Advertisement

ಈ ಬಾರಿ ವಾಡಿಕೆ ಮಳೆ

12:25 AM Apr 16, 2019 | Team Udayavani |

ಹೊಸದಿಲ್ಲಿ: ಪ್ರತೀ ವರ್ಷವೂ ಉತ್ತಮ ಮುಂಗಾರಿನ ನಿರೀಕ್ಷೆಯನ್ನು ಹೊತ್ತು ಕಾಯುವ ಅನ್ನದಾತರಿಗೆ ಈ ಬಾರಿ ಹವಾಮಾನ ಇಲಾಖೆಯ ವರದಿ “ಖುಷಿಯ ಸಿಂಚನ’ ನೀಡಿದೆ. ಪ್ರಸಕ್ತ ವರ್ಷ ವಾಡಿಕೆಯ ಮಳೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ಸೋಮವಾರ ಇಲಾಖೆ ಕೊಟ್ಟಿದೆ.

Advertisement

ಈ ಬಾರಿಯ ನೈಋತ್ಯ ಮಾನ್ಸೂನ್‌ ಬಹುತೇಕ ಸಾಮಾನ್ಯವಾಗಿರಲಿದ್ದು, ಎಲ್‌ ನಿನೋ ಪ್ರಭಾವ ಕಂಡುಬರುವ ಸಾಧ್ಯತೆ ಕಡಿಮೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ದೇಶದ ಬಹುತೇಕ ಭಾಗದಲ್ಲಿ ನೈಋತ್ಯ ಮಾನ್ಸೂನ್‌ ಆಧರಿಸಿ ಕೃಷಿ ಚಟುವಟಿಕೆ ನಡೆಯಲಿದ್ದು, ಈ ಬಾರಿ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ದೇಶದ ರೈತ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ವಾರವಷ್ಟೇ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಪ್ರಕಟಿಸಿದ ವರದಿಯಲ್ಲಿ ಈ ಬಾರಿ ಎಲ್‌ ನಿನೋ ಪ್ರಭಾವ ಇರಲಿದ್ದು, ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿತ್ತು.

ಈ ವರ್ಷ ಜೂನ್‌ನಿಂದ ಸೆಪ್ಟಂಬರ್‌ವರೆಗೆ ದೇಶದ ಬಹುತೇಕ ಎಲ್ಲ ಭಾಗಗಳಲ್ಲೂ ಸಮ ಪ್ರಮಾಣದ ಮಳೆಯಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್‌ ಮಾಹಿತಿ ನೀಡಿದ್ದಾರೆ.

ಎಲ್‌ನಿನೋ ಎಫೆಕ್ಟ್?
ಜೂನ್‌ ತಿಂಗಳಲ್ಲಿ ಎಲ್‌ ನಿನೋ ಪ್ರಭಾವವು ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಲಿದೆಯಾದರೂ, ಜುಲೈನಿಂದ ಮುಂಗಾರು ಚುರುಕಾಗಲಿದೆ ಎಂದು ರಾಜೀವ್‌ ಮಾಹಿತಿ ನೀಡಿದ್ದಾರೆ. ದೇಶದ ಹಲವು ಭಾಗಗಳು ಕೃಷಿ ಸಂಬಂಧಿ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬಾರಿ ಉತ್ತಮ ಮಳೆಯಾಗುವ ಕಾರಣ ರೈತ ಸಮುದಾಯದ ಸಮಾಧಾನ ಪಡಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next