Advertisement

ಮಳೆ ನೀರಿಗೆ ಕೊಚ್ಚಿಹೋಯ್ತು ಘನತ್ಯಾಜ್ಯ

02:55 PM May 30, 2018 | Team Udayavani |

ಪುತ್ತೂರು : ಕಳೆದ ಒಂದು ತಿಂಗಳಿಂದ ಜನರ ನೆಮ್ಮದಿ ಕದಡಿದ್ದ ತ್ಯಾಜ್ಯ ರಾಶಿ ಮಳೆ ನೀರಿಗೆ ನಿಧಾನವಾಗಿ ಕರಗತೊಡಗಿದೆ. ತ್ಯಾಜ್ಯ ವಸ್ತುಗಳು ಮಳೆ ನೀರಿನ ಜತೆಗೆ ಎಲ್ಲೆಂದರಲ್ಲಿ ಹರಿದಾಡುತ್ತಿದೆ. ಮಂಗಳವಾರ ಮಧ್ಯಾಹ್ನದಿಂದ ಪುತ್ತೂರಿನಾದ್ಯಂತ ಭಾರೀ ಮಳೆ ಸುರಿಯಿತು. ಎಲ್ಲೆಂದರಲ್ಲಿ ಹರಿದು ಬಂದ ಮಳೆ ನೀರಿನ ಜತೆಗೆ ಘನತ್ಯಾಜ್ಯವೂ ಒಂದಾಯಿತು. ಘನತ್ಯಾಜ್ಯದ ಈಗಿನ ಪರಿಸ್ಥಿತಿ ಕಂಡು ನೆಮ್ಮದಿಯ ನಿಟ್ಟುಸಿರು ಬಿಡಬೇಕೋ ಅಥವಾ ಮುಂದಿನ ದಿನಗಳ ಪರಿಸ್ಥಿತಿಯನ್ನು ನೋಡಿ ಆತಂಕ ಪಡಬೇಕೋ ಎಂಬ ಪರಿಸ್ಥಿತಿಯಲ್ಲಿದ್ದಾರೆ ಪುತ್ತೂರಿನ ನಾಗರಿಕರು.

Advertisement

ಘನತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ನಡೆಯದ ಕಾರಣ, ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಪುತ್ತೂರಿನಾದ್ಯಂತ ಕಸ ಸಂಗ್ರಹ ಸರಿಯಾಗಿ ಆಗದೇ ಇರುವುದರಿಂದ ಕೆಲ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬೀಳುತ್ತಿತ್ತು. ಮನೆ, ಅಂಗಡಿಗಳ ತ್ಯಾಜ್ಯವನ್ನು ತುಂಬಾ ದಿನ ತೆಗೆದಿಡುವಂತೆ ಇಲ್ಲ. ಇದರ ಸಂಗ್ರಹಕ್ಕೆ ನಗರಸಭೆ ನಿಯೋಜಿಸಿದ ಗುಂಪು ಬಾರದೇ ಸಮಸ್ಯೆ ಸೃಷ್ಟಿಯಾಗಿತ್ತು. ಆದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಂತಹ ಆಯಕಟ್ಟಿನ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿತ್ತು. ಇದೆಲ್ಲ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ.

ವಿಲೇವಾರಿಯಾಗದೇ ಉಳಿದ ಘನತ್ಯಾಜ್ಯ ಮಳೆನೀರಿನ ಜತೆಗೆ ಸೇರಿಕೊಂಡರೆ ಅನಾರೋಗ್ಯ ಹರಡುವ ಸಂಭವ ಹೆಚ್ಚು. ಈಗಾಗಲೇ ಸಾಂಕ್ರಾಮಿಕ ರೋಗ ಬೀಡುಬಿಟ್ಟಿದ್ದು, ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next