Advertisement

ರಾಜಕೀಯ ರಂಗೀನಾಟಕ್ಕೆ ಬಲಿಯಾಯ್ತೇ ಕಾರ್ಮಿಕರ ಹೋರಾಟ?

11:31 AM Jun 29, 2019 | Naveen |

ರಾಯಚೂರು: ಮುಖ್ಯಮಂತ್ರಿ ಅವರಿಂದಾದರೂ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಕಾರ್ಮಿಕರಿಗೆ ಈಗ ಉಭಯ ಸಂಕಟ ಶುರುವಾಗಿದೆ.

Advertisement

ಸಮಸ್ಯೆ ಬಗೆಹರಿಸಬೇಕಾದ ಮುಖ್ಯಮಂತ್ರಿಯೇ ತಮ್ಮ ಬಗ್ಗೆ ಅಸಮಾಧಾನಗೊಂಡಿದ್ದು, ಸಮಸ್ಯೆ ಈಡೇರುವುದೇ ಎಂಬ ಆತಂಕ ಶುರುವಾಗಿದೆ.

ಗ್ರಾಮ ವಾಸ್ತವ್ಯಕ್ಕೆ ಜಿಲ್ಲೆಗೆ ಬಂದಿದ್ದ ಸಿಎಂಗೆ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವಿವಿಧ ಕಾರ್ಮಿಕರು ಮನವಿ ಸಲ್ಲಿಸಲು ಯರಮರಸ್‌ ಅತಿಥಿ ಗೃಹಕ್ಕೆ ಆಗಮಿಸಿದ್ದರು. ಆಗ ಮಾತುಕತೆ ನಡೆಸಿದ್ದ ಸಿಎಂ 15 ದಿನ ಕಾಲಾವಕಾಶ ಕೇಳಿದ್ದರು ಎನ್ನಲಾಗುತ್ತಿದೆ. ಆದರೆ, ಸರಿಯಾಗಿ ಸಮಸ್ಯೆ ಆಲಿಸಲಿಲ್ಲ ಎಂಬ ಆಕ್ರೋಶದಿಂದ ಕಾರ್ಮಿಕರು ಸಿಎಂ ಬಸ್‌ಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದ್ದರು. ಆಗ ತಾಳ್ಮೆ ಕಳೆದುಕೊಂಡ ಸಿಎಂ ದುಡುಕಿನ ಮಾತುಗಳನ್ನಾಡಿದ್ದು, ದೊಡ್ಡ ಮಟ್ಟದ ಸುದ್ದಿಯಾಗಿ ಪೇಚಿಗೆ ಸಿಲುಕುವಂತೆ ಮಾಡಿತು. ಅದು ರಾಜಕೀಯ ಸ್ವರೂಪವೂ ಪಡೆಯಿತು. ಸಮಸ್ಯೆ ಈಡೇರಿಸಬೇಕಾದ ಮುಖ್ಯಮಂತ್ರಿಗಳೇ ಕಾರ್ಮಿಕರ ಮೇಲೆ ಕೆಂಡಾಮಂಡಲವಾಗಿದ್ದು, ಈಗ ಮುಂದೇನು ಎಂಬ ಯಕ್ಷಪ್ರಶ್ನೆ ಕಾರ್ಮಿಕರದ್ದು.

ಇಂದು ನಿನ್ನೆ ಹೋರಾಟವಲ್ಲ: ಈ ಪ್ರಕರಣ ಶರವೇಗದಲ್ಲಿ ಪ್ರಚಾರ ಪಡೆದು ಸಿಎಂ ಆಡಿದ ಮಾತುಗಳು ಟ್ರೋಲ್ಗೆ ಗುರಿಯಾಗಿವೆ. ಆದರೆ, ಅದನ್ನು ಬಿಜೆಪಿ ಪ್ರೇರಿತ ಹೋರಾಟ ಎನ್ನುವ ಮೂಲಕ ಆಡಳಿತ ಪಕ್ಷಗಳು ಕಾರ್ಮಿಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಆದರೆ, ವಾಸ್ತವದಲ್ಲಿ ಕಾರ್ಮಿಕರ ಹೋರಾಟ ಇಂದು ನಿನ್ನೆಯದಲ್ಲ. ವೈಟಿಪಿಎಸ್‌ನ 410 ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ಅವರ ಕುಟುಂಬಗಳು ಅತಂತ್ರಕ್ಕೆ ಸಿಲುಕಿವೆ. ಆರ್‌ಟಿಪಿಎಸ್‌ನಿಂದ ಹೆಚ್ಚುವರಿ ಸಿಬ್ಬಂದಿಯನ್ನು ವೈಟಿಪಿಎಸ್‌ ವರ್ಗಾಯಿಸಲಾಗಿದೆ. ನಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಕಳೆದ 20 ದಿನಗಳಿಂದ ಕಾರ್ಮಿಕರು ವೈಟಿಪಿಎಸ್‌ ಎದುರು ಹೋರಾಟ ಮಾಡುತ್ತಿದ್ದಾರೆ.

