Advertisement

Rajasthan kota: ಕೋಟಾದ ಚಕ್ರವ್ಯೂಹದಲ್ಲಿ ಅವಸರದ ಅಭಿಮನ್ಯುಗಳು

04:27 PM Sep 24, 2023 | Team Udayavani |

ದೇಶದ ಕೋಚಿಂಗ್‌ ಕ್ಯಾಪಿಟಲ್‌ ಎಂದು ಕರೆಸಿಕೊಳ್ಳುವ ರಾಜಸ್ಥಾನದ ಕೋಟಾದಲ್ಲಿ ಈಗ ನೋವಿನ, ಸಂಕಟದ ಧ್ವನಿ ಕೇಳತೊಡಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಬೆಳವಣಿಗೆಗೆ ಯಾರೆಲ್ಲ ಕಾರಣ? ಈ ಅನಾಹುತದ ನಡೆಗೆ ತಡೆ ಒಡ್ಡುವುದು ಹೇಗೆ?

Advertisement

ಭಾರತದ ಕೋಚಿಂಗ್‌ ಕ್ಯಾಪಿಟಲ್‌ ಎಂಬ ಖ್ಯಾತಿ ರಾಜಸ್ಥಾನದ ಕೋಟಾ ಜಿಲ್ಲೆಗಿದೆ. ಇದಕ್ಕೆ ಕಾರಣ, ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಇಲ್ಲಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಬರುತ್ತಾರೆ. ಅಲ್ಲಿ ಕೋಚಿಂಗ್‌ ತಗೊಂಡರೆ ಸಾಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂಬ ನಂಬಿಕೆ ಈಗಲೂ ಅದೆಷ್ಟೋ ಜನರಿಗಿದೆ. ಹಾಗಾಗಿಯೇ ಒಂದೊಳ್ಳೆಯ ಸರ್ಕಾರಿ ನೌಕರಿ ಪಡೆಯಬೇಕು ಅನ್ನುವ ಯುವಜನರು, ಮಕ್ಕಳಿಗೆ ಉತ್ತಮ ಶ್ರೇಣಿಯ ಸರ್ಕಾರಿ ನೌಕರಿ ಸಿಗುವಂತಾಗಲಿ ಎಂದು ಬಯಸುವ ಪೋಷಕರು, ಈಗಲೂ ಕೋಟಾದ ದಿಕ್ಕಿಗೇ ಮುಖಮಾಡಿ ಮಲಗುತ್ತಾರೆ. ಅಷ್ಟರಮಟ್ಟಿಗೆ ಕೋಟಾದಲ್ಲಿ ಸಿಗುವ ಕೋಚಿಂಗ್‌ ಹೆಸರು ಮಾಡಿದೆ. ತತ#ಲವಾಗಿ- “ಕೋಟಿ ವಿದ್ಯೆಗಳಲ್ಲಿ ಕೋಟಾ ವಿದ್ಯೆಯೇ ಮೇಲು’ ಅನ್ನುವಂತಾಗಿದೆ! ಇಂಥ ಹಿನ್ನೆಲೆಯ ಕೋಟಾದಲ್ಲೂ ಈಗ ಕಳವಳದ, ಸಂಕಟದ ದನಿಗಳು ಕೇಳತೊಡಗಿವೆ. ಕಾರಣ, ಮೊನ್ನೆ ಮೊನ್ನೆಯವರೆಗೂ ಕೋಚಿಂಗ್‌ ಕ್ಯಾಪಿಟಲ್‌ ಎನ್ನಿಸಿಕೊಂಡಿದ್ದ ಊರು ಈಗ ಸುಯಿಸೈಡ್‌ ಕ್ಯಾಪಿಟಲ್‌ ಆಗಿಬಿಟ್ಟಿದೆ! ಪರೀಕ್ಷೆಯಲ್ಲಿ ಯಶಸ್ಸು ಪಡೆಯಲಿಲ್ಲ, ಪೋಷಕರ ನಿರೀಕ್ಷೆಯನ್ನು ನಿಜ ಮಾಡಲಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ ಎಂಬ ಕಾರಣದಿಂದ 2023 ರ ಜನವರಿಯಿಂದ ಈವರೆಗೆ, ಕೋಟಾದಲ್ಲಿ ಕೋಚಿಂಗ್‌ ಪಡೆಯುತ್ತಿದ್ದ 25 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಕನಸು ನನಸಾಗಲಿಲ್ಲ, ಕ್ಷಮಿಸಿ…

