Advertisement

ರಕ್ಷಿತ್‌ ಶೆಟ್ಟರ ಎರಡು ಕನಸು…

11:47 AM Sep 02, 2022 | Team Udayavani |

ಸದ್ಯ “777 ಚಾರ್ಲಿ’ ಸಿನಿಮಾದ ಸಕ್ಸಸ್‌ ಖುಷಿಯಲ್ಲಿರುವ ನಟ ರಕ್ಷಿತ್‌ ಶೆಟ್ಟಿ, “ಸಪ್ತಸಾಗರದಾಚೆ ಎಲ್ಲೋ…’ ಮತ್ತು “ರಿಚರ್ಡ್‌ ಆ್ಯಂಟನಿ’ ಮೂಲಕ ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಇದರ ನಡುವೆಯೇ ರಕ್ಷಿತ್‌ ಶೆಟ್ಟಿ, ತಮ್ಮ “ಪರಂವಾ ಸ್ಟುಡಿಯೋಸ್‌’ ಬ್ಯಾನರ್‌ ಮೂಲಕ “ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು “ಬ್ಯಾಚುಲರ್‌ ಪಾರ್ಟಿ’ ಎಂಬ ಎರಡು ಹೊಸ ಸಿನಿಮಾಗಳನ್ನು ನಿರ್ಮಿಸುತ್ತಿದ್ದು, ಗೌರಿ-ಗಣೇಶ ಹಬ್ಬದ ಮರುದಿನವೇ ಈ ಎರಡೂ ಸಿನಿಮಾಗಳ ಮುಹೂರ್ತ ಏಕಕಾಲಕ್ಕೆ ನೆರವೇರಿತು.

Advertisement

ಇನ್ನು ಈ ಎರಡೂ ಹೊಸ ಸಿನಿಮಾಗಳ ಮೇಲೆ ರಕ್ಷಿತ್‌ ಶೆಟ್ಟಿ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ಸಿನಿಮಾರಂಗಕ್ಕೆ ನಾವು ಹೊಸಬರಾಗಿ ಪ್ರಾರಂಭದಲ್ಲಿ ಬಂದಾಗ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆವು. ಹೊಸಬರು ಸಿನಿಮಾ ಮಾಡುವಾಗ ಏನೇನು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅನ್ನೋದನ್ನ ನಾವು ಅನುಭವಿಸಿದ್ದೇವೆ. ಸಿನಿಮಾರಂಗ ಎಂದರೆ, ಇಲ್ಲಿ ಎಲ್ಲಾ ರೀತಿಯ ಸಿನಿಮಾಗಳೂ ಬರಬೇಕು. ಹೊಸಥರದ ಕಥೆಗಳು, ವಿಭಿನ್ನವಾಗಿ ಯೋಚಿಸುವ ರೈಟರ್ ಮುಂದೆ ಬರಬೇಕು. ಇದೇ ನಿಟ್ಟಿನಲ್ಲಿ ನಾವು “ಪರಂವಾ ಸ್ಟುಡಿಯೋಸ್‌’ ಮೂಲಕ ಆ ಹೆಜ್ಜೆ ಇಟ್ಟಿದ್ದೇವೆ. ಅದರ ಭಾಗವಾಗಿ ಈಗ “ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು “ಬ್ಯಾಚುಲರ್‌ ಪಾರ್ಟಿ’ ಸಿನಿಮಾಗಳನ್ನು ನಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದೇವೆ’ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ .

ಇನ್ನು “ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು “ಬ್ಯಾಚುಲರ್‌ ಪಾರ್ಟಿ’ ಸಿನಿಮಾಗಳನ್ನು ನಿರ್ದೇಶಿಸುತ್ತಿರುವ ಇಬ್ಬರೂ ನಿರ್ದೇಶಕರೂ ರಕ್ಷಿತ್‌ ಶೆಟ್ಟಿ ಅವರೊಂದಿಗೆ ಈ ಹಿಂದೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಪ್ರತಿಭೆಗಳು. “”ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾವನ್ನು ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶಿಸುತ್ತಿದ್ದಾರೆ. “ಬ್ಯಾಚುಲರ್‌ ಪಾರ್ಟಿ’ ಸಿನಿಮಾವನ್ನು ಅಭಿಜಿತ್‌ ಮಹೇಶ್‌ ನಿರ್ದೇಶಿಸುತ್ತಿದ್ದಾರೆ. ಈ ಇಬ್ಬರನ್ನೂ ಬರಹಗಾರರಾಗಿ ಹತ್ತಿರದಿಂದ ನೋಡಿದ್ದೇನೆ. ಇಬ್ಬರಿಗೂ ಅವರದ್ದೇ ಆದ ವಿಭಿನ್ನ ಯೋಚನೆ ಮತ್ತು ದೃಷ್ಟಿಕೋನವಿದೆ. ಹೊಸಥರದ ಸಿನಿಮಾಗಳನ್ನು ಕೊಡುತ್ತಾರೆ ಎಂಬ ವಿಶ್ವಾಸವಿದೆ. ಇಬ್ಬರನ್ನೂ ನಿರ್ದೇಶಕರಾಗಿ “ಪರಂವಾ ಸ್ಟುಡಿಯೋಸ್‌’ ಮೂಲಕ ಪರಿಚಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.

ಇಬ್ಬನಿ ತಬ್ಬಿದ ಇಳೆಯಲಿ: ಕಾವ್ಯಾತ್ಮಕ ಪ್ರೇಮಕಥೆಯ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ವಿಹಾನ್‌, ಅಂಕಿತಾ ಅಮರ್‌ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶ್ರೀವಾತ್ಸನ್‌ ಸೆಲ್ವರಾಜನ್‌ ಛಾಯಾಗ್ರಹಣ, ರಕ್ಷಿತ್‌ ಕೌ ಸಂಕಲನವಿದೆ. ಗಗನ್‌ ಬಡೇರಿಯಾ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಬೆಂಗಳೂರು ಮತ್ತು ಗೋವಾ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

ಬ್ಯಾಚುಲರ್‌ ಪಾರ್ಟಿ: ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರ ಹೊಂದಿರುವ “ಬ್ಯಾಚುಲರ್‌ ಪಾರ್ಟಿ’ ಚಿತ್ರಕ್ಕೆ ಅಭಿಜಿತ್‌ ಮಹೇಶ್‌ ನಿರ್ದೇಶನವಿದೆ. ಚಿತ್ರದಲ್ಲಿ ದಿಗಂತ್‌, ರಿಷಬ್‌ ಶೆಟ್ಟಿ, ಅಚ್ಯುತ ಕುಮಾರ್‌, ಸಿರಿ ರವಿಕುಮಾರ್‌, ಪವನ್‌ ಕುಮಾರ್‌, ಪ್ರಕಾಶ್‌ ತುಮ್ಮಿನಾಡ್‌, ರಘು ರಾಮನಕೊಪ್ಪ, ಅಶ್ವಿ‌ನ್‌ರಾವ್‌ ಪಲ್ಲಕ್ಕಿ, ಶೋಭರಾಜ್‌, ಬಾಲಾಜಿ ಮನೋಹರ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ರಾಮು ಛಾಯಾಗ್ರಹಣ, ಅರ್ಜುನ್‌ ರಾಮು ಸಂಗೀತವಿದೆ.

Advertisement

ಜಿ.ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next