ನವದೆಹಲಿ: ಇನ್ಫೋಸಿಸ್ ಕಂಪನಿಯ ಬಂಡವಾಳ ಹಂಚಿಕೆ ನೀತಿಯನ್ನು ಹೂಡಿಕೆದಾರರು ಪ್ರಶ್ನಿಸಬೇಕು ಎಂದು ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಟಿ. ವಿ. ಮೋಹನದಾಸ್ ಪೈ ಹೇಳಿದ್ದಾರೆ.
ಇನ್ಫೋಸಿಸ್ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಭಾನುವಾರ ಮಾತನಾಡಿರುವ ಅವರು, “”ಬಂಡವಾಳ ಹಂಚಿಕೆ ಎನ್ನುವುದು ಅತ್ಯಂತ ಪ್ರಮುಖ ಸಂಗತಿ. ಸಾಂಸ್ಥಿಕ ಹೂಡಿಕೆದಾರರು ಅದರ ಬಗ್ಗೆ ಪ್ರಶ್ನೆಯೆತ್ತಬೇಕು. ಅದು ಅವರ ಕರ್ತವ್ಯವೂ ಹೌದು. ಏಕೆಂದರೆ, ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರ ಹೂಡಿಕೆದಾರನಿಗೂ ಇರುತ್ತದೆ,” ಎಂದಿದ್ದಾರೆ.
ಬೆಂಗಳೂರು ಮೂಲದ ಇನ್ಫೋಸಿಸ್ ಕಂಪನಿಯಲ್ಲಿ ಸ್ಥಾಪಕರು ಶೇ.13ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಅವರು ಕೂಡ ಇತರರಂತೆಯೇ ಹೂಡಿಕೆದಾರರು. ಅವರು ಬಂಡವಾಳ ನೀತಿಯನ್ನು ಪ್ರಶ್ನಿಸಿದ್ದಾರೆ. ನಿರ್ದೇಶಕರ ಮಂಡಳಿಯನ್ನು ಪ್ರಶ್ನಿಸುವ ಎಲ್ಲ ಹಕ್ಕೂ ಅವರಿಗಿದೆ. ಅತಿ ಹೆಚ್ಚು ಷೇರುದಾರರು ಈಗಾಗಲೇ ಸ್ಪಷ್ಟನೆ ಕೇಳಿದ್ದಾರೆ. ಅವರು ಈ ಕುರಿತ ವಿಸ್ತೃತ ಸ್ಪಷ್ಟನೆಯನ್ನು ಕೇಳುವಂತಾಗಬೇಕು ಎಂದೂ ಪೈ ಹೇಳಿದ್ದಾರೆ.
2014ರಲ್ಲಿ ಸಿಇಒ ವಿಶಾಲ್ ಸಿಕ್ಕಾ ಪಡೆಯುತ್ತಿರುವಂತೆಯೇ ನಮಗೂ 1.8 ಶತಕೋಟಿ ಡಾಲರ್ ನೀಡಬೇಕು ಎಂದು ಮೋಹನ್ದಾಸ್ ಪೈ ಹಾಗೂ ಅವರ ಸಹೋದ್ಯೋಗಿ ವಿ ಬಾಲಕೃಷ್ಣನ್ ಬೇಡಿಕೆಯಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂದು ಸಿಕ್ಕಾ ಭಾಷಣ: ಇನ್ಫೋಸಿಸ್ ಮಂಡಳಿ ಹಾಗೂ ಸ್ಥಾಪಕರ ನಡುವೆ ಜಗಳ ತಾರಕಕ್ಕೇರಿರುವ ನಡುವೆಯೇ, ಸಿಇಒ ವಿಶಾಲ್ ಸಿಕ್ಕಾ ಸೋಮವಾರ ಕಂಪನಿಯ ಸಾಂಸ್ಥಿಕ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ, ಕಂಪನಿಯಲ್ಲಿನ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಅವರು ಪ್ರಸ್ತಾಪಿಸುವ ಸಾಧ್ಯತೆಯಿದೆ. ಇದಾದ ನಂತರ, ಮಾಧ್ಯಮಗಳಿಗೂ ಅವರು ಈ ಕುರಿತ ಸ್ಪಷ್ಟನೆ ನೀಡಲಿದ್ದಾರೆ. ಇನ್ನೊಂದೆಡೆ, ಕಂಪನಿಯಲ್ಲಿ ಇಂಥ ಬೆಳವಣಿಗೆಗಳು ಆರಂಭವಾಗುವುದಕ್ಕೆ ಮೊದಲೇ ಈ ಕಾರ್ಯಕ್ರಮ ನಿಗದಿಯಾಗಿತ್ತು ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ. ಇದೇ ವೇಳೆ, ಸಿಕ್ಕಾ ಅವರು ತಮ್ಮ ಭಾಷಣದಲ್ಲಿ ವಹಿವಾಟು ಮತ್ತು ಸಾಧನೆಯ ಗುರಿತು ಗಮನಹರಿಸುವುದು ಉತ್ತಮ. ಏಕೆಂದರೆ, ಎಲ್ಲದಕ್ಕಿಂತಲೂ ಕಂಪನಿಗೆ ಇದೇ ಮುಖ್ಯ ಎಂದು ಮಾಜಿ ಸಿಎಫ್ಒ ವಿ ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.