Advertisement

ಜೈ ಶ್ರೀರಾಮ್‌ ಅನುರಣನ; ನಿರ್ದೋಷಿಗಳಿಂದ, ಜಾಲತಾಣಗಳವರೆಗೆ ಭಾಜಪ ಕಾರ್ಯಕರ್ತರ ರಾಮ ಧ್ಯಾನ

10:37 AM Oct 01, 2020 | mahesh |

ಹೊಸದಿಲ್ಲಿ: ರಾಮಾಯಣದ ಮಹಾಕಾವ್ಯದಲ್ಲಿ ಕಂಡಂತೆ ಯಾವುದೇ ಹೋರಾಟಕ್ಕೂ ಮುನ್ನ, ದಿಗ್ವಿಜಯಗಳ ಬಳಿಕ ಹೊಮ್ಮುತ್ತಿದ್ದ ಉದ್ಗಾರ “ಜೈಶ್ರೀರಾಮ್‌’. ಸಿಬಿಐ ವಿಶೇಷ ನ್ಯಾಯಾಲಯ ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಆರೋಪಿಗಳಿಗೆ “ನಿರ್ದೋಷಿ’ ತೀರ್ಪು ಪ್ರಕಟಿಸುತ್ತಿದ್ದಂತೆ ದೇಶಾದ್ಯಂತ ಬುಧವಾರ ಮೊಳಗಿದ್ದು ಕೂಡ ಅದೇ “ಜೈಶ್ರೀರಾಮ್‌’! ನಿರ್ದೋಷಿಗಳಾದಿಯಾಗಿ ಜಾಲತಾಣದ ರಾಮಭಕ್ತರವರೆಗೂ “ಜೈಶ್ರೀರಾಮ್‌’ ಅನುರಣನ ಜೋರಾಗಿತ್ತು.

Advertisement

ಅಯೋಧ್ಯೆ ಹೋರಾಟ ಆರಂಭಗೊಂಡಾಗಿನಿಂದ ಸಂಘ ಪರಿವಾರದಲ್ಲಿ “ಜೈ ಶ್ರೀರಾಮ್‌’ ಸ್ವಾಗತ ಸಂಬೋಧ ಕವಾಗಿ ಬೆರೆತಿತ್ತು. ಪರಸ್ಪರ ಪರಿಚಯಿಸಿಕೊಳ್ಳುವಾಗ, ಬೀಳ್ಕೊಡುವಾಗ ರಾಮನಾಮದ ಪದ ಬಳಕೆ ಲೋಕರೂಢಿಯಾಯಿತು. ರಥಯಾತ್ರೆಯಿಂದ ಹಿಡಿದು ಆರೆಸ್ಸೆಸ್‌ ಶಾಖೆಗಳವರೆಗೆ ಕ್ರಮೇಣ ಸಂಘಶಕ್ತಿಯ ಒಗ್ಗಟ್ಟನ್ನು ಹಿಡಿದಿಡುವಷ್ಟು ಮಟ್ಟಕ್ಕೆ “ಜೈಶ್ರೀರಾಮ್‌’ ಬಂಧ ಏರ್ಪಡಿಸಿತ್ತು. ಪರಿವಾರ ಬಳಗದ ಬಹುತೇಕರ ವಾಟ್ಸ್‌ ಆéಪ್‌, ಫೇಸ್‌ಬುಕ್‌ ಸ್ಟೇಟಸ್‌ಗಳಲ್ಲೂ “ಜೈ ಶ್ರೀರಾಮ್‌’ ಜಯಘೋಷ ಮೊಳಗಿತ್ತು.

