Advertisement

ರಾಜೀವ್‌ಗಾಂಧಿ, ಅರಸು ಅಭಿವೃದ್ಧಿ ಹರಿಕಾರರು

10:10 PM Aug 24, 2019 | Lakshmi GovindaRaj |

ಚಾಮರಾಜನಗರ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಯುವಕರು ಹಾಗೂ ಬಡವರಿಗೆ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ ಬಣ್ಣಿಸಿದರು.

Advertisement

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಡೆದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಾಗೂ ನೆಹರು ಕುಟುಂಬ ದೇಶದ ಅಭಿವೃದ್ಧಿಗಾಗಿ ಅರ್ಪಣೆ ಮಾಡಿಕೊಂಡಿದೆ.

ಸ್ವಾತಂತ್ರ ಪೂರ್ವ ಹಾಗೂ ನಂತರ ದೇಶದ ಪ್ರಗತಿಗಾಗಿ ಯೋಜನೆಗಳನ್ನು ರೂಪಿಸಿದ ಕೀರ್ತಿ ಜವಹರಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್‌ಗಾಂಧಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ ಸರ್ಕಾರ ಪಂಚ ವಾರ್ಷಿಕ ಯೋಜನೆಗಳನ್ನು ಜಾರಿ ಮಾಡಿದ್ದ ಫ‌ಲವಾಗಿ ಇಂದು ದೇಶದ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬುದನ್ನು ಟೀಕೆ ಮಾಡುವ ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಅಧಿಕಾರಕ್ಕಾಗಿ ಇಲ್ಲಸಲ್ಲದ ಆರೋಪ: ಅಧಿಕಾರಕ್ಕಾಗಿ ಬಿಜೆಪಿ ಈಗ ನೆಹರು ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಕಾಶ್ಮೀರದ ವಿಚಾರದಲ್ಲಿ ಅಂದು ಪ್ರಧಾನಿ ಜವಹರಲಾಲ್‌ ನೆಹರು ತೆಗೆದುಕೊಂಡು ತೀರ್ಮಾನ ಸರಿಯಾಗಿದೆ. ಆ ಸಂದರ್ಭಕ್ಕಾಗಿ ಅನುಗುಣವಾಗಿ ವಿಶೇಷ ಸ್ಥಾನಮಾನವನ್ನು ನೀಡಿದ್ದರು. ಆದರೆ, ಇದನ್ನೇ ದೊಡ್ಡ ತಪ್ಪು ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅವರ ಇತರೇ ಜನಪರ ಯೋಜನೆಗಳನ್ನು ಮರೆಮಾಚುತ್ತದೆ ಎಂದು ಟೀಕಿಸಿದರು.

ಯುವ ಶಕ್ತಿ ಸಬಲೀಕರಣಕ್ಕೆ ಆದ್ಯತೆ: ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಯುವ ಶಕ್ತಿ ಸಬಲೀಕರಣ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದರು. ಯುವಕಗಾಗಿ ವಿಶೇಷ ಯೋಜನೆಗಳನ್ನು ಜಾರಿ ಮಾಡಿದ್ದರು. ಮತದಾನ ಹಕ್ಕನ್ನು 18 ವರ್ಷಕ್ಕೆ ಇಳಿಕೆ ಮಾಡುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಯುವಶಕ್ತಿ ಬರಬೇಕೆಂಬ ಅಭಿಲಾಷೆಯನ್ನು ಹೊಂದಿದ್ದರು. ಅವರ ದೂರದೃಷ್ಟಿ ಆಡಳಿತದಿಂದಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ. ಇಂತ ಮಹಾನ್‌ ನಾಯಕರನ್ನು ಪಡೆದ ಕಾಂಗ್ರೆಸ್‌ ಪಕ್ಷದ ಸಾಧನೆಯನ್ನು ತಿಳಿಸಲು ವೇದಿಕೆಗಳಾಗಬೇಕು.

Advertisement

ಯುವ ಸಮುದಾಯ ಕಾಂಗ್ರೆಸ್‌ ಪಕ್ಷದ ಪರ ಒಲವು ಹೊಂದುವ ನಿಟ್ಟಿನಲ್ಲಿ ಇಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಅವರ ಸಾಧನೆಯನ್ನು ತಿಳಿಸುವ ಕೆಲಸವನ್ನು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಮಾಡಬೇಕಾಗಿದೆ. ಬಿಜೆಪಿ ಧರ್ಮ ಹಾಗೂ ಜಾತಿ ಆಧಾರ ಹಾಗೂ ಭಾವನಾತ್ಮಕ ವಿಚಾರಗಳನ್ನು ಹೇಳುತ್ತಾ ಯುವಕರನ್ನು ತನ್ನ ಸೆಳೆಯುವ ತಂತ್ರಗಾರಿಕೆ ಮಾಡುವುದರಲ್ಲಿ ಸಿದ್ಧಹಸ್ತರು, ಆರ್‌ಎಸ್‌ಎಸ್‌ ಈ ನಿಟ್ಟಿನಲ್ಲಿ ಪ್ರತ್ಯೇಕ ಶಾಖೆಗಳನ್ನು ತೆರೆದು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.

ಅಭಿವೃದ್ಧಿಗೆ ವಿಶೇಷ ಒತ್ತು: ಮಾಜಿ ಮುಖ್ಯಮಂತ್ರಿ ದೇವವರಾಜ ಅರಸು ಅವರು ಬಡವರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ಅವರು ಜಾರಿ ಮಾಡಿದ್ದ ಯೋಜನೆಗಳು ಬಡವರು ಮತ್ತು ಹಿಂದೂಳಿದ ಸಮುದಾಯಗಳು ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಇಂತ ನಾಯಕರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡುವ ಜೊತೆಗೆ ಅವರು ನೀಡಿರುವ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡಿದಿದ್ದರೆ, ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು. ಮುಖಂಡರು ಹೆಚ್ಚು ಸಕ್ರಿಯವಾಗಿ ಪಕ್ಷ ಸಂಘಟನೆಜೊತೆಗೆ ಕಾಂಗ್ರೆಸ್‌ ಪಕ್ಷ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಯುವ ಪೀಳಿಗೆಗೆ ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವಣ್ಣ, ಶಾಸಕರಾದ ಆರ್‌.ನರೇಂದ್ರ, ಧರ್ಮಸೇನ, ಮಾಜಿ ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಎಸ್‌.ಬಾಲರಾಜು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಮುಖಂಡರಾದ ಗಣೇಶ್‌ ಪ್ರಸಾದ್‌, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌, ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಬಸವರಾಜು, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಬ್ಲಾಕ್‌ ಅಧ್ಯಕ್ಷರಾದ ತೋಟೇಶ್‌, ಮಹಮದ್‌ ಅಸರ್‌, ಎ.ಎಸ್‌.ಗುರುಸ್ವಾಮಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಚೇತನ್‌ದೊರೆ, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ರಾಜೀವ್‌ಗಾಂಧಿ, ಮಾಜಿ ಸಿಎಂ ದೇವರಾಜ ಅವರು ಅವರು ದೀನ ದಲಿತರು, ಬಡವರ ಅಭಿವೃದ್ಧಿಯ ಹರಿಕಾರರು. ಇವರ ಸಾಧನೆಯಿಂದ ದೇಶ ಹಾಗೂ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಾಗಿದೆ.
-ಸಿ. ಪುಟ್ಟರಂಗಶೆಟ್ಟಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next