Advertisement

ಅನಧಿಕೃತ ಅಂಗಡಿಗಳ ತೆರವು ಯಾರು ಮಾಡಬೇಕು?

06:35 AM Feb 01, 2019 | Team Udayavani |

ಪುತ್ತೂರು: ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಜ್ಯೂಸ್‌ ಅಂಗಡಿಗಳು ಹಾಗೂ ಇತರ ವ್ಯಾಪಾರದ ಅಂಗಡಿಗಳನ್ನು ತೆರವುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ವಿಚಾರವು ಪುತ್ತೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷತೆಯಲ್ಲಿ ಗುರುವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

Advertisement

ಪಾಲನಾ ವರದಿಯ ಚರ್ಚೆ ವೇಳೆ ರಸ್ತೆ ಬದಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಅಂಗಡಿಗಳನ್ನು ತೆರವುಗೊಳಿಸುವ ಅಧಿಕಾರ ಸ್ಥಳೀಯಾಡಳಿತಗಳಿಗೆ ಬರುತ್ತದೆ. ಈ ಕುರಿತು ನಗರಸಭಾ ಪೌರಾಯುಕ್ತರು, ತಾ.ಪಂ. ಇಒ, ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಮುಖೇನ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾ.ಪಂ. ಸದಸ್ಯ ಶಿವರಂಜನ್‌, ಈ ಜವಾಬ್ದಾರಿ ಸ್ಥಳೀಯಾಡಳಿತದ್ದಾದರೆ ಭಕ್ತಕೋಡಿಯಲ್ಲಿ ನಿರ್ಮಿಸಿದ ಮಾರ್ಗಸೂಚಿಯನ್ನು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಏಕೆ ಅಷ್ಟು ಆಸಕ್ತಿಯಿಂದ ತೆರವುಗೊಳಿಸಿದ್ದೀರಿ? ಈ ಜವಾಬ್ದಾರಿ ಯಾರದ್ದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ತಾ.ಪಂ. ಇಒ ಜಗದೀಶ್‌ ಮಾತನಾಡಿ, ಪ್ರಸ್ತುತ ರಸ್ತೆ ಬದಿ ಯಾವುದೇ ತಾತ್ಕಾಲಿಕ ಅಂಗಡಿಗಳಿಗೆ ಲೈಸನ್ಸ್‌ ನೀಡುವುದನ್ನು ನಿಲ್ಲಿಸಲಾಗಿದೆ. ಈ ಕುರಿತು ಇಲಾಖೆಯಿಂದ ಕಠಿನ ನಿಯಮ ಮಾಡಲಾಗಿದೆ. ಆದ್ದರಿಂದ ಇವೆಲ್ಲವೂ ಅನಧಿಕೃತವಾಗುತ್ತದೆ ಎಂದರು.

ಸುಳ್ಳೆಂದು ಒಪ್ಪಿಕೊಳ್ಳಲಿ
ಪಿಡಬ್ಲ್ಯೂಡಿ ಎಂಜಿನಿಯರ್‌ ತಾವು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಳ್ಳಲಿ ಎಂದು ಸದಸ್ಯ ಶಿವರಂಜನ್‌ ಪಟ್ಟು ಹಿಡಿದರು. ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಧ್ವನಿಗೂಡಿಸಿದರು.

Advertisement

ಸದಸ್ಯರಾದ ಉಷಾ ಅಂಚನ್‌ ಹಾಗೂ ಆಶಾ ಲಕ್ಷ್ಮಣ್‌ ಮಾತನಾಡಿ, ಕೆಲವು ಕಡೆಗಳಲ್ಲಿ ಹಲವು ವರ್ಷಗಳಿಂದ ರಸ್ತೆ ಬದಿ ವ್ಯಾಪಾರ ಮಾಡುವವರನ್ನು ಏಕಾಏಕಿ ಎಬ್ಬಿಸಿ ಹೊಟ್ಟೆಗೆ ಹೊಡೆಯುವುದು ಬೇಡ ಎಂದು ಸಲಹೆ ನೀಡಿದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂತಿಬೆಟ್ಟುವಿಗೆ ಅಂಗನವಾಡಿ ಕೊಡಿ
ಸದಸ್ಯೆ ಕುಸುಮಾ ಮಾತನಾಡಿ, ಅಂತಿಬೆಟ್ಟುಗೆ ಮಂಜೂರಾದ ಅಂಗನವಾಡಿಯನ್ನು ಎನ್‌ಕೂಪ್‌ನಲ್ಲಿ ಮಾಡಲಾಗಿದೆ. ಅಂತಿಬೆಟ್ಟುವಿನಿಂದ 3 ಕಿ.ಮೀ. ದೂರದ ಎನ್‌ಕೂಪ್‌ಗೆ ಹೋಗಲು ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಸಮಸ್ಯೆಯಾಗುತ್ತಿದೆ. 50 ಸಾವಿರ ರೂ. ಮಂಜೂರಾದರೂ ಕಟ್ಟಡ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಜನಪ್ರ ತಿ ನಿಧಿಗಳು ಅಂಗನವಾಡಿಗೆ ಭೇಟಿ ನೀಡಿದ ವೇಳೆ ದೂರುಗಳೂ ಬಂದಿವೆ. ಅಂತಿಬೆಟ್ಟುವಿನಲ್ಲಿ ಅಂಗನವಾಡಿ ಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಿಬೆಟ್ಟು ಹಾಗೂ ಎಲ್‌ಕೂಪ್‌ಗ್ಳಲ್ಲಿ ಸರಕಾರಿ ಜಾಗ ಗುರುತಿಸಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದರು. ತಾ.ಪಂ. ಇ.ಒ. ಮಾತನಾಡಿ, ಹೊಸ ಅಂಗನವಾಡಿ ಮಂಜೂರಾಗುತ್ತಿಲ್ಲ. ಬೇರೆ ಕಡೆ ಮುಚ್ಚುವ ಅಂಗನವಾಡಿ ಇದ್ದಲ್ಲಿ ಅದನ್ನು ಅಂತಿಬೆಟ್ಟುವಿಗೆ ನೀಡಲು ಉಪನಿರ್ದೇಶಕರಲ್ಲಿ ಮಾತನಾಡಲಾಗಿದೆ ಎಂದರು.

