Advertisement

ಸಹಕಾರಿ ರಂಗಕ್ಕೆ ಡಾ|ಎಂಎನ್‌ಆರ್‌ ಪವರ್‌ ಸ್ಟಾರ್‌: ಒಡಿಯೂರು ಶ್ರೀ

12:00 AM Feb 25, 2023 | Team Udayavani |

ಮಂಗಳೂರು: ತಮ್ಮ 74 ವರ್ಷಗಳ ಪಯಣದ ಉದ್ದಕ್ಕೂ ಸಹಕಾರಿ ರಂಗ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಗೈಯುತ್ತ ಸಮಾಜದ ಕಟ್ಟಕಡೆಯ ಮಂದಿಯೂ
ಉದ್ಧಾರವಾಗಬೇಕು ಎಂಬ ಮನೋಸ್ಥಿತಿ ಹೊಂದಿರುವ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರದ್ದು ಶತಮಾನದ ಸಂಭ್ರಮವಾಗಲಿ, ಆ ಮೂಲಕ ಇನ್ನಷ್ಟು ಮಂದಿಯ ಸೇವೆ ಮಾಡುವಂತಾಗಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

Advertisement

ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರ 74ನೇ ಹುಟ್ಟು ಹಬ್ಬ ಸಂಭ್ರಮದ ಅಭಿವಂದನ ಕಾರ್ಯಕ್ರಮ ಹಾಗೂ ಸವಲತ್ತುಗಳ ವಿತರಣೆ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.

ಸಹಕಾರಿ ರಂಗದಲ್ಲಿ ಡಾ| ಎಂಎನ್‌ಆರ್‌ ಅವರು ನಾನು ನಡೆದದ್ದೇ ದಾರಿ ಎಂಬ ನೇರ ನಡೆಯೊಂದಿಗೆ ಮುಂದುವರಿಯುತ್ತ ಇತರರನ್ನು ಕೂಡ ಸುಧಾರಣೆಯ ಮಾರ್ಗಕ್ಕೆ ತಂದವರು ಎಂದ ಅವರು ಸಾಧನೆ ಇಲ್ಲದಿದ್ದರೆ ಬದುಕಿಗೆ ಅವಮಾನ, ದೇಹವೊಂದನ್ನು ಬಿಟ್ಟು ಮತ್ತೆಲ್ಲವನ್ನೂ ಕಳೆದುಕೊಂಡರೂ ಮತ್ತೆ ಗಳಿಸಬಹುದು, ಹಾಗಾಗಿ ಶರೀರವನ್ನು ಬಳಸಿಕೊಂಡು ಮಾಡಬಲ್ಲ ಸಾಧನೆ ಮಾಡಲೇಬೇಕು ಎನ್ನುವ ತತ್ವವನ್ನು ರಾಜೇಂದ್ರ ಕುಮಾರ್‌ ಮೈಗೂಡಿಸಿಕೊಂಡು ಬಂದಿದ್ದಾರೆ, ಅವರೊಬ್ಬರು ಸಹಕಾರಿ ರಂಗದ ಪವರ್‌ ಸ್ಟಾರ್‌ ಎಂದರು.

ವ್ಯಕ್ತಿಯಷ್ಟೇ ಅಲ್ಲ, ಸಮಾಜದ ಆಸ್ತಿ
ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್‌.ಯಡಪಡಿತ್ತಾಯ ಅಭಿವಂದನ ಮಾತುಗಳನ್ನಾಡಿ, ಡಾ| ಎಂಎನ್‌ಆರ್‌ ಅವರು ಕೇವಲ ವ್ಯಕ್ತಿಯಲ್ಲ, ಒಂದು ದೊಡ್ಡ ಶಕ್ತಿ ಹಾಗೂ ಸಮಾಜದ ಆಸ್ತಿಎಂದರು.

ಮುಖ್ಯವಾಹಿನಿಗೆ ಬನ್ನಿ: ಡಿಸಿ
ರಾಜೇಂದ್ರ ಕುಮಾರ್‌ ಅವರು ಸಹಕಾರಿ ರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ, ಇಷ್ಟು ಸಂಘಟನ ಶಕ್ತಿ ಇರುವವರು ಶಕ್ತಿಕೇಂದ್ರಕ್ಕೆ ಬರಬೇಕು, ಆ ಮೂಲಕ ಇನ್ನಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದು ಸಾಧ್ಯ ಎಂದು ಡಿಸಿ ರವಿಕುಮಾರ್‌ ಎಂ.ಆರ್‌. ಅವರು ಹೇಳಿದರು.

