Advertisement

ಫ್ರಾಂಕ್‌ಫ‌ರ್ಟ್ : ಓದು ಜ್ಞಾನ ವಿಸ್ತಾರದ ಮಾರ್ಗ. ಹೆಚ್ಚು ಪ್ರಕಾರದ ಪುಸ್ತಕಗಳನ್ನು ಓದುವುದರಿಂದ ಹೊಸ ವಿಚಾರಧಾರೆಗಳು ಮೂಡುತ್ತವೆ ಎಂದು ಕವಿರತ್ನ ಡಾ| ವಿ. ನಾಗೇಂದ್ರ ಪ್ರಸಾದ್‌ ಹೇಳಿದರು.

Advertisement

ಇ.ವಿ. ಫ್ರಾಂಕ್‌ಫ‌ರ್ಟ್‌ ರೈನ್‌ಮೈನ್‌ ಕನ್ನಡ ಸಂಘದ ವತಿಯಿಂದ ಫೆ. 21ರಂದು ವಿಶ್ವ ಮಾತೃಭಾಷಾ ದಿನದ ಅಂಗವಾಗಿ ನಡೆದ ಆನ್‌ಲೈನ್‌ ಕನ್ನಡ ಕಾವ್ಯ ಕನ್ನಡಿ ಕಾವ್ಯ ವಾಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅಪ್ಪ ನನ್ನೊಳಗಿನ ಅಲೆಮಾರಿ…… ಅಪ್ಪನೆಂದರೆ ನಾನು ಮತ್ತು ನನ್ನ  ನಾಳೆ ಎಂದು ತಮ್ಮದೇ ಕವನವೊಂದನ್ನು ವಾಚಿಸುತ್ತ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರು, ಅನುಭವ, ಊಹೆ, ವಾಸ್ತವ ಹೀಗೆ ಎಲ್ಲ ಪ್ರಕಾರದ ಬರವಣಿಗೆ ನನಗೆ ಇಷ್ಟ. ಪ್ರತೀ ಹಾಡು ಬರೆಯುವಾಗಲೂ ಇದೇ ನನ್ನ ಮೊದಲ ಹಾಡೆಂದು ಬರೆಯುತ್ತೇನೆ. ಹೀಗಾಗಿ ಎಲ್ಲ ಭಾವಗಳ ಗೀತೆಗಳನ್ನು ರಚಿಸಿದ ಆನಂದವಿದೆ ಎಂದರು.

ರಷ್ಯನ್‌ ಕಥೆಗಾರನ ಕಥೆಯನ್ನು ಆಧರಿಸಿ ಮೂಡಿಬರುತ್ತಿರುವ ಮುಂದಿನ ಹೊಸ ಸಿನೆಮಾ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡ ಅವರು ವಿದೇಶದಲ್ಲಿ ಹಾರುತ್ತಿರುವ ಭಾರತದ ಬಾವುಟ ವಿರಾಜಮಾನವಾಗಿರಲಿ ಎಂದು ಆಶಿಸಿ, ಕವನ ವಾಚಕರನ್ನು ಅಭಿನಂದಿಸಿ ಇದೇ ರೀತಿಯ ಕನ್ನಡ ಕಾರ್ಯಕ್ರಮಗಳು ಸದಾ ನಡೆ ಯುತ್ತಿರಲಿ ಎಂದು ಹಾರೈಸಿದರು.

ಕವಿ, ರಂಗಭೂಮಿ, ಗಮಕ ಕಲಾವಿದ, ರಚನೆಕಾರ ಡಾ| ಬೇಲೂರು ರಘುನಂದನ್‌ ಮಾತನಾಡಿ, ನಿಜವಾದ ಕನ್ನಡ ಸೇವೆಯೆಂದರೆ ಕನ್ನಡವನ್ನು ನಾವಿರುವಲ್ಲಿ ಆವಾಹಿಸಿ ಕೊಳ್ಳುವುದು.  ಪ್ರತಿಯೊಬ್ಬರಲ್ಲಿಯೂ ಒಬ್ಬ ಕವಿ ಇರುತ್ತಾನೆ. ಅದನ್ನು ಅಕ್ಷರ ರೂಪದಲ್ಲಿ ಹೊರತರುವ ಎಲ್ಲ ಹೊಸ ಕವಿಗಳನ್ನು ಒಟ್ಟಾಗಿ ಸೇರಿಸಿ, ಕನ್ನಡ ಸಾಹಿತಿಗಳ ಜತೆ ಕನ್ನಡಪರ ಕಾರ್ಯಕ್ರಮ ಆಯೋಜಸಿದ ಎಲ್ಲ ಕಾರ್ಯತತ್ಪರರಿಗೆ ಅಭಿನಂದಿಸಿ, ಕಾವ್ಯ ವಾಚನಕ್ಕೆ ಶುಭ ಹಾರೈಸಿದರು.

Advertisement

ಕಾವ್ಯ ವಾಚನದ ಸಾರಥ್ಯವನ್ನು ವಹಿಸಿಕೊಂಡ ಕನ್ನಡತಿ, ಜರ್ಮನಿಯ ನಿವಾಸಿ, ಭರತನಾಟ್ಯ ಮತ್ತು ಮಣಿಪುರಿ ನೃತ್ಯ ಕಲಾವಿದೆ ವಿದೂಷಿ ನಂದಿನಿ ನಾರಾಯಣ್‌ ಅವರು ತಾವು ರಚಿಸಿದ ಕವನವನ್ನು ವಾಚಿಸಿ ಕಾವ್ಯ ವಾಚಕರಲ್ಲಿ ಸ್ಫೂರ್ತಿ ತುಂಬಿದರು.

ಹಿಂದೂಸ್ತಾನಿ ಗಾಯಕ ಸದಾಶಿವ ಭಟ್‌ ಅವರ ಕಂಠಸಿರಿಯಲ್ಲಿ  ರಾಷ್ಟ್ರಕವಿಗಳ ಕವನ ಗಾಯನದ ಮೂಲಕ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಸಾಹಿತಿ, ಪ್ರಾಧ್ಯಾಪಕ, ಚಲನಚಿತ್ರ ಗೀತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇಗೌಡರು ತುಂಬು ಮನದಿ ಕವನಗಳನ್ನು ಆಲಿಸಿದರು.

ಸವಿನೆನಪು ಸದಾ ಉಳಿಯಲಿದೆ: ಡಾ| ದೊಡ್ಡರಂಗೇಗೌಡ ಬಳಿಕ ಮಾತನಾಡಿದ ಡಾ| ದೊಡ್ಡರಂಗೇಗೌಡ ಅವರು 1992ರ ಜರ್ಮನಿ ಪ್ರವಾಸದ ಕ್ಷಣಗಳನ್ನು ನೆನಪಿಸಿಕೊಂಡು, ಇಂದು ನಡೆದ ಕಾವ್ಯ ವಾಚನ ಯಾವುದೇ ರಾಜ್ಯ- ಅಂತಾರಾಜ್ಯ ಕವಿಗೋಷ್ಠಿಗೆ ಕಡಿಮೆ ಯೇನಿಲ್ಲ . ಇದರ ಸವಿನೆನಪು ಸದಾ ನನ್ನಲ್ಲಿ ಉಳಿಯಲಿದೆ ಎಂದರು.

ಜಗವೆಂಬ ವಿಸ್ಮಯದಿ ಕವಿತೆಗಳ ಸೋಜಿಗ, ಕವಿಗೆ ಕಾಣುವ ಪ್ರತೀ  ವಿಷಯದಿ ಕವಿತೆಯಡಗಿದೆ. ಅವರ ವರ ಭಾವಕ್ಕೆ ಅನುಗುಣವಾಗಿ ಎಲ್ಲವನ್ನು ಅಕ್ಷರರೂಪದಲ್ಲಿ ಹಿಡಿದಿಡುವ ಶಕ್ತಿ ಕವಿಯಲ್ಲಿ ಮಾತ್ರ ಇರಲು ಸಾಧ್ಯ. ಕವಿಯ ಮನದ ಗೂಡಾರ್ಥವನ್ನು ಅರಿಯುವ ಶಕ್ತಿ ಸಾಮಾನ್ಯರಲ್ಲಿ ಇರಲು ಸಾಧ್ಯವೇ? ಹೀಗಾಗಿ ಯಾವುದೇ ಸಾಹಿತಿಗೆ ಅವರ  ರಚನೆಗಳ ಪರಾಮರ್ಶೆ ಪ್ರಮುಖವಾಗುವುದು. ಆಲಿಸಿದ ಕವಿತೆಗಳ ಅಂತರಾಳಕ್ಕೆ ಹೊಕ್ಕು ಅದರ ಒಳಾರ್ಥವನ್ನು ಸರಳವಾಗಿ ವಿವರಿಸುತ್ತಾ ಕವಿತೆಗಳನ್ನು ರಚಿಸಿದ ಕವಿಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೆಲ್ಲ  ಒಟ್ಟಾಗಿ ಸಂಗ್ರಹಿಸಿ ಪುಸ್ತಕರೂಪದಲ್ಲಿ ತರಲು ಸಲಹೆ ನೀಡಿದರು. ಅವರ ಕವಿತೆ ಯನ್ನು ಅವರೇ ಮಂಡಿಸಿದರು.

ಕಾವ್ಯ ವಾಚನ :

ಇಳಿಸಂಜೆಯ ತಿಳಿ ತಂಪಲ್ಲಿ 14 ವಾಚಕರೊಂದಿಗೆ ನಡೆದ ಕಾವ್ಯವಾಚನ ವಿವಿಧ ಬಗೆಯ ವಿಚಾರಗಳನ್ನು ಪಸರಿಸಿತು.ಭಕ್ತಿರಸ ಭರಿತ ಕಾಯಕಯೋಗಿ ಬಸವೇಶ್ವರ, ಅಲ್ಲಮಪ್ರಭುಗಳ ವಚನ, ನಿತ್ಯೋತ್ಸವ ಕವಿ ಕೆ.ಎಸ್‌. ನಿಸಾರ್‌ ಅಹ್ಮದ್‌ ಅವರ ಕವನ, ನಡೆದಾಡುವ ದೇವರೆಂದೇ ಕರೆಯುವ ಶಿವಕುಮಾರ ಸ್ವಾಮಿಗಳ ಕುರಿತ ಕವನ, ಅನಿವಾಸಿ ಭಾರತೀಯರು ಸಾಗರದಾಚೆ ಹೊಸ ಜೀವನ ಕಟ್ಟುವ ಅನುಭವದ ಕವನ, ಪತಿಯ ಜೀವನಕ್ಕೆ ಪತ್ನಿಯೇ ಭರವಸೆಯೆಂದು ಮೂಡಿದ ಕವನವೊಂದೆಡೆಯಾದರೆ, ಮಡದಿಯ ಅಗಲಿಕೆಯ ವಿರಹದಲ್ಲಿ  ಮತ್ತೂಂದು ರಚನೆ, ಗಾಯಗೊಂಡ ಹೆಣ್ಣಿನ ಕೊರಳಿಗೆ ಧ್ವನಿಯಾಯಿತು ಮಗದೊಂದು ಕವನ. ನವರಸಭರಿತ ಹನಿಗವನ, ಹುಟ್ಟು- ಸಾವು ನಡುವಿನ ಜೀವನ ನಾಟಕವನ್ನು ಬಿಂಬಿಸುವ ಕವನ ಸಂಕಲನ, ಶಿಕ್ಷಕಿಯ ಶಿಕ್ಷಣ ಪ್ರೀತಿಯ ಪಯಣದ ಕುರಿತಾದ ಕವನ, ಬಾಲ್ಯದ ಕನಸಿನ ಬಯಲಾಟ ವೀಕ್ಷಣೆಯ ಆನಂದದಿ ಮೂಡಿದ ಕವನ, ನವ ದಶಮಾನದ ಬರುವಿಕೆಯ ಹರುಷದಿ ಬರೆದ ಕವನ… ಹೀಗೆ 12ನೇ ಶತಮಾನದ ವಚನಗಳನ್ನು ನೆನಪಿಸುತ್ತಾ, ಪ್ರಸಿದ್ಧ ಕವಿಗಳ ಕವಿತೆಗಳನ್ನು ಹಾಡುತ್ತಾ ಹಾಗೂ ಸ್ವರಚಿತ ಕವನಗಳನ್ನು ವಾಚಿಸಿದ್ದು ಕೇಳುಗರಿಗೆ ಒಂದಕ್ಕಿಂತ ಒಂದು ವಿಶೇಷ, ವಿಭಿನ್ನ ಹಾಗೂ ಅಮೋಘ ಎಂದೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next