Advertisement

ಕೃಷಿ ವಿವಿಯಲ್ಲಿ ಇಂದಿನಿಂದ ಕೃಷಿ ಮೇಳ

12:32 PM Dec 14, 2019 | Naveen |

ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನೆಲ-ಜಲ ಉಳಿಸಿ; ಆದಾಯ ಹೆಚ್ಚಿಸಿ ಘೋಷವಾಕ್ಯದಡಿ ಡಿ.14ರಿಂದ ಮೂರು ದಿನ ಕೃಷಿ ಮೇಳ ಜರುಗಲಿದ್ದು, ಈ ನಿಟ್ಟಿನಲ್ಲಿ ಸಕಲ ಸಿದ್ಧತೆ  ಡಿಕೊಳ್ಳಲಾಗಿದೆ. ಈಗಾಗಲೇ ವಿವಿಧ ಭಾಗಗಳಿಂದ ವರ್ತಕರು ಆಗಮಿಸಿದ್ದು, ಮಳಿಗೆಗಳಲ್ಲಿ ವಸ್ತುಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಾಕಷ್ಟು ರೈತರು ಆಗಮಿಸುವ ನಿರೀಕ್ಷೆಯಿದೆ. 300 ಮಳಿಗೆ ಸ್ಥಾಪಿಸಲಾಗಿದ್ದು, ಅದರಲ್ಲಿ 60 ಹೈಟೆಕ್‌ ಮಳಿಗೆ ಸ್ಥಾಪಿಸಲಾಗಿದೆ. ಈಗಾಗಲೇ ಕೃಷಿಗೆ ಸಂಬಂಧಿಸಿದ ಇಲಾಖೆಗಳು ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ಸಿದ್ಧಪಡಿಸುತ್ತಿದ್ದಾರೆ.

Advertisement

ಬೃಹತ್‌ ಮುಖ್ಯ ವೇದಿಕೆ ನಿರ್ಮಿಸಲಾಗಿದ್ದು, ಸುಮಾರು ಎರಡು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮೊದಲನೇ ದಿನ ಬೆಳಗ್ಗೆ ನಾಲ್ವಾರದ ಕೋರಿಸಿದ್ಧೇಶ್ವರ ಸಿದ್ಧಸಂಸ್ಥಾನಮಠದ ಡಾ|ಸಿದ್ಧ ತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ರೈತರಿಗೆ ವಿಶೇಷ ಉಪನ್ಯಾಸ ನೀಡುವರು. ಬಳಿಕ ರೈತರಿಂದ ರೈತರಿಗಾಗಿ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಪ್ರಗತಿಪರ ರೈತರಿಂದ ಆದಾಯ ಹೆಚ್ಚಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಎರಡನೇ ದಿನ ವೇದಿಕೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು, ಡಿಸಿಎಂ ಲಕ್ಷ್ಮಣ ಸವದಿ, ಕೃಷಿ ಸಚಿವ ಸೇರಿದಂತೆ ಇತರರು ಪಾಲ್ಗೊಳ್ಳುವರು. ಈ ದಿನ ಆರು ಪ್ರಗತಿಪರ ರೈತರಿಗೆ “ಶ್ರೇಷ್ಠ ಕೃಷಿಕ ಪ್ರಶಸ್ತಿ’ ನೀಡಲಾಗುವುದು. ಮೂರನೇ ದಿನವೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗಂಗಾವತಿ ಪ್ರಾಣೇಶ ಅವರಿಂದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಉಪನ್ಯಾಸ ಆಯೋಜಿಸಲಾಗಿದೆ.

ಕೃಷಿಗೆ ಪೂರಕ ವಸ್ತು ಪ್ರದರ್ಶನ
ಈ ಬಾರಿಯೂ ಕೃಷಿಗೆ ಪೂರಕವಾಗಿ ವಿವಿಧ ಕಂಪನಿಗಳಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕೃಷಿ ಯಂತ್ರೋಪಕರಗಳ ಪ್ರದರ್ಶನ ಜರುಗಲಿದೆ. ಅದರ ಜತೆಗೆ ಆದಾಯ ಹೆಚ್ಚಳ ಕುರಿತು ವಿವಿಧ ಇಲಾಖೆಗಳು ವಿಶೇಷ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ಹಮ್ಮಿಕೊಂಡಿವೆ. ವಿವಿಯಿಂದ ಆಡಳಿತ ಭವನದೆದುರು ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ಜರುಗಿದರೆ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಡ್ರೋಣ್‌ ಮೂಲಕ ಔಷಧ ಸಿಂಪರಣೆ ಕುರಿತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪಶುಗಳ ಪ್ರದರ್ಶನ ಜರುಗಲಿದ್ದು, ವಿವಿಧ ಭಾಗಗಳ ಎತ್ತು, ಹಸು, ಕುರಿ, ಕೋಳಿ ಸೇರಿದಂತೆ ವಿವಿಧ ಪ್ರಾಣಿಗಳ ಪ್ರದರ್ಶನ ಜರುಗಲಿದೆ. ಮೊದಲ ಬಾರಿಗೆ ನಾಯಿಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ.

ಹೆಚ್ಚು ವ್ಯಾಪಾರ ನಿರೀಕ್ಷೆ
ಮೇಳಕ್ಕೆ ಶನಿವಾರ ಚಾಲನೆ ಸಿಗಲಿದ್ದು, ಮೂರು ದಿನ ನಡೆಯಲಿದೆ.
ರವಿವಾರ ಮೇಳಕ್ಕೆ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದೆ. ಕಳೆದ ಬಾರಿ ನಡೆದ ಮೇಳಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ರಜಾ ದಿನವಾದ್ದರಿಂದ ರೈತರ ಜತೆಗೆ ಬೇರೆ ಕ್ಷೇತ್ರಗಳ ಜನರು ಆಗಮಿಸುತ್ತಾರೆ. ಸಾಕಷ್ಟು ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆಯಿದೆ.

Advertisement

ಈ ಬಾರಿ ಕೃಷಿ ಮೇಳದಲ್ಲಿ ಆದಾಯ ಹೆಚ್ಚಳಕ್ಕೆ ಪೂರಕವಾದ ವಿಚಾರಗಳಿಗೆ ಹೆಚ್ಚು ಆದ್ಯತೆ ಸಿಗಲಿದೆ. ಎಲ್ಲ ಇಲಾಖೆಗಳು ಆ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಸಿದ್ಧಪಡಿಸಿವೆ. ಈಗಾಗಲೇ ಬಹುತೇಕ ಸಿದ್ಧತೆ ಕಾರ್ಯ ಮುಗಿದಿದೆ. 300 ಮಳಿಗೆ ರಚಿಸಿದ್ದು, ಅದರಲ್ಲಿ 60 ಹೈಟೆಕ್‌ ಮಳಿಗೆ ನಿರ್ಮಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳ ಯಶಸ್ಸಿಗೆ ಸಹಕರಿಸಬೇಕು.
ಡಿ.ಎಂ.ಚಂದರಗಿ,
ಅಧ್ಯಕ್ಷ, ಕೃಷಿ ಮೇಳ ಕಾರ್ಯಕ್ರಮ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next