Advertisement

ಪ್ರದೀಪ್‌ ಕುಮಾರ್‌ ಕಲ್ಕೂರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ಶೆಟ್ಟಿ ಮಾತನಾಡಿದರು. ಅದಾನಿ ಸಮೂಹದ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕಿಶೋರ್‌ ಆಳ್ವ ಮಾತನಾಡಿ, ದ.ಕ.ದಲ್ಲಿ ಸಹಕಾರಿ ಬ್ಯಾಂಕಿಂಗ್‌ನಲ್ಲಿ ಹೊಸ ಆಯಾಮ ಸೃಷ್ಟಿಸಿದ ಡಾ| ಎಂಎನ್‌ಆರ್‌ ಮಹಿಳೆಯರ ಅಭಿವೃದ್ಧಿಗೆ ನೆರವಾದವರು ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಂಡಿ ಬಾಲಶೇಖರ್‌, ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಭಾಸ್ಕರ ಎಸ್‌ ಕೋಟ್ಯಾನ್‌, ಬಿ. ನಿರಂಜನ್‌, ರಾಜೇಶ್‌ ರಾವ್‌, ರಾಜು ಪೂಜಾರಿ, ಅಶೋಕ್‌ ಕುಮಾರ್‌ ಶೆಟ್ಟಿ, ರಾಜಾರಾಮ ಭಟ್‌ ಟಿ.ಜಿ., ಕೆ.ಬಿ. ಜಯರಾಜ್‌ ರೈ, ಕೆ. ಹರಿಶ್ಚಂದ್ರ, ಮಹೇಶ್‌ ಹೆಗ್ಡೆ, ಸದಾಶಿವ ಉಳ್ಳಾಲ್‌, ಸಿಇಒ ಗೋಪಾಲಕೃಷ್ಣ ಭಟ್‌, ದ.ಕ. ಸಹಕಾರ ಸಂಘಗಳ ಉಪನಿಬಂಧಕ ರಮೇಶ್‌, ಉಡುಪಿ ಉಪನಿಬಂಧಕ ಲಕ್ಷ್ಮೀನಾರಾಯಣ, ಉಡುಪಿಯ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ , ಡಾ| ಎಂಎನ್‌ಆರ್‌ ಅವರ ಪುತ್ರ ಮೇಘರಾಜ್‌ ಭಾಗವಹಿಸಿದ್ದರು.

ಸಮಿತಿ ಅಧ್ಯಕ್ಷ ಐಕಳಬಾವ ದೇವಿ ಪ್ರಸಾದ್‌ ಶೆಟ್ಟಿ ಬೆಳಪು ಸ್ವಾಗತಿಸಿದರು, ಕಾರ್ಯಾಧ್ಯಕ್ಷ ಶಶಿಕುಮಾರ್‌ ರೈ ಬಾಲೊÂಟ್ಟು ವಂದಿಸಿದರು. ಇದೇ ವೇಳೆ 74 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು, ಅಶಕ್ತರಿಗೆ ಪರಿಹಾರದ ಚೆಕ್‌ ಹಸ್ತಾಂತರಿಸಲಾಯಿತು.

ಸಹಕಾರಿ ರಂಗದಲ್ಲಿದ್ದೇ ಜನಸೇವೆ:
ಡಾ| ರಾಜೇಂದ್ರ ಕುಮಾರ್‌ ಸಾರ್ವಜನಿಕ ಸೇವೆಗೆ, ಜನೋಪಯೋಗಿ ಕೆಲಸ ಮಾಡುವುದಕ್ಕೆ ಮುಖ್ಯವಾಹಿನಿಗೆ ಬರಬೇಕೆಂದೇ ಇಲ್ಲ, ಸಹಕಾರಿ ಕ್ಷೇತ್ರದಲ್ಲಿದ್ದುಕೊಂಡೂ ಅದನ್ನು ಸಾಧಿಸಬಹುದು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಹೇಳಿದರು.

ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಅಭಿವಂದನೆ ಸ್ವೀಕರಿಸಿ ಮಾತನಾಡಿ, ನಾಲ್ಕು ಜನರ ಬದುಕಿಗೆ ಬೆಳಕಾದರೆ ಅದುವೇ ನನಗೆ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂದರು.

ಯಾವ ಕಾರಣಕ್ಕೂ ಜಾತಿಯ ಆಧಾರದಲ್ಲಿ ಕೆಲಸ ಮಾಡಬಾರದು, ಮಾನವೀಯತೆಯೇ ಮುಖ್ಯ, ಎಲ್ಲ ಶಕ್ತಿಗಿಂತಲೂ ಸಹಕಾರಿ ಶಕ್ತಿಯೇ ದೊಡ್ಡದು. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬುದು ನನ್ನ ಇಚ್ಛೆ. ಪಕ್ಷ ರಾಜಕೀಯದಲ್ಲಿ ನಂಬಿಕೆ ನನಗಿಲ್ಲ, ಎಲ್ಲರ ಪ್ರೀತಿ ಸಹಕಾರದಿಂದ ಯಶಸ್ಸು ಸಾಧ್ಯವಾಗಿದೆ, ಎಲ್ಲರ ಜತೆಗಿರುವುದೇ ನನಗೆ ಮುಖ್ಯ ಹೊರತು ಮುಖ್ಯವಾಹಿನಿಯಲ್ಲಿರುವುದಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next