Advertisement

ರಾಹುಲ್‌ ಯಾತ್ರೆಗೆ ಸಿದ್ಧತೆ

04:52 PM Feb 10, 2018 | Team Udayavani |

ರಾಯಚೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹೈ-ಕ ಜಿಲ್ಲೆಗಳಲ್ಲಿ ಫೆ.10ರಿಂದ ಆರಂಭಗೊಳ್ಳಿರುವ ಜನಾಶೀರ್ವಾದ ಯಾತ್ರೆ ಫೆ.11ರಂದು ಜಿಲ್ಲೆ ಪ್ರವೇಶಿಸಲಿದ್ದು, ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ ಬಿ.ವಿ. ನಾಯಕ ತಿಳಿಸಿದರು. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು,
ಪಕ್ಷದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕಲಬುರಗಿ ಭೇಟಿ ವೇಳೆ ಅವರು ನೀಡಿದ ಭರವಸೆಯಂತೆ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡುಗೆ ನೀಡಿದ್ದಾರೆ.

ಅದೊಂದು ವಿಶೇಷ ಕೊಡುಗೆ. ಅಂಥ ಸೌಲಭ್ಯ ಕಲ್ಪಿಸಿದ ನಾಯಕರ ಸ್ವಾಗತಕ್ಕೆ ಆರು ಜಿಲ್ಲೆಗಳಲ್ಲಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಫೆ.10ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಸಾರ್ವಜನಿಕರ ಸಭೆಯಲ್ಲಿ ಪಾಲ್ಗೊಳ್ಳುವ ರಾಹುಲ್‌ಗಾಂಧಿ 11ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ನಡೆಸಿ ಸಿಂಧನೂರು ಪ್ರವೇಶಿಸುವರು. ಅಂದು ಸಂಜೆ 6ಕ್ಕೆ ರೈತರೊಂದಿಗೆ ಸಂವಾದ ನಡೆಸುವರು. ನಂತರ ನಗರ ಸಮೀಪದ ಯರಮರಸ್‌ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು ಎಂದು ತಿಳಿಸಿದರು.

 ಫೆ.12ರಂದು ನಗರದಲ್ಲಿ ರೋಡ್‌ ಶೋ ನಡೆಸುವರು. ಇಲ್ಲಿಂದ ಕಲ್ಮಲಾ, ಗಬ್ಬೂರಿನಲ್ಲಿ ಪಕ್ಷದ ಕಾರ್ಯಕರ್ತರಿಂದ  ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಲಾಗಿದೆ. ಮಧ್ಯಾಹ್ನ ದೇವದುರ್ಗದಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಗಿರಿಜನ ಬುಡಕಟ್ಟು ವರ್ಗದವರ ಸಮಾವೇಶದಲ್ಲಿ ಪಾಲ್ಗೊಂಡು, ಅಲ್ಲಿಂದ ಯಾದಗಿರಿ ಜಿಲ್ಲಾ ಪ್ರವಾಸ ಮುಂದುವರಿಸುವರು ಎಂದು ತಿಳಿಸಿದರು.

ಒಂದೇ ವರ್ಷದಲ್ಲಿ ಅವರು ಎರಡು ಬಾರಿ ಜಿಲ್ಲೆಗೆ ಬರುತ್ತಿರುವುದು ಖುಷಿಯ ವಿಚಾರ. ಎರಡು ದಿನಗಳ ನಿಗದಿ ಪಡಿಸುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿದೆ. ದೇವದುರ್ಗ ಎಪಿಎಂಸಿ ಮೈದಾನದಲ್ಲಿ ಸಮಾವೇಶದ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, 40 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ, ಎಚ್‌.ಎಂ. ರೇವಣ್ಣ ಸೇರಿ 25ಕ್ಕೂ ಅಧಿ ಕ ನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.

Advertisement

ಮಾಜಿ ಶಾಸಕರಾದ ಸೈಯದ್‌ ಯಾಸೀನ್‌, ರಾಜಾ ರಾಯಪ್ಪ ನಾಯಕ, ರಾಮಣ್ಣ ಇರಬಗೇರಾ, ಅಬ್ದುಲ್‌ ಕರೀಂ, ಅಮರೇಗೌಡ ಹಂಚಿನಾಳ, ಪಾರಸಮಲ್‌ ಸುಖಾಣಿ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು. 