ಕಡಬ ತಾ| ಘೋಷಣೆಯಾಗಿ ಪುತ್ತೂರಿನಿಂದ ಅಲ್ಲಿಗೆ ಸೇರ್ಪಡೆಗೊಂಡಿರುವ 9 ಗ್ರಾಮಗಳ ಆರ್‌ಟಿಸಿ ಬಿಟ್ಟರೆ ಉಳಿದ ಕಡತಗಳು ಸಿಗುತ್ತಿಲ್ಲ ಎಂದು ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಅಹವಾಲು ತೋಡಿಕೊಂಡರು. ನೆಲ್ಯಾಡಿ ಸೈಂಟ್ ಜಾರ್ಜ್‌ ಕಾಲೇಜು ಬಳಿ ವೇಗದೂತ ಬಸ್ಸು ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಉಷಾ ಅಂಚನ್‌ ಆಗ್ರಹಿಸಿದರು.

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ಉಪಸ್ಥಿತರಿದ್ದರು. ತಾ.ಪಂ. ಇಒ ಜಗದೀಶ್‌ ಎಸ್‌. ಸ್ವಾಗತಿಸಿ, ವಂದಿಸಿದರು.

ಹಕ್ಕುಪತ್ರ ಕಳೆದ ಇಲಾಖೆ
14 ವರ್ಷದ ಹಿಂದೆ ಇಚಿಲಂಪಾಡಿ ವ್ಯಾಪ್ತಿಯ ಪಿ.ಜಿ. ಅಬ್ರಹಾಂ ಅವರು ಸಲ್ಲಿಸಿದ ಅಕ್ರಮ -ಸಕ್ರಮ ಅರ್ಜಿ ಮಂಜೂರಾದರೂ ಹಕ್ಕುಪತ್ರವನ್ನು ಕಂದಾಯ ಇಲಾಖೆ ಕಳೆದುಕೊಂಡಿದೆ. ಈ ಕುರಿತು ನ್ಯಾಯ ಒದಗಿಸುವಂತೆ ಸದನದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ದೇನೆ. ಆದರೆ ನ್ಯಾಯ ಸಿಕ್ಕಿಲ್ಲ ಎಂದು ಸದಸ್ಯೆ ಕೆ.ಟಿ. ವಲ್ಸಮ್ಮ ಅಹವಾಲು ತೋಡಿಕೊಂಡರು. ಸದಸ್ಯೆ ಉಷಾ ಅಂಚನ್‌ ಹಾಗೂ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಧ್ವನಿಗೂಡಿಸಿ, ಫೈಲ್‌ ಏನಾಗಿದೆ ಎಂಬ ಕುರಿತು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಸುದೀರ್ಘ‌ ಚರ್ಚೆ ನಡೆಯಿತು. ಉಪ ತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಮಾತನಾಡಿ, ಸಹಾಯಕ ಆಯುಕ್ತರಿಂದ ಹಕ್ಕುಪತ್ರ ಮರು ತಯಾರಿಗೆ ಆದೇಶ ಆಗಿದೆ. ಸಂಜೆಯೊಳಗೆ ಮಾಹಿತಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ವೈರುಧ್ಯ ಯಾಕೆ ?
ಎಂಜಿನಿಯರ್‌ ಮಾತನಾಡಿ, ಲೋಕೋಪಯೋಗಿ ರಸ್ತೆ ಬದಿ ಯಾವುದೇ ಅಂಗಡಿಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಎನ್‌ಒಸಿ ಬೇಕು. ಆದರೆ ಹೆಚ್ಚಿನವರು ಗ್ರಾ.ಪಂ.ನಿಂದ ಅನುಮತಿ ಪಡೆಯುತ್ತಿದ್ದಾರೆ. ನಾವು ಯಾವುದೇ ಅಂಗಡಿಗಳಿಗೆ ಅನುಮತಿ ನೀಡಿಲ್ಲ ಎಂದು ಹೇಳಿದರು. ಮತ್ತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶಿವರಂಜನ್‌, ಪಾಲನಾ ವರದಿಯಲ್ಲಿ ನಮಗೆ ಅಧಿಕಾರ ಇಲ್ಲ ಎನ್ನುವ ಅಧಿಕಾರಿ ವೈರುಧ್ಯದ ಹೇಳಿಕೆಗಳನ್ನು ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next