ಪ್ರಸ್ತುತ ತೀರ್ಪಿನ ಬಳಿಕ “ಈ ಗೆಲುವು ನನ್ನದಲ್ಲ, ಶ್ರೀರಾಮನಿಗೆ ಸಲ್ಲಬೇಕು’ ಎಂಬಂತೆ ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಮುಂತಾದವವರು “ಜೈ ಶ್ರೀರಾಮ್‌’ ಮೂಲಕ ಹರ್ಷ ಸೂಚಿಸಿದ್ದಾರೆ. ನೋಡುತ್ತಾ ನೋಡುತ್ತಾ, ಈ ಪದ ಸಾಮಾಜಿಕ ಜಾಲ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ನಿರ್ದೋಷಿ ಮುರಳಿ ಮನೋಹರ್‌ ಜೋಶಿ ಅವರ ಮನೆಯಲ್ಲಿ ಸಿಹಿ ಹಂಚು ವಾಗ, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಆಡ್ವಾಣಿ ಮನೆಗೆ ಭೇಟಿ ಕೊಟ್ಟು ಅಭಿನಂದಿಸುವಾಗಲೂ “ಜೈ ಶ್ರೀರಾಮ್‌’ ಪದ ಬಳಸಿದ್ದಾರೆ.

ರಾಮಭಕ್ತಿಯ ಹ್ಯಾಶ್‌ಟ್ಯಾಗ್‌
ಸಿಬಿಐ ಕೋರ್ಟಿನ ತೀರ್ಪು ಹೊರಬೀಳುತ್ತಿದ್ದಂತೆ #ಒಚಜಿಖrಜಿRಚಞ ಪದ ಗೆಲುವಿನ ಸೂಚಕವಾಗಿ ಬಿಜೆಪಿ ವಲಯದಲ್ಲಿ ಕಹಳೆ ಊದಿತ್ತು. ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಟ್ವಿಟರ್‌ನಲ್ಲಿ ಧನುಸ್ಸುಧಾರಿ ಶ್ರೀರಾಮನ ಫೋಟೋ ಹಾಕಿ, “ಜೈಶ್ರೀರಾಮ್‌’ ಎಂದು ಟ್ವೀಟಿಸಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಅವರ ಟ್ವಿಟರ್‌ ಕೂಡ ಇದೇ ಮಾದರಿಯ ಸಂಭ್ರಮ ವ್ಯಕ್ತಪಡಿಸಿದೆ. ಮಹಾರಾಷ್ಟ್ರ, ತೆಲಂಗಾಣ, ಝಾರ್ಖಂಡ್‌ನ‌ ಬಿಜೆಪಿ ಖಾತೆಗಳಲ್ಲೂ ರಾಮಭಕ್ತಿ ಹೊಳೆಯಾಗಿದೆ.

ಕಾಶಿ, ಮಥುರಾ ಧ್ಯಾನ
ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ “ಜೈಶ್ರೀರಾಮ್‌’ ಹ್ಯಾಶ್‌ಟ್ಯಾಗ್‌ ಸೃಷ್ಟಿಸಿದವರಲ್ಲಿ ಹಲವರು ಆಡ್ವಾಣಿ ಅವರ ಹೋರಾಟ ಸ್ಮರಿಸಿದ್ದಾರೆ. “ಕಾಶಿ, ಮಥುರಾ ಹೋರಾಟಗಳಿಗೂ ಆಡ್ವಾಣಿ ಮುಂದಾಳತ್ವದ ಆವಶ್ಯಕತೆ ಇದೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ರಾಮ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ’ ಎಂದು ಅನೇಕರು ಮರ್ಯಾದಾ ಪುರುಷೋತ್ತಮನನ್ನು ಜಪಿಸಿದ್ದಾರೆ. ಅಷ್ಟೂ ನಿರ್ದೋಷಿಗಳ ಫೋಟೋ ಹಾಕಿ “ನಮ್ಮ ಹೀರೋಗಳು’ ಎಂದೂ ಕೆಲವರು ಪಟ್ಟ ಕಟ್ಟಿದ್ದಾರೆ. ಕತ್ತಲು ಆವರಿಸುತ್ತಿದ್ದಂತೆ ಹಣತೆಗಳ ಮೂಲಕ “ಜೈ ಶ್ರೀರಾಮ್‌’ ಪದಾಕೃತಿ ಚಿತ್ರಿಸಿ, ಕೆಲವರು ಫೇಸ್‌ಬುಕ್‌ಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ. “ಜೈಶ್ರೀರಾಮ್‌’ ಸ್ಲೋಗನ್‌ನಿಂದ ರಾಮನನ್ನು ಭಕ್ತಿಯ ಬ್ರ್ಯಾಂಡ್‌ ಆಗಿ ರೂಪಿಸಿದ ಬಿಜೆಪಿ ಬಳಗಕ್ಕೆ ರಾಮನೇ ರಾಯಭಾರಿ ಎನ್ನುವ ವಿಶ್ಲೇಷಣೆಗಳೂ ಕೇಳಿಬಂದಿವೆ.

Advertisement

ಸಂಚು ಇರಲಿಲ್ಲ ಎಂದು ಅಂದೇ ಹೇಳಿದ್ದೆವು: ಪಿ.ಸಿ.ಶರ್ಮಾ
ಎಲ್‌.ಕೆ. ಆಡ್ವಾಣಿ ಸೇರಿದಂತೆ 32 ಮಂದಿ ವಿವಾದಿತ ಕಟ್ಟಡ ಕೆಡವಿ ಹಾಕಿದ್ದರ ವಿರುದ್ಧ ಕ್ರಿಮಿನಲ್‌ ಅಪರಾಧ ಕೈಬಿಡಲು ಸಿಬಿಐ 2003ರಲ್ಲಿಯೇ ನಿರ್ಧರಿಸಿತ್ತು. ತನಿಖಾ ಸಂಸ್ಥೆಯ ವಿಶೇಷ ಕೋರ್ಟ್‌ ಬುಧವಾರ ನೀಡಿದ ತೀರ್ಪು ತನಿಖಾ ಸಂಸ್ಥೆಯ ಹಿಂದಿನ ನಿರ್ಧಾರವನ್ನೇ ಎತ್ತಿ ಹಿಡಿದಂತಾಗಿದೆ ಎಂದು ನಿವೃತ್ತ ನಿರ್ದೇಶಕ ಪಿ.ಸಿ.ಶರ್ಮಾ ಹೇಳಿದ್ದಾರೆ. 2 ವರ್ಷಗಳ ಕಾಲ ಸಿಬಿಐ ನಿರ್ದೇಶಕನಾಗಿದ್ದ ವೇಳೆ ಅಯೋಧ್ಯೆ ಪ್ರಕರಣದ ಪ್ರತಿಯೊಂದು ಅಂಶವನ್ನು ಪರಿಶೀಲಿಸಿದ್ದೆ. ಈ ಸಂದರ್ಭದಲ್ಲಿ ಕ್ರಿಮಿನಲ್‌ ಸಂಚಿನ ವಿಚಾರವೇ ಕಂಡು ಬರಲಿಲ್ಲ. ಹೀಗಾಗಿಯೇ, ರಾಯ್‌ಬರೇಲಿ ಕೋರ್ಟ್‌ನಲ್ಲಿ ಆಡ್ವಾಣಿ ಮತ್ತು ಇತರರ ವಿರುದ್ಧ ಇರುವ ಕ್ರಿಮಿನಲ್‌ ಆರೋಪ ಕೈಬಿಡಲು ನಿರ್ಧರಿಸಿರುವ ಬಗ್ಗೆ ಅರಿಕೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ವಿಶೇಷ ಕೋರ್ಟ್‌ ನೀಡಿರುವ ತೀರ್ಪು ತನಿಖೆಯ ಬಗ್ಗೆ ಆಕ್ಷೇಪ ಎತ್ತಿದವರಿಗೆ ನೇರ ಉತ್ತರವಾಗಿದೆ ಎಂದು ಅವರು ಹೇಳಿದ್ದಾರೆ.

ಜಮೀನು ವಿಂಗಡಿಸಿ ತೀರ್ಪಿತ್ತಿದ್ದ ಅಲಹಾಬಾದ್‌ ಹೈಕೋರ್ಟ್‌
ಅಯೋಧ್ಯೆಯ 2.77 ಎಕರೆ ಜಮೀನನ್ನು 3 ಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದ್ದು ಈಗ ಇತಿಹಾಸ. ಅಂದಿತ ತೀರ್ಪಿನಲ್ಲಿ ಜಮೀನನ್ನು ಸುನ್ನಿ ವಕ್ಫ್ ಬೋರ್ಡ್‌, ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾಗೆ ವಿಂಗಡಿಸಿ ಕೊಟ್ಟಿತ್ತು. ನ್ಯಾ|ಸಿಬ್‌ಘಾಟ್‌ ಉಲ್ಲಾ ಖಾನ್‌, ನ್ಯಾ|ಸುಧೀರ್‌ ಅಗರ್ವಾಲ್‌ ಮತ್ತು ನ್ಯಾ|ಧರ್ಮವೀರ್‌ ಶರ್ಮಾ ಅವರು 2:1 ಅನುಪಾತದಲ್ಲಿ ಈ ತೀರ್ಪು ನೀಡಿದ್ದರು. ಜಮೀನನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ದೀರ್ಘ‌ ಕಾಲದ ವಿಚಾರಣೆ ನಡೆದು 2010ರ ಆ.3ರಂದು ಹೈಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.

ತೀರ್ಪಿನ ಪ್ರಕಾರ ಮೂರನೇ ಒಂದು ಅಂಶವನ್ನು ಸುನ್ನಿ ವಕ್ಫ್ ಮಂಡಳಿಗೆ, ಮೂರನೇ ಒಂದಂಶ ವನ್ನು ನಿರ್ಮೋಹಿ ಅಖಾಡಕ್ಕೆ ಮತ್ತು ಅದೇ ಪ್ರಮಾಣದ ಭಾಗವನ್ನು ರಾಮಲಲ್ಲಾನಿಗೆ ವಿಂಗಡಿಸಿ ನೀಡಬೇಕು ಎಂದು ಹೇಳಿತ್ತು. 8 ಸಾವಿರ ಪುಟಗಳ ತೀರ್ಪು ಇದಾಗಿತ್ತು. ತೀರ್ಪು ಪ್ರಕಟವಾದ 3 ತಿಂಗಳ ಕಾಲ ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದೂ ನ್ಯಾಯಪೀಠ ಹೇಳಿತ್ತು. ರಾಮಲಲ್ಲಾ, ನಿರ್ಮೋಹಿ ಅಖಾಡಾ, ಸುನ್ನಿ ವಕ್ಫ್ ಬೋರ್ಡ್‌ ಯಾವುದೇ ದಾಖಲೆ ಮೂಲಕ ಜಮೀನು ನಮ್ಮದು ಎಂದು ಸ್ವಾಮ್ಯ ಸಾಧಿಸುವಂತಿಲ್ಲ ಎಂದೂ ಹೇಳಿತ್ತು. ಹಿಂದೂ, ನಿರ್ಮೋಹಿ ಅಖಾಡ, ಮುಸ್ಲಿಂ ಪರ ಗುಂಪುಗಳು ಜತೆಗೂಡಿ 2.77 ಎಕರೆ ಜಮೀನಿನ ಮಾಲಕತ್ವ ಹೊಂದಬಹುದು ಎಂದಿತ್ತು.

ನ್ಯಾ| ಖಾನ್‌ ತಮ್ಮ ತೀರ್ಪಿನಲ್ಲಿ, ಮುಸ್ಲಿಮರು ಮತ್ತು ಹಿಂದೂಗಳು 2.77 ಎಕ್ರೆ ಜಮೀನು ನಮಗೆ ಸೇರಿದ್ದು ಎಂಬ ಅಂಶ ಸಾಬೀತು ಮಾಡುವಲ್ಲಿ ವಿಫ‌ಲರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದರು. “ಬಾಬರನ ಕಾಲದಲ್ಲಿಯೇ ಮಸೀದಿ ನಿರ್ಮಾಣ ವಾಗಿತ್ತು ಎಂಬ ಅಂಶ ಸಾಬೀತುಪಡಿಸಲು ಮುಸ್ಲಿಂ ಸಮುದಾಯ ವಿಫ‌ಲವಾಗಿದೆ. ಜತೆಗೆ ಅದೇ ಸ್ಥಳದಲ್ಲಿ ಮಸೀದಿ ತಲೆಎತ್ತುವ ಮುನ್ನ ದೇಗುಲವಿತ್ತು ಎಂಬ ಅಂಶವನ್ನು ಪುಷ್ಟೀಕರಿಸುವಲ್ಲಿ ಯಶ ಕಂಡಿಲ್ಲ’ ಎಂದಿದ್ದರು. “ಮಸೀದಿಯ 3 ಗುಮ್ಮಟಗಳ ಪೈಕಿ ಪ್ರಧಾನ ಗುಮ್ಮಟ ಇದ್ದ ಸ್ಥಳವೇ ಹಿಂದೂಗಳ ನಂಬಿಕೆ ಪ್ರಕಾರ ಶ್ರೀರಾಮನ ಜನ್ಮಸ್ಥಳ’ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖೀಸಿತ್ತು.

ಮೇಲ್ಮನವಿಗೆ ಸಿದ್ಧತೆ
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಮುಸ್ಲಿಂನ ಎಲ್ಲ ಕಕ್ಷಿದಾರರು ಸೇರಿ ಕುಳಿತು ಚರ್ಚಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಬೇಕು ಎಂದು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್‌ ರಶೀದ್‌ ಫಿರಂಗಿ ಮಹಾಲಿ ತಿಳಿಸಿದ್ದಾರೆ. ಮತ್ತೂಂದೆಡೆ ಅಹ್ಮದ್‌ ಪಟೇಲ್‌, ಅಭಿಷೇಕ್‌ ಸಿಂ Ì, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕೆಲವು ಕಾಂಗ್ರೆಸ್‌ ನಾಯಕರು, ಎಐಎಂಐಎಂ ನಾಯಕ ಅಸಾವುದ್ದೀನ್‌ ಓವೈಸಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಜನ್ಮ ಸ್ಥಾನದಿಂದ ಮಸೀದಿ ತೆರವು: ಅರ್ಜಿ ತಿರಸ್ಕೃತ
ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನ ದೇಗುಲದ ಆವರಣದಲ್ಲಿರುವ ಮಸೀದಿಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಕೋರಿ ಇತ್ತೀಚೆಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ನಿರ್ಧರಿಸಿದ್ದಾರೆ. ನ್ಯಾಯಾ ಧೀಶ ಛಾಯಾ ಶರ್ಮಾ ಅವರು 1991ರಲ್ಲಿ ಅಂಗೀಕಾರಗೊಂಡ ಪ್ರಾರ್ಥನಾ ಸ್ಥಳಗಳ (ವಿಶೇಷ ರಿಯಾತಿ) ಕಾಯ್ದೆ ಪ್ರಕಾರ, ಅರ್ಜಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸೆ.25ರಂದು ಲಕ್ನೋ ನಿವಾಸಿಯೊಬ್ಬರು ಈ ಬಗ್ಗೆ ಮಥುರಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿವಾದಿತ ಕಟ್ಟಡ ಉರುಳಿಸಿರುವುದು ಪೂರ್ವ ಯೋಜಿತವಲ್ಲ ಎಂಬ ನಮ್ಮ ಹಕ್ಕನ್ನು ಕೋರ್ಟ್‌ ಎತ್ತಿಹಿಡಿದಿರುವುದು ಸ್ವಾಗತಾರ್ಹ. ಜೈ ಶ್ರೀರಾಮ್‌…
ಸುಶೀಲ್‌ ಮೋದಿ, ಬಿಹಾರ ಡಿಸಿಎಂ

ನಮ್ಮ ದೇಶದ ಗೌರವಾನ್ವಿತ ನಾಯಕರ ಮೇಲಿನ ದುರುದ್ದೇಶಪೂರಿತ ಪ್ರಕರಣ ಅಂತಿಮವಾಗಿ 3 ದಶಕಗಳ ನಂತರ ಬದಿಗೆ ಸರಿದಂತಾಗಿದೆ.
ರಾಮ್‌ಮಾಧವ್‌, ಬಿಜೆಪಿ ಮುಖಂಡ

ಕಾಂಗ್ರೆಸ್‌ ಸರಕಾರಗಳು ಹಿಂದೂ ಸಂತರನ್ನು, ಬಿಜೆಪಿ - ವಿಹಿಂಪ ಸದಸ್ಯರನ್ನು ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಹೋಲಿಸಿದ್ದವು. ಇಂಥ ಪಿತೂರಿ ನಡೆಸಿದವರೆಲ್ಲರೂ ಇಂದು ದೇಶದ ಜನರ ಕ್ಷಮೆ ಯಾಚಿಸಬೇಕು
ಯೋಗಿ ಆದಿತ್ಯನಾಥ್‌ , ಉ.ಪ್ರ. ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next