“ಕ್ಷಮಿಸು ಅಪ್ಪ, ನಾನು ಎಷ್ಟೇ ಪ್ರಯತ್ನ ಪಟ್ಟರೂ ನನ್ನಿಂದ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ಕನಸುಗಳನ್ನು ನನಸು ಮಾಡಲು ಆಗಲಿಲ್ಲ ಎಂಬ ನೋವಿನಿಂದಲೇ ಎಲ್ಲರಿಗೂ ವಿದಾಯ ಹೇಳುತ್ತಿದ್ದೇನೆ…

“ಅಪ್ಪಾ-ಅಮ್ಮಾ… ನೀವು ಅಂದುಕೊಂಡಿದ್ದನ್ನು ಸಾಧಿಸಲು ಆಗಲಿಲ್ಲ. ಸೋಲಿನ ಮುಖ ಹೊತ್ತು ನಿಮ್ಮನ್ನು ನೋಡಲಾಗದೆ ಈ ಬದುಕಿಗೆ ಗುಡ್‌ ಬೈ ಹೇಳಿರುವೆ. ಸಾರಿ…’ ಈ ರೀತಿಯ ಸಾಲುಗಳನ್ನು ಸೂಸೈಡ್‌ ನೋಟ್‌ಗಳಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

Advertisement

ಪೋಷಕರೂ ಕಾರಣ:

ಹೌದು. ಈಚೆಗೆ ಕೋಚಿಂಗ್‌ ಪಡೆದ ನಂತರವೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂದುಕೊಂಡ ಮಟ್ಟದ ಯಶಸ್ಸು ಪಡೆಯಲು, ಮುಂದಿನ ಭವಿಷ್ಯವನ್ನು ತಮ್ಮಿಷ್ಟದಂತೆ ರೂಪಿಸಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾರು ಹೊಣೆ? ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು: ಮಕ್ಕಳು ಹುಟ್ಟಿದ ತಕ್ಷಣದಲ್ಲೇ, ಅವರು ಮುಂದೆ ಏನಾಗಬೇಕೆಂದು ಪೋಷಕರು ನಿರ್ಧರಿಸಿಬಿಟ್ಟಿರುತ್ತಾರೆ. ತಮ್ಮ ಮಕ್ಕಳು ಮುಂದೆ ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗಿ ಮೆರೆಯುತ್ತಾರೆಂದು ಎಲ್ಲರ ಬಳಿ ಹೇಳಿಕೊಂಡು ಬರುತ್ತಾರೆ. ಮುಂದೆ ಹೀಗೇ ಆಗಬೇಕು ಎಂದು ಮಕ್ಕಳಿಗೂ ಉಪದೇಶ ಮಾಡುತ್ತಾರೆ. ಸಮಸ್ಯೆಗಳು ಶುರುವಾಗುವುದೇ ಇಲ್ಲಿಂದ. ಮುಂದೆ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಯೋಚಿಸಲೂ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ.

ಅವಸರದಲ್ಲಿ ನುಗ್ಗುವ ಅಭಿಮನ್ಯುಗಳು!

