Advertisement

ಮಳೆ ಪ್ರಮಾಣ ಇಳಿಕೆ: 8 ಮೀನುಗಾರರ ರಕ್ಷಣೆ; ಗುಡ್ಡ ಕುಸಿತ

02:40 AM Aug 16, 2018 | Karthik A |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿದೆ. ಮಂಗಳೂರು ನಗರದಲ್ಲಿ ಸಂಜೆ, ರಾತ್ರಿ ವೇಳೆಗೆ ಉತ್ತಮ ಮಳೆಯಾಗಿತ್ತು. ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ದೋಣಿಯೊಂದು ನಿಯಂತ್ರಣ ತಪ್ಪಿ ತೋಟ ಬೆಂಗ್ರೆ ದಡ ಸೇರಿದ್ದು ಇದರಲ್ಲಿದ್ದ ಎಂಟು ಮೀನುಗಾರರನ್ನು ಕೋಸ್ಟ್‌ ಗಾರ್ಡ್‌ ರಕ್ಷಿಸಿದೆ. ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಸನಿಹದ ಮದೆನಾಡು, ಜೋಡುಪಾಲ ಬಳಿ ರಸ್ತೆಗೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬುಧವಾರವೂ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕುಗೊಂಡಿತ್ತು.

Advertisement

ಕಿನ್ನಿಗೋಳಿ ಕಟೀಲಿನ ತಗ್ಗು ಪ್ರದೇಶ ಜಲಾವೃತವಾಗಿದೆ. ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಚರಿಸುವ ರಸ್ತೆ ಸಂಪರ್ಕ ಕಡಿದಿದೆ. ಎಡಪದವು ಮಯ್ನಾರಬೆಟ್ಟಿನ ಕುಸುಮಾ ಅವರ ಮನೆಯ ಮೇಲೆ ಮಂಗಳವಾರ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ರಸ್ತೆ ಮೇಲೆ ಬಿದ್ದು, ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.

ಫಲ್ಗುಣಿ ನದಿ ಉಕ್ಕಿ ಹರಿದಿದ್ದು, ಗುರುಪುರ ಕೈಕಂಬದ ಕಾಜಿಲ ಸಮೀಪದ ಪಟ್ಲ ಸಾಧೂರು ಎಂಬಲ್ಲಿ ನೆರೆ ಹಾವಳಿ ಉಂಟಾಗಿದೆ. ಮಂಗಳವಾರ ರಾತ್ರಿ ವೇಣೂರಿನ ಫಲ್ಗುಣಿ ನದಿ ಅಪಾಯದ ಮಟ್ಟದಲ್ಲಿ ಹರಿದು ವೇಣೂರು ಚರ್ಚ್‌ ಬಳಿ ರಸ್ತೆ ಮುಳುಗಡೆಗೊಂಡಿತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ, ಕುಮಾರಧಾರಾ ಮೈದುಂಬಿ ಹರಿಯುತ್ತಿದೆ.

ವಳಾಲು: ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತಡೆ
ಉಪ್ಪಿನಂಗಡಿ:
ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ಮೇಲೆ ಬಿದ್ದು ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಗುಡ್ಡ ಕುಸಿದ ಭಾಗದಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಎಲ್‌.ಆ್ಯಂಡ್‌.ಟಿ. ಸಂಸ್ಥೆ ಮಣ್ಣು ತೆರವು ಮಾಡಿತು.

ಮಂಗಳೂರು ಡಿಪೋದಿಂದ 54 ಬಸ್‌ ಸ್ಥಗಿತ
ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಡಿಪೋದಿಂದ ಬೆಂಗಳೂರಿಗೆ ತೆರಳುವ 46 ಬಸ್‌, ಮೈಸೂರಿಗೆ ತೆರಳುವ 7 ಕೆಎಸ್ಸಾರ್ಟಿಸಿ ಬಸ್‌ ಗಳನ್ನು ಬುಧವಾರ ಕೂಡ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ ದೀಪಕ್‌ ಕುಮಾರ್‌ ಅವರು ‘ಉದಯವಾಣಿ’ಗೆ ಪ್ರತಿಕಿಯಿಸಿ ‘ಒಟ್ಟು 54 ಬಸ್‌ ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು, ಮೈಸೂರಿಗೆ ತೆರಳುವಂತಹ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇದೆ. ಈಗಾಗಲೇ ಸ್ಥಗಿತಗೊಂಡ ಬಸ್‌ ಗಳಲ್ಲಿ ಪ್ರಯಾಣಿಕರು ಸೀಟು ಕಾಯ್ದಿರಿಸಿಕೊಂಡಿದ್ದರೆ ಅಂತಹವರಿಗೆ ಶೇ. 100ರಷ್ಟು ಹಣ ಮರುಪಾವತಿ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next