Advertisement

ಗಡಿನಾಡಿನ ಬಾನಾಡಿಗಳ ಪ್ರೇಮಿ ರಾಜೂ ಕಿದೂರು 

06:15 AM Apr 17, 2018 | |

ನಾಗರಿಕತೆ ಬೆಳೆದಂತೆ ಮನುಷ್ಯನ ಜತೆಗೆ ಬದುಕುತ್ತಿದ್ದ ಪಕ್ಷಿ ಪ್ರಾಣಿಗಳು ದೂರವಾಗು ತ್ತಲೇ ಇರುವ ಈ ಕಾಲಘಟ್ಟದಲ್ಲಿ ಈ ಬಡಜೀವಿಗಳ ಮೇಲೆ ಕಾಳಜಿ ತೋರುವ, ಅವುಗಳನ್ನು ಸಂರಕ್ಷಿಸುವ ಕೆಲವರಾದರೂ ನಮ್ಮೊಂದಿಗೆ ಇದ್ದಾರೆ ಎನ್ನುವುದೇ ಗಮನಿಸಬೇಕಾದ ಅಂಶ. ಇಂತಹ ಪಕ್ಷಿ ಪ್ರಿಯರ, ಪರಿಸರ ಸಂರಕ್ಷಕರ ಸಾಲಿಗೆ ಸೇರಿದವರು ರಾಜು ಕಿದೂರು. 

Advertisement

ಇಚ್ಲಂಪಾಡಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು, ನೀರ್ಚಾಲು ಮಹಾಜನ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಅಡ್ಯನಡ್ಕ ಜನತಾ ಕಾಲೇಜಿನಲ್ಲಿ ಪಿ.ಯು.ಸಿ. ಮತ್ತು ಮಾಯಿಪ್ಪಾಡಿಯಲ್ಲಿ ಅಧ್ಯಾಪಕ ತರಭೇತಿ ಪಡೆದಿದ್ದಾರೆ. 
ಅವರು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿಯನ್ನೂ ಗಳಿಸಿದ್ದಾರೆ. 

ಬದಿಯಡ್ಕ: ರಾಜು ಕಿದೂರು. 2004ರಲ್ಲಿ ಬೇಳ ಸಂತಲೋಮಿಯ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಜೀವನ ಪ್ರಾರಂಭಿಸಿ ಪ್ರಸ್ತುತ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಚಟುವಟಿಕೆಗಳಲ್ಲಿ ಅತಿಯಾದ ಆಸಕ್ತಿ ಹೊಂದಿರುವ ರಾಜು ಅವರು ಓರ್ವ ಅತ್ಯುತ್ತಮ ಪಕ್ಷಿ ನಿರೀಕ್ಷಕರೂ ಹೌದು. ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯೆ ಮಹತ್ವವನ್ನೂ, ಪ್ರಾಣಿ ಪಕ್ಷಿಗಳ ರಕ್ಷಣೆಯ ಅಗತ್ಯವನ್ನೂ ಏಕಕಾಲದಲ್ಲಿ ತಿಳಿಹೇಳುವ, ವಿವಿಧ ಶಿಬಿರ ಹಾಗೂ ಚಾರಣಗಳ ಮೂಲಕ ಅನುಭವದ ಪಾಠವನ್ನು ಕಲಿಸುವ ರಾಜೂ ಅವರು.

