Advertisement

ಗುರುತಿನ ಚೀಟಿ ನ್ಯೂನತೆ ಸರಿಪಡಿಸಿಕೊಳ್ಳಿ

04:44 PM Sep 29, 2019 | Naveen |

ರಾಯಚೂರು: ಜಿಲ್ಲೆಯ ಮತದಾರರ ಗುರುತಿನ ಚೀಟಿಯಲ್ಲಿ ಕಂಡು ಬರುವ ನ್ಯೂನತೆಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಹಾಗೂ ಮತದಾರರ ಪರಿಶೀಲನೆ ಕಾರ್ಯಕ್ರಮದಲ್ಲಿ (ಇವಿಪಿ) ಅವರು ಮಾತನಾಡಿದರು. ಮತದಾರರ ಗುರುತಿನ ಚೀಟಿಯಲ್ಲಿ ಎಲ್ಲ ಅಂಶಗಳು ಸ್ಪಷ್ಟವಿದ್ದರೂ ಮತದಾರರು ಎಪಿಕ್‌ ಕಾರ್ಡ್‌ ಪರಿಶೀಲಿಸುವುದು ಸೂಕ್ತ ಹಾಗೂ ಅದನ್ನು ದಾಖಲಿಸಬೇಕು. ಸರ್ಕಾರಿ ಅಧಿಕಾರಿಗಳು ತಮ್ಮ ಎಪಿಕ್‌ ಕಾರ್ಡ್‌ ಪರಿಶೀಲಿಸಿಕೊಳ್ಳಬೇಕು. ನಂತರ ನಿಮ್ಮ ಕುಟುಂಬ ಸದಸ್ಯರ ಕಾರ್ಡ್‌ಗಳನ್ನು ಪರಿಶೀಲಿಸಿ ಎಂದು ಸೂಚಿಸಿದರು.

ಸರ್ಕಾರದ ಎಲ್ಲ ಕಚೇರಿಗಳಲ್ಲೂ ಮತದಾರರ ಸೌಲಭ್ಯ ಕೇಂದ್ರ ಸ್ಥಾಪಿಸಿ, ಅಲ್ಲಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇದಕ್ಕಾಗಿ ಪೋಸ್ಟರ್‌ಗಳಲ್ಲಿ ಮಾಹಿತಿ ಮುದ್ರಿಸಿ ಎಲ್ಲ ಕಚೇರಿಗಳಲ್ಲೂ ಅಳವಡಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳು ಈ ಬಗ್ಗೆ ಜನಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳನ್ನು ಜಿಲ್ಲಾಡಳಿತದಿಂದ ಪರಿಶೀಲಿಸಲಾಗುವುದು. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲೂ ಈ ಕಾರ್ಯ ಕೈಗೊಂಡಲ್ಲಿ ಜಾಗೃತಿ ಮೂಡಲಿದೆ.

ಶಾಲಾ ವಿದ್ಯಾರ್ಥಿಗಳು ಮತದಾರರಲ್ಲದಿದ್ದರೂ ಅವರ ಪೋಷಕರು
ಮತದಾರರು. ಹೀಗಾಗಿ ಶಾಲೆಗಳಲ್ಲೂ ಮಾಹಿತಿ ನೀಡಬೇಕು. ಅದೇ ರೀತಿ ರಿಮ್ಸ್‌, ಕೃಷಿ ವಿವಿಗಳಲ್ಲೂ ಈ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ಬೃಹತ್‌ ಜಾಥಾ ನಡೆಸಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್‌ ಸಮಿತಿ ನೋಡಲ್‌ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸಹಾಯಕ ಆಯುಕ್ತರಾದ ಸಂತೋಷ ಕುಮಾರ, ರಾಜಶೇಖರ ಡಂಬಳ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next