Advertisement

ಪಜಲ್‌ ಪಾರ್ಕಿಂಗ್‌ಗೆ ಕೂಡಿ ಬಾರದ ಮುಹೂರ್ತ 

08:36 PM Sep 09, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ 

Advertisement

ಹುಬ್ಬಳ್ಳಿ: ಮಹಾನಗರದ ಮಹತ್ವ ಪೂರ್ಣ ಹಾಗೂ ಉತ್ತರ ಕರ್ನಾಟಕದಲ್ಲೇ ಮೊದಲ ಯೋಜನೆಯಾಗಿರುವ ಪಜಲ್‌ ಪಾರ್ಕಿಂಗ್‌ ಪೂರ್ಣಗೊಂಡು ಎಂಟು ತಿಂಗಳು ಕಳೆದರೂ ಜನ ಬಳಕೆಗೆ ದೊರಕುತ್ತಿಲ್ಲ.

ಮಹಾತ್ಮಗಾಂಧಿ ಉದ್ಯಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಪೂರ್ಣಗೊಂಡ ನಂತರ ಒಟ್ಟಿಗೆ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಲು ಅಧಿಕಾರಿಗಳು ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್‌ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ರೂಪವಾಗಿ ಸಣ್ಣ ಜಾಗದಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ 4.59 ಕೋಟಿ ಖರ್ಚು ಮಾಡಿ ಸ್ಮಾರ್ಟ್‌ಸಿಟಿ ಕಂಪನಿ ಪಜಲ್‌ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಸರಕಾರಿ ಹಾಗೂ ಉತ್ತರ ಕರ್ನಾಟಕದಲ್ಲಿ ಮೊದಲ ಯೋಜನೆಯಾಗಿದೆ. ಈ ಯೋಜನೆ ಸಾಧಕ ಬಾಧಕ ಅಧ್ಯಯನ ಮಾಡಿ ನಗರದ ಇತರೆಡೆ ಈ ವ್ಯವಸ್ಥೆ ಕಲ್ಪಿಸುವುದು ಜನಪ್ರತಿನಿಧಿಗಳ ಆಶಯವಾಗಿತ್ತು. ಆದರೆ ಮೊದಲ ಯೋಜನೆ ಪೂರ್ಣಗೊಂಡು ಎಂಟು ತಿಂಗಳು ಕಳೆದರೂ ಜನ ಬಳಕೆಗೆ ನೀಡಬೇಕೆನ್ನುವ ಕನಿಷ್ಠ ಕಾಳಜಿ ಇಲ್ಲದಂತಾಗಿದ್ದು, ಈ ನಿಷ್ಕಾಳಜಿ ಇಲ್ಲಿನ ಜನಪ್ರತಿನಿಧಿಗಳ, ಅಧಿಕಾರಿಗಳಲ್ಲಿರುವ ಅಭಿವೃದ್ಧಿ ಪರ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೋರ್ಟ್‌ ವೃತ್ತದಲ್ಲಿ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ ಕಾರ್ಯ ಇನ್ನೂ ಗುಂಡಿಯಿಂದ ಮೇಲೆದ್ದಿಲ್ಲ. ಇದರ ನಂತರ ಆರಂಭಿಸಿ ಪೂರ್ಣಗೊಳಿಸಿದ ಯೋಜನೆ ಇದಾಗಿದೆ. ಏಕಕಾಲಕ್ಕೆ ಇಲ್ಲಿ37ಕಾರುಗಳನ್ನು ಪಾರ್ಕ್‌ ಮಾಡಬಹುದಾಗಿದ್ದು, ಐದು ಅಂತಸ್ತು ಹೊಂದಿದೆ.2021 ಫೆಬ್ರವರಿ ತಿಂಗಳಲ್ಲಿ ಪಜಲ್‌ ಪಾರ್ಕಿಂಗ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಕುರಿತು ಗುತ್ತಿಗೆದಾರರು, ಅಧಿಕಾರಿಗಳು ಪ್ರದರ್ಶನ ನೀಡಿದ್ದರು. ಅಲ್ಲಿಗೆ ಕಾಮಗಾರಿ ಪೂರ್ಣಗೊಂಡು ಚಾಲನೆ ನೀಡುವುದೊಂದು ಬಾಕಿ ಉಳಿದಿತ್ತು. ಒಂದು ತಿಂಗಳಲ್ಲಿ ಇದಕ್ಕೆ ಚಾಲನೆ ನೀಡುವುದಾಗಿ ಜನಪ್ರನಿಧಿಗಳು ಭರವಸೆ ನೀಡಿದ್ದರು. ಆದರೆ ಎಂಟು ತಿಂಗಳು ಕಳೆದರೂ ಇದು ಸದ್ಯಕ್ಕೆ ಚಾಲನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಹಸ್ತಾಂತರಕ್ಕೆ ಪತ್ರ:ಪಜಲ್‌ ಪಾರ್ಕಿಂಗ್‌ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಸ್ಮಾರ್ಟ್‌ಸಿಟಿಯಿಂದ ಪತ್ರ ಬರೆಯಲಾಗಿದೆ ಎನ್ನಲಾಗಿದೆ. ಪತ್ರ ಬರೆದು ಈಗಾಗಲೇ ಏಳೆಂಟು ತಿಂಗಳು ಗತಿಸಿದ್ದು, ಪಾಲಿಕೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಅಲ್ಲಿ ನಡೆಯುತ್ತಿರುವ ಉಳಿದ ಕಾಮಗಾರಿಗಳು ಪೂರ್ಣಗೊಂಡ ನಂತರ ಒಟ್ಟಿಗೆ ಚಾಲನೆ ನೀಡಲಾಗುವುದು ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಗುತ್ತಿಗೆದಾರರೇ 5 ವರ್ಷಗಳ ಕಾಲ ಇದರ ನಿರ್ವಹಣೆ ಮಾಡಲಿದೆ. ಆದರೆ ಜನ ಬಳಕೆಗೆ ಇನ್ನೂ ದೊರೆಯದ ಕಾರಣ ಕಂಪನಿಯೇ ಉಚಿತವಾಗಿ ಇದರ ನಿರ್ವಹಣೆ ಮಾಡುತ್ತಿದೆ. ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಕಂಪನಿ ಗುದ್ದಾಟದಲ್ಲಿ ಈ ವ್ಯವಸ್ಥೆಯಿಂದ ಪಾಲಿಕೆಗೆ ಬರಬೇಕಾದ ಆದಾಯ, ಜನರಿಗೆ ಸಿಗಬೇಕಾದ ಸೌಲಭ್ಯ ಕೈ ತಪ್ಪುತ್ತಿದೆ.

