Advertisement

ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪ

11:39 AM Apr 25, 2018 | |

ಬೆಂಗಳೂರು: ವರನಟ ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪವಾಗಿದ್ದು, ಕರ್ನಾಟಕ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ತಿಳಿಸಿದರು. 

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ರಾಜ್‌ಕುಮಾರ್‌ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ಹಾಗೂ ಕನ್ನಡ ನುಡಿಯ ಏಕೀಕರಣದಲ್ಲಿ ಡಾ.ರಾಜ್‌ಕುಮಾರ್‌ ಕೊಡುಗೆ ಅಪಾರವಾಗಿದೆ. ತಮ್ಮ ಚಿತ್ರಗಳ ಮೂಲಕ ನಾಡಿನೆಲ್ಲೆಡೆ ಸಂಸ್ಕೃತಿ ಪಸರಿಸಿದ ಅವರು ಸಾಂಸ್ಕೃತಿಕ ಐಕಾನ್‌ ಆಗಿದ್ದಾರೆ ಎಂದು ಹೇಳಿದರು.

ತಮ್ಮ ಭಾಷಾ ಪ್ರಯೋಗವನ್ನೇ ನಟನಾ ಶೈಲಿಯನ್ನಾಗಿಸಿಕೊಂಡಿದ್ದ ರಾಜ್‌ಕುಮಾರ್‌, ಕನ್ನಡ ಭಾಷೆಯನ್ನು ಅದ್ಭುತವಾಗಿ ಬಳಸಿ ಪಾತ್ರಕ್ಕೆ ಭಾವ ಹಾಗೂ ಜೀವ ತುಂಬುತ್ತಿದ್ದರು. ಇಂದಿಗೂ ಅವರಂತೆ ಸ್ಪಷ್ಟ ಕನ್ನಡ ಉಚ್ಛಾರವನ್ನು ಯಾರಲ್ಲೂ ಕಂಡಿಲ್ಲ.ಇನ್ನು ಅವರು ಮಾಡಿದ ಪಾತ್ರಗಳಲ್ಲೂ ಸಜ್ಜನಿಕೆ ಇರುತ್ತಿತ್ತು. ನಾನು ಮೊದಲು 1970ರಲ್ಲಿ ಬಳ್ಳಾರಿಯ ಪ್ರೋಬೆಷನರಿ ಕಮಿಷನರ್‌ ಆಗಿ ಕರ್ನಾಟಕಕ್ಕೆ ಬಂದಾಗ ಶ್ರೀ ಕೃಷ್ಣದೇವರಾಯ ಚಿತ್ರವನ್ನು ನೋಡಿ ಕನ್ನಡವನ್ನು ಪರಿಚಯ ಮಾಡಿಕೊಂಡೆ. ನಂತರ ಅವರ ಸಿನಿಮಾಗಳನ್ನು ನೋಡುತ್ತಾ ಕನ್ನಡ ಕಲಿತುಕೊಂಡೆ ಎಂದು ತಿಳಿಸಿದರು.

ದೆಹಲಿಯಲ್ಲಿ ಮೊದಲ ಬಾರಿ ರಾಜಕುಮಾರ್‌ ಮೊದಲ ಭೇಟಿ ಮಾಡಿದ್ದೆ. ಅದು ಅವರ ಸರಳತೆ ಕಂಡು ಆಶ್ಚರ್ಯವಾಗಿತ್ತು. ಅದೇ ಸರಳತೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡಿದ್ದ ಅವರು, ಪ್ರಸಿದ್ದಿಯ ಉತ್ತುಂಗದಲ್ಲಿ ಇದ್ದಾಗಲೂ ಯಾವುದೇ ಬದಲಾವಣೆ ಕಾಣದ ಮಹಾನ್‌ ನಟ. ಇಂದಿಗೂ ಅವರ ನೆನಪು ನನಗೆ ಸೂರ್ತಿ ನೀಡುತ್ತದೆ ಎಂದ ಅವರು ರಾಜ್‌ ಕುಮಾರ್‌ ವ್ಯಕ್ತಿತ್ವ ಹಾಗೂ ಅವರ ಚಿತ್ರಗಳ ಕುರಿತು ಅನೇಕ ವಿಷಯಗಳನ್ನು ಮೆಲುಕು ಹಾಕಿದರು. 

ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ಅಪ್ಪಾಜಿ 60 ವರ್ಷದವರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರಲಿಲ್ಲ. ನಮ್ಮ ತಾಯಿ ಕಾರಣ ಕೇಳಿದರೆ ನಾನೇನು ಸಾಧನೆ ಮಾಡಿದ್ದೇನೆ ಎಂದು ಆಚರಿಸಿಕೊಳ್ಳಲಿ ಎನ್ನುತ್ತಿದ್ದರು. ಆನಂತರ ಕುಟುಂಬಸ್ಥರ ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಆಚರಿಸಿಕೊಳ್ಳಲಾರಂಭಿಸಿದರು. ಅಂತಹ ಸರಳ ವ್ಯಕ್ತಿತ್ವದಿಂದಲೇ ಇಂದಿಗೂ ಇಷ್ಟು ಅಭಿಮಾನದಿಂದ ನಾಡಿನಾದ್ಯಂತ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

Advertisement

ಅಪ್ಪಾಜಿ ಸಂಪನ್ಮೂಲಗಳ ಕುರಿತು ಹೆಚ್ಚು ಕಾಳಜಿ ಹೊಂದಿದ್ದರು. ತಾನು ಇರುವಲ್ಲಿ ನೀರು ಹಾಗೂ ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಅಪ್ಪಾಜಿ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು, ಹಾಗಾಗಿ ಅವರ ನೆನೆಪಿನಲ್ಲಿ ರಾಜ್‌ಕುಮಾರ್‌ ಐಎಎಸ್‌ ಅಕಾಡೆಮಿಯನ್ನು ಆರಂಭಿಸಿದ್ದು, ಇಂದು 800 ವಿದ್ಯಾರ್ಥಿಗಳು ಉಚಿತವಾಗಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ, ನಟ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ರಾಜ್‌ ಕುಟುಂಬ ಸದಸ್ಯರು, ನಟ ನಟಿಯರು ಉಪಸ್ಥಿತರಿದ್ದರು. 

ಗೀತ ಗಾಯನ: ಕಾರ್ಯಕ್ರಮದಲ್ಲಿ ಗಾಯಕಿ ಮಂಜುಳಾ ಗುರುರಾಜ್‌, ಸುನಿತಾ, ಗಾಯಕ ಮೋಹನ್‌ ಅವರಿಂದ ಡಾ.ರಾಜ್‌ಕುಮಾರ್‌ ಚಿತ್ರಗಳ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಶಿವರಾಜ್‌ಕುಮಾರ್‌ ನಾ ನಿನ್ನ ಮರೆಯಲಾರೆ ಹಾಗೂ ಪುನೀತ್‌ ಬೊಂಬೆ ಹೇಳುತೈತೇ ಹಾಡನ್ನು ಹಾಡಿದರು.

-ನಗರದೆಲ್ಲಡೆ ನಟ ಸಾರ್ವಭೌಮನ ಸಂಭ್ರಮದ ಜನ್ಮದಿನಾಚರಣೆ
-ಡಾ.ರಾಜ್‌ರಂತೆ ಸ್ಪಷ್ಟ ಕನ್ನಡ ಉಚ್ಛಾರ ಇಂದೀಗೂ ಯಾರಲ್ಲೂ ಕಂಡಿಲ್ಲ
-ರವೀಂದ್ರ ಕಲಾಕ್ಷೇತ್ರದಲ್ಲಿ ವರನಟನ ಅದ್ಧೂರಿ 90ನೇ ಜನ್ಮದಿನಾಚರಣೆ
-ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಪುನೀತ್‌ ಭಾಗಿ

Advertisement

Udayavani is now on Telegram. Click here to join our channel and stay updated with the latest news.

Next