ಕಾಸರಗೋಡು ಪಕ್ಷಿ ನಿರೀಕ್ಷಕ ತಂಡದ ಸದಸ್ಯ
ಕಿದೂರು ಪಕ್ಷಿ ಪ್ರೇಮಿ ತಂಡದ ಸ್ಥಾಪಕರಾಗಿರುವ ಇವರು ಫ್ರೆಂಡ್ಸ್‌ ಆಫ್‌ ನೇಚರ್‌ ಹಾಗೂ ಮಲಬಾರ್‌ ಅವೇರ್ನೆಸ್‌ ಆಂಡ್‌ ರೆಸ್ಕೂಸೆಂಟರಿನ ಸದಸ್ಯ. ಕುಂಬಳೆ ಗ್ರಾಮ ಪಂಚಾಯತ್‌ ಜೈವ ವೈವಿಧ್ಯ ಪರಿಪಾಲನಾ ಸಮಿತಿಯ ಸದಸ್ಯರೂ ಆಗಿದ್ದು ಶಾಲೆಯಲ್ಲಿ ಪಕ್ಷಿ ನಿರೀಕ್ಷಣಾ ತಂಡದ ಮೇಲ್ನೋಟವನ್ನೂ ವಹಿಸಿಕೊಂಡಿರುತ್ತಾರೆ. ಇವರ ಈ ಚಟುವಟಿಕೆಗಳಿಗೆ ಫಾರೆಸ್ಟ್ರೀ ಕ್ಲಬಿನ ನೇತೃತ್ವವಿದೆ.

ಇದರೊಂದಿಗೆ ಪ್ರಾಕೃತಿಕವಾಗಿ ಸೃಷ್ಟಿಯಾಗಿ ಈಗ ನಾಶದಂಚಿನಲ್ಲಿರುವ ಹಳ್ಳ ಕೊಳಗಳನ್ನು ಸಂರಕ್ಷಿಸುವ ಯಜ್ಞದಲ್ಲಿಯೂ ತಾನು ಮುಂದಿದ್ದಾರೆ. ಈಗಾಗಲೇ ಹಲವಾರು ಪಳ್ಳಗಳ ಹೂಳೆತ್ತಿ ಮಳೆ ನೀರು ಸಂಗ್ರಹವಾಗಲು ಆ ಮೂಲಕ ಭೂಜಲಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಗೂ ಶ್ರಮಿಸುತ್ತಿದ್ದಾರೆ. ಈಗಾಗಲೇ ಈ ಯೋಜನೆಯಡಿಯಲ್ಲಿ ಕಿದೂರು ಕುಂಟಗೇರಡ್ಕದ ಕಾಜೂರು ಪಳ್ಳ ಹಾಗೂ ಸೀತಾಂಗೋಳಿಯ ಪಿಳಿಪ್ಪಳ್ಳದ ಹೂಳೆತ್ತಲಾಗಿದೆ. ಮುಂದಿನ ಯೋಜನೆಗಳಲ್ಲಿ ಕುಂಬಳೆ ಪಂಚಾಯತ್‌ ಕೇಂದ್ರವಾಗಿರಿಸಿ ಬನಗಳ ಸಂರಕ್ಷಣೆ, ಪಳ್ಳಗಳ ಹೂಳೆತ್ತುವುದು ಹಾಗೂ ಮಾರ್ಗದ ಬದಿಗಳಲ್ಲಿ ಮಾವು, ಹಲಸು, ಅಶ್ವಥ, ಆಲದ ಗಿಡಗಳನ್ನು ನೆಟ್ಟು ಪೋಷಿಸುವ ಪದ್ಧತಿಗೆ ರೂಪುನೀಡಲಾಗಿದೆ ಎನ್ನುತ್ತಾರೆ ರಾಜೂ ಕಿದೂರು. ಸದ್ಯ ಕಿದೂರು ಪ್ರದೇಶದಲ್ಲಿ ಹತ್ತು ಅಶ್ವಥ ಗಿಡಗಳನ್ನು ನೆಟ್ಟು ಪೋಷಿಸಬೇಕೆನ್ನುವ ಹಂಬಲ. ಎರಡು ಗಿಡಗಳಿಗೆ ಈಗಾಗಲೇ ನೀರುಣಿಸುತ್ತಿದ್ದು ಮೂರನೇ ಗಿಡವನ್ನು ಮಗಳ ಹುಟ್ಟುಹಬ್ಬದಂದು ನೆಡುವ ತಯಾರಿಯಲ್ಲಿದ್ದಾರೆ ರಾಜೂ ಅವರು. ಪ್ಲಾಸ್ಟಿಕ್‌ ಉಪಯೋಗ, ಆಹಾರ ಪೋಲು ಮಾಡದಿರುವುದು, ವಿದ್ಯುತ್‌ ಸಂರಕ್ಷಣೆ, ನೀರಿನ ಬಳಕೆ, ನದಿ, ಕೆರೆ, ತೋಡು ಮೊದಲಾದವುಗಳ ಕುರಿತು ತಿಳುವಳಿಕೆ ನೀಡುವುದಕ್ಕೆ ನಿರಂತರವಾಗಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. 


