Advertisement

ನಗರದಲ್ಲಿ ವಿಜೃಂಭಣೆಯ ರಾಜ್ಯೋತ್ಸವ

09:58 AM Nov 02, 2017 | |

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಆಚರಣೆ ಬುಧವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಎಲ್ಲೆಡೆ ಕೆಂಪು ಹಳದಿ ಬಾವುಟ ರಾರಾಜಿಸಿತು. ಡಿವಿಜಿ ಕನ್ನಡ ಬಳಗದಿಂದ ಬಸವನಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್‌.ಪಿ ನಾಕಪಾಣಿಯವರು ಡಿವಿಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕನ್ನಡ ಹಿರಿಮೆ ಮತ್ತು ಡಿವಿಜಿಯವರ ಸಾಧನೆಯನ್ನು ಬಣ್ಣಿಸಿದರು. ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ, ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಪಾರ್ಶ್ವನಾಥ್‌, ಡಿವಿಜಿ ಕನ್ನಡ ಬಳಗದ ಅಧ್ಯಕ್ಷ ಜಗದೀಶ್‌ ಮುಳುಬಾಗಿಲು ಮೊದಲಾದವರು ಉಪಸ್ಥಿತರಿದ್ದರು. 

Advertisement

ಎಫ್ಕೆಸಿಸಿಐನಲ್ಲಿ ಕನ್ನಡ ರಾಜ್ಯೋತ್ಸವ: ಎಫ್ ಕೆಸಿಸಿಐನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಹಿರಿಯ ಉಪಾಧ್ಯಕ್ಷ ಸುಧಾರಕ್‌ ಎಸ್‌.ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಜನಾರ್ಧನ್‌, ಮಾಜಿ ಅಧ್ಯಕ್ಷರಾದ ಬಾಬು ಇತರರಿದ್ದರು.

ವಿವಿಧೆಡೆ ರಾಜ್ಯೋತ್ಸವ : ಉತ್ತರ ಹಳ್ಳಿಯ ಸಾಧನ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ ವನ್ನು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಉದ್ಘಾಟಿಸಿದರು. ಪ್ರೊ. ಅಶ್ವತ್ಥ ನಾರಾಯಣ, ಸಾಧನಾ ಪದವಿ ವಿಭಾಗದ ಪ್ರಾಂಶುಪಾಲರಾದ ಪ್ರೊ. ಸಿರಾಜ್‌ ಉರ್‌ ರೆಹಮನ್‌ ಮೊದಲಾದವರು ಇದ್ದರು.

ಚಾಮರಾಜ ಪೇಟೆಯಲ್ಲಿ ರಾಜ್ಯೋತ್ಸವ ಹಾಗೂ ನಾಡ ದೇವಿ ಭುವನೇಶ್ವರಿ ಮೆರವಣಿಗೆ ನಡೆಸಲಾಯಿತು. ಮೆರವಣೆಗೆ ಉದ್ದಕ್ಕೂ ಕಂಸಾಳೆ, ಡೊಳ್ಳು ಕುಣಿತ, ಯಕ್ಷಗಾನ ಮತ್ತಿತರ ಜಾನಪದ ಕಲಾ ತಂಡಗಳು ಗಮನಸೆಳೆದವು. ಕಸ್ತೂರಿ ಕನ್ನಡ ಸಂಘದಿಂದ ಸುಬ್ರಹ್ಮಣ್ಯ ನಗರದಲ್ಲಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಧ್ವಜಾರೋಹಣ ನೆರವೇರಿಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಸಾಪ ಶಿವನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಿಹಿ ಹಂಚಿ ಸಡಗರದಿಂದ ಆಚರಿಸಿತು. ಕಂಠೀರವ ಸ್ಟೂಡಿಯೋದ ಡಾ.ರಾಜ್‌ಕುಮಾರ್‌-ಪಾರ್ವತಮ್ಮ ರಾಜ್‌ಕುಮಾರ್‌ ಬಯಲು ರಂಗಮಂದಿರದಲ್ಲಿ ಡಾ.ರಾಜ್‌ ಕುಮಾರ್‌ ವೇದಿಕೆಯು ರಾಜ್ಯೋತ್ಸವದ ಅಂಗವಾಗಿ ಸಿರಿಧಾನ್ಯಮೇಳ ಹಮ್ಮಿಕೊಂಡಿತ್ತು. ಮೇಳಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಚಾಲನೆ ನೀಡಿದರು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಕನ್ನಡ ಸೇನೆ ಅಧ್ಯಕ್ಷ ಕೆ.ಆರ್‌.ಕುಮಾರ್‌ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

