Advertisement

ಕನ್ನಡ ಉಳಿಸಲು ತಂತ್ರಜ್ಞಾನದ ನೆರವು ಅಗತ್ಯ: ಡಾ|ವಿಲ್ಸನ್‌

11:15 AM Sep 20, 2018 | Team Udayavani |

ಪುತ್ತೂರು: ಗ್ರಾಮೀಣ ಭಾರತಕ್ಕೆ ತಂತ್ರಜ್ಞಾನ ತಲುಪುವ ಅನಿವಾರ್ಯತೆ ಎದುರಾಗಿದೆ. ಗ್ರಾಮೀಣ ಭಾಗದ ಜನರಿಗೆ ಸುಲಭವಾಗುವಂತೆ ತಂತ್ರಜ್ಞಾನವನ್ನು ತಲುಪಿಸಲು ಯಶಸ್ವಿಯಾದರೆ, ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಜೀವ ತುಂಬಬಹುದು ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು.

Advertisement

18ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ತಂತ್ರಜ್ಞಾನಕ್ಕೆ ಭಾಷೆಯೇ ಸಂಸ್ಕೃತಿಯಾಗಿದೆ. ಗ್ರಾಮೀಣ ಭಾರತವನ್ನು ತಲುಪಲು ಈ ತಂತ್ರಜ್ಞಾನದ ಅನುಷ್ಠಾನ ಕಂಪೆನಿಗಳಿಗೆ ಅನಿವಾರ್ಯ. ಹೆಚ್ಚಿನ ಕಂಪೆನಿಗಳು ಮೊಬೈಲ್‌, ಸ್ಮಾರ್ಟ್‌ಫೋನ್‌ಗಳಲ್ಲಿ ಅಥವಾ ಸಾಮಾಜಿಕ ತಾಣಗಳಾದ ಫೇಸ್‌ಬುಕ್‌ – ಟ್ವಿಟರ್‌ಗಳಲ್ಲಿ ಕನ್ನಡ ಹಾಗೂ ಇತರ ಪ್ರಾಂತೀಯ ಭಾಷೆಗಳ ಕೀಬೋರ್ಡ್‌, ಸಾಫ್ಟ್‌ವೇರ್‌ ಅಳವಡಿಸಿಕೊಂಡಿವೆ. ಪ್ರಸ್ತುತ, ಇಂಟರ್‌ನೆಟ್‌ನ ಬಳಕೆ ಇಂಗ್ಲಿಷ್‌ ಓದಿಕೊಂಡ ಯುವಜನರ ಮಧ್ಯೆ ಹೆಚ್ಚು ಪ್ರಚಲಿತದಲ್ಲಿದ್ದರೆ, ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಅದು ಇನ್ನೂ ಕಗ್ಗಂಟಾಗಲಿದೆ. ಆದ್ದರಿಂದ ತಂತ್ರಜ್ಞಾನದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಫ್ಟ್ ವೇರ್  ಬೆಂಬಲ ಬೇಕು
ಕನ್ನಡವನ್ನು ಓದುವ ಮತ್ತು ಬಳಸುವ ಹಂತದಲ್ಲಾಗಿರುವ ಬದಲಾವಣೆ, ಬರೆಯುವ ಹಂತಕ್ಕೂ ತಲುಪಬೇಕಾಗಿದೆ. ಕನ್ನಡ ಗಣಕ ಪರಿಷತ್‌ ಅಭಿವೃದ್ಧಿಪಡಿಸಿದ ಉಚಿತ ಸಾಫ್ಟ್‌ವೇರ್‌ ನುಡಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಕನ್ನಡ ಗ್ರಂಥಗಳ ಪ್ರಕಾಶನ ವಿಭಾಗವು ಯೂನಿಕೋಡ್‌ ಶಿಷ್ಟಾಚಾರಕ್ಕೆ ಬದಲಾಗುವ ಆವಶ್ಯಕತೆಯಿದೆ. ಯೂನಿಕೋಡ್‌ಗೆ ಡಿಸೈನಿಂಗ್‌ ಸಾಫ್ಟ್‌ವೇರ್‌ಗಳ ಬೆಂಬಲದ ಅಗತ್ಯವಿದೆ. ಇವೆಲ್ಲವೂ ಕಾರ್ಯ ಸಾಧ್ಯವಾದರೆ ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದರು.

