ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ಕಸ ವಿಲೇವಾರಿ ಮತ್ತು ಕಸ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
ಬನಹಟ್ಟಿ ನಗರದ ಬಹಳಷ್ಟು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಸಂಗ್ರಹಣೆಗೊಂಡರೂ ಸರಿಯಾದ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಸರಿಯಾಗಿ ಕಸ ವಿಲೇವಾರಿಯಾಗದೆ ಇರುವುದರಿಂದ ಚರಂಡಿಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆಗೊಳ್ಳುತ್ತಿದೆ.
ನಗರಸಭೆಯ ವ್ಯಾಪ್ತಿಯಲ್ಲಿ ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರ ಊರುಗಳು ಬರುತ್ತವೆ. ಇದರಿಂದಾಗಿ ನಗರಸಭೆಯ ಸಭೆಯ ಬಹಳಷ್ಟು ವಿಶಾಲವಾಗಿದೆ. ಈ ನಾಲ್ಕು ಊರುಗಳಿಗೆ ಒಟ್ಟು 124 ಜನ ಪೌರ ಕಾರ್ಮಿಕರ ಅಗತ್ಯವಿದೆ. ಸದ್ಯ 52 ಜನ ಮಾತ್ರ ಪೌರ ಕಾರ್ಮಿಕರು ಮಾತ್ರ ಇದ್ದಾರೆ. ಇಲ್ಲಿಯ 16 ಜನ ಪೌರ ಕಾರ್ಮಿಕರು ಬೇರೆ ಕಡೆಗೆ ಖಾಯಃ ಆಗಿ ನಿಯೋಜನೆಗೊಂಡಿದ್ದರಿಂದ ಕಸ ನಿರ್ವಹಣೆ ಮತ್ತಷ್ಟು ಸಮಸ್ಯೆಯಾಗಿದೆ.
ಕಸ ನಿರ್ವಹಣೆಗೆ ಇಪ್ಪತ್ತು ವಾಹನಗಳನ್ನು ಬಳಸಾಗುತ್ತಿದೆ. ನಗರದ ಸಿದ್ಧರಾಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರು ಸಾಕಷ್ಟು ಪ್ರಮಾಣದಲ್ಲಿ ಕಸ ಹಾಕಿ ಹೋಗುತ್ತಿದ್ದಾರೆ. ಈ ರಸ್ತೆಯ ಮೂಲಕ ಸಂಚಾರ ಮಾಡುವ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬಹಳಷ್ಟು ತೊಂದರೆಯಾಗಿದೆ. ಮುಗತಿ ಗಲ್ಲಿಗೆ ಹೋಗುವ ತಿರುವಿನ ಬಳಿಯೂ ಜನರು ಕಸ ಹಾಕುತ್ತಿದ್ದಾರೆ. ಇಲ್ಲಿ ಜನರು ಕಸವನ್ನು ಚರಂಡಿ ಬದಿಗೆ ಹಾಕುತ್ತಿರುವುದರಿಂದ ಹೆಚ್ಚಾದ ಕಸ ಚರಂಡಿಯನ್ನು ಸೇರಿಕೊಳ್ಳುತ್ತಿದೆ. ಇದರಿಂದಾಗಿ ಚರಂಡಿಗಳು ಕೂಡಾ ತ್ಯಾಜ್ಯದಿಂದ ತುಂಬಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ರಬಕವಿ ಬನಹಟ್ಟಿ ನಗರಸಭೆಗೆ ಹೆಚ್ಚಿನ ಪೌರ ಕಾರ್ಮಿಕರನ್ನು ನೀಡಬೇಕು ಎಂದು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಇರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಕಸ ನಿರ್ಹವಣೆಯನ್ನು ಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಸಾರ್ವಜನಿಕರು ಕೂಡಾ ಕಸವನ್ನು ರಸ್ತೆ ಮತ್ತು ಚರಂಡಿಗೆ ಹಾಕದೆ ತಮ್ಮ ಮನೆಗೆ ಬರುವ ವಾಹನಗಳಿಗೆ ನೀಡಬೇಕು.
– ಜಗದೀಶ ಈಟಿ ಪೌರಾಯುಕ್ತರು, ನಗರಸಭೆ ರಬಕವಿ-ಬನಹಟ್ಟಿ
ಜನರು ಕಸವನ್ನು ಚರಂಡಿಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕದೆ ನಗರಸಭೆಯ ವಾಹನಗಳಿಗೆ ನೀಡಬೇಕು. ಇದರಿಂದ ನಗರ ನೈರ್ಮಲ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.
– ಡಾ.ಅನಂತಮತಿ ಎಂಡೊಳ್ಳಿ, ಸಾಮಾಜಿಕ ಕಾರ್ಯಕರ್ತೆ, ರಬಕವಿ-ಬನಹಟ್ಟಿ
ವರದಿ-ಕಿರಣ ಶ್ರೀಶೈಲ ಆಳಗಿ