Advertisement

ಸಿಂಧು ಯಶಸ್ಸಿಗೆ ಕಾರಣ ದ. ಕೊರಿಯಾದ ವನಿತಾ ಕೋಚ್‌!

09:57 AM Aug 28, 2019 | Team Udayavani |

ಮಣಿಪಾಲ: ಪಿ.ವಿ. ಸಿಂಧು ಮತ್ತು ಭಾರತೀಯ ಕ್ರೀಡೆಗೆ ದೊಡ್ಡದೊಂದು ಬ್ರೇಕ್‌ ಸಿಕ್ಕಿದೆ. ಇದಕ್ಕೆ ಮೂಲವಾದದ್ದು ಬಸೆಲ್‌ನಲ್ಲಿ ಮುಗಿದ ವಿಶ್ವ ಚಾಂಪಿಯನ್‌ಶಿಪ್‌. ಇದರಲ್ಲಿ ಸಿಂಧು ಸ್ವರ್ಣ ಸಾಧನೆಗೈಯುವ ಮೂಲಕ ನೂತನ ಇತಿಹಾಸ ನಿರ್ಮಿಸಿದರು. ಇದಕ್ಕೆ ಮುಖ್ಯ ಕಾರಣರಾದವರು ಕಿಮ್‌ ಜಿ ಹ್ಯುನ್‌. ಇವರು ಸಿಂಧು ಮಾರ್ಗದರ್ಶನಕ್ಕೆ ಲಭಿಸಿದ ದಕ್ಷಿಣ ಕೊರಿಯಾದ ವನಿತಾ ಕೋಚ್‌!

Advertisement

ಸಿಂಧುಗೆ ಫೈನಲ್‌ ಹೊಸತಲ್ಲ. ಆದರೆ ಫೈನಲ್‌ ಗೆಲುವು ಮರೀಚಿಕೆಯಾಗುತ್ತಲೇ ಇತ್ತು. ಚಿನ್ನ ಗೆಲ್ಲುವಲ್ಲೆಲ್ಲ ಬೆಳ್ಳಿಗೆ ಕೊರಳೊಡ್ಡುತ್ತಿದ್ದರು. ಹೀಗಾಗಿ ಸಿಂಧು ಮೇಲೆ ಅನೇಕ ಮಂದಿಗೆ ನಂಬಿಕೆ ಹೊರಟು ಹೋಗಿತ್ತು. ಟೀಕೆಗಳಿಗೂ ಕೊರತೆ ಇರಲಿಲ್ಲ. ಆದರೀಗ ವಿಶ್ವ ಬ್ಯಾಡ್ಮಿಂಟನ್‌ ಫ‌ಲಿತಾಂಶದ ಬಳಿಕ ಇವರು “ಸ್ವರ್ಣ ಸಿಂಧು’ ಆಗಿದ್ದಾರೆ.

ವನಿತಾ ಕೋಚ್‌ ಮಾರ್ಗದರ್ಶನ
ಸಿಂಧು ಮೇಲೆ ನಿರೀಕ್ಷೆಯ ಭಾರ ಹೆಚ್ಚಿದ್ದು 2016ರ ರಿಯೋ ಒಲಿಂಪಿಕ್ಸ್‌ ಬಳಿಕ. ಅಲ್ಲಿ ಅವರು ಬೆಳ್ಳಿ ಪದಕ ಜಯಿಸಿ ಹೊಸ ಭರವಸೆ ಮೂಡಿಸಿದ್ದರು. ಒಂದೆಡೆ ಸೈನಾ ನೆಹ್ವಾಲ್‌ ಹಿನ್ನಡೆ ಕಾಣುತ್ತಿರುವಾಗ ಸಿಂಧು ಒಂದೊಂದೇ ಎತ್ತರ ತಲುಪುತ್ತ ಹೋಗುತ್ತಿದ್ದರು. ಆದರೆ “ಪಫೆìಕ್ಟ್ ಫಿನಿಶರ್‌’ ಆಗಲು ಎಡವುತ್ತಿದ್ದರು. ಇದಕ್ಕೆ ಪರಿ ಹಾರ ಕಂಡುಹಿಡಿದವರೇ ಕಿಮ್‌ ಜಿ ಹ್ಯುನ್‌.

ಜಿ ಹ್ಯುನ್‌ ಭಾರತೀಯಳ ಆಟವನ್ನು ಸೂಕ್ಷ್ಮ ವಾಗಿ ಅವಲೋಕಿಸುತ್ತ ಹೋದರು. ಸಿಂಧು “ಟಾಪ್‌ ಲೆವೆಲ್‌’ ಮುಟ್ಟಿದ್ದಾರೇನೋ ನಿಜ. ಆದರೆ ಈ ಮಟ್ಟಕ್ಕೆ ತಕ್ಕ ಆಟ ಅವರಲ್ಲಿಲ್ಲ ಎಂಬುದನ್ನು ಮನಗಂಡರು. ಚಾತುರ್ಯ, ಬುದ್ಧಿ ವಂತಿಕೆ, ಮನೋಬಲದ ಕೊರತೆ ಜತೆಗೆ ಅವರ ಹಿಟ್ಟಿಂಗ್‌ನಲ್ಲಿ ಏನೋ ದೋಷ ಇರುವುದನ್ನು ಮನಗಂಡರು. ಇಷ್ಟು ಎತ್ತರದ ಆಟಗಾರ್ತಿ ಜಪಾನ್‌, ಚೀನ, ಇಂಡೋನೇಷ್ಯಾದ ಚಿಕ್ಕ ಗಾತ್ರದ ಆಟಗಾರರೆದುರು ಸೋಲಲು ಸಾಧ್ಯವೇ ಇಲ್ಲ ಎಂಬುದು ಜಿ ಹ್ಯುನ್‌ ಅವರ ದೃಢ ನಂಬಿಕೆ ಆಗಿತ್ತು.