ಗೊರೇಬಾಳ: ರಾಯಚೂರ-ಗಂಗಾವತಿ ಮಾರ್ಗದ ಶಾಂತಿನಗರ (ಹಂಚಿನಾಳ ಕ್ಯಾಂಪ್‌) ಗ್ರಾಮದ ಮಾರ್ಗವಾಗಿ ಫೆ.11ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಆಗಮನದ ನಿಮಿತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಟೋಲ್‌ಗೇಟ್‌ ಸಿಬ್ಬಂದಿಗಳ ರಾಜ್ಯ ಹೆದ್ದಾರಿ ರಸ್ತೆಯ ವಿವಿಧ ಗ್ರಾಮಗಳ ಬಸ್‌ ನಿಲ್ದಾಣದ ಮುಂಭಾಗದ ರಸ್ತೆಗಳಲ್ಲಿ ಸ್ವತ್ಛತಾ ಕಾರ್ಯ ಕೈಗೊಂಡಿದ್ದಾರೆ. ಇನ್ನು ಸಿಂಧನೂರಿನವರೆಗೆ ತೆರಳುವ ರಸ್ತೆ ಮಾರ್ಗದಲ್ಲಿ ಹೆಚ್ಚು ಮಣ್ಣು ಸಂಗ್ರಹಗೊಂಡು ಧೂಳು ಹೆಚ್ಚಾದ ಕಾರಣ ಮಣ್ಣು ತೆಗೆಯುವ ಕೆಲಸ ಭರದಿಂದ ಸಾಗಿದೆ.

ನಾಳೆ ರಾಹುಲ್‌ ಗಾಂಧಿ ಆಗಮನ: ಸಿದ್ಧತೆ ಪರಿಶೀಲನೆ ಸಿಂಧನೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.11ರಂದು ನಗರಕ್ಕೆ ಆಗಮಿಸಲಿದ್ದು, ಯುವಕರು ಹಾಗೂ ರೈತ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಹೊನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು. 

ನಂತರ ಮಾತನಾಡಿದ ಅವರು, ರಾಹುಲ್‌ ಗಾಂಧಿ  ಅವರು ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದು, ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಭೇಟಿ ಅತ್ಯಂತ ಪ್ರಮುಖವಾಗಿದೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಲೋಕಸಭಾ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತ ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಕಿಸಾನ್‌ ವಿಭಾಗದ ರಾಜ್ಯಾಧ್ಯಕ್ಷ ಸಚಿನ್‌ ಮಿಗ, ಜಿಲ್ಲಾಧ್ಯಕ್ಷ ಜಿ.ರಮೇಶ ಯಾದವ್‌ ಸೇರಿದಂತೆ ಅನೇಕರು ಇದ್ದರು.

ಕಾಂಗ್ರೆಸ್‌ ಜಿಲ್ಲಾ ಘಟಕದಲ್ಲಿ ಸಣ್ಣ-ಪುಟ್ಟ ವೈಮನಸ್ಸುಗಳಿವೆ. ಹಾಗಂತ ಅದನ್ನೆಲ್ಲ ರಾಹುಲ್‌ ಗಾಂಧಿ ಬಂದು ಇತ್ಯರ್ಥಗೊಳಿಸಬೇಕು ಎಂದೆನಿಲ್ಲ. ನಾವೆ ಪರಸ್ಪರ ಚರ್ಚಿಸಿ ಬಗೆ ಹರಿಸಿಕೊಳ್ಳುತ್ತೇವೆ. ನಗರ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದು, ಟಿಕೆಟ್‌ಗಾಗಿ ಪೈಪೋಟಿ ಇರುವುದು ಸಹಜ. ಆದರೆ, ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರ. 
ಬಿ.ವಿ.ನಾಯಕ, ಸಂಸದ  

Advertisement

Udayavani is now on Telegram. Click here to join our channel and stay updated with the latest news.

Next