Advertisement

ಅಂತರ ಕಾಪಾಡದಿದ್ದರೆ ಅವಾಂತರಕ್ಕೆ ದಾರಿ

01:45 PM Apr 17, 2020 | Naveen |

ರಾಯಚೂರು: ಬ್ಯಾಂಕ್‌ಗಳ ಮುಂದೆ ಜನ ಗುಂಪು ಗುಂಪಾಗಿ ನಿಲ್ಲುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರೆ ಇಷ್ಟು ದಿನ ಪಟ್ಟ ಶ್ರಮವೆಲ್ಲ ವ್ಯರ್ಥವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಎಸ್‌. ಪ್ರಸನ್ನಕುಮಾರ್‌ ಎಚ್ಚರಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಕೋವಿಡ್‌-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತ ಅವಲೋಕಿಸಿದ ಅವರು, ಕೋವಿಡ್ ವೈರಸ್‌ ಹರಡದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆದರೆ, ಹಲವು ಬ್ಯಾಂಕ್‌ಗಳ ಮುಂದೆ ಗ್ರಾಹಕರು ಗುಂಪು ಗುಂಪಾಗಿ ನಿಲ್ಲುತ್ತಿದ್ದು, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಅದರಲ್ಲಿ ಒಬ್ಬರಿಗೆ ಸೋಂಕು ಇದ್ದರೂ ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದರು.

ಡಿಸಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಬ್ಯಾಂಕ್‌ಗಳಲ್ಲಿ ಹೆಚ್ಚಿನ ಗ್ರಾಹಕರು ಸೇರುವ ಸಾಧ್ಯತೆ ಇದ್ದಾಗ ಮಾಹಿತಿ ನೀಡಿದರೆ ಪೊಲೀಸರನ್ನು ನಿಯೋಜಿಸಲಾಗುವುದು. ಅದರ ಜತೆಗೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸೋಂಕು ಹೆಚ್ಚಾಗಿದ್ದು, ಅಲ್ಲಿಂದ ಕರ್ತವ್ಯಕ್ಕೆ ಬರುವ ಬ್ಯಾಂಕ್‌ ನೌಕರರಿಗೆ ನಗರದಲ್ಲಿ ಉಳಿಯುವಂತೆ ತಿಳಿಸಲು ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಸ್‌. ಕುಲಕರ್ಣಿ ಅವರಿಗೆ ಸೂಚಿಸಿದರು.

ಕಾರ್ಯದರ್ಶಿ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆಯಡಿ ರೈತರು ಖಾತೆಗಳಿಗೆ ಆಧಾರ್‌ ಕಾರ್ಡ್‌ ಕೂಡಲೇ ಜೋಡಿಸಬೇಕು. ಅಂಥವರ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಕೋವಿಡ್ ಸೋಂಕಿತರ ಮಾದರಿ ಪರೀಕ್ಷೆ ನಡೆಸಿ ಶೀಘ್ರ ವರದಿ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ. ಎಚ್‌ ಅವರಿಗೆ ಸೂಚಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ನೀರಿನ ಟ್ಯಾಂಕ್‌ಗಳ ಸ್ವತ್ಛಗೊಳಿಸುವಂತೆ ತಿಳಿಸಿದರು.

ನಗರಸಭೆ ಅಧಿಕಾರಿ ಶಫಿ ಮಾತನಾಡಿ, ರಾಂಪುರ ಜಲಾಶಯದಿಂದ ನೀರು ಪೂರೈಕೆ ವೇಳೆ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ಹೆಚ್ಚುವರಿಯಾಗಿ ವಿದ್ಯುತ್‌ ಪರಿವರ್ತಕ ಅಳವಡಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ನಗರಕ್ಕೆ ಕುಡಿಯುವ ನೀರು ಪೂರೈಕೆ ಸಂಬಂಧ ಸಾಕಷ್ಟು ಸಭೆ ನಡೆಸಿದಾಗ ನೀವು ಈ ವಿಚಾರಕ್ಕೆ ಗಮನಕ್ಕೆ ತಂದಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯೋಜನಾ ನಿರ್ದೇಶಕರಿಗೆ ಪಾಸ್‌ ವಿತರಣೆ ಹೊಣೆ ನೀಡಿದ್ದು, ಆಹಾರ ಇಲಾಖೆಯಿಂದ ಹೆಚ್ಚು ಪಾಸ್‌ ವಿತರಿಸಲಾಗಿದೆ. ಅನಗತ್ಯ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಹೆಚ್ಚುವರಿ ಪಾಸ್‌ ಪತ್ತೆ ಹಚ್ಚಿ ರದ್ದುಪಡಿಸುವಂತೆ ಡಿಸಿ ಸೂಚಿಸಿದರು. ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ, ಎಡಿಸಿ ದುರುಗೇಶ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಸಿ ಸಂತೋಷ ಕಾಮಗೌಡ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next