Advertisement

ವಿರೋಧಿಗಳಿಗೆ ರಾಜ್‌ ಠಾಕ್ರೆಯ ವ್ಯಂಗ್ಯ ರೇಖೆಗಳ ಚುರುಕು!

11:55 AM Oct 31, 2017 | |

ಹೊಸದಲ್ಲಿ/ಮುಂಬಯಿ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಈಗ ರಾಜಕೀಯ ಹೋರಾಟಕ್ಕೆ  ಹಳೇ ಶಸ್ತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದು ವ್ಯಂಗ್ಯಚಿತ್ರಗಳು. ಬಾಳಾ ಠಾಕ್ರೆಯಂತೆಯೇ ರಾಜ್‌ ಠಾಕ್ರೆ ಕೂಡ ಪ್ರತಿಭಾವಂತ ವ್ಯಂಗ್ಯಚಿತ್ರಕಾರ. ಅದರಲ್ಲೂ ರಾಜಕೀಯವನ್ನು ವ್ಯಂಗ್ಯ ರೇಖೆಗಳ ಮೂಲಕ ವಿಡಂಬಿಸುವುದರಲ್ಲಿ ಅವರದ್ದು ಎತ್ತಿದ ಕೈ. ಆದರೆ ಸ್ವಂತ ಪಕ್ಷ ಸ್ಥಾಪನೆಯಾದ ಬಳಿಕ ಅವರಿಗೆ ವ್ಯಂಗ್ಯಚಿತ್ರ ರಚಿಸಲು ಹೆಚ್ಚು ಬಿಡುವು ಸಿಗುತ್ತಿರಲಿಲ್ಲ. ಆದರೆ ಇದೀಗ ಅವರು ದಿಢೀರ್‌ ಎಂದು ಮರಳಿ ವ್ಯಂಗ್ಯ ರೇಖೆಗಳ ಮೊರೆ ಹೋಗಿರುವುದು ವಿರೋಧಿಗಳನ್ನು ಮಾತ್ರವಲ್ಲದೆ ಅವರ ಪಕ್ಷದವರನ್ನು ಕೂಡ ಅಚ್ಚರಿಗೀಡು ಮಾಡಿದೆ. 

Advertisement

ಇತ್ತೀಚೆಗೆ ಎಂಎನ್‌ಎಸ್‌ ಪಕ್ಷದ ಆರು ನಗರಸೇವಕರನ್ನು ಶಿವಸೇನೆ ಸೆಳೆದು ಕೊಂಡಾಗ ಹೆಚ್ಚಿನವರು ರಾಜ್‌ ಠಾಕ್ರೆಯ ರಾಜಕೀಯ ಭವಿಷ್ಯ ಮುಗಿಯಿತು ಎಂದು ಭಾವಿಸಿದ್ದರು. ಆದರೆ ಸತತ ಸೋಲುಗಳಿಂದ ಕಂಗಡದೆ ಅವರು ಮತ್ತೆ ಹೊಸ ಹೊಸ ಹೋರಾಟಗಳನ್ನು ಮಾಡುತ್ತಾ ರಾಜಕೀಯವಾಗಿ ಪ್ರಸ್ತುತರಾಗಿರಲು ಪ್ರಯತ್ನಿಸುತ್ತಿದ್ದಾರೆ. ವ್ಯಂಗ್ಯಚಿತ್ರ ರಚನೆ ಈ ಪ್ರಯತ್ನಗಳಲ್ಲಿ ಒಂದು ಎಂದು ಭಾವಿಸಲಾಗಿದೆ. ಈಗ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಲು ಪತ್ರಿಕೆಗಳ ಮರ್ಜಿ ಕಾಯುವ ಅಗತ್ಯವಿಲ್ಲ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳು ಪತ್ರಿಕೆಗಳಿಗಿಂತಲೂ ಹೆಚ್ಚಿನ ಪರಿಣಾಮ ಬೀರುತ್ತಿವೆ.

ಕಳೆದ ಕೆಲವು ವಾರಗಳಿಂದ ರಾಜ್‌ ಠಾಕ್ರೆಯ ವ್ಯಂಗ್ಯಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಫೇಸ್‌ಬುಕ್‌ ಪೇಜ್‌ನ್ನು ಮರಳಿ ಸಕ್ರಿಯಗೊಳಿಸಿರುವ ರಾಜ್‌ ಠಾಕ್ರೆ ಅದರಲ್ಲಿ ಆಗಾಗ ವ್ಯಂಗ್ಯಚಿತ್ರಗಳನ್ನು ಹಾಕುತ್ತಿರುತ್ತಾರೆ. ಬಹುತೇಕ ವ್ಯಂಗ್ಯಚಿತ್ರಗಳು ಬಿಜೆಪಿ ಮತ್ತು ನಿರ್ದಿಷ್ಟವಾಗಿ ಪ್ರಧಾನಿ ನರೇಂದ್ರ ಮೋದಿಯ ಟೀಕೆಗೆ ಮೀಸಲಾಗಿರುತ್ತವೆ. ದೀಪಾವಳಿ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್‌ ಶಾ ಲಕ್ಷ್ಮೀದೇವಿಯಲ್ಲಿ ದೇಶವನ್ನು ಮುನ್ನಡೆಸಲು ಹಣ ಕೊಡು ಎಂದು ಪ್ರಾರ್ಥಿಸುವ ವ್ಯಂಗ್ಯಚಿತ್ರ ಸಖತ್‌ ವೈರಲ್‌ ಆಗಿತ್ತು.  ಗಾಂಧಿ ಜಯಂತಿ ದಿನವಾದ ಅ. 2ರಂದು ರಚಿಸಿದ ಒಂದೇ ಮಣ್ಣಿನಿಂದ ಬಂದವರು ಎಂಬ ವ್ಯಂಗ್ಯಚಿತ್ರ ರಾಜ್‌ ಠಾಕ್ರೆಯ ವ್ಯಂಗ್ಯ ನೋಟಕ್ಕೊಂದು ಉತ್ತಮ ಉದಾಹರಣೆ. ಮಹಾತ್ಮಾ ಗಾಂಧಿ ತನ್ನ ಸತ್ಯಶೋಧ (ಮೈ ಎಕ್ಸಪರಿಮೆಂಟ್ಸ್‌ ವಿದ್‌ ಟ್ರಾತ್‌) ಕೃತಿಯನ್ನು ಹಿಡಿದುಕೊಂಡಿದ್ದರೆ ಮೋದಿ ಕೈಯಲ್ಲಿ ನನ್ನ ಸುಳ್ಳು ಶೋಧ (ಮೈ ಎಕ್ಸಪರಿಮೆಂಟ್ಸ್‌ ವಿದ್‌ ಲೈಸ್‌) ಎಂಬ ಪುಸ್ತಕವಿತ್ತು. 