ಅವರ ಪ್ರಾಥಮಿಕ ಶಾಲೆಯ ಗುರುಗಳಾದ ರಾಜೀವ್‌ ಮಾಸ್ಟರ್‌ ಹಾಗೂ ಸಾಲು ಮರದ ತಿಮ್ಮಕ್ಕರ ಆದರ್ಶವೇ ತನ್ನ ಈ ಚಟುವಟಿಕೆಗಳಿಗೆ ಪ್ರೇರಣೆ ಎನ್ನುವ ಇವರಿಗೆ ಪ್ರೋತ್ಸಾಹದ ಚಿಲುಮೆಯಾಗಿ ಕಳತ್ತೂರು ಅಂಗನವಾಡಿ ಸಹಾಯಕಿಯಾಗಿರುವ ತಾಯಿ ಫೊರಾ ಡಿ”ಸೋಜಾ ಹಾಗೂ ತಂದೆ ಸವೆರ್‌ ಕ್ರಾಸ್ತಾ ಮತ್ತು  ಕಾಸರಗೋಡು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷಿ ನಿರೀಕ್ಷಕ ಮ್ಯಾಕ್ಷಿಂ ಕೊಲ್ಲಂಗಾನ ಹಾಗೂ ಪ್ರಶಾಂತ ಪೊಸಡಿಗುಂಪೆ ಮತ್ತು ಅಪಾರ ಶಿಷ್ಯವೃಂದ ಜತೆಗಿದ್ದಾರೆ.ಕರ್ನಾಟಕ ಸರಕಾರ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿಯವರು ಉದ್ಘಾಟಿಸಿದ ಅಕಾಡೆಮಿಯ ಸಾಹಿತ್ಯ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ಈ ಬಾನಾಡಿಗಳ ಗೆಳೆಯನನ್ನು ಅಭಿನಂದಿಸಲಾಗಿದೆ.

Advertisement

ಬೆಳೆಯುತ್ತಿರುವ ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸಿ ಮುಂದಿನ ಜನಾಂಗದವರೂ ಪ್ರಕೃತಿಯ ಸೊಬಗನ್ನು, ಪ್ರಾಣಿ ಪಕ್ಷಿಗಳ ಮಹತ್ವವನ್ನು ಅನುಭವಿಸಲು ನೆರವಾಗುತ್ತಿದ್ದಾರೆ.  ಆಪತ್ಕಾಲಕ್ಕೆ ವಿವಿಧ ಹಾವುಗಳನ್ನೂ ಹಿಡಿದು ರಕ್ಷಿಸುವುದೂ ಇದೆ ಎನ್ನುವ ರಾಜೂ ಅವರು ಪರಿಸರ ವಿರೋಧಿ ಕೆಲಸಗಳು ನಡೆದಾಗ ಸಂಬಂಧ ಪಟ್ಟ ಇಲಾಖೆಗೆ ದೂರು ಕೊಟ್ಟು ಸಂರಕ್ಷಣಾ ಚಟುವಟಿಕೆಗೆ ನಾಗರಿಕರೊಂದಿಗೆ ಹೋರಾಡುತ್ತಾರೆ. ಬೇಳ ಸಂತ ಬಾರ್ತಲೋಮಿಯ ಶಾಲೆಯಲ್ಲಿ ಶಿಕ್ಷಕಿಯಾಗಿರುವ  ಪತ್ನಿ ಲವೀನಾ ಹಾಗೂ ಮಗಳು ರಿಶೋನಾ ಅವರೊಂದಿಗೆ ಕಿದೂರಿನ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಮಕ್ಕಳಿಗಾಗಿ ವಿವಿಧ ಶಿಬಿರ
ಕುಮಾರಧಾರ, ಚಾರ್ಮಾಡಿ ಘಾಟ್‌, ಪೈತಲ್‌ವುಲೆ, ರಾಣಿಪುರ, ಆರಳಂ, ಮುಂತಾದೆಡೆ ಮಕ್ಕಳೊಂದಿಗೆ ಚಾರಣನಡೆಸಿ ಪಶ್ಚಿಮ ಘಟ್ಟದ ಜೀವ ವೈವಿದ್ಯದ ಕುರಿತು ಮಕ್ಕಳಿಗೆ ನೇರ ಅನುಭವವನ್ನು ನೀಡುತ್ತಿದ್ದಾರೆ. ನಿಸರ್ಗ ಅಧ್ಯಯನದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ವಿವಿಧ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಇವರ ವಿಶೇಷತೆ.

