Advertisement

ಕೃಷ್ಣೆ ಹರಿವು ಹೆಚ್ಚಳ ಜನರಲ್ಲಿ ಕಳವಳ

03:12 PM Aug 07, 2019 | Naveen |

ರಾಯಚೂರು: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ನಾಲ್ಕು ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದು, ದಿನೇದಿನೆ ಪ್ರವಾಹ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಕೂಡ ರಕ್ಷಣಾ ಕಾರ್ಯ ಮುಂದುವರಿಸಿದ್ದು, ನಡುಗಡ್ಡೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

Advertisement

ಲಿಂಗಸುಗೂರು ತಾಲೂಕಿನಲ್ಲಿ ಪ್ರವಾಹ ಪೀಡಿತ ನಡುಗಡ್ಡೆ ಮತ್ತು ಹಳ್ಳಿಗಳ ಜನರಿಗಾಗಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅದರ ಜತೆಗೆ ಪ್ರವಾಹ ಪೀಡಿತ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಕಾರ್ಯ ನಡೆಯುತ್ತಿದೆ. ನದಿಪಾತ್ರದ ಹಳ್ಳಿಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಪ್ರವಾಹಕ್ಕೆ ಸಿಲುಕುವ 51 ಸಂಭಾವ್ಯ ಹಳ್ಳಿಗಳ ಪಟ್ಟಿ ಮಾಡಿರುವ ಜಿಲ್ಲಾಡಳಿತ, ಅಲ್ಲೆಲ್ಲ ಡಂಗೂರ ಸಾರಿ ಎಚ್ಚರಿಕೆ ನೀಡುತ್ತಿದೆ. ಲಿಂಗಸುಗೂರು ತಾಲೂಕಿನ ನಡುಗಡ್ಡೆ ಮ್ಯಾದರಗಡ್ಡಿಯಲ್ಲಿನ 18 ಜನರನ್ನು ಎನ್‌ಡಿಆರ್‌ಎಫ್‌ ತಂಡದ ನೆರವಿನೊಂದಿಗೆ ಸ್ಥಳಾಂತರಿಸಲಾಗಿದೆ. ಈಗ ಗಡ್ಡಿಯಲ್ಲಿ ಯಾರೂ ವಾಸವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಲಿಂಗಸುಗೂರು ತಾಲೂಕಿನ ಯರಗೋಡಿಯಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಅಗತ್ಯ ಬಿದ್ದರೆ ಎಲ್ಲ ಕಡೆ ಆರಂಭಿಸುವುದಾಗಿ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಂಗಳವಾರ ಸಂಜೆವರೆಗೂ ನದಿಗೆ 3.60 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗಿದ್ದು, ರಾತ್ರಿ ನಾಲ್ಕು ಲಕ್ಷ ಕ್ಯೂಸೆಕ್‌ ಬರಲಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳ ತಂಡ ಎಲ್ಲಿಯೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಿತ್ತು. ಲಿಂಗಸುಗೂರು ತಾಲೂಕಿನ ನಡುಗಡ್ಡೆ ನಿವಾಸಿಗಳು ತಾತ್ಕಾಲಿಕವಾಗಿ ಸಂಬಂಧಿಗಳು, ನಿರಾಶ್ರಿತರಿಗೆ ನಿರ್ಮಿಸಿದ ಆಶ್ರಯ ಮನೆಗಳಲ್ಲಿ ಉಳಿದುಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ ಮ್ಯಾದರಗೋಳ, ದೊಂಡಂಬಳಿ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ರಾಯಚೂರು ತಾಲೂಕಿನ ಕಾಡ್ಲೂರು, ಗುರ್ಜಾಪುರ, ಅರಷಿಣಗಿ ಸೇರಿ ವಿವಿಧ ಗ್ರಾಮಗಳ ನದಿ ತೀರದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ನೀರಿನ ಪ್ರಮಾಣ ದಿನೇದಿನೆ ಹೆಚ್ಚುತ್ತಿದ್ದು, ರೈತರಲ್ಲಿ ಮತ್ತಷ್ಟು ಆತಂಕ ಮನೆ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next