Advertisement

ನಿಖರ ಜನಗಣತಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ

02:01 PM Mar 14, 2020 | Naveen |

ಯಾದಗಿರಿ: ಸಾಮಾನ್ಯ ವ್ಯಕ್ತಿ ಅನುಕೂಲತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರಚಿಸಲು ಮತ್ತು ಅನುದಾನ ಬಿಡುಗಡೆಗೆ ಜನಗಣತಿ ಮೂಲ ಆಧಾರವಾಗುತ್ತದೆ. ನಿಖರ ಜನಗಣತಿಯಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪಟ್ಟಿ ಪರಿಷ್ಕರಣೆ ಕಾರ್ಯದ ಅಂಗವಾಗಿ ಕ್ಷೇತ್ರ ತರಬೇತುದಾರರಿಗೆ ಮಾಸ್ಟರ್‌ ಟ್ರೇನರ್‌ಗಳಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿ ಆಧಾರ ಮೇಲೆ ಲೋಕಸಭೆ, ವಿಧಾನಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸ್ಥಾನಗಳು ನಿರ್ಧಾರವಾಗುತ್ತವೆ. 2021ರ ಜನಗಣತಿ ಅಂಕಿ-ಅಂಶಗಳು ಮುಂದಿನ 10 ವರ್ಷಗಳ ವರೆಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗವಾಗುತ್ತವೆ ಎಂದು ತಿಳಿಸಿದರು.

ಕ್ಷೇತ್ರ ತರಬೇತಿದಾರರು ಜನಗಣತಿಗೆ ಸಂಬಂಧಪಟ್ಟ ಆ್ಯಪ್‌ಗ್ಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಯಾವುದೇ ಸಂಶಯಗಳನ್ನು ಇಟ್ಟುಕೊಂಡು ಜನಗಣತಿಗೆ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾರಣ ತರಬೇತಿಯಲ್ಲಿ ನೀಡುವ ಪ್ರತಿಯೊಂದು ಅಂಶಗಳನ್ನು ಗಮನವಿಟ್ಟು ಆಲಿಸಬೇಕು. ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಜನಗಣತಿ ಬಗ್ಗೆ ಪೂರ್ವಾಭ್ಯಾಸ ಮಾಡಿ, ಸ್ವತಃ ಅನುಭವ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂರ ಮಾತನಾಡಿ, ಜನಗಣತಿ ರಾಷ್ಟ್ರೀಯ ಕಾರ್ಯವಾಗಿದೆ. ಜನಗಣತಿ ಕಾರ್ಯಕ್ಕೆ ನೇಮಕವಾದ ಪ್ರತಿಯೊಬ್ಬ ಅಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

Advertisement

ಜನಗಣತಿ ಜಿಲ್ಲಾ ನೋಡಲ್‌ ಅಧಿಕಾರಿ ಗೆಜ್ಜೆ ಗೋಪಾಲಕೃಷ್ಣ ಮಾತನಾಡಿ, 2020ರ ಏಪ್ರಿಲ್‌ 15ರಿಂದ ಮೇ 29ರ ವರೆಗೆ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪಟ್ಟಿಯ ಪರಿಷ್ಕರಣೆ ನಡೆಯಲಿದೆ. 2021ರ ಫೆಬ್ರುವರಿ 9ರಿಂದ ಫೆ.28ರ ವರೆಗೆ ಜನಗಣತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾಸ್ಟರ್‌ ಟ್ರೇನರ್‌ಗಳಾದ ಪ್ರಹ್ಲಾದ್‌ ಜೋಶಿ ಮತ್ತು ಸಿದ್ದಣ್ಣ ಡಿಗ್ಗಿ ತರಬೇತಿ ನೀಡಿದರು. ಕ್ಷೇತ್ರ ತರಬೇತುದಾರರಿಗೆ ನೀಡಿರುವ ಕೈಪಿಡಿಗಳಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ಜನಗಣತಿ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಲಾಗಿದೆ. ಅವುಗಳನ್ನು ಓದಿ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಯಾವುದೇ ಅನುಮಾನಗಳಿದ್ದಲ್ಲಿ ಸ್ಪಷ್ಟೀಕರಣ ಪಡೆಯಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next