Advertisement

Mangaluru ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

12:25 AM Apr 21, 2024 | Team Udayavani |

ಮಂಗಳೂರು: ಉಳ್ಳಾಲ ಕೋಟೆಪುರದಲ್ಲಿ 2016ರ ಎ. 12ರ ಮುಂಜಾನೆ ಕೋಮುದ್ವೇಷದಿಂದ ನಡೆದಿದ ರಾಜೇಶ್‌ ಕೋಟ್ಯಾನ್‌ ಆಲಿಯಾಸ್‌ ರಾಜ (44) ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಉಳ್ಳಾಲ ಕೋಡಿ ರೋಡ್‌ನ‌ ಮೊಹಮ್ಮದ್‌ ಆಸೀಫ್ ಆಲಿಯಾಸ್‌ ಆಚಿ (31), ಮುಕ್ಕಚೇರಿಯ ಮೊಹಮ್ಮದ್‌ ಸುಹೈಲ್‌ ಆಲಿಯಾಸ್‌ ಸುಹೈಲ್‌ (28), ಕೋಡಿ ಮಸೀದಿ ಬಳಿಯ ಅಬ್ದುಲ್‌ ಮುತಾಲಿಪ್‌ ಆಲಿಯಾಸ್‌ ಮುತ್ತು (28) ಮತ್ತು ಉಳ್ಳಾಲ ಉಳಿಯ ರಸ್ತೆಯ ಅಬ್ದುಲ್‌ ಅಸ್ವೀರ್‌ ಆಲಿಯಾಸ್‌ ಅಚ್ಚು (27) ಜೀವಾವಧಿ ಶಿಕ್ಷೆಗೊಳಗಾದವರು.

ಮೊಹಮ್ಮದ್‌ ಆಸಿಫ್ ಚಾಲಕ, ಮೊಹಮ್ಮದ್‌ ಸುಹೈಲ್‌ ಲೋಡರ್‌, ಅಬ್ದುಲ್‌ ಮುತಾಲಿಪ್‌ ಕೂಲಿ ಕೆಲಸ, ಅಬ್ದುಲ್‌ ಅಸ್ವೀರ್‌ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇತರ ಇಬ್ಬರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಇವರ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಎ. 20ರಂದು ನಾಲ್ವರು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 302ರಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫ‌ಲರಾದಲ್ಲಿ ಹೆಚ್ಚುವರಿ 1 ವರ್ಷ ಸಜೆ, ಕಲಂ 201ರಡಿಯಲ್ಲಿ 1 ವರ್ಷ ಸಜೆ ಮತ್ತು ತಲಾ 5,000 ರೂ. ದಂಡ, ದಂಡ ಪಾವತಿಸಲು ವಿಫ‌ಲವಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ, ಕಲಂ 143ರಡಿ 6 ತಿಂಗಳ ಸಾದಾ ಸಜೆ, ಕಲಂ 148ರಡಿಯಲ್ಲಿ 1 ವರ್ಷ ಸಜೆ, ಕಲಂ 153(ಎ) ಅಡಿಯಲ್ಲಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಹಾಗೆಯೇ ಆರೋಪಿಗಳಿಂದ ವಸೂಲಾದ ದಂಡದ ಮೊತ್ತ 1.20 ಲ.ರೂ.ಗಳನ್ನು ಮೃತ ರಾಜೇಶ್‌ ಕೋಟ್ಯಾನ್‌ ಅವರ ಪತ್ನಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ರಾಜೇಶ್‌ ಕೋಟ್ಯಾನ್‌ ಅವರ ಪತ್ನಿಗೆ ಪರಿಹಾರ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Advertisement

ಕೋಮುದ್ವೇಷದ ಕಾರಣದಿಂದ ನಡೆದ ಕೊಲೆ
ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮೊಗವೀರಪಟ್ಣದ ಹಿಂದೂ ಮತ್ತು ಮುಸ್ಲಿಮರ ನಡುವೆ ಹಲವು ಸಮಯದಿಂದ ಕೋಮುಸಂಘರ್ಷ ನಡೆಯುತ್ತಿತ್ತು. ಆರೋಪಿಗಳು ಒಂಟಿಯಾಗಿ ಬರುವ ಮೊಗವೀರಪಟ್ಣದ ಹಿಂದೂವೊಬ್ಬನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದ್ದರು. ಅದರಂತೆ 2016 ಎ. 12ರ ಮುಂಜಾವ ಕೋಟೆಪುರ ರಸ್ತೆಯಲ್ಲಿ ಮೀನುಗಾರಿಕೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ರಾಜೇಶ್‌ ಕೋಟ್ಯಾನ್‌ ಅವರ ಮೇಲೆ ಮರದ ದೊಣ್ಣೆಗಳಿಂದ ಹೊಡೆದು ಅನಂತರ ಅವರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸ್‌ ನಿರೀಕ್ಷಕ ಅಶೋಕ್‌ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಫೋರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ| ಮಹಾಬಲೇಶ್‌ ಶೆಟ್ಟಿ ಮತ್ತು ತಂಡದವರು ಘಟನ ಸ್ಥಳ ತಪಾಸಣೆ ನಡೆಸಿ ತಪಾಸಣ ವರದಿ ಮತ್ತು ಶವಪರೀಕ್ಷಾ ವರದಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next