ಶಾಲೆಯಲ್ಲಿ ಉತ್ತಮ ಅಂಕ ಗಳಿಸುವ ತಮ್ಮ NEET/IIT&JEE ನಂತಹ ಕಠಿಣ ಪರೀಕ್ಷೆಗಳಲ್ಲೂ ಸುಲಭವಾಗಿ ಯಶಸ್ಸು ಪಡೆಯುತ್ತಾರೆ ಎಂದು ಊಹಿಸುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಹೊಂದಿಸಿ ಅವರನ್ನು ಕಳಿಸುತ್ತಾರೆ. ಆದರೆ ಐಐಟಿ, ಜೆಇಇ, ನೀಟ್‌, ಐಎಎಸ್‌ನಲ್ಲಿ ಯಶಸ್ಸು ಪಡೆಯುವುದು ಖಂಡಿತ ಸುಲಭವಲ್ಲ. ಅದು ಕಬ್ಬಿಣದ ಕಡಲೆ. ಹೊಸ ಜಾಗ, ಹೊಸ ಪರಿಸರ, ಹೊಸ ಹೊಸ ಸವಾಲುಗಳು, ಅರ್ಥವಾಗದ ಭಾಷೆ, ತಿಂಗಳಿಗೊಂದು ಪರೀಕ್ಷೆ… ಇಂಥ ಹಲವು ಒತ್ತಡಗಳು ಜೊತೆಯಾದಾಗ, ಅವಸರದಲ್ಲಿ ಕುರುಕ್ಷೇತ್ರಕ್ಕೆ ನುಗ್ಗಿದ ಅಭಿಮನ್ಯುವಿನ ಸ್ಥಿತಿ ಮಕ್ಕಳ¨ªಾಗುತ್ತದೆ. ಕೋಚಿಂಗ್‌ ಪಡೆದೂ ಅಂದುಕೊಂಡಂತಹ ಯಶಸ್ಸು ಪಡೆಯಲು ಆಗದಿ¨ªಾಗ ಕೆಲವರು ಡಿಪ್ರಶನ್‌ಗೆ ಹೋಗುತ್ತಾರೆ. ಕೆಲವರು ಮರಳಿ ಯತ್ನವ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಒಂದಷ್ಟು ಜನ ಅದೃಷ್ಟವನ್ನು ಹಳಿಯುತ್ತಾ ಸುಮ್ಮನಾಗುತ್ತಾರೆ. ಮರ್ಯಾದೆಗೆ ಅಂಜುವವರು, ಸುಯಿಸೈಡ್‌ ನಂಥ ಆತುರದ ನಿರ್ಣಯ ಕೈಗೊಳ್ಳುತ್ತಾರೆ.

ಅಂತಿಮ ಆಯ್ಕೆ  ವಿದ್ಯಾರ್ಥಿಗೇ ಇರಲಿ…

ಈ ಪ್ರಪಂಚದಲ್ಲಿ ಪ್ರತಿ ವ್ಯಕ್ತಿಯ ಡಿಎನ್‌ಎ ಪ್ಯಾಟ್ರನ್‌ ಹಾಗೂ ಬೆರಳಚ್ಚು ಅನನ್ಯ ಹಾಗೂ ವಿಶಿಷ್ಟ. ಇಲ್ಲಿ ಒಬ್ಬರಂತೆ ಇನ್ನೊಬ್ಬರು ಇಲ್ಲ. ಇದರಿಂದ ಒಂದು ಅಂಶ ಅಂತೂ ಸ್ಪಷ್ಟ: ಎಲ್ಲರೂ ಇಂಜಿನಿಯರ್‌ ಅಥವಾ ಡಾಕ್ಟರ್‌ ಆಗಲಿಕ್ಕೆ ಸಾಧ್ಯವಿಲ್ಲ. ಬುದ್ಧಿವಂತರೆಲ್ಲಾ ಐಎಎಸ್‌/ ಐಪಿಎಸ್‌ ಮಾಡಲು ಸಾಧ್ಯವಿಲ್ಲ. ಹಾಗೆ ಆಗಲೂ ಕೂಡದು. ಕಾರಣ, ಸಮಾಜದ ಅಭಿವೃದ್ಧಿಗೆ ಎಲ್ಲಾ ರೀತಿಯ ವೃತ್ತಿಪರರ ಅವಶ್ಯಕತೆ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಹಾದಿ, ಗುರಿ ಹಾಗೂ ಯಶಸ್ಸನ್ನು ತಾನೇ ನಿರ್ಧರಿಸಬೇಕು. ಏನೇ ಕಲಿತರೂ ಇಷ್ಟಪಟ್ಟು ಕಲಿಯಬೇಕು. ಒಬ್ಬ ವ್ಯಕ್ತಿಯ ವೃತ್ತಿ ಜೀವನದ ಯಶಸ್ಸು ಅವನ ವೃತ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಮಕ್ಕಳೂ- ಪೋಷಕರೂ ಅರ್ಥಮಾಡಿಕೊಂಡಾಗ, ಸ್ಪರ್ಧಾತ್ಮಕ ±ರೀಕ್ಷೆಯಲ್ಲಿ ಯಶಸ್ಸು ಕಾಣದಿದ್ದರೂ, ನಂತರದ ಬದುಕಿನಲ್ಲಿ ಗೆಲ್ಲುವವರ ಸಂಖ್ಯೆ ಹೆಚ್ಚಾಗುತ್ತದೆ. ಅಂಥ ಸಂದರ್ಭ ಜೊತೆಯಾದ ಕ್ಷಣದಲ್ಲಿಯೇ ಡಿಪ್ರಶನ್‌ಗೆ ತುತ್ತಾಗುವವರ ಸಂಖ್ಯೆಯೂ ತಗ್ಗುತ್ತದೆ.

