Advertisement

ಮುಂಗಾರು ಆರ್ಭಟ; ಮತ್ತೆ ನೆರೆ ಕಾಟ

03:34 PM Jun 16, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಸತತ ಎರಡು ವರ್ಷ ಬಿದ್ದ ಮಳೆ, ನಂತರ ಬಂದ ಪ್ರವಾಹ ಕೃಷ್ಣಾ ಕೊಳ್ಳದಲ್ಲಿ ಬರುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಜಲಾಶಯಗಳ ನೀರಿನ ದಾಹ ದೂರ ಮಾಡಿದೆ. ಈ ಎರಡೂ ರಾಜ್ಯಗಳ ಜಲಾಶಯ ವ್ಯಾಪ್ತಿಯಲ್ಲಿ ಈ ವರ್ಷ ನೀರಿನ ಸಮಸ್ಯೆ ಕಾಣಲಿಲ್ಲ. ಆದರೆ ಜಲಾಶಯಗಳಿಗೆ ಬರುವ ಹೆಚ್ಚಿನ ಪ್ರಮಾಣದ ನೀರು ಸಹಜವಾಗಿಯೇ ಆತಂಕ ಉಂಟು ಮಾಡುತ್ತಲೇ ಇದೆ.

ಮೇಲಿಂದ ಮೇಲೆ ಪ್ರವಾಹದಿಂದ ಆಗುತ್ತಿರುವ ಅಪಾರ ಪ್ರಮಾಣದ ಹಾನಿಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೀರಿನ ಪ್ರಮಾಣ ಏರಿಕೆಯಾಗುವ ಮೊದಲೇ ಜಲಾಶಯದ ಸಾಮರ್ಥ್ಯದ ಮೇಲೆ ನಿಗಾ ವಹಿಸಿವೆ. ಹೆಚ್ಚಿನ ಅನಾಹುತ ತಡೆಯಲು ನಿರಂತರ ಸಂಪರ್ಕ ಹಾಗೂ ಸಮಾಲೋಚನಾ ಕ್ರಮಕ್ಕೆ ಮುಂದಾಗಿವೆ.

ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರಿಂದ ಈ ವರ್ಷ ಎಲ್ಲಿಯೂ ನೀರಿನ ಹಾಹಾಕಾರ ಕೇಳಿಬರಲಿಲ್ಲ. ಮುಖ್ಯವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಮತ್ತೆ ಗೋಗರೆಯುವ ಪರಿಸ್ಥಿತಿ ಬರಲಿಲ್ಲ. ಕೃಷ್ಣಾ ನದಿಯಲ್ಲಿ ಸಹ ನಿರೀಕ್ಷೆಗಿಂತ ಹೆಚ್ಚು ನೀರು ಇದ್ದಿದ್ದರಿಂದ ನದಿ ತೀರದ ಜನರು ಸಹ ನೀರು ಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕುವ ಗೋಜಿಗೆ ಹೋಗಲಿಲ್ಲ. ಈಗ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ಮಹಾರಾಷ್ಟ್ರದ ಕೊಯ್ನಾ, ವಾರಣಾ ಸೇರಿದಂತೆ ಅಲ್ಲಿನ 12ಕ್ಕೂ ಹೆಚ್ಚು ಜಲಾಶಯಗಳಲ್ಲಿ ಆತಂಕ ಪಡುವಷ್ಟು ನೀರಿನ ಸಂಗ್ರಹವಿಲ್ಲ. 20 ಜಲಾಶಯಗಳ ಒಟ್ಟು 276 ಟಿಎಂಸಿ ಸಾಮರ್ಥ್ಯದಲ್ಲಿ ಈಗ 75 ಟಿಎಂಸಿ ನೀರು ಜಲಾಶಯಗಳಲ್ಲಿ ಸಂಗ್ರಹವಾಗಿದೆ.

ನೀರಿನ ಸಾಮರ್ಥ್ಯ ಎಷ್ಟು?: ಪ್ರತಿವರ್ಷ ಕರ್ನಾಟಕದ ಜಿಲ್ಲೆಗಳಿಗೆ ಆತಂಕ ಉಂಟು ಮಾಡುವ ಕೊಯ್ನಾ ಜಲಾಶಯ ಒಟ್ಟು 105 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗ 28 ಟಿಎಂಸಿ ನೀರಿದೆ. ಒಟ್ಟು 34 ಟಿಎಂಸಿ ಸಾಮರ್ಥ್ಯದ ವಾರಣಾ ಜಲಾಶಯದಲ್ಲಿ 13 ಟಿಎಂಸಿ ನೀರು ಸಂಗ್ರಹವಿದೆ. ಅದೇ ರೀತಿ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಾದ ಅಲಮಟ್ಟಿ, ಹಿಡಕಲ್‌, ಮಲಪ್ರಭಾ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸದ್ಯ ಸುಮಾರು 65 ಟಿಎಂಸಿ ನೀರು ಸಂಗ್ರಹವಿದೆ.

Advertisement

123 ಟಿಎಂಸಿ ಸಾಮರ್ಥ್ಯದ ಆಲಮಟ್ಟಿಯಲ್ಲಿ ಈಗ 23 ಟಿಎಂಸಿ ನೀರಿದ್ದರೆ ಒಟ್ಟು 33.3 ಟಿಎಂಸಿ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 20.82 ಟಿಎಂಸಿ ನೀರು ಸಂಗ್ರಹವಿದೆ. ಇನ್ನೊಂದು ಕಡೆ ಕಳೆದ ಎರಡು ವರ್ಷ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಸಾಕಷ್ಟು ಹಾನಿ ಉಂಟು ಮಾಡಿರುವ ಹಿಡಕಲ್‌ ಜಲಾಶಯದಲ್ಲಿ ಈಗ 4.904 ಟಿಎಂಸಿ (ಒಟ್ಟು ಸಾಮರ್ಥ್ಯ 51 ಟಿಎಂಸಿ) ಹಾಗೂ ಮಲಪ್ರಭಾ ಜಲಾಶಯದಲ್ಲಿ 9.826 ಟಿಎಂಸಿ (ಒಟ್ಟು ಸಾಮರ್ಥ್ಯ 37 ಟಿಎಂಸಿ) ನೀರು ಸಂಗ್ರಹವಿದೆ. ಈಗಿನ ಪರಿಸ್ಥಿತಿಯಲ್ಲಿ ಈ ವರ್ಷ ನೀರಿನ ಕೊರತೆ ಬೀಳುವದಿಲ್ಲ. ಆದರೆ ಜಲಾಶಯಗಳ ನೀರಿನ ಮಟ್ಟ ಏರುತ್ತಿದ್ದಂತೆ ನದಿ ತೀರದ ನೂರಾರು ಗ್ರಾಮಗಳಲ್ಲಿ ಪ್ರವಾಹದ ಭೀತಿ, ಸ್ಥಳಾಂತರದ ಆತಂಕ ಶುರುವಾಗುತ್ತದೆ. ಇದಕ್ಕೆ ಸರ್ಕಾರ ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವದು ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ.

ಪ್ರತಿವರ್ಷ ಕರ್ನಾಟಕಕ್ಕೆ ಹೆಚ್ಚು ಹಾನಿ ಉಂಟುಮಾಡುವ ಮಹಾರಾಷ್ಟ್ರದ ಕೊಯ್ನಾ, ರಾಧಾನಗರಿ, ವಾರಣಾ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ಈಗ ಶೇ.30ರಷ್ಟು ನೀರಿನ ಸಂಗ್ರಹವಿದೆ. ಅಲ್ಲಿನ ಜಲಾಶಯಗಳು ಶೇ.80ರಷ್ಟು ಭರ್ತಿಯಾದ ನಂತರವಷ್ಟೇ ಅಲ್ಲಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಬಗ್ಗೆ ನಾವು ಜಾಗೃತಿ ವಹಿಸಿದ್ದೇವೆ ಎಂಬುದು ನೀರಾವರಿ ನಿಗಮದ ಅಧಿಕಾರಿಗಳ ಹೇಳಿಕೆ.

ಸತತ ಎರಡು ವರ್ಷ ಉಂಟಾದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಂದು ನಮ್ಮಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ನಷ್ಟವಾಗಿತ್ತು. ಆದರೆ ನೀರು ಬಿಡುಗಡೆ ವಿಷಯದಲ್ಲಿ ಮಹಾರಾಷ್ಟ್ರದ ಜತೆ ಮೊದಲೇ ಸಂಪರ್ಕ ಹೊಂದಿದ್ದರಿಂದ ಭಾರೀ ಅನಾಹುತಗಳಾಗುವದನ್ನು ತಪ್ಪಿಸಲಾಗಿತ್ತು ಎನ್ನುತ್ತಾರೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರಿಂಗ್‌ ಅರವಿಂದ ಕಣಗಿಲ್‌.

Advertisement

Udayavani is now on Telegram. Click here to join our channel and stay updated with the latest news.

Next