ಇನ್ನು ತುಂಗಭದ್ರಾ ಜಲಾಶಯದ ಸುಮಾರು 1200ಕ್ಕೂ ಅಧಿಕ ಹಂಗಾಮಿ ಕಾರ್ಮಿಕರಿಗೆ ಕಳೆದ 14 ತಿಂಗಳಿಂದ ವೇತನ ಪಾವತಿಸಿಲ್ಲ. ಅಲ್ಲದೇ, ಈವರೆಗೂ ಭವಿಷ್ಯ ನಿಧಿ ಪಾವತಿಸಿಲ್ಲ. ಕೂಡಲೇ ಬೇಡಿಕೆ ಈಡೇರಿಸುವಂತೆ ಕಳೆದ ಕೆಲ ತಿಂಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹಲವು ಹಂತದ ಹೋರಾಟಕ್ಕೆ ಕರೆ ನೀಡಿದ್ದ ಸಂಘಟನೆ ಜೂ.28ರಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಖಾತೆ ಸಚಿವರ ಮನೆ ಎದುರು ಹೋರಾಟ ಹಮ್ಮಿಕೊಂಡಿತ್ತು. ಆದರೆ, ಈಗ ಹೋರಾಟಕ್ಕೆ ಪೊಲೀಸ್‌ ಇಲಾಖೆ ಪರವಾನಗಿ ನೀಡಿಲ್ಲ. ಇನ್ನೂ ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಗೆ ನಿಯಮದಂತೆ ವೇತನ ಪರಿಷ್ಕರಣೆ ಮಾಡಿಲ್ಲ ಎಂಬ ಬೇಡಿಕೆಯಡಿ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಎಲ್ಲ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಬೇಕು ಎಂಬ ಕಾರಣಕ್ಕೆ ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದರು. ಆದರೆ, ಈಗ ಅದಕ್ಕೆ ರಾಜಕೀಯ ಬಣ್ಣ ಬಂದಿದ್ದು, ಕಾರ್ಮಿಕರ ಇಷ್ಟು ದಿನದ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ.

Advertisement

ಎಡಪಂಥೀಯ ವಿಚಾರಧಾರೆ: ಟಿಯುಸಿಐ ಸಂಘಟನೆ ಎಡಪಂಥೀಯ ವಿಚಾರಧಾರೆಗಳ ಆಧಾರದಡಿ ಹೋರಾಟ ಮಾಡುತ್ತಿದ್ದು, ಸಂಘಟನೆ ಮುಖಂಡ ಆರ್‌. ಮಾನಸಯ್ಯ ಸಿಪಿಎಂ(ಆರ್‌)ದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದೆ ಎನ್ನುವುದನ್ನು ಸಂಘಟನೆಯವರೇ ಖಂಡಾತುಂಡವಾಗಿ ತಿರಸ್ಕರಿದ್ದಾರೆ. ನಮ್ಮದು ನ್ಯಾಯಯುತ ಹೋರಾಟವಾಗಿದೆ. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಮೊದಲು ವಾಸ್ತವ ಅರಿತು ನಮ್ಮ ಬೇಡಿಕೆ ಈಡೇರಿಸಲಿ ಎಂದು ತಾಕೀತು ಮಾಡಿದ್ದಾರೆ.

ಎಚ್ಚರಿಕೆ ನೀಡಿದ್ದ ಸಂಘಟನೆ: ಸಿಎಂ ಜತೆ ನಾವೂ ಗ್ರಾಮ ವಾಸ್ತವ್ಯ ಮಾಡುವುದಾಗಿ ಈ ಮುಂಚೆಯೇ ಸಂಘಟನೆ ಘೋಷಿಸಿತ್ತು. ಅದರ ಜತೆಗೆ ರಾಯಚೂರಿನಿಂದ ಕರೇಗುಡ್ಡಕ್ಕೆ 500 ಬೈಕ್‌ಗಳ ಮೂಲಕ ರ್ಯಾಲಿ ನಡೆಸಲಾಗುವುದು ಎಂದೂ ವೈಟಿಪಿಎಸ್‌ ಕಾರ್ಮಿಕರು ತಿಳಿಸಿದ್ದರು. ಅದಕ್ಕೂ ಮುನ್ನ ಜೂ.24ರಂದು ಬೈಪಾಸ್‌ ಬಳಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ಕೂಡ ನಡೆಸಲಾಗಿತ್ತು. ಆದರೆ, ಜಿಲ್ಲಾಡಳಿತ ಕರೇಗುಡ್ಡದಲ್ಲಿ ಯಾವುದೇ ಕಾರಣಕ್ಕೂ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿತ್ತು. ಆಗಲೇ ಸಿಯುಟಿಐ ಸಂಘಟನೆ ಸುದ್ದಿಗೋಷ್ಠಿ ನಡೆಸಿ ಮುಂದಾಗುವ ಅನಾಹುತಕ್ಕೆ ನೀವೆ ಹೊಣೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next