ಭಾವನಾತ್ಮಕ ಪರಿವರ್ತನೆಯಿಂದ ಮಾತ್ರ ಕನ್ನಡ ಉಳಿಸಲು ಸಾಧ್ಯ. ಉನ್ನತ ಶಿಕ್ಷಣದಲ್ಲಿ ಸರಕಾರ ಮತ್ತು ಸಮಾಜದ ಮುಖ್ಯ ಗಮನ ವೈದ್ಯಕೀಯ, ಎಂಜಿನಿಯರಿಗ್‌, ಕಂಪ್ಯೂಟರ್‌ ಶಿಕ್ಷಣ ಇತ್ಯಾದಿಗಳ ಮೇಲೆ ಮಾತ್ರ ಕೇಂದ್ರೀಕೃತಗೊಂಡಿದೆ. ಕನ್ನಡ ಮಾಧ್ಯಮದಲ್ಲಿ ಉನ್ನತ ಸ್ತರಗಳಲ್ಲಿ ಕಲಿಸುವ ಅವಕಾಶವನ್ನು ಕಲ್ಪಿಸುವ ಅಗತ್ಯ ಇದೆ ಎಂದರು.

ಶಾಲೆಗೆ ಬೀಗ: ಚಿಂತಿಸಬೇಕಿದೆ
ಗುಣಮಟ್ಟ ಸುಧಾರಣೆ ಹೆಸರಿನಲ್ಲಿ ವಿದ್ಯಾರ್ಥಿ ಸಂಖ್ಯೆ ಕಡಿಮೆ ಇರುವ ರಾಜ್ಯದ 28,847 ಸರಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿಗೆ ಶಾಶ್ವತ ಬೀಗ ಹಾಕುವ ಪ್ರಸ್ತಾವವನ್ನು ರಾಜ್ಯ ಬಜೆಟ್‌ ನಲ್ಲಿ ಇಟ್ಟಿರುವುದು ವಿಷಾದನೀಯ. ಪ್ರತಿಯೊಂದನ್ನು ವಾಣಿಜ್ಯಾತ್ಮಕ ದೃಷ್ಟಿಕೋನದಿಂದ ನೋಡುವ ಸರಕಾರ, ಸಮಾಜದ ಚಿಂತನೆ ಬದಲಾಗಬೇಕಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 43 ಸರಕಾರಿ ಶಾಲೆಗಳಲ್ಲಿ ದಾಖಲಾತಿ ಶೂನ್ಯವಾಗಿದೆ. ಇದರಲ್ಲಿ ಪುತ್ತೂರು ತಾಲೂಕಿನ 4 ಶಾಲೆಗಳಿವೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಮೂಲಕ್ಕಿಳಿದು ಚಿಂತಿಸುವ ಅಗತ್ಯವಿದೆ ಎಂದರು.

Advertisement

ಗ್ರಂಥಾಲಯ
ಗ್ರಾ.ಪಂ., ನಗರಸಭೆ ವ್ಯಾಪ್ತಿಯಲ್ಲಿ ಸೆಸ್‌ ಸಂಗ್ರಹಿಸುತ್ತವೆ. ಇದರಲ್ಲಿ ಗ್ರಂಥಾಲಯಕ್ಕೆ ಹೋಗುತ್ತಿವೆಯೇ ಎಂದು ನೋಡಿದರೆ ಇಲ್ಲ. ಪ್ರತಿ ಗ್ರಾ.ಪಂ., ನಗರಸಭೆ ವ್ಯಾಪ್ತಿಯಲ್ಲಿ ಗ್ರಂಥಾಲಯಗಳೇ ಇಲ್ಲ. ಇರುವ ಕಡೆಗಳಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಓದುವ ಪ್ರವೃತ್ತಿ ಹೆಚ್ಚಿಸುವ ಕಡೆ ಇಚ್ಛಾಶಕ್ತಿ ತೋರಿಸಬೇಕು ಎಂದರು.

ಜಿಲ್ಲಾ ಕೇಂದ್ರ
ಉಪವಿಭಾಗದ ಕೇಂದ್ರಸ್ಥಾನ ಆಗಿರುವ ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು. ಈ ಆಶಯ ಈಡೇರಿದರೆ ಪುತ್ತೂರು ಕನ್ನಡದ ಶಕ್ತಿಕೇಂದ್ರ ಆಗಬಲ್ಲುದು. ಜಿಲ್ಲಾಕೇಂದ್ರ ಆಗಬೇಕು ