Advertisement

ಜಿಲ್ಲೆಯಲ್ಲಿ ನಾಲ್ಕೇ ಮಾಲಿನ್ಯ ತಪಾಸಣೆ ಕೇಂದ್ರ

12:23 PM Sep 14, 2019 | Naveen |

ರಾಯಚೂರು: ರಾಜ್ಯದಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ಹೊಸ ಸಂಚಾರಿ ಕಾನೂನು ಜಿಲ್ಲೆಯಲ್ಲೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟುತ್ತಿದೆ. ಏಳು ತಾಲೂಕುಗಳಿರುವ ಜಿಲ್ಲೆಯಲ್ಲಿ ನಿತ್ಯ ನೂರಾರು ವಾಹನಗಳ ನೋಂದಣಿಯಾಗುತ್ತಿವೆ. ಆದರೆ, ಇಷ್ಟು ದಿನ ಚಾಲನಾ ಪರವಾನಗಿ, ವಿಮೆ, ಮಾಲಿನ್ಯ ಪ್ರಮಾಣ ಪತ್ರ ಪಡೆಯದೆ ಪೊಲೀಸರ ಕಣ್ತಪ್ಪಿಸಿ ಸವಾರರು ಓಡಾಡುತ್ತಿದ್ದರು. ಈಗ ಭಾರೀ ದಂಡ ಕಟ್ಟುವ ಪ್ರಮೇಯ ಎದುರಾಗಿದ್ದು, ನಾ ಮುಂದು ನೀ ಮುಂದು ಎನ್ನುವಂತೆ ಜನರು ಆರ್‌ಟಿಒ ಕಚೇರಿಗೆ ತೆರಳುತ್ತಿದ್ದು, ಎಲ್ಲ ರೀತಿಯ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

Advertisement

ವಾಹನಗಳ ವಿವರ: ಜಿಲ್ಲೆಯಲ್ಲಿ 3,17,862 ಬೈಕ್‌ಗಳಿವೆ. 22,113 ಹಗುರ ವಾಹನಗಳು, 6861 ಆಟೋಗಳು, 484 ಬಸ್‌ಗಳು, 12182 ಸರಕು ವಾಹನಗಳಿದ್ದು, 3089 ಪ್ರಯಾಣಿಕರನ್ನು ಸಾಗಿಸುವ ವಾಹನಗಳಿವೆ. ಅದರಲ್ಲಿ 60,500ಕ್ಕೂ ಅಧಿಕ ವಾಹನಗಳು 15 ವರ್ಷಕ್ಕೂ ಹಳೆಯದಾಗಿದ್ದು, ಮಾಲಿನ್ಯ ತಪಾಸಣೆಗೆ ಒಳಪಡುತ್ತಿವೆ. ಒಂದು ವೇಳೆ ಪ್ರಮಾಣ ಪತ್ರ ಪಡೆಯದಿದ್ದಲ್ಲಿ ಅಂಥ ವಾಹನಗಳ ಮಾಲೀಕರಿಗೆ ಸೂಕ್ತ ದಂಡ ವಿಧಿಸುತ್ತಿದ್ದು, ಮಾಲಿನ್ಯ ಹೆಚ್ಚಾಗಿದ್ದಲ್ಲಿ ವಾಹನಗಳನ್ನು ಸೀಜ್‌ ಮಾಡುವ ಅಧಿಕಾರವೂ ಇದೆ ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು. ಆದರೆ, ಈವರೆಗೂ ಅಂಥ ಕಠಿಣ ಕ್ರಮ ಕೈಗೊಂಡ ನಿದರ್ಶನಗಳಿಲ್ಲ.

ನಾಲ್ಕೇ ತಪಾಸಣಾ ಕೇಂದ್ರಗಳು: ಇಷ್ಟು ವಾಹನಗಳಿದ್ದರೂ ಜಿಲ್ಲೆಯಲ್ಲಿರುವ ಮಾಲಿನ್ಯ ತಪಾಸಣಾ ಕೇಂದ್ರಗಳ ಸಂಖ್ಯೆ ಮಾತ್ರ ಕೇವಲ ನಾಲ್ಕು. ನಗರದಲ್ಲಿ ಎರಡು ಕೇಂದ್ರಗಳನ್ನು ಖಾಸಗಿಯವರು ನಡೆಸುತ್ತಿದ್ದರೆ, ಈಶಾನ್ಯ ಸಾರಿಗೆ ಘಟಕದಲ್ಲಿ ಒಂದು ಕೇಂದ್ರವಿದೆ. ಇನ್ನೂ ಈಚೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ಆರಂಭಿಸಿದೆ. ಪೊಲೀಸರು ಇಷ್ಟು ದಿನ ಮಾಲಿನ್ಯ ತಪಾಸಣೆ ಪ್ರಮಾಣ ಪತ್ರವನ್ನೇ ಪರಿಶೀಲಿಸುತ್ತಿದ್ದಿಲ್ಲ. ಹೀಗಾಗಿ ವಾಹನಗಳು 15 ವರ್ಷ ಮೇಲ್ಪಟ್ಟರು ಪ್ರಮಾಣ ಪತ್ರ ಪಡೆಯುತ್ತಿರಲಿಲ್ಲ. ಈಗ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಿರುವ ಕಾರಣ ಪ್ರಮಾಣ ಪತ್ರ ಪಡೆಯಲು ಬರುತ್ತಿದ್ದಾರೆ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.

ಅರ್ಜಿ ಸಲ್ಲಿಸಿದರೆ ಪರವಾನಗಿ: ಜಿಲ್ಲೆಯಲ್ಲಿ ಮಾಲಿನ್ಯ ತಪಾಸಣೆ ಕೇಂದ್ರಗಳು ಕಡಿಮೆಯಿದ್ದು, ಅರ್ಹರು ಅರ್ಜಿ ಸಲ್ಲಿಸಿದರೆ ಕೇಂದ್ರ ಆರಂಭಿಸಲು ಪರವಾನಗಿ ನೀಡುವುದಾಗಿ ತಿಳಿಸುತ್ತಾರೆ ಆರ್‌ಟಿಒ. ಅದಕ್ಕೆ ಕೆಲವೊಂದು ಮಾನದಂಡಗಳಿವೆ. ಅದಕ್ಕೆ ಸಂಬಂಧಿಸಿದ ತರಬೇತಿ ಪಡೆಯಬೇಕು. ಅಂಥವರಿಗೆ ಪರವಾನಗಿ ನೀಡಲಾಗುವುದು. ಆ ಕೇಂದ್ರದವ‌ರು ನೀಡುವ ಪ್ರಮಾಣ ಪತ್ರಕ್ಕೆ ಮಾನ್ಯತೆ ಸಿಗಲಿದೆ. ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಬೇಕಿದೆ. ಶೇ.6ಕ್ಕಿಂತ ಅಧಿಕ ಪ್ರಮಾಣ ದಾಖಲಾದರೆ ಅಧಿಕಾರಿಗಳು ದಂಡ ವಿಧಿಸುತ್ತಾರೆ.