3,500 ಹಾಸ್ಟೆಲ್‌ ಇವೆಯಂತೆ!:ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಕೋಚಿಂಗ್‌ ಸೆಂಟರ್‌ಗಳ ಕಾರಣದಿಂದಲೇ ಕೋಟಾದಲ್ಲಿ ಪ್ರಸ್ತುತ ಸುಮಾರು 10000 ಕೋಟಿಯಷ್ಟು ವ್ಯವಹಾರ ವಾರ್ಷಿಕವಾಗಿ ನಡೆಯುತ್ತದೆ ಎಂದು ಅಲ್ಲಿನ ಜಿಡಳಿತ ಅಂದಾಜು ಮಾಡಿದೆ. ಕೋಟಾದ ಹಾಸ್ಟಲ್‌ ಅಸೋಸಿಯೇಷನ್‌ ಅಧ್ಯಕ್ಷ ನವೀನ್‌ ಮಿತ್ತಲ್‌ ಅವರ ಪ್ರಕಾರ, ಪ್ರತಿ ವರ್ಷ ಇಲ್ಲಿಗೆ ಬರುವ ಸುಮಾರು 3 ಲಕ್ಷ ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕಾಗಿ 3500 ಹಾಸ್ಟೆಲ್‌ ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಹಾಸ್ಟಲ್‌ ಅಥವಾ ಪಿ. ಜಿ. ಗಳಲ್ಲಿ ಇರಲು ಪ್ರತಿ ತಿಂಗಳಿಗೆ ಸುಮಾರು ಐದು ಸಾವಿರದಿಂದ ಇಪ್ಪತ್ತು ಸಾವಿರದವರೆಗೆ ವೆಚ್ಚವಾಗುತ್ತದೆ.

ಪ್ರಪಂಚ ವಿಶಾಲವಾಗಿದೆ:

 ಪ್ರಪಂಚ ವಿಶಾಲವಾಗಿದೆ ಹಾಗೂ ಉದ್ಯೋಗ ಅವ­ಕಾಶಗಳು ಬಹಳಷ್ಟು ಇವೆ ಎಂದು ಮಕ್ಕಳಿಗೆ ಅರಿವು ಮೂಡಿಸುವುದು.

 ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಪರ್ಯಾಯ ಪ್ಲಾನ್‌ ಬಿ ಯನ್ನು ಇಟ್ಟುಕೊಳ್ಳಲು ಸೂಚಿಸುವುದು.

 ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಬಿಡುವುದು.

