Advertisement

ರಾಜ್ಯದಲ್ಲೂ ಶೀಘ್ರ ಎನ್‌ಡಿಆರ್‌ಎಫ್ ಶಾಖೆ​​​​​​​

06:00 AM Nov 13, 2018 | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯಾವುದೇ ರೀತಿಯ ರಾಸಾಯನಿಕ ಅಸ್ತ್ರಗಳ ದಾಳಿ ನಡೆದರೆ ತಾಸುಗಟ್ಟಲೆ ಕಾಯಬೇಕಾಗಿಲ್ಲ. ಕೇವಲ ಅರ್ಧ ಗಂಟೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಲಿದೆ.

Advertisement

ಇಂಥದ್ದೊಂದು ವ್ಯವಸ್ಥೆ ಇನ್ನು ಬೆಂಗಳೂರಲ್ಲೇ ಕಾರ್ಯಾರಂಭ ಮಾಡಲಿದೆ. ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಚೆನ್ನೈನಲ್ಲಿದ್ದು, ಈಗ ರಾಜ್ಯದಲ್ಲಿ ಮೊದಲ ಬಾರಿಗೆ ಶಾಖೆಯೊಂದನ್ನು ತೆರೆಯಲು ಮುಂದಾಗಿದೆ. ಈವರೆಗೆ ರಾಜ್ಯದಲ್ಲಿ ಏನಾದರೂ ವಿಪತ್ತು ಸಂಭವಿಸಿದರೆ ಎನ್‌ಡಿಆರ್‌ಎಫ್ ಪಡೆ ಆಗಮನಕ್ಕಾಗಿ ಆರು ತಾಸು ಕಾಯಬೇಕು. ಆದರೆ, ಈಗ ಯಲಹಂಕದಲ್ಲೇ ತನ್ನ ಶಾಖೆಯನ್ನು ತೆರೆಯಲು ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇದರಿಂದ ಬೆಂಗಳೂರು ನಗರದಲ್ಲಿ ಘಟನೆ ನಡೆದ ಅರ್ಧಗಂಟೆಯಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಯಲಹಂಕದಲ್ಲಿರುವ ಗಡಿ ಭದ್ರತಾ ಪಡೆಯ ಪಕ್ಕದಲ್ಲೇ ಎನ್‌ಡಿಆರ್‌ಎಫ್ ಶಾಖೆಯನ್ನು ತೆರೆಯಲಿದ್ದು, ಭೂಸ್ವಾಧೀನ ಆಗಬೇಕಾಗಿದೆ. ಇದರಿಂದ ಸಹಜವಾಗಿ ಹತ್ತಿರದಲ್ಲಿರುವ ವಿಮಾನ ನಿಲ್ದಾಣದ ಸುರಕ್ಷತೆಗೆ ಮತ್ತಷ್ಟು ಬಲ ಬರಲಿದೆ. ಸದ್ಯ ನಿಲ್ದಾಣದಲ್ಲಿ ಸುರಕ್ಷತೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ಇದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದ ಕೇಲವು ನಿಮಿಷಗಳಲ್ಲಿ ನಿಲ್ದಾಣದ ಭದ್ರತಾ ತಂಡ ಸ್ಥಳಕ್ಕೆ ಧಾವಿಸಿ, ಸುರಕ್ಷತಾ ಕ್ರಮ ಕೈಗೊಳ್ಳುವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ತಿಳಿಸಿದರು.

ಏನೇನು ತರಬೇತಿ?
ತರಬೇತಿಯಲ್ಲಿ ಸುರಕ್ಷತೆ, ತಪಾಸಣೆ ಕ್ರಮಗಳನ್ನು ಮತ್ತಷ್ಟು ಉತ್ತಮಗೊಳಿಸುವುದು, ತುರ್ತು ಸಂದರ್ಭಗಳಲ್ಲಿ ನಿಭಾಯಿಸುವುದು ಸೇರಿದಂತೆ ಹಲವು ಅಂಶಗಳ ಬಗ್ಗೆತಿಳಿಸಿಕೊಡಲಾಗುವುದು. ಈಗಾಗಲೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೆಲವು ಬಾರಿ ಅವುಗಳ ಪಾಲನೆ ಸಮರ್ಪಕವಾಗಿ ಆಗುವುದಿಲ್ಲ. ಉದಾಹರಣೆಗೆ ಪರ್ಫ್ಯೂಮ್‌ 100 ಎಂಎಲ್‌ನಷ್ಟು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವಾಸ್ತವವಾಗಿ ಇದಕ್ಕೂ ಅವಕಾಶ ನೀಡುವಂತಿಲ್ಲ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ವಿಮಾನ ನಿಲ್ದಾಣದಲ್ಲಿ ಸಿಬಿಆರ್‌ಎನ್‌ ತುರ್ತು ನಿರ್ವಹಣೆ ಕುರಿತು ಮೂಲ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು. ಆರು ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಿಐಎಎಲ್‌ ಉಪಾಧ್ಯಕ್ಷ (ಪ್ರಯಾಣಿಕರ ಅನುಭವ ಮತ್ತು ಕಾರ್ಯಾಚರಣೆ) ಗ್ಲೆನ್‌ ವಿಲ್ಸನ್‌, ಎಂಟರ್‌ಪ್ರೈಸ್‌ ರಿಸ್ಕ್ ಆಂಡ್‌ ಕಾರ್ಪೊರೇಟ್‌ ರೆಸಿಲಿಯನ್ಸ್‌ ಉಪ ವ್ಯವಸ್ಥಾಪಕ ಡಾ.ಕೆ.ಜೆ. ದೆವಾಸಿಯಾ ಮತ್ತಿತರರು ಉಪಸ್ಥಿತರಿದ್ದರು. 53 ಜನ ಶಿಬಿರದಲ್ಲಿ ಭಾಗವಹಿಸಿದ್ದು, ಇದರಲ್ಲಿ ಐವರು ತಜ್ಞರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು.

Advertisement

ತುರ್ತು ನಿರ್ವಹಣಾ ತರಬೇತಿ ಕಡ್ಡಾಯ
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕನ್ಸಲ್ಟಂಟ್‌ ಡಾ.ಕುನಾಲ್‌ ಶರ್ಮ ಮಾತನಾಡಿ, ರಾಸಾಯನಿಕ ಅಸ್ತ್ರ ಪ್ರಯೋಗ ಯಾವುದೇ ರೀತಿಯಲ್ಲಿ ಆಗಬಹುದು. ಅದನ್ನು ಎದುರಿಸಲು ತಂಡವನ್ನು ಸನ್ನದ್ಧಗೊಳಿಸುವುದು ಈ ಸಿಬಿಆರ್‌ಎನ್‌ (ಕೆಮಿಕಲ್‌, ಬಯಾಲಜಿಕಲ್‌, ರೇಡಿಯಾಲಜಿಕಲ್‌, ನ್ಯೂಕ್ಲಿಯರ್‌) ತುರ್ತು ನಿರ್ವಹಣೆ ಕುರಿತ ಮೂಲ ತರಬೇತಿ ಉದ್ದೇಶವಾಗಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇದನ್ನು ಕಡ್ಡಾಯವಾಗಿ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ. ಈಗಾಗಲೇ ಮುಂಬೈ, ದೆಹಲಿ ಸೇರಿ ಒಂಬತ್ತು ಕಡೆ ತರಬೇತಿ ಪೂರ್ಣಗೊಳಿಸಲಾಗಿದೆ. ಹತ್ತನೇ ಕಾರ್ಯಕ್ರಮ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next