ಪರವಾನಗಿ ಪಡೆಯಲು ಸರದಿ: ಇಷ್ಟು ದಿನ ಚಾಲನಾ ಪರವಾನಗಿ ಪಡೆಯಲು ಬೇಜವಾಬ್ದಾರಿ ತೋರುತ್ತಿದ್ದ ಸವಾರರು, ಕಳೆದ ಕೆಲ ದಿನಗಳಿಂದ ಕಚೇರಿಗಳಿಗೆ ನಿತ್ಯ ಅಲೆಯುತ್ತಿದ್ದಾರೆ. ಜುಲೈನಲ್ಲಿ 1801 ಜನರು ಚಾಲನಾ ಪರವಾನಗಿ ಪಡೆದಿದ್ದರೆ, ಆಗಸ್ಟ್‌ನಲ್ಲಿ 3021 ಜನರು ಪಡೆದಿದ್ದಾರೆ. ಟ್ರಾಫಿಕ್‌ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವ ವಿಚಾರ ತಿಳಿಯುತ್ತಿದ್ದಂತೆ ಜನರು ಚಾಲನಾ ಪರವಾನಗಿ(ಡಿಎಲ್) ಪಡೆಯಲು ಮುಂದಾಗುತ್ತಿದ್ದಾರೆ.

Advertisement

ಪರವಾನಗಿಗೆ ಅರ್ಜಿ
ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಬೇಕಾದರೆ ಆರ್‌ಟಿಒ ಪರವಾನಗಿ ಪಡೆಯಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅದು ಸಾರಿಗೆ ಆಯುಕ್ತರಿಗೆ ತೆರಳಲಿದ್ದು, ಅವರಿಂದ ಸಂಬಂಧಪಟ್ಟ ಜಿಲ್ಲೆಯ ಆರ್‌ಟಿಒ ಕಚೇರಿಗೆ ಮಾಹಿತಿ ಬರಲಿದೆ. ಆಗ ಸ್ಥಳೀಯ ಆರ್‌ಟಿಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಲಿನ್ಯ ತಪಾಸಣಾ ಯಂತ್ರ, ಕೇಂದ್ರ ಸ್ಥಾಪಿಸುವ ಸ್ಥಳ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಕೇಂದ್ರ ಕಚೇರಿಗೆ ವರದಿ ನೀಡುತ್ತಾರೆ. ಅದರ ಜತೆಗೆ ಕೇಂದ್ರದ ಮಾಲೀಕರು ನಿರ್ವಹಣೆಗಾಗಿ ಒಂದು ವಾರದ ತರಬೇತಿ ಪಡೆಯಬೇಕಿದೆ. ಒಮ್ಮೆ ಪರವಾನಗಿ ಪಡೆದ ಬಳಿಕ ಪ್ರತಿ ವರ್ಷ ಅದನ್ನು ನವೀಕರಣ ಮಾಡಬೇಕಿದೆ. ಅಲ್ಲದೇ, ಮಾಲಿನ್ಯ ನಿಯಂತ್ರಣ ತಪಾಸಣೆ ಬಳಿಕ ಎಷ್ಟು ಪ್ರಮಾಣದ ಹೊಗೆ ಸೂಸೂತ್ತದೆ ಎಂಬುದನ್ನು ದಾಖಲಿಸಿ ಆರ್‌ಟಿಒಗಳಿಂದ ನೀಡಿದ ಸ್ಟಿಕ್ಕರ್‌ ಲಗತ್ತಿಸಿ ಪ್ರಮಾಣ ಪತ್ರ ನೀಡಬೇಕು.

ಸಾಮಾನ್ಯವಾಗಿ ದೊಡ್ಡ ದೊಡ್ಡ ವಾಹನಗಳನ್ನು ಮಾತ್ರ ಆರ್‌ಟಿಒ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಬೈಕ್‌, ಕಾರು, ಜನರನ್ನು ಸಾಗಿಸುವ ವಾಹನಗಳನ್ನು ಟ್ರಾಫಿಕ್‌ ಪೊಲೀಸರೇ ಪರಿಶೀಲಿಸುತ್ತಾರೆ. ನಿಯಮಾನುಸಾರ ಸವಾರರು ಎಲ್ಲ ದಾಖಲೆ ಹೊಂದಿರಬೇಕು. ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಲು ಪರವಾನಗಿ ಬೇಕಿದ್ದರೆ ನೀಡಲಾಗುವುದು.
ಆನಂದ, ಆರ್‌ಟಿಒ, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next