Advertisement

ನಾಳೆ ಸಿಎಂ ಯಡಿಯೂರಪ್ಪರಿಂದ 50 ಕೋ.ರೂ ಬೆಳೆಸಾಲ ವಿತರಣೆ: ತೇಲ್ಕೂರ

03:13 PM Jul 08, 2021 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ನ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಜುಲೈ 10ರಂದು 10 ಸಾವಿರ ರೈತರಿಗೆ 50 ಕೋ.ರೂ ಬೆಳೆಸಾಲ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

Advertisement

ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 50 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 10ಸಾವಿರ ರೈತರಿಗೆ 50 ಕೋ.ರೂ ಸಾಲ ವಿತರಿಸಲಿದ್ದು, ಸಾಂಕೇತಿಕವಾಗಿ ರೈತರಿಗೆ ವಿತರಿಸಿ ಚಾಲನೆ ನೀಡುವರು. ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಅವರೂ ಪಾಲ್ಗೊಳ್ಳುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನ ಬೆಳೆಸಾಲ ವಿತರಣೆಗೆ ಚಾಲನೆ ನೀಡಲಾಗಿದ್ದು, ಮುಂದಿನ ತಿಂಗಳು ಅಂತ್ಯದೊಳಗೆ ಒಂದು ಲಕ್ಷ ಹೊಸ ರೈತರಿಗೆ 200 ಕೋ.ರೂ ಸಾಲ ವಿತರಿಸಲು ಗುರಿ ಹೊಂದಲಾಗಿದೆ. ಅಪೆಕ್ಸ್ ಬ್ಯಾಂಕ್ ನೀಡಿರುವ 200 ಕೋ.ರೂ ಸಾಲವನ್ನು ಇಲ್ಲಿಯವರೆಗೆ ಸಾಲ ಪಡೆಯದಿರುವ ಹೊಸ ರೈತರಿಗೆ ಸಾಲ ನೀಡಲಾಗುತ್ತಿದೆ. ನಬಾರ್ಡ್ ದಿಂದ ಪಡೆಯಲಿರುವ  450 ಕೋ ರೂ ಪಡೆದ ನಂತರ ಸಾಲ ಮನ್ನಾದ ರೈತರಿಗೂ ಸಾಲ ವಿತರಿಸಲಾಗುವುದು.  2022ರ ಮಾಚ್೯ ಅಂತ್ಯದೊಳಗೆ ರೈತರಿಗೆ ಬೆಳೆಸಾಲದ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿ ಇತರ ವಾಣಿಜ್ಯ ಚಟುವಟಿಕೆಗಳು ಸೇರಿ ಒಟ್ಟಾರೆ 1000 ಕೋ.ರೂ ಡಿಸಿಸಿ ಬ್ಯಾಂಕ್ ನಿಂದ ವಿತರಿಸಲು ಉದ್ದೇಶಿಸಲಾಗಿದೆ ಎಂದು ತೇಲ್ಕೂರ ವಿವರಿಸಿದರು.

ಕಳೆದೆರಡು ವರ್ಷದಿಂದ ರೈತರಿಗೆ ಸಾಲ ಹಂಚದಿರುವುದನ್ನು ಮನಗಂಡು ತಾವು ಅಧ್ಯಕ್ಷರಾದ ನಂತರ ಸರ್ಕಾರದಿಂದ 10 ಕೋ.ರೂ ಷೇರು ತರಲಾಗಿದೆ. ಬಹು ಮುಖ್ಯವಾಗಿ 80 ಕೋ.ರೂ ಠೇವಣಿ ತರಲಾಗಿದೆ. ಸುಸ್ತಿ ಸಾಲ ವಸೂಲಾತಿಯಲ್ಲಿ ಗಣನೀಯ ಸಾಧನೆ ತೋರಲಾಗಿದ್ದು, 250 ಕೋ.ರೂ ದಲ್ಲಿ 150 ಕೋ.ರೂ ವಸೂಲಿ ಮಾಡಲಾಗಿದೆ. ಹೀಗೆ ಹಲವು ಹಂತದಲ್ಲಿ ಬ್ಯಾಂಕ್ ನ ಪುನಶ್ಚೇತನಕ್ಕೆ ಹಗಲಿರಳು ಶ್ರಮಿಸಲಾಗಿದೆ. ಇದಕ್ಕೆಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಸಚಿವ ಎಸ್. ಟಿ.‌ಸೋಮಶೇಖರ ಹಾಗೂ ಬ್ಯಾಂಕ್ ನ ಆಡಳಿತ ಮಂಡಳಿ ಸಹಕಾರ – ಬೆಂಬಲ ಕಾರಣವಾಗಿದೆ ಎಂದು ಶಾಸಕ ರಾಜಕುಮಾರ ತಿಳಿಸಿದರು.

ತಾವು ಅಧ್ಯಕ್ಷರಾದ ನಂತರ ಕೈಗೊಂಡ ಸುಧಾರಣೆ ಕ್ರಮದಿಂದ ರಾಜ್ಯದಲ್ಲಿ 21 ನೇ ಸ್ಥಾನದಲ್ಲಿದ್ದ ಕಲಬುರಗಿ ಡಿಸಿಸಿ ಬ್ಯಾಂಕ್ ಈಗ 11 ನೇ ಸ್ಥಾನ ಕ್ಕೆ ಬಂದು ನಿಂತಿದೆ. 2022ರ ಮಾರ್ಚ್ ಅಂತ್ಯದೊಳಗೆ ಟಾಪ್ ಮೂರರೊಳಗೆ ಬರಲು ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.

Advertisement

ಗ್ರಾಮ ಪಂಚಾಯಿತಿ ಗೊಂದು ಸಂಘ:  ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚಿಸಲು ಉದ್ದೇಶಿಸಲಾಗಿ, ಈಗಾಗಲೇ ಸಹಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. 4000 ಎಕರೆ ಭೂಮಿ 300 ರೈತರಿದ್ದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳ ರಚನೆ ಮೂಲಕ ಒಟ್ಟಾರೆ ಮೂರು ಲಕ್ಷ ರೈತರಿಗೆ ಸಾಲ ವಿತರಿಸಲು ಗುರಿ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಮಧ್ಯಾಮವಧಿ ಸಾಲ ವಸೂಲಾತಿಗೆ ಕ್ರಮ: ಅಸಲು 40 ಕೋ. ಹಾಗೂ ಇದರ ಬಡ್ಡಿ ಸೇರಿ ಅಂದಾಜು 80 ಕೋ.ರೂ ಮಧ್ಯಾಮವಧಿ ಸಾಲ ವಸೂಲಾತಿಗೆ ಬ್ಯಾಂಕ್ ನ ಆಡಳಿತ ಮಂಡಳಿ ದೃಢ ಹೆಜ್ಜೆ ಇಟ್ಟಿದ್ದು, ಈಗಾಗಲೇ 700 ರೈತರಿಗೆ ನೊಟೀಸ್ ನೀಡಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ, ನಿರ್ದೇಶಕರಾದ ಶರಣಬಸಪ್ಪ ಪಾಟೀಲ್ ಅಷ್ಠಗಾ, ಶಿವಾನಂದ ಮಾನಕರ್, ಚಂದ್ರಶೇಖರ ತಳ್ಳಳ್ಳಿ, ಎಂಡಿ ಚಿದಾನಂದ ನಿಂಬಾಳ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next