ರಾಜ್‌ ಠಾಕ್ರೆ ಮರಳಿ ವ್ಯಂಗ್ಯಚಿತ್ರ ರಚನೆಗೆ ತೊಡಗಿರುವುದು ಅವರ ಬೆಂಬಲಿಗರನ್ನು ಖುಷಿಪಡಿಸಿದೆ. ಬಾಳಾ ಠಾಕ್ರೆ ಕೂಡ ಶಿವಸೇನೆ ಸ್ಥಾಪಿಸುವ ಮೊದಲು ವ್ಯಂಗ್ಯಚಿತ್ರಕಾರರಾಗಿದ್ದರು ಹಾಗೂ ಈ ವ್ಯಂಗ್ಯಚಿತ್ರಗಳೇ ಅವರ ರಾಜಕೀಯ ಬದುಕಿನ ಆರಂಭದ ಮೆಟ್ಟಿಲುಗಳಾಗಿದ್ದವು. ರಾಜ್‌ ಠಾಕ್ರೆಯೂ ಈ ಹಾದಿಯಲ್ಲಿದ್ದಾರೆ ಎನ್ನುವುದು ಅವರ ಬೆಂಬಲಿಗರ ಅಭಿಪ್ರಾಯ. ಬಾಳಾ ಠಾಕ್ರೆ ಮತ್ತು ರಾಜ್‌ ಠಾಕ್ರೆಯ ವ್ಯಂಗ್ಯಚಿತ್ರಗಳಲ್ಲಿ ಬಹಳ ಸಾಮ್ಯತೆಯಿದೆ. ಇಬ್ಬರು ಸಮಕಾಲೀನ ರಾಜಕೀಯವನ್ನು ಪರಿಣಾಮಕಾರಿಯಾಗಿ ವಿಡಂಬಿಸುವುದರಲ್ಲಿ ಪಳಗಿದ್ದಾರೆ ಎಂದು ಬೆಂಬಲಿಗರು ತಾರೀಫ‌ು ಮಾಡುತ್ತಿದ್ದಾರೆ. 

ಶಿವಸೇನೆಯಲ್ಲಿರುವಾಗ ಪಕ್ಷದ ಮುಖವಾಣಿಯಾದ ಸಾಮ್ನಾ ಪತ್ರಿಕೆ ಮತ್ತು ಬಾಳಾ ಠಾಕ್ರೆಯ ಮಾರ್ಮಿಕ್‌ ಪತ್ರಿಕೆಯಲ್ಲಿ ರಾಜ್‌ ಠಾಕ್ರೆಯ ವ್ಯಂಗ್ಯಚಿತ್ರಗಳು ಪದೇ ಪದೇ ಪ್ರಕಟವಾಗುತ್ತಿದ್ದವು. ರಾಜ್‌ ಠಾಕ್ರೆ ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಎನ್ನುವುದನ್ನು ಅವರ ವಿರೋಧಿಗಳು ಒಪ್ಪಿಕೊಳ್ಳುತ್ತಾರೆ. ಬಾಳಾ ಠಾಕ್ರೆ ರಾಜಕೀಯದಲ್ಲಿ ವ್ಯಸ್ತರಾದ ಬಳಿಕ ವ್ಯಂಗ್ಯಚಿತ್ರ ರಚನೆಯನ್ನು ಕಡಿಮೆಗೊಳಿಸಿದ್ದರು. ಆದರೆ ರಾಜ್‌ ಠಾಕ್ರೆ ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ರಾಜಕೀಯದಲ್ಲಿ ವ್ಯಸ್ತರಾಗಿರುವಾಗಲೇ ವ್ಯಂಗ್ಯಚಿತ್ರ ರಚನೆಯನ್ನು ಹೆಚ್ಚಿಸಿದ್ದಾರೆ. ಬಹುಶಃ ಇತ್ತೀಚೆಗಿನ ಚುನಾವಣೆಗಳು ನೀಡಿರುವ ಆಗಾತಗಳು ರಾಜ್‌ ಠಾಕ್ರೆಯ ಕಾರ್ಯಶೈಲಿಯನ್ನು ಬದಲಾಯಿಸಿರುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next