Advertisement

ಉಳಿದವು ಪೂರ್ಣಗೊಳ್ಳಬೇಕಂತೆ: ಪಜಲ್‌ ಪಾರ್ಕಿಂಗ್‌ ಚಾಲನೆಗೆ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು ಅಡ್ಡಿಯಾದಂತೆ ಕಾಣುತ್ತಿವೆ. ಈ ಕಾಮಗಾರಿಗಳು ಪೂರ್ಣಗೊಳ್ಳದ ಹೊರತು ಪಾಲಿಕೆ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಮನಸ್ಥಿತಿ ಹೊಂದಿದೆ. ಈ ಪಜಲ್‌ ಪಾರ್ಕಿಂಗ್‌ ಸುತ್ತಲೂ ಅಂತಹ ಕಾಮಗಾರಿಗಳೇನೂ ನಡೆಯುತ್ತಿಲ್ಲ. ಮಿನಿ ರೈಲು ಸೇರಿದಂತೆ ಕೆಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್‌ಸಿಟಿ ಹಾಗೂ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಉದ್ಯಾನವನದ ಒಂದುಮೂಲೆಯಲ್ಲಿಇದನ್ನುನಿರ್ಮಿಸಿರುವುದರಿಂದ ಉಳಿದ ಕಾಮಗಾರಿಗಳು ಇದಕ್ಕೂ ಏನು ಸಂಬಂಧ ಎನ್ನುವಂತಾಗಿದೆ. ಈಗಾಗಲೇ ಚಾಲನೆ ನೀಡಿದ್ದರೆ ಜನರ ಬಳಿಕೆಗಾದರೂ ದೊರೆಯುತ್ತಿತ್ತು. ಯೋಜನೆ ಅನುಷ್ಠಾನಗೊಳಿಸಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಆದರೆ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುವುದರೊಳಗೆ ಇದು ಮೂಲೆ ಸೇರಬಾರದೆನ್ನುವುದು ಸಾರ್ವಜನಿಕರ ಕಾಳಜಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next