತಿಸಿಕೊಡುತ್ತೇನೆ’ ಎಂದು ಅರಿಕೆ ಮಾಡಿಕೊಳ್ಳುತ್ತಾನೆ. ವಿಶ್ವಕರ್ಮನ ಮಗನಾದ ನಳನು, ಸೇತು ನಿರ್ಮಾಣದ ಪೂರ್ಣ ಯೋಜನೆಯನ್ನು ತಾನು ವಹಿಸಿಕೊಳ್ಳುತ್ತಾನೆ. ಅವನ ಮಾರ್ಗದರ್ಶನದಂತೆ ಅಗಾಧವಾಗಿದ್ದ ಕಪಿಸೇನೆಯು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಪರ್ವತದ ತುದಿ ಭಾಗವನ್ನೂ, ಲೆಕ್ಕ ಸಂಖ್ಯೆಯಿಲ್ಲದಷ್ಟು ಮರಗಳನ್ನೂ ಆ ವಾನರಸೇನೆಯು ಸಮುದ್ರದಡಕ್ಕೆ ಸಾಗಿಸುತ್ತದೆ. ಕೆಲವು ಮರಗಳನ್ನು ಬುಡ ಸಮೇತವಾಗಿಯೂ, ಕೆಲವನ್ನು ಬುಡವಿಲ್ಲದೆಯೂ ತಂದು ತಂದು ಸಮುದ್ರದಲ್ಲಿ ಕ್ರಮವಾಗಿ ರಾಶಿಗೊಳಿಸುತ್ತಾರೆ. ಈ ಹಂತದಲ್ಲಿ ಆ ಮರಗಳಲ್ಲಿ ಕೆಲವಷ್ಟರ ಹೆಸರನ್ನೂ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಆನೆಗಳಷ್ಟು ದೊಡ್ಡ ದೊಡ್ಡ ಬಂಡೆಗಳನ್ನು, ಪರ್ವತಗಳಿಂದ ಸಮುದ್ರ ತೀರಕ್ಕೆ ತರುವುದಕ್ಕೆ ಕಪಿ ಸೇನಾನಿಗಳು ಯಂತ್ರಗಳನ್ನು ಬಳಸಿದರಂತೆ!

ನಿರ್ಮಾಣ ಕುಶಲತೆಯ ವಿಷಯಕ್ಕೆ ಬರುವಾಗ ವಾಲ್ಮೀಕಿ ರಾಮಾಯಣದ ಕೆಲವು ವಿವರಗಳು ಇವತ್ತಿನ ನಿರ್ಮಾಣ ಶೈಲಿಯೊಡನೆ ಸಾಮ್ಯಗೊಂಡು ಅಚ್ಚರಿ ತರಿಸುತ್ತವೆ. ಸೇತುವೆಯ ಸರಿಯಾದ ದಿಕ್ಕು ಮತ್ತು ಅಳತೆಯನ್ನು ಕಾಯ್ದುಕೊಳ್ಳುವುದಕ್ಕೆ ಕೆಲವು ಕಪಿ ಸೇನಾನಿಗಳು ಅಳತೆಯ ಹಗ್ಗ ಹಿಡಿದು ಮುಂದೆ ಸಾಗುತ್ತಿದ್ದರಂತೆ! ಇನ್ನು ಕೆಲವರು ಅಲ್ಲಲ್ಲಿ ಕಟ್ಟಿಗೆಯ ಕಂಬಗಳನ್ನು ಹಿಡಿದು ನಿಂತು ಅಳತೆಯನ್ನು ಸರಿದೂಗಿಸುತ್ತಿದ್ದರಂತೆ. ಇವೆಲ್ಲ ವಿವರಗಳ ಜೊತೆ ದಿನವೊಂದಕ್ಕೆ ಎಷ್ಟು ಯೋಜನಗಳಷ್ಟು ನಿರ್ಮಾಣ ನಡೆಯಿತೆಂಬ ವಿವರಗಳನ್ನೂ ವಾಲ್ಮೀಕಿ ರಾಮಾಯಣವು ಒದಗಿಸುತ್ತದೆ. ರಾಮಾಯಣದಲ್ಲಿನ ಮಾಹಿತಿಯಂತೆ ಇದು ಒಟ್ಟೂ ನೂರು ಯೋಜನ ಉದ್ದ ಮತ್ತು ಹತ್ತು ಯೋಜನ ಅಗಲದ ಸೇತುವೆ. ಇವತ್ತಿನ ಮಾನದಲ್ಲಿ 35 ಕಿ.ಮೀ. ಉದ್ದ ಮತ್ತು 3.5 ಕಿ.ಮೀ. ಅಗಲದ ಅಳತೆಯಿದು. ರಾಮಾಯಣದ ಲೆಕ್ಕಾಚಾರ ಮತ್ತು ಇವತ್ತಿನ ಲೆಕ್ಕಾಚಾರ – ಎರಡರಲ್ಲೂ ಕಂಡು ಬರುವ 10:1 ಅನುಪಾತವನ್ನು ಗಮನಿಸಿ!

ರಾಮಸೇತುವಿನ ಸಂರಚನೆಯ ಅಧ್ಯಯನ
ರಾಮಸೇತುವಿನ ವಿಚಾರದಲ್ಲಿ ಹೇಳಿಕೊಳ್ಳಬಹುದಾದಂಥ ಸಂಶೋಧನೆಗಳು ಭಾರತೀಯ ಪುರಾತಣ್ತೀ ಇಲಾಖೆಯ ವತಿಯಿಂದ ನಡೆದಿಲ್ಲವೆಂದೇ ಹೇಳಬೇಕು. ಆದರೆ, ಕೆಲವು ಸ್ವತಂತ್ರ ಸಂಶೋಧಕರು ನಡೆಸಿದ ಕೆಲವು ಅಧ್ಯಯನಗಳಿವೆ. ಆದರಲ್ಲಿ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಾ. ಎಸ್‌. ಬದ್ರಿನಾರಾಯಣನ್‌ ಅವರ ಅಧ್ಯಯನ ಬಹುಮುಖ್ಯವಾದ್ದು. ಅವರ ಅಧ್ಯಯನದ ಪ್ರಕಾರ, ರಾಮಸೇತು ಯಾವುದೇ ಕಾರಣಕ್ಕೂ ತನ್ನಿಂತಾನೆ ರಚನೆಯಾದ್ದಲ್ಲ, ಅದು ಮನುಷ್ಯಕೃತವೇ ಆನ್ನುವುದಕ್ಕೆ ಸಾಕಷ್ಟು ಭೂಸಂರಚನಾ ದಾಖಲೆಗಳಿವೆ. ಇವತ್ತಿಗೂ ಆ ಭಾಗದಲ್ಲಿ ಮಣ್ಣಿನ ಪದರಗಳ ಅಧ್ಯಯನ ನಡೆದರೆ ಸಹಸ್ರಮಾನಗಳ ಹಿಂದಿನ ಮರಗಳ ರಾಶಿಯ ಒಂದಿಲ್ಲೊಂದು ಬಗೆಯ ಕಾರ್ಬನ್‌ ಕುರುಹುಗಳು ದೊರೆಯುತ್ತವೆ ಎಂಬುದು ಅವರ ವಾದ.

ಇವತ್ತಿಗೂ ಗೂಗಲ್‌ ಅರ್ಥ್ನಲ್ಲಿ ನೋಡಿದರೆ ಧನುಷ್ಕೊಡಿಯಿಂದ ಶ್ರೀಲಂಕದ ತಲೈಮನ್ನಾರ್‌ವರೆಗೆ ಸಮುದ್ರದಡಿಯಲ್ಲಿ ಮುಳುಗಿರುವ ಸೇತುವಿನಂಥ ಭೂ ಸಂರಚನೆಯನ್ನು ನೋಡಬಹುದು. ಎರಡು ಭೂಖಂಡಗಳನ್ನು ಜೋಡಿಸಲೆಂದೇ ಮಾಡಿದ ಪ್ರಯತ್ನವಿದೆಂದು ಅದರ ಆಕಾರದಿಂದ ಭಾಸವಾಗುತ್ತದೆ. ಕಾಲ ಸರಿದಂತೆ ಸಮುದ್ರಮಟ್ಟ ಹೆಚ್ಚುತ್ತ ಸಾಗಿ ಇವತ್ತಿಗೆ ಈ ಸಂರಚನೆಯ ಮೇಲೆ ಸಮುದ್ರದ ನೀರು ನಿಂತುಕೊಂಡಿದೆ. ರಾಮೇಶ್ವರಂ ದೇವಾಲಯದ ದಾಖಲೆಗಳ ಪ್ರಕಾರ 1480ನೇ ಇಸವಿಯಲ್ಲಿ ಮಹಾ ಚಂಡಮಾರುತವೊಂದು ಬರುವವರೆಗೂ ರಾಮಸೇತು ನೀರಿನಿಂದ ಮೇಲೇ ಇತ್ತಂತೆ!

Advertisement

ಹೀಗೆ, ಇಡೀ ರಾಮಾಯಣದ್ದು ಒಂದು ತೂಕವಾದರೆ, ಆ ರಾಮಾಯಣದ ಜೀವಂತ ಸ್ಮಾರಕದಂತೆ ಉಳಿದುಕೊಂಡಿರುವ ರಾಮಸೇತುವಿನದು ಇನ್ನೊಂದೇ ತೂಕ.

-ನವೀನ ಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next