Advertisement

ಎಸ್‌ಆರ್‌ಕೆ ಚಿತ್ರದ ಪೋಸ್ಟರ್‌ ಬಿಡುಗಡೆ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಮಂತ್ರಿಸ್ಕ್ವೇರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್‌ ತಮ್ಮ ಹೊಸ ಚಿತ್ರ “ಎಸ್‌ಆರ್‌ಕೆ’ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು. ಲಕ್ಕಿ ಗೋಪಾಲ್‌ ನಿರ್ದೇಶಿಸುತ್ತಿರುವ ಎಸ್‌ಆರ್‌ಕೆ ಚಿತ್ರದಲ್ಲಿ ಶಿವರಾಜಕುಮಾರ್‌ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರವು ಸಾಮಾಜಿಕ ಸಂದೇಶವನ್ನು ಸಾರಲಿದೆ ಎಂದು ಸ್ವತಃ ಶಿವರಾಜಕುಮಾರ್‌ ತಿಳಿಸಿದರು. ನಟರಾದ ರಾಘವೇಂದ್ರ ರಾಜಕುಮಾರ್‌, ಪುನೀತ್‌ ರಾಜಕುಮಾರ್‌, ವಿನಯ್‌ ರಾಜಕುಮಾರ್‌ ಸೇರಿದಂತೆ ಪ್ರಮುಖರು ಹಾಜರಿದ್ದರು 

ಬಿಬಿಎಂಪಿಯಲ್ಲಿ ಪೂರ್ಣ ಕನ್ನಡ ಬಳಕೆ 
ಒಂದು ವರ್ಷದ ಮೇಯರ್‌ ಅವಧಿ ಪೂರ್ಣಗೊಳ್ಳುವುದರೊಳಗೆ ಬಿಬಿಎಂಪಿ ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಿದ್ದು, ಪಾಲಿಕೆ ಆಡಳಿತದಲ್ಲಿ ಶೇ.90ರಷ್ಟು ಕನ್ನಡವನ್ನೇ ಬಳಕೆ ಮಾಡಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಶೇ.100ರಷ್ಟು ಕನ್ನಡ ಬಳಕೆಗೆ ಪ್ರಯತ್ನಿಸಲಾಗುವುದು ಎಂದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಾಲಿಕೆಯ 198 ವಾರ್ಡ್‌ ಕಚೇರಿಗಳಲ್ಲಿ ಕನ್ನಡ ಹಬ್ಬ ಆಚರಿಸಲಾಗುತ್ತಿದೆ ಎಂದರು. ಉಪಮೇಯರ್‌ ಪದ್ಮಾವತಿ ಇತರರು ಇದ್ದರು.

ಕವಿ ಪುತ್ಥಳಿಗೆ ಮಾಲಾರ್ಪಣೆ
ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅವಕಾಶ ಇಲ್ಲದಿರುವುದೇ ಕನ್ನಡ ಬಳಕೆಗೆ ದೊಡ್ಡ ಅಡ್ಡಿಯಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ ತಿಳಿಸಿದರು. ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೆಳೆಯರ ಬಳಗ ನಗರದಲ್ಲಿ ಹಮ್ಮಿಕೊಂಡಿದ್ದ ಕವಿ ಪ್ರತಿಮಗೆಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು, ಹೊಸ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ. ಆದರೆ, ಓದು ಬರಹ ಬಿಡುವ ಕೆಲಸ ಆಗಬಾರದು. ಇಂದು ಕನ್ನಡ ಬಳಕೆಗೆ ಅಡ್ಡಿಯಾಗುತ್ತಿರುವುದು ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅವಕಾಶವೇ ಇಲ್ಲದಿರುವುದು ಎಂದು ಬೇಸರ ವ್ಯಕ್ತಪಡಿಸಿದರು.

ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ
ಬೆಂಗಳೂರು : ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕಲಾ ಪ್ರಕಾರವನ್ನು ಬಿಂಬಿಸುವ ಮಕ್ಕಳ ಸಾಂಸ್ಕೃತಿಕ ವೈಭವ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೇರಿದ್ದ ಸಭಿಕರನ್ನು ಮನಸೂರೆಗೊಳಿಸಿತು. ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಬೆಂಗಳೂರು ನಗರ ಜಿಲ್ಲೆಯ 80 ಶಾಲೆಯ
10 ಸಾವಿರ ವಿದ್ಯಾರ್ಥಿಗಳು ನಡೆಸಿಕೊಟ್ಟ 13 ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರೀಡಾಂಗಣದಲ್ಲಿ ಚಿಣ್ಣರ ಚಿಲಿಪಿಲಿ ಮುಗಿಲು ಮುಟ್ಟಿತ್ತು. ಕನ್ನಡ ಧ್ವಜದ ಹಾರಾಟ, ಕನ್ನಡ ಗೀತೆಗಳ ಗಾಯನದ ಜತೆಗೆ ಹೂವಿನ ಅಲಂಕಾರ ಅಚ್ಚುಕಟ್ಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ತನ್ವೀರ್‌ ಸೇಠ್, ಕೆ.ಜೆ ಜಾರ್ಜ್‌ ಮತ್ತು ರೋಷನ್‌ ಬೇಗ್‌ ಸೇರಿ ಕನ್ನಡ ಧ್ವಜ ಹಾಗೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಮಕ್ಕಳ ಸಾಂಸ್ಕೃತಿಕ ವೈಭವ ನೆರೆದವರನ್ನು ಮಂತ್ರ ಮುಗ್ಧಗೊಳಿಸಿತು. “ಇತಿಹಾಸದ ನಾಡಹಬ್ಬ’ ಎಂಬ ಕಲ್ಪನೆಯಡಿ ಜ್ಞಾನಭಾರತಿಯ ಅಮೃತ್‌ ವಿದ್ಯಾಲಯದ 600 ಮಕ್ಕಳು ರಾಜ್ಯದ ಇತಿಹಾಸವನ್ನು ನೃತ್ಯ,”ಸಿರಿಗನ್ನಡಂ ಗೆಲ್ಲೆ’ ನೃತ್ಯ ಉತ್ತಮವಾಗಿತ್ತು. ಕೆ.ಆರ್‌.ಪುರಂನ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯ 640 ವಿದ್ಯಾರ್ಥಿಗಳು “ಅಮೃತ ಕನ್ನಡ’ ಜಾನಪದ ನೃತ್ಯ, ಉತ್ತರ ಕರುನಾಡ ಹಾಲಕ್ಕಿ ಕುಣಿತ, ಬೇಡರ ವೇಷ, ಗಾರುಡಿಗೊಂಬೆ, ಗೊರವರ ಕುಣಿತ ವಿಶೇಷವಾಗಿತ್ತು. ವೈಟ್‌ಪೀಲ್ಡ್‌ನ ಸರ್ಕಾರಿ ಪ್ರೌಢಶಾಲೆ, ಸೀಸಾ ಶಾಲೆಯ 625 ವಿದ್ಯಾರ್ಥಿಗಳು “ನಮ್ಮ ಒಲವಿನ ಕರುನಾಡು’ ನೃತ್ಯದಲ್ಲಿ ತೋರಿಸಿದರು. 

ದೊಡ್ಡತೋಗೂರು ಎಂ.ಎಂ.ಆಂಗ್ಲ ಮಾಧ್ಯಮದ ಶಾಲೆಯ 650 ವಿದ್ಯಾರ್ಥಿಗಳು ನದಿಗಳ ವೈಶಿಷ್ಟéವನ್ನು ಬಣ್ಣಿಸಿದರು.
“ನಮ್ಮೂರ ಜಾತ್ರೆ’ ನೃತ್ಯ ಮಾಡಿದರು. 800 ವಿದ್ಯಾರ್ಥಿಗಳಿಂದ ಸಾಮೂಹಿ ಯೋಗ, ಮಾಥಾಸ್‌ ಆಂಗ್ಲ ಶಾಲೆ ಮಕ್ಕಳಿಂದ “ತಾಯಿ ಭುವನೇಶ್ವರಿ’ ನೃತ್ಯ, ನ್ಯಾಷನಲ್‌ ಸ್ಕೂಲ್‌ ಮತ್ತು ಜಿಲ್ಲೆಯ 30 ಶಾಲೆಯ 2000 ವಿದ್ಯಾರ್ಥಿಗಳ ಕವಾಯತ್‌, ಪಥಸಂಚಲನ ರಾಜ್ಯೋತ್ಸವದ ಸೌಂದರ್ಯ ಹೆಚ್ಚಿಸಿತು. 

ಖಾಸಗಿ ಶಾಲೆ ವಿರುದ್ಧ ಕಿಡಿ
ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರಿ ರಜೆ ಇದ್ದರೂ, ರಜೆ ನೀಡದೇ ತರಗತಿ ನಡೆಸುತ್ತಿದ್ದ ನಗರದ ಆಂಗ್ಲ ಮಾಧ್ಯಮ ಶಾಲೆಗೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಪ್ರವೇಶಿಸಿ, ತರಗತಿ ನಡೆಸದಂತೆ ಸೂಚಿಸಿದರು. ಜೆಪಿ ನಗರದ ಇಮೇಜ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೇ ತರಗತಿ ನಡೆಸುತ್ತಿರುವುದನ್ನು ಗಮನಿಸಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಶಾಲೆಗೆ ಧಾವಿಸಿ, ಆಡಳಿತ ಮಂಡಳಿಯ ನಿರ್ಧಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಜೆಪಿ ನಗರ ಪೊಲೀಸರು ಕೂಡಲೇ ಶಾಲೆಗೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next