Advertisement

ಮೊದಲ ಸುತ್ತಲ್ಲಿ ರಾಯಚೂರಿಗಿಲ್ಲ ಪ್ರಾತಿನಿಧ್ಯ

05:15 PM Aug 21, 2019 | Naveen |

ರಾಯಚೂರು: ಹಿಂದುಳಿದ ಜಿಲ್ಲೆಗೆ ಪ್ರಾತಿನಿಧ್ಯ, ಪರಿಶಿಷ್ಟ ಪಂಗಡದ ಕೋಟಾದಡಿ ಜಿಲ್ಲೆಗೆ ಸಿಗಬಹುದು ಎಂಬ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಈಗ 17 ಶಾಸಕರು ಮಾತ್ರ ಸಂಪುಟ ಸೇರಿದ್ದು, ಎರಡನೇ ಹಂತದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಒಲಿಯಬಹುದು ಎಂಬ ಆಶಾಭಾವ ಮಾತ್ರ ಉಳಿದಿದೆ.

Advertisement

ಹಿಂದುಳಿದ ಎಂಬ ಕಾರಣಕ್ಕೆ ಹೈ-ಕ ಭಾಗಕ್ಕೆ ನಂಜುಂಡಪ್ಪ ವರದಿ ಅನ್ವಯ ಸಿಗಬೇಕಿದ್ದ ಸಚಿವ ಸ್ಥಾನಗಳಲ್ಲಿ ಅರ್ಧದಷ್ಟು ಕೂಡ ಸಿಗದಿರುವುದು ವಿಪರ್ಯಾಸ. ಹೈ-ಕ ಭಾಗದ ಆರು ಜಿಲ್ಲೆಗಳಿಗೆ ಒಂದು ಮಾತ್ರ ಸಚಿವ ಸ್ಥಾನ ಲಭಿಸಿದೆ.

ಬಿ.ಶ್ರೀರಾಮುಲು ಬಳ್ಳಾರಿಯವರಾದರೂ ಗೆದ್ದಿದ್ದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಿಂದ. ಹೀಗಾಗಿ ಅವರಿಗೆ ಸಿಕ್ಕ ಸಚಿವ ಸ್ಥಾನ ಹೈ-ಕಕ್ಕೆ ಸಿಕ್ಕಿದ್ದು ಎನ್ನಲಾಗದು. ಆದರೆ, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನದ ಜತೆಗೆ ಮೂರು ನಿಗಮ ಮಂಡಳಿ ಸ್ಥಾನಗಳು ಲಭಿಸಿದ್ದವು. ಅದಕ್ಕೆ ಹೋಲಿಸಿದರೆ ಹೊಸ ಸರ್ಕಾರದಿಂದ ಜಿಲ್ಲೆಗೆ ಭಾರೀ ಅನ್ಯಾಯವಾಗಿರುವುದು ಖಚಿತ. ಹಿಂದಿನ ಸರ್ಕಾರ ಬೀಳಲು ಕಾರಣರಾದ ಶಾಸಕರಲ್ಲಿ ಜಿಲ್ಲೆಯ ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲ ಕೂಡ ಒಬ್ಬರು. ಒಂದು ವೇಳೆ ಅವರ ರಾಜೀನಾಮೆ ಅಂಗೀಕಾರವಾಗಿದ್ದೇ ಆದಲ್ಲಿ ಅವರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೋ ಏನೋ? ಆದರೆ, ಈಗ ಅವರು ಅಡಕತ್ತರಿಯಲ್ಲಿ ಸಿಲುಕಿದ್ದು, ಅವರ ಶಾಸಕತ್ವ ಅನರ್ಹ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಮುಂದೆ ಅವರ ರಾಜೀನಾಮೆ ಅಂಗೀಕಾರವಾಗಿ ಉಪಚುನಾವಣೆ ನಡೆದು ಅವರೇ ಗೆಲುವು ಸಾಧಿಸುವರೋ, ಸ್ಪೀಕರ್‌ ನಿರ್ಧಾರ ಎತ್ತಿ ಹಿಡಿದು ಶಾಸಕರು ಅನರ್ಹಗೊಳ್ಳುವರೋ ಎಂಬ ಕುತೂಹಲ ಮೂಡಿದೆ. ಬಹುಶಃ ಈ ಪ್ರಕರಣ ಮುಂದಿಟ್ಟುಕೊಂಡು ಸಿಎಂ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಯನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಹೈ-ಕಮಾಂಡ್‌ ನಿರ್ಧಾರ: ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಅನೇಕ ಆಕಾಂಕ್ಷಿಗಳಿರುವ ಕಾರಣ ಹೈಕಮಾಂಡ್‌ ನಿರ್ಧಾರದ ಪ್ರಕಾರ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ವರಿಷ್ಠರತ್ತ ಬೆರಳು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಯಾರು ಕೂಡ ಚಕಾರ ಎತ್ತದಂತಾಗಿದೆ. ಅಲ್ಲದೇ, ಈಗ ಹಂಚಿಕೆಯಾಗಿರುವ ಸಚಿವ ಸ್ಥಾನದಲ್ಲಿ ಕೂಡ ಜಾತಿ ಲೆಕ್ಕಾಚಾರ ಅಡಗಿದ್ದು, ನಿಮ್ಮ ಸಮುದಾಯದ ನಾಯಕರಿಗೆ ನೀಡಿದ್ದೇವಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಈಗಾಗಲೇ ಕೆಲ ಶಾಸಕರು ರಾಜೀನಾಮೆ ಪ್ರಹಸನ ಮಾಡಿ ಇಕ್ಕಟ್ಟಿಗೆ ಸಿಲುಕಿರುವುದನ್ನು ಕಂಡಿದ್ದು, ಬಂಡಾಯದ ಹಾದಿಗೆ ಯಾರು ಇಳಿಯಕ್ಕಿಲ್ಲ ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next