ಸಿಂಧು ಇದಕ್ಕೆಲ್ಲ ಸಕಾರಾತ್ಮಕವಾಗಿ ಸ್ಪಂದಿಸುತ್ತ ಹೋದರು. ಇದರ ಫ‌ಲಿತಾಂಶವೇ ವಿಶ್ವ ಚಾಂಪಿಯನ್‌ ಚಿನ್ನ!

Advertisement

ಸಿಂಧು ವಿಶ್ವ ಕಿರೀಟ ಏರಿಸಿಕೊಂಡ ಕೂಡಲೇ ಸ್ಮರಿಸಿಕೊಂಡದ್ದು ಕೋಚ್‌ಗಳಾದ ಜಿ ಹ್ಯುನ್‌, ಗೋಪಿಚಂದ್‌, ಟ್ರೇನರ್‌ ಶ್ರೀಕಾಂತ್‌ ವರ್ಮ, ಪ್ರಾಯೋಜಕರು ಮತ್ತು ಕುಟುಂಬದವರನ್ನು.

ಚಿನ್ನಗಳಲ್ಲೇ ಶ್ರೇಷ್ಠ…
ಸಿಂಧು ಈವರೆಗೆ ಜಯಿಸಿದ್ದು ಐದೇ ಚಿನ್ನ. ಇದರಲ್ಲೊಂದು ತಂಡ ಸ್ಪರ್ಧೆಯಲ್ಲಿ ಬಂದಿತ್ತು. ಉಳಿದಂತೆ 2011ರ ಕಾಮನ್‌ವೆಲ್ತ್‌ ಯುತ್‌ ಗೇಮ್ಸ್‌, 2012ರ ಏಶ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌, 2016ರ ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಒಲಿದಿತ್ತು. ಆದರೆ ಬಸೆಲ್‌ ಪದಕ ಮಾತ್ರ ಚಿನ್ನಗಳಲ್ಲೇ ಶ್ರೇಷ್ಠವಾದದ್ದು. ಇದು ಉಳಿದ ಚಿನ್ನಗಳಿಗೆ ದಿಕ್ಸೂಚಿಯಾಗಬೇಕಿದೆ. ಸಿಂಧು ಚಿನ್ನದ ಓಟ ಇಲ್ಲಿಂದ ಮುಂದುವರಿಯಬೇಕಿದೆ. 6 ಬೆಳ್ಳಿ, 9 ಕಂಚು ಸಿಂಧು ಗೆದ್ದ ಇತರ ಪದಕಗಳಾಗಿವೆ.

ನನಗೆ ನಾನೇ ಕೇಳಿಕೊಂಡಿದ್ದೆ…
“ನಾನು 2 ವರ್ಷದ ಹಿಂದೆ ಫೈನಲ್‌ನಲ್ಲಿ ಸೋತಾಗ ಬೇಸರವಾಗಿತ್ತು. ಕಳೆದ ವರ್ಷವೂ ಸೋತಾಗ ನೋವಿನ ಜತೆಗೆ ಸಿಟ್ಟು ಕೂಡ ಬಂದಿತ್ತು. ಆಗ ನನಗೆ ನಾನೇ, ನಿನಗೆ ಇನ್ನೊಂದು ಪಂದ್ಯವನ್ನು ಏಕೆ ಗೆಲ್ಲಲಾಗದು… ಎಂದು ಪ್ರಶ್ನಿಸಿಕೊಂಡಿದ್ದೆ. ಈ ದಿನ ನನ್ನ ಆಟವನ್ನು ಆಡಬೇಕೆಂದು ನಿರ್ಧರಿಸಿದ್ದೆ. ಅದು ಫ‌ಲ ನೀಡಿತು’ ಎಂದು ಸಿಂಧು ವಿಶ್ವ ಚಾಂಪಿಯನ್‌ ಆದ ಬಳಿಕ ನೀಡಿದ ಪ್ರತಿಕ್ರಿಯೆ.

ಮುಂದಿದೆ ಟೋಕಿಯೊ ಒಲಿಂಪಿಕ್ಸ್‌
ಸಿಂಧು ಗೆದ್ದ ವಿಶ್ವ ಚಾಂಪಿಯನ್‌ ಚಿನ್ನ ಕೇವಲ ಬ್ಯಾಡ್ಮಿಂಟನ್‌ಗಷ್ಟೇ ಸೀಮಿತವಾದ ಸಾಧನೆಯಲ್ಲ. ಇದು ಭಾರತದ ಕ್ರೀಡಾಪರ್ವದ ನೂತನ ಶಕೆ. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಈ ಸಾಧನೆ ಸ್ಫೂರ್ತಿ ಆಗಬೇಕಿದೆ.

ನಾನು 2 ವರ್ಷದ ಹಿಂದೆ ಫೈನಲ್‌ನಲ್ಲಿ ಸೋತಾಗ ಬೇಸರವಾಗಿತ್ತು. ಕಳೆದ ವರ್ಷವೂ ಸೋತಾಗ ನೋವಿನ ಜತೆಗೆ ಸಿಟ್ಟು ಕೂಡ ಬಂದಿತ್ತು. ಈ ಬಾರಿ ನನ್ನ ಆಟವನ್ನು ಆಡಬೇಕೆಂದು ನಿರ್ಧರಿಸಿದ್ದೆ. ಅದು ಫ‌ಲ ನೀಡಿತು.
– ಪಿ.ವಿ.ಸಿಂಧು

Advertisement

Udayavani is now on Telegram. Click here to join our channel and stay updated with the latest news.

Next