ಕಾಸರಗೋಡಿನಲ್ಲಿ ಅತಿಹೆಚ್ಚು ಪಕ್ಷಿಗಳು ಕಂಡುಬರುವ ಪ್ರದೇಶವಾಗಿ ಕಿದೂರು ಹೆಸರು ವಾಸಿಯಾಗಲು ಇವರು ನಡೆಸಿದ ಪಕ್ಷಿ ನಿರೀಕ್ಷಣೆ ಶಿಬಿರಗಳೇ ಕಾರಣ. ಕೇಸರಿ ಕುತ್ತಿಗೆಯ ಹಸಿರು ಪಾರಿವಾಳ ನಿರಂತರ ಕಂಡು ಬರುವ ಭಾರತದ ಅಪೂರ್ವ ಪ್ರದೇಶವಾಗಿ ಇದೀಗ ಹೆಸರುವಾಸಿಯಾಗಲು ಕಿದೂರು ಪಕ್ಷಿ ಪ್ರೇಮಿ ತಂಡ ಕಾರಣವಾಗಿದೆ ಎನ್ನುತ್ತಾರೆ ರಾಜೂ ಕಿದೂರು. ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಆಸಕ್ತಿ ಮೂಡಿಸಲು ಇವರ ಸಮಯವನ್ನು ಮೀಸಲಿಡುತ್ತಾರೆ. ಶಾಲಾ ಸಮಯವನ್ನು ಕಲಿಕೆ ಹಾಗೂ ಶಾಲಾ ಚಟುವಟಿಕೆಗಳಿಗೆ ಮೀಸಲಿಡುವ ಇವರು ಶನಿವಾರ ಹಾಗೂ ರವಿವಾರದ ರಜಾದಿನಗಳನ್ನು ತನ್ನ ಕಾರ್ಯಕ್ಕೆ ಬಳಸುತ್ತಾರೆ. 

ರಾಜೂ  ಅವರ ನನಸಾದ ಯೋಜನೆ
1. ಕೇರಳ ಸರಕಾರದ ಸಾಮಾಜಿಕ ಅರಣ್ಯ ಇಲಾಖೆಯ ಜೊತೆಗೂಡಿ ಕಾಸರಗೋಡಿನ ಪಕ್ಷಿ ಭೂಪಟ ನಿರ್ಮಾಣದಲ್ಲಿ ಸಕ್ರಿಯ ಭಾಗವಹಿಸುವಿಕೆ.
2. ಬೇಳ ಶಾಲೆಯಲ್ಲಿ ತಿಂಗಳಿಗೊಂದು ಹಣ್ಣಿನ ಗಿಡ ನೆಟ್ಟು ಪೋಷಿಸುವ ಯೋಜನೆ.
3. ಮಡ್ವ ವಾರ್ಡಿನಲ್ಲಿ ತಿಂಗಳಿಗೊಂದು ಹಣ್ಣಿನ ಗಿಡ ನೆಡುವುದು.
4. ಕಿದೂರು ಕುಂಟಗೇರಡ್ಕದಲ್ಲಿ ಮನೆಗೊಂದು ಮಾವಿನ ಮರ ಯೋಜನೆ.

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next