Advertisement

ಬಿಸಿಲೂರ ಜನರ ಕಣ್ಮನ ತಣಿಸಿದ ಚಿತ್ರಸಂತೆ

01:40 PM Feb 17, 2020 | Naveen |

ರಾಯಚೂರು: ನಗರದಲ್ಲಿ ರವಿವಾರ ನಡೆದ ಚಿತ್ರಸಂತೆ ಉರಿಬಿಸಿಲಲ್ಲಿಯೂ ಕಲಾಸಕ್ತರ ಕಣ್ಮನ ತಣಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಚಿತ್ರಕಲೆಗಳನ್ನು ಪ್ರದರ್ಶನಕ್ಕಿಟ್ಟಿದ್ದು ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

Advertisement

ನಗರದ ಸಾರ್ವಜನಿಕ ಉದ್ಯಾವನ ಮುಂಭಾಗದ ಫುಟ್‌ಪಾತ್‌ ಮೇಲೆ ಕಲಾ ಸಂಕುಲ ಸಂಸ್ಥೆಯಿಂದ ನಗರದಲ್ಲಿ ಎರಡನೇ ವರ್ಷವೂ ಚಿತ್ರ ಸಂತೆ ನಡೆಸಲಾಯಿತು. ಜಿಲ್ಲೆ ಮಾತ್ರವಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಕಲಾವಿದರು ಆಗಮಿಸಿದ್ದರು. ತಾವು ಬಿಡಿಸಿದ ವಿವಿಧ ಬಗೆಯ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಿ ಮಾರಿದರು. ಆದರೆ, ಬೆಳಗ್ಗೆಯೇ ಸಂತೆ ಆರಂಭವಾದರೂ ಜನ ನಿರೀಕ್ಷಿತ ಮಟ್ಟದಲ್ಲಿ ಬಂದಿರದ ಕಾರಣ ಕಲಾವಿದರು ತುಸು ಬೇಸರ ವ್ಯಕ್ತಪಡಿಸಿದರು. ಆದರೆ, ಕೆಲವೊಂದು ಕಲಾಸಕ್ತರು ಆಗಮಿಸಿ ಕಲಾಕೃತಿಗಳನ್ನು ವೀಕ್ಷಿಸಿದ್ದಲ್ಲದೇ ಚಿತ್ರಕಲೆಗಳನ್ನು ಖರೀದಿಸುತ್ತಿದ್ದದ್ದು ಕಂಡು ಬಂತು.

ಧ್ಯಾನಸ್ಥ ಬುದ್ಧ, ಶಿಲ್ಪಕಲಾ ವೈಭವ, ಸುಂದರ ಪ್ರಕೃತಿ, ಹಳ್ಳಿಗಾಡಿನ ಸೊಗಡು ಕಣ್ಕಟ್ಟುವಂಥ ಕಲಾಕೃತಿಗಳು ಸಾಕಷ್ಟಿದ್ದವು. ಕಾಲಕ್ಕೆ ತಕ್ಕಂತೆ ಕಲಾವಿದರು ಬದಲಾವಣೆ ಬಯಸಿದ್ದಾರೆ ಎನ್ನಲಿಕ್ಕೆ ಅನೇಕ ಕಲಾಕೃತಿಗಳು ಪುಷ್ಟಿ ನೀಡಿದವು. ಹೆಡ್‌ಸೆಟ್‌ ಹಾಕಿಕೊಂಡು ಸಂಗೀತ ಆಲಿಸುತ್ತಿರುವ ಫಾರಿನ್‌ ತಳಿಯ ನಾಯಿ, ಸೆಲ್ಫಿ ತೆಗೆದುಕೊಳ್ಳುತ್ತಿರುವ ಕೋತಿಗಳು, ಮೊಬೈಲ್‌ನಲ್ಲೇ ಏನನ್ನೋ ನೋಡುತ್ತಿರುವ ಕೋತಿಗಳ ಚಿತ್ರಗಳು ಸೆಳೆದವು. ಇನ್ನು ಕೆಲ ಕಲಾವಿದರು ಸ್ಥಳದಲ್ಲೇ ಚಿತ್ರ ಬಿಡಿಸಿಕೊಡುತ್ತಿದ್ದರು. ಎದುರಿಗೆ ಕೂಡಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರ ಚಿತ್ರ ಬಿಡಿಸಿ ಕೊಡುತ್ತಿದ್ದರು.

ಶಂಕರಗೌಡರ ಸ್ಮರಣೆ: ಜಿಲ್ಲೆ ಎಂದಿಗೂ ಮರೆಯದ ಕಲಾವಿದರಲ್ಲಿ ಶಂಕರಗೌಡ ಬೆಟ್ಟದೂರು ಅವರ ಹೆಸರು ಅಗ್ರಗಣ್ಯ. ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿದ ಈ ಕಲಾವಿದರ ಕಲಾಕೃತಿಗಳನ್ನು ನೋಡುವುದೇ ಸಂಭ್ರಮ. ಚಿತ್ರಸಂತೆಯ ವೇದಿಕೆಗೆ ಅವರ ಹೆಸರನ್ನೇ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದು ಒಂದು ವಿಶೇಷವಾದರೆ, ಈ ಬಾರಿ ಶಂಕರಗೌಡರು ಬಿಡಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿರುವುದು ಮತ್ತೂಂದು ವಿಶೇಷವಾಗಿತ್ತು. ಅವರ ಮಗ ಶರಣ ಪಾಟೀಲ ಬೆಟ್ಟದೂರು ಅವರೇ ವಿಶೇಷ ಆಸ್ಥೆ ವಹಿಸಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next