ಕಡಿಮೆ ಭಾರಕ್ಕೇ  ಕುಸಿಯುವ ಫ್ಯಾನ್‌! :

ಹೆಚ್ಚಿನವರು ಹಾಸ್ಟೆಲ್/ ಪಿ.ಜಿ ಯಲ್ಲಿದ್ದ ಫ್ಯಾನ್‌ಗಳಿಗೆ ಕುಣಿಕೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸೂಕ್ಷ್ಮ ಸಂಗತಿಯನ್ನು ಗಮನಿಸಿರುವ ಕೋಟಾದ ಜಿಲ್ಲಾಡಳಿತ, ರೂಮ್‌ಗಳಿಗೆ ಕಡಿಮೆ ಭಾರವನ್ನು ಮಾತ್ರ ತಡೆಯುವ ಸಾಮರ್ಥ್ಯದ ಫ್ಯಾನ್‌ಗಳನ್ನು, ಸಿಸಿ ಟಿವಿಗಳನ್ನು ಅಳವಡಿಸಲು ಮುಂದಾಗಿದೆ. ಇಷ್ಟಾದರೂ ನಾಳೆ ಏನಾಗಿಬಿಡುತ್ತದೋ ಎಂಬ ಭಯ ಕೋಟಾದಲ್ಲಿರುವ ಜನರನ್ನು, ದೇಶದ ಹಲವು ಭಾಗದಲ್ಲಿರುವ ಮಕ್ಕಳ ಪೋಷಕರನ್ನು ಕಾಡುತ್ತಿರುವುದು ಸತ್ಯ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳು:

          ಪೋಷಕರು ಹಾಗೂ ಶಿಕ್ಷಕರ ಅತಿಯಾದ ನಿರೀಕ್ಷೆ.

          ಯಶಸ್ಸು ಸಿಗದಿದ್ದರೆ ಗತಿಯೇನು ಎಂಬ ಆತಂಕ, ವೈಫ‌ಲ್ಯದ ಭಯ

          ಕುಟುಂಬ ಹಾಗೂ ಸ್ನೇಹಿತರಿಂದ ದೂರವಿರುವ ಕಾರಣಕ್ಕೆ ಜೊತೆಯಾಗುವ ಒಂಟಿತನ

          ತಮ್ಮ ಓದಿನ ಖರ್ಚಿಗಾಗಿ ಮನೆಯವರು ಅನುಭವಿಸು­ತ್ತಿರುವ ಆರ್ಥಿಕ ಸಮಸ್ಯೆಗಳು

          ಇತರರೊಂದಿಗೆ ಹೋಲಿಕೆ ಹಾಗೂ ತಾವು ಸೋತರೆ ಆಗುವ ಅವಮಾನ

          ಪರೀಕ್ಷೆಯಲ್ಲಿ ಉತ್ತೀರ್ಣನಾಗದೆ ಮಧ್ಯದಲ್ಲೇ ವಾಪಸ್ಸು ಬರಬಾರದು ಎಂಬ ಪೋಷಕರ ನಿರ್ದಾಕ್ಷಿಣ್ಯ ಮಾತು.

60 ಸಾವಿರದಿಂದ 4 ಲಕ್ಷದವರೆಗೆ..! :

ಕೋಟಾದಲ್ಲಿರುವ ಕೋಚಿಂಗ್‌ ಸೆಂಟರ್‌ಗಳಲ್ಲಿ NEET/IIT&JEE ಮುಂತಾದ ಪ್ರವೇಶ ಪರೀಕ್ಷೆಯ ತರಬೇತಿಗಾಗಿ ಸುಮಾರು 60 ಸಾವಿರದಿಂದ 4 ಲಕ್ಷದವರೆಗೂ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಆ ತರಬೇತಿ ಕಾರ್ಯಕ್ರಮದ ಅವಧಿ, ಕೋಚಿಂಗ್‌ ಸೆಂಟರ್‌ನ ಬ್ರ್ಯಾಂಡ್ ಹಾಗೂ ಹಿಂದಿನ ವರ್ಷಗಳ ಫ‌ಲಿತಾಂಶದ ಆಧಾರದ ಮೇಲೆ ನಿರ್ಧಾರವಾಗುತ್ತೆ.

-ಪ್ರೊ. ಶಂಕರ್‌ ಬೆಳ್ಳೂರ್‌ ,ಸಂಸ್ಥಾಪಕರು, ಮೈ ಕರಿಯರ್‌ ಲ್ಯಾಬ್‌, ಮೈಸೂರು,

 

Advertisement

Udayavani is now on Telegram. Click here to join our channel and stay updated with the latest news.

Next