Advertisement

ಹಿಂದಿ ಹೇರಿಕೆ ಸಲ್ಲ ಎಂದ ರಜನಿಕಾಂತ್‌

12:57 AM Sep 19, 2019 | mahesh |

ಚೆನ್ನೈ: ಹಿಂದಿ ಹೇರಿಕೆಯ ವಿರುದ್ಧದ ಧ್ವನಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಈ ಸಾಲಿಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಕೂಡ ಸೇರ್ಪಡೆಯಾಗಿದ್ದಾರೆ. ಹಿಂದಿಯನ್ನು ಏಕ ಭಾಷೆಯಾಗಿ ಬಳಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಲಹೆ ಕುರಿತು ಬುಧವಾರ ಪ್ರತಿಕ್ರಿ ಯಿಸಿರುವ ನಟ ರಜನಿಕಾಂತ್‌, “ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ. ಒಂದೇ ಭಾಷೆ ಎಂಬ ಪರಿಕಲ್ಪ ನೆಯು ಭಾರತದಲ್ಲಿ ಜಾರಿಮಾಡುವುದು ಅಸಾಧ್ಯ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಹಿಂದಿಯನ್ನು ಹೇರಿಕೆ ಮಾಡಲು ಯಾರಾದರೂ ಯತ್ನಿಸಿದ್ದೇ ಆದಲ್ಲಿ, ಅದಕ್ಕೆ ಕೇವಲ ದಕ್ಷಿಣದ ರಾಜ್ಯಗಳಿಂದ ಮಾತ್ರವಲ್ಲ, ಉತ್ತರದ ಅನೇಕ ರಾಜ್ಯಗಳಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಗಲಿದೆ ಎಂದೂ ರಜನಿ ಅಭಿಪ್ರಾಯಪಟ್ಟಿದ್ದಾರೆ. “ಭಾರತದಲ್ಲಿ ಮಾತ್ರವಲ್ಲ, ಯಾವುದೇ ದೇಶದಲ್ಲಾದರೂ ಏಕ ಭಾಷೆ ಎನ್ನುವುದು ಅದರ ಏಕತೆ ಮತ್ತು ಪ್ರಗತಿಗೆ ಉತ್ತಮವಾದದ್ದು. ಆದರೆ, ದುರದೃಷ್ಟವಶಾತ್‌, ನಮ್ಮ ದೇಶದಲ್ಲಿ ಒಂದೇ ಭಾಷೆಯನ್ನು ಜಾರಿ ಮಾಡಲು ಯಾರೂ ಹೋಗಬಾರದು. ಯಾವುದೇ ಭಾಷೆಯ ಹೇರಿಕೆಯೂ ಸಲ್ಲದು. ಹಿಂದಿ ಹೇರಿಕೆಯನ್ನು ದಕ್ಷಿಣದ ಯಾವ ರಾಜ್ಯವೂ ಒಪ್ಪುವುದಿಲ್ಲ’ ಎಂದಿದ್ದಾರೆ ರಜನಿ. ಈ ನಡುವೆ, ಹಿಂದಿ ಹೇರಿಕೆಗೆ ಸಂಬಂಧಿಸಿ ಅಮಿತ್‌ ಶಾ ಬುಧವಾರ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಡಿಎಂಕೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಿದೆ.

Advertisement

ಶಾ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಇದೇ ವೇಳೆ, ಅಮಿತ್‌ ಶಾ ಅವರ “ದೇಶಕ್ಕೆ ಒಂದೇ ಭಾಷೆ’ ಹೇಳಿಕೆಯು ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು. ದೇಶದ ಏಕತೆಗಾಗಿ ಅವರು ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಹಿಂದಿಯಿಂದ ಮಾತ್ರವೇ ದೇಶದ ಜನರು ಒಗ್ಗೂಡಲು ಸಾಧ್ಯ ಎಂಬ ಯೋಚನೆಯೇ ಅತ್ಯಂತ ಅಪಾಯಕಾರಿ ಎಂದು ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next