Advertisement

ಸದ್ದಿಲ್ಲದೆ ಸಾಗಿದೆ ಅಗ್ರಾಣಿ ನದಿ ಪುನರುಜ್ಜೀವನ

10:17 AM Sep 04, 2017 | Team Udayavani |

ಹುಬ್ಬಳ್ಳಿ: ನದಿಗಳ ಸಂರಕ್ಷಣೆ, ಪುನರುಜ್ಜೀವನ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಅಭಿಯಾನಗಳೂ ನಡೆಯುತ್ತಿವೆ. ಹಾಗೆಯೇ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ನದಿಯ ಉಪನದಿಯಾದ ಅಗ್ರಾಣಿ(ಅಗ್ರಣಿ)ನದಿ ಪುನರುಜ್ಜೀವನ ಕಾರ್ಯ ಕಳೆದ ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೆ ಸಾಗಿದೆ.

Advertisement

ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸುಮಾರು 137 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಇನ್ನಿತರ ಕಾರ್ಯಗಳಿಗೆ ಈ ನದಿ ಆಸರೆಯಾಗಿದೆ. ಉಭಯ ರಾಜ್ಯ ಸರಕಾರಗಳು “ಜಲ ಬಿರಾದಾರಿ’ ಸರಕಾರೇತರ ಸಂಸ್ಥೆ ಹಾಗೂ ನದಿ ಪಾತ್ರದ ಗ್ರಾಮಸ್ಥರ ಸಹಕಾರದಿಂದ ನದಿ
ಪುನರುಜ್ಜೀವನ ಕಾರ್ಯ ಕೈಗೊಂಡಿದ್ದು, ಅನೇಕ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. 

105ಕಿ.ಮೀ. ಉದ್ದದ ನದಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೇs… ಖಾನಾಪುರದ ಐನವಾಡಿ-ಬಲವಡಿಯಲ್ಲಿ ಅರಳಿ ಮರವೊಂದರ ಬಳಿ ಅಗ್ರಾಣಿ ನದಿ ಉಗಮವಾಗುತ್ತದೆ. ಮಹಾರಾಷ್ಟ್ರದವರ ಪ್ರಕಾರ ಅಗ್ರಾಣಿ ನದಿ ಮಹಾರಾಷ್ಟ್ರದಲ್ಲಿ 60 ಕಿ.ಮೀ. ಹಾಗೂ ಕರ್ನಾಟಕದಲ್ಲಿ ಸುಮಾರು 45 ಕಿ.ಮೀ.
ವ್ಯಾಪ್ತಿಯಲ್ಲಿ ಹರಿಯುತ್ತದೆ. ಈ ನದಿ ಸಾಂಗ್ಲಿ ಜಿಲ್ಲೆಯ ಐದು ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು, ಅಥಣಿ ತಾಲೂಕಿನ ಖೇಳೆಗಾಂವಿ ಎಂಬಲ್ಲಿ ಕೃಷ್ಣ ನದಿಯನ್ನು ಸೇರುತ್ತದೆ. ಮಹಾರಾಷ್ಟ್ರದ 107 ಗ್ರಾಮಗಳ ಸುಮಾರು 1,38,800 ಹೆಕ್ಟೇರ್‌ ಭೂಮಿಗೆ ನೀರು
ಒದಗಿಸುತ್ತಿದ್ದು, ಅಂದಾಜು 3.25 ಲಕ್ಷ ಜನರಿಗೆ ನೀರಿನ ಆಸರೆಯಾಗಿದೆ.

ಪುನರುಜ್ಜೀವನ ಯಜ್ಞ: ಮಹಾರಾಷ್ಟ್ರದಲ್ಲಿ ಅಗ್ರಾಣಿ ನದಿ ಪುನರುಜ್ಜೀವನ ಯತ್ನ 2013ರಿಂದ ನಡೆಯುತ್ತಿದೆ. ಜಲತಜ್ಞ ಡಾ|ರಾಜೇಂದ್ರ ಸಿಂಗ್‌ ಅವರ “ಜಲ ಬಿರಾದರಿ’ ಸಂಘಟನೆ ಈ ಕಾರ್ಯಕ್ಕೆ ಮುಂದಾದಾಗ ಸಾಂಗ್ಲಿ ಜಿಲ್ಲಾಡಳಿತ ಅಗತ್ಯ ಪ್ರೋತ್ಸಾಹ ನೀಡಿತ್ತು. ಅಗ್ರಾಣಿ ನದಿ ಪುನರುಜ್ಜೀವನ ಕುರಿತು ದೇಶದಲ್ಲಿ ಐಎಎಸ್‌ ಅಧಿಕಾರಿಗಳಾಗಿ ನೇಮಕಗೊಳ್ಳುವವರಿಗೆ ತರಬೇತಿ ನೀಡುವ ಮಸೂರಿನ ಲಾಲ್‌ ಬಹದ್ದೂರ ಶಾಸ್ತ್ರಿ ಅಕಾಡೆಮಿಯಿಂದ ಅಧ್ಯಯನಕ್ಕೆ “ಜಲ ಬಿರಾದಾರಿ’ ಆಹ್ವಾನಿಸಿತ್ತು. ಐಎಎಸ್‌ ತರಬೇತಿ ಪಡೆದ ಅನೇಕರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸುಮಾರು 107 ಗ್ರಾಮಗಳಲ್ಲಿ “ಜಲ ಬಿರಾದಾರಿ’ಯ ನರೇಂದ್ರ ಚುಘ ನೇತೃತ್ವದಲ್ಲಿ 2013ರ ಸೆಪ್ಟೆಂಬರ್‌ನಲ್ಲಿ ಜಾಗೃತಿ ಅಭಿಯಾನ
ಹಾಗೂ ಚೆಕ್‌ ಡ್ಯಾಂ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. 

ಕರ್ನಾಟಕದಲ್ಲಿಯೂ ಅಗ್ರಾಣಿ ನದಿ ಪುನರುಜ್ಜೀವನ ಜಾಗೃತಿ 2016ರಿಂದ ನಡೆಯುತ್ತಿದೆ. ಅಥಣಿ ತಾಲೂಕಿನ ಅಣ್ಣಾ ಸಾಹೇಬ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ| ರಾಜೇಂದ್ರ ಪೊದ್ದಾರ ಇನ್ನಿತರರ ಮಾರ್ಗದರ್ಶನದಲ್ಲಿ ನದಿ ತಟದ 22 ಹಾಗೂ ನದಿಗೆ ಹೊಂದಿಕೊಂಡು ಕೃಷಿ ಭೂಮಿ
ಇರುವ 10 ಗ್ರಾಮಗಳಲ್ಲಿ ಜನ ಜಾಗೃತಿ ನಡೆದಿದೆ.

Advertisement

ಬೆಳಗಾವಿ ಜಿಲ್ಲಾಡಳಿತ, ಜಿಪಂ ಸಹಕಾರ ನೀಡಿವೆ. ಬೆಳಗಾವಿ ಜಿಪಂ ಸಿಇಒ ಡಾ|ರಾಮಚಂದ್ರನ್‌ ನದಿ ಪುನರುಜ್ಜೀವನಕ್ಕೆ ಉತ್ಸುಕತೆ ತೋರಿದ್ದರಿಂದ ಸಣ್ಣ ನೀರಾವರಿ ಇಲಾಖೆ 20 ಬ್ಯಾರೇಜ್‌, ಬೃಹತ್‌ -ಮಧ್ಯಮ ಜಲಸಂಪನ್ಮೂಲ ಇಲಾಖೆ ಹಾಗೂ ಬೆಳಗಾವಿ ಜಿಪಂನಿಂದ ತಲಾ ಎರಡು ಬ್ಯಾರೇಜ್‌
ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಅಗ್ರಾಣಿ ನದಿ ಪುನರುಜ್ಜೀವನ ಕಾರ್ಯಪಡೆ ರಚಿಸಲಾಗಿದೆ.

ಅಗ್ರಾಣಿ ನದಿ ಬಗ್ಗೆ ಸುಮಾರು 32 ಗ್ರಾಮಗಳಲ್ಲಿ ಜಾಗೃತಿ ಕೈಗೊಳ್ಳಲಾಗಿದೆ. ನದಿಯಲ್ಲಿನ ಬಳ್ಳಾರಿ ಜಾಲಿ (ಪೀಕಜಾಲಿ) ಬೆಳೆದಿದ್ದು, ಅದನ್ನು ತೆಗೆದ ನಂತರ ನದಿಯ ಎರಡೂ ಬದಿ ಸೀತಾಫ‌ಲ ಹಾಗೂ ಪೇರಲ ಗಿಡಗಳನ್ನು ನಾಟಿ ಮಾಡಲಾಗುವುದು. 
ಅಣ್ಣಾ ಸಾಹೇಬ, ಅಗ್ರಾಣಿ ನದಿ ಪುನರುಜ್ಜೀವನ ಕಾರ್ಯಪಡೆ ಸದಸ್ಯ

ಅಗ್ರಣಿ ನದಿಯ ದಡದಲ್ಲಿ ಅರಣ್ಯ ಬೆಳೆಸುವ ಕಾರ್ಯ ಸಾಗಿದ್ದು, ಮುಂದಿನ 4-5 ವರ್ಷಗಳಲ್ಲಿ ಇದು ಮಹತ್ವದ ಫ‌ಲ ನೀಡಲಿದೆ. ಕರ್ನಾಟಕದಲ್ಲಿಯೂ ಅಗ್ರಾಣಿ ಪುನರುಜ್ಜೀವನ ಜಾಗೃತಿ ಕಾರ್ಯ ನಡೆದಿರುವುದು ಸ್ವಾಗತಾರ್ಹ.
ನರೇಂದ್ರ ಚುಘ, ಜಲ ಬಿರಾದಾರಿ ಸಂಘಟನೆ ಮುಖಂಡ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next