Advertisement

Ram Lalla ಮಹಾ ತೇಜಸ್ಸಿನ ಹಸನ್ಮುಖಿ: ಬೆಣ್ಣೆ ಮಜ್ಜನದ ಮೂಲಕ ವದನ ಅನಾವರಣ

12:59 AM Jan 20, 2024 | Team Udayavani |

ಲಕ್ನೋ:  ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ರಾಮಲಲ್ಲಾನ ಪೂರ್ಣ ವಿಗ್ರಹವನ್ನು ಶುಕ್ರವಾರ ಪೂಜಾ ವಿಧಿ ವಿಧಾನಗಳ ಮೂಲಕ ಅನಾವರಣಗೊಳಿಸಲಾಗಿದೆ. ಮಂದಸ್ಮಿತ, ಕಮಲವದನನಾಗಿ ಕಂಗೊಳಿಸುತ್ತಿರುವ ಬಾಲರಾಮನ ವಿಗ್ರಹ ಭಕ್ತರ ಮನಸೂರೆಗೊಳ್ಳುತ್ತಿದೆ.

Advertisement

ಪೂಜಾ ಕೈಂಕರ್ಯದ ನಾಲ್ಕನೇ ದಿನವಾದ ಶುಕ್ರವಾರ ನವಗ್ರಹ ಪೂಜೆ, ಹೋಮ ಹವನಗಳನ್ನು ನೆರವೇರಿ ಸಲಾಗಿದೆ. ಗರ್ಭಗುಡಿಯಲ್ಲಿ ಸ್ಥಿತನಾಗಿರುವ ರಾಮಲಲ್ಲಾನಿಗೆ ಔಶಧಾಧಿವಾಸ್‌, ಕೇಸರಾಧಿವಾಸ್‌, ಧೃತಾಶಿವಾಸ್‌, ಪುಷ್ಪಾಧಿವಾಸ್‌ ಸೇವೆಗಳನ್ನು  ಸಮರ್ಪಿಸಿ ಬಳಿಕ ಬೆಣ್ಣೆ ಮಜ್ಜನದ ಮೂಲಕ ವಿಗ್ರಹದ ವದನವನ್ನು ಅನಾವರಣಗೊಳಿಸಲಾಗಿದೆ.

ಕೃಷ್ಣಶಿಲೆಯಲ್ಲಿ ಕೆತ್ತನೆ ಮಾಡಲಾಗಿರುವ 51 ಇಂಚು ಎತ್ತರದ ವಿಗ್ರಹವನ್ನು ಗುರುವಾರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಹಳದಿ ಮತ್ತು ಬಿಳಿ ವಸ್ತ್ರಗಳಿಂದ ಮುಚ್ಚ ಲಾಗಿತ್ತು. ಒಂದೊಂದೇ ಪೂಜಾ ವಿಧಿಗಳನ್ನು ನೆರವೇರಿಸಿ ನಂತರ ವಿಗ್ರಹವನ್ನು ಸಂಪೂರ್ಣ ಅನಾವರಣ ಮಾಡ ಲಾಗಿದೆ. ಶುಕ್ರವಾರ ಪೂಜೆಗಳ ಬಳಿಕ ಕಡೆಯಲ್ಲಿ ಕೇಸರಿ ಮತ್ತು ಧಾನ್ಯದಲ್ಲಿ ಮುಳುಗಿಸುವ ವಿಧಿಯನ್ನೂ ಅನು ಸರಿಸಲಾಗಿದೆ. ಬಾಲರಾಮನು ನಿಂತಿರುವ ಭಂಗಿ ಯಲ್ಲಿರುವ ವಿಗ್ರಹವು ಪ್ರಭಾವಳಿಯನ್ನೂ ಹೊಂದಿದೆ. ರಾಮನ ಪಾದದ ಕೆಳಗೆ ದೇವತಾ ಮಂಡಲ, ಪಾಣಿಪೀಠ, ಸಹಸ್ರದಳ ಕಮಲದ ವಿನ್ಯಾಸವೂ ಇದೆ.

ಮೂಲವಿಗ್ರಹಗಳೂ ಗರ್ಭಗುಡಿಯಲ್ಲಿ
ರಾಮಲಲ್ಲಾನ ನೂತನ ವಿಗ್ರಹದ ಮುಂದೆಯೇ 6 ಇಂಚಿನ ಮೂಲ ವಿಗ್ರಹವನ್ನೂ ಇರಿಸಲಾಗುವುದು. ಜತೆಗೆ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮ ದೇವರ ವಿಗ್ರಹಗಳನ್ನೂ ಇರಿಸಲಾಗುವುದು ಎಂದು ಮಂದಿರ ಟ್ರಸ್ಟ್‌ ತಿಳಿಸಿದೆ.

ಅಯೋಧ್ಯೆ ತಲುಪಿದ ಕಿಷ್ಕಿಂಧೆಯ ರಥ
ರಾಮ ಬಂಟನ ಹನುಮನ ಜನ್ಮಸ್ಥಾನವಾದ ಕರ್ನಾಟಕದ ಹಂಪಿಯ ಕಿಷ್ಕಿಂಧೆಯಿಂದ ಹೊರಟಿದ್ದ ರಥವು ಶುಕ್ರವಾರ ಅಯೋಧ್ಯೆ ತಲುಪಿದೆ. ದೇಶಾದ್ಯಂತ ವಿವಿಧ ದೇಗುಲಗಳಿಗೆ ಭೇಟಿ ನೀಡಿ, ನೇಪಾಲದಲ್ಲಿರುವ ಸೀತಾದೇವಿಯ ತವರೂರಾದ ಜನಕಪುರಕ್ಕೂ ತೆರಳಿ, ಅಲ್ಲಿಂದ ರಥ ಅಯೋಧ್ಯೆಗೆ ಬಂದಿದೆ. ರಥದೊಂದಿಗೆ ತೆರಳಿರುವ ನೂರಾರು ಭಕ್ತರು ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಾ, ಕೇಸರಿ ಧ್ವಜಗಳೊಂದಿಗೆ ಅಯೋಧ್ಯೆ ಪ್ರವೇಶಿಸಿದ್ದಾರೆ. ರಥದಲ್ಲಿ ಹನುಮ ಮತ್ತು ರಾಮ ತಬ್ಬಿರುವ ವಿಗ್ರಹವಿದ್ದು, ಇಡೀ ರಥವೇ ದೊಡ್ಡ ದೇಗುಲದಂತೆ ಭಾಸವಾಗುತ್ತಿದೆ.

Advertisement

ಹನುಮನ ನಾಡಿನಿಂದ ರಾಮನ ಸೇವೆಗೆಂದು ಅಯೋಧ್ಯೆಗೆ ಬಂದಿದ್ದೇವೆ. ಕಿಷ್ಕಿಂಧೆಯಲ್ಲಿ ಇದೇ ಮಾದರಿಯ ದೇಗುಲವನ್ನು ಹನುಮನಿಗೂ ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಸಂಪೂರ್ಣ ಯಾತ್ರೆಯಲ್ಲಿ ಸಂದಾಯವಾದ ದೇಣಿಗೆಯನ್ನು  ಹನುಮ ಮಂದಿರ ನಿರ್ಮಾಣಕ್ಕೆ ವಿನಿಯೋಗಿಸುತ್ತೇವೆ.
ಅಭಿಷೇಕ ಕೃಷ್ಣಶಾಸ್ತ್ರೀ, ಶ್ರೀ ಹನುಮಾನ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರು

ವಿಮಾನ ಪಾರ್ಕಿಂಗ್‌ ಬುಕಿಂಗ್‌ ಫ‌ುಲ್‌
ಮಂದಿರ ಉದ್ಘಾಟನೆಗೆಂದು ಅಯೋಧ್ಯೆಗೆ ಆಗಮಿಸುತ್ತಿರುವ ಆಹ್ವಾನಿತರ ಪೈಕಿ ಹಲವರು ಈಗಾಗಲೇ ತಮ್ಮ ಪ್ರೈವೇಟ್‌ ಜೆಟ್‌ಗಳ ಪಾರ್ಕಿಂಗ್‌ಗೆ ಸ್ಲಾಟ್‌ ಬುಕ್‌ ಮಾಡಿಕೊಳ್ಳುತ್ತಿದ್ದು, ಅಯೋಧ್ಯೆಯ ಸುತ್ತಮುತ್ತಲಿರುವ ಪ್ರೈವೇಟ್‌ ಜೆಟ್‌ ಪಾರ್ಕಿಂಗ್‌ಗಳಲ್ಲಿ ಬುಕಿಂಗ್‌ ಫ‌ುಲ್‌ ಆಗಿದೆ. ಅಯೋಧ್ಯೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಚಿನ್ನಲೇಪಿತ ವಿಗ್ರಹಗಳು ಕೂಡ ಖಾಲಿಯಾಗಿವೆ.

ಮಹಾಪೂಜೆ ನೆರವೇರಿಸಲು 11 ದಂಪತಿಗೆ ಅವಕಾಶ 
ಪ್ರಾಣಪ್ರತಿಷ್ಠೆಯಂದು ಮಹಾ ಪೂಜೆಯಲ್ಲಿ ಮೋದಿ ಅವರೊಂದಿಗೇ ಪೂಜೆ ಸಲ್ಲಿಸಲು ದೇಶಾದ್ಯಂತ 11 ದಂಪತಿಗೆ ಆಹ್ವಾನ ನೀಡಲಾಗಿದೆ.

ಮಂದಸ್ಮಿತ ರಾಮ !
ಮುಖ ಚಹರೆಯು ಕಮಲಕಾಂತೀಯ ತೇಜಸ್ಸಿನಿಂದ ಕಂಗೊಳಿಸುವಂತೆ ರೂಪುಗೊಂಡಿದೆ
ಬೆಳದಿಂಗಳಂತೆ ಹೊಳೆಯುತ್ತಿರುವ ವದನ ದಲ್ಲಿ ಕಮಲದ ಎಳೆಗಳಂತೆ ಕಣ್ಣುಗಳಿವೆ.
ಜಟಾಧಾರಿಯಂತೆ ಕೇಶ ವಿನ್ಯಾಸವನ್ನು ಕೆತ್ತನೆ ಮಾಡಲಾಗಿದ್ದು, ಸಂಪಿಗೆಯಂಥ ನೀಳ ಮೂಗಿದೆ
ತೆಳು ನಗುವಿರುವ ತುಟಿ, ಹಾಲುಗಲ್ಲವು ಮಗುವಿನ ಭಾವದೊಂದಿಗೆ ದೈವೀ ಕಳೆಯನ್ನೂ ಹೊಂದಿದೆ
ಕುತ್ತಿಗೆಯಲ್ಲಿ ಆಭರಣಗಳು, ಅಂಗವಸ್ತ್ರ, ಧೋತಿ ವಸ್ತ್ರದ ವಿನ್ಯಾಸವನ್ನೂ ಕೆತ್ತನೆ ಮಾಡಲಾಗಿದೆ
ಕಿವಿಯಲ್ಲಿ ಕರ್ಣಕುಂಡಲಗಳು, ಕೈಯಲ್ಲಿ ತೋಳುಬಂದಿಗಳನ್ನೂ ತೊಟ್ಟಿರುವ ವಿನ್ಯಾಸವಿದೆ
ಬಲ ಕೈಯಲ್ಲಿ ಜ್ಞಾನ ಮುದ್ರೆಯ ವಿನ್ಯಾಸವಿದ್ದು, ಸ್ವರ್ಣ ಬಾಣ, ಎಡಗೈಯಲ್ಲಿ ಸ್ವರ್ಣ ಧನುಸ್ಸು ಹಿಡಿ ದಿ ರು ವಂತಿದೆ.

ಪ್ರಭಾವಳಿಯ ಮೇಲ್ಭಾಗದಲ್ಲಿ ಯಾವೆಲ್ಲ ಕೆತ್ತನೆಗಳಿವೆ ?
ಶಿರಭಾಗದಲ್ಲಿ ಆದಿಶಕ್ತಿ
ಎಡಭಾಗ : ಶಂಖ, ಗಧೆ, ಸ್ವಸ್ತಿಕ
ಬಲಭಾಗ : ಓಂಕಾರ, ಶೇಷನಾಗ, ಚಕ್ರ

ದಶಾವತಾರದ ಪ್ರಭಾವಳಿ
ರಾಮಲಲ್ಲಾನ ವಿಗ್ರಹದ ಹಿಂದಿರುವ ಪ್ರಭಾವಳಿಯಲ್ಲಿ ಪ್ರದಕ್ಷಿಣಾಕಾರದಲ್ಲಿ ವಿಷ್ಣುವಿನ ದಶಾವತಾ ರಗಳನ್ನು ಚಿತ್ರಿಸಲಾಗಿದೆ
ಎಡಭಾಗದಲ್ಲಿ: ಮತ್ಸ್ಯ , ಕೂರ್ಮ, ವರಾಹ, ನರಸಿಂಹ, ವಾಮನ
ಬಲಭಾಗದಲ್ಲಿ: ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಕಲ್ಕಿ

ಪ್ರಭಾವಳಿ ಕೆಳಭಾಗದ ಕೆತ್ತನೆ
ಪ್ರಭಾವಳಿಯ ಬಲ ಕೆಳಭಾಗದಲ್ಲಿ ಹನುಮಂತನ ವಿಗ್ರಹದ ಕೆತ್ತನೆ ಇದೆ.
ಎಡ ಕೆಳಭಾಗದಲ್ಲಿ ಗರುಡ ದೇವತೆಯ ಕೆತ್ತನೆಗಳಿವೆ

ಹಲವು ರಾಜ್ಯಗಳಲ್ಲಿ ರಜೆ ಘೋಷಣೆ 
ರಾಮ ಮಂದಿರ ಉದ್ಘಾಟನೆಯ ಸಮಾ ರಂಭವನ್ನು ಆಚರಿಸುವ ನಿಟ್ಟಿನಲ್ಲಿ ಮಹಾ ರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಜ.22 ರಂದು ಸಾರ್ವಜನಿಕ ರಜೆ ನೀಡಿರುವುದಾಗಿ ಶುಕ್ರವಾರ ಘೋಷಿಸಿವೆ. ಚಂಡೀಗಢದಲ್ಲಿ ಯೂ ಆ ದಿನ ರಜೆ ಘೋಷಿಸಲಾಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಶಾಲಾ  ಕಾಲೇಜುಗಳಿಗೆ ಪೂರ್ಣ ದಿನದ ರಜೆ ಘೋಷಿಸಿ, ಸರಕಾರಿ ಉದ್ಯೋಗಿಗಳಿಗೆ ಮಧ್ಯಾಹ್ನ 2.30ರ ವರೆಗೆ ರಜೆ ನೀಡಲಾಗಿದೆ. ತ್ರಿಪುರಾ, ರಾಜಸ್ಥಾನಗಳಲ್ಲಿ ಅರ್ಧದಿನದ ರಜೆ ಘೋಷಿಸಲಾಗಿದೆ. ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯ ವಿವಿಯು ಕೂಡ ಮಧ್ಯಾಹ್ನದ ವರೆಗೆ ಮುಚ್ಚಿರಲಿದೆ.

ಮಂದಿರ ಪ್ರವೇಶಕ್ಕೆ ಕ್ಯುಆರ್‌ ಕೋಡ್‌ ಆಧರಿತ ಪಾಸ್‌ 
ಪ್ರಾಣ ಪ್ರತಿಷ್ಠೆ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡಲಿರುವ ಅಧಿ ಕೃತ ಆಹ್ವಾನಿತ   ರಿಗಾಗಿ ರಾಮ ಮಂದಿರ ಟ್ರಸ್ಟ್‌ ನೂತನ ಕ್ಯುಆರ್‌ ಕೋಡ್‌ ಆಧರಿತ ಪ್ರವೇಶ್‌ ಪಾಸ್‌ ಬಿಡು ಗಡೆ ಗೊಳಿಸಿದೆ.  ಕೇವಲ ಆಮಂತ್ರಣ ಪತ್ರಿಕೆಯನ್ನು ಆಧರಿಸಿ ಪ್ರವೇಶಕ್ಕೆ ಅನುಮತಿ ಸುವುದು ಸೂಕ್ತವಲ್ಲದ ಕಾರಣ, ಆಹ್ವಾ ನಿತ ರಿಗೆ ವೈಯಕ್ತಿಕವಾಗಿ ಟ್ರಸ್ಟ್‌ ವತಿ  ಯಿಂದ ಕ್ಯುಆರ್‌ ಕೋಡ್‌ ಕಳುಹಿಸಿಕೊಡಲಾಗುವುದು. ಅವರು ಮಂದಿರ ಪ್ರವೇಶಿಸುವ ಮುನ್ನ ಅದನ್ನು ಸ್ಕ್ಯಾನ್‌ ಮಾಡಬೇಕಾಗುತ್ತದೆ.

ಮಧ್ಯಪ್ರದೇಶದಿಂದ ಅಯೋಧ್ಯೆಗೆ 5 ಲಕ್ಷ ಲಡ್ಡು 
ರಾಮ ಮಂದಿರ ಉದ್ಘಾಟನೆಯಲ್ಲಿ ವಿತರಿಸಲು ಉದ್ದೇಶಿಸಿರುವ 5 ಲಕ್ಷ ಲಡ್ಡುಗಳಿರುವ 5 ಟ್ರಕ್‌ಗಳು ಮಧ್ಯಪ್ರದೇಶದಿಂದ ಶುಕ್ರವಾರ ಅಯೋಧ್ಯೆಗೆ ತೆರಳಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಟ್ರಕ್‌ಗಳಿಗೆ ಚಾಲನೆ ನೀಡಿದ್ದಾರೆ. ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲದ ವತಿಯಿಂದ ಲಡ್ಡುಗಳನ್ನು ತಯಾರಿಸಿ ಕಳುಹಿಸಿಕೊಡ ಲಾಗಿದೆ. ಮಹಾರಾಷ್ಟ್ರದ ಅಮರಾವತಿ ಯಿಂದ ಅಯೋಧ್ಯೆಗೆ 500 ಕೆ.ಜಿ. ಕುಂಕುಮವನ್ನು ಕಳುಹಿಸಲಾಗಿದೆ. ಹಿಂದೂ ಆಚರಣೆಗಳಲ್ಲಿ ಕುಂಕುಮವನ್ನು ಶುಭ ಸೂಚಕ ಎಂದು ಪರಿಗಣಿಸಲಾಗುತ್ತದೆ.

ಜನ್ಮಭೂಮಿ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಆಹ್ವಾನ 
ರಾಮಜನ್ಮಭೂಮಿ ಬಾಬ್ರಿ ಮಸೀದಿ ಪ್ರಕರಣದಲ್ಲಿ 2019ರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ಪಂಚಪೀಠದ ಐವರೂ ನ್ಯಾಯಮೂರ್ತಿಗಳಿಗೆ ರಾಮ ಮಂದಿರ ಉದ್ಘಾಟನೆಗೆ ಆಮಂತ್ರಣ ನೀಡಲಾಗಿದೆ. ಅಂದಿನ ಪಂಚಸದಸ್ಯ ಪೀಠದಲ್ಲಿದ್ದ ಆಗಿನ ಸಿಜೆಐ ರಂಜನ್‌ ಗೊಗೋಯ್‌, ನಿವೃತ್ತ ಸಿಜೆಐ ಎಸ್‌.ಎ.ಬೋಬೆx, ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್‌ ಹಾಗೂ ಮಾಜಿ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಅವರಿಗೆ ಆಹ್ವಾನ ಪ್ರತಿ ನೀಡಲಾಗಿದೆ. ಇವರಲ್ಲದೇ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ವಕೀಲರು ಸೇರಿದಂತೆ 50ಕ್ಕೂ ಹೆಚ್ಚು ಜ್ಯೂರಿಸ್ಟ್‌ಗಳಿಗೆ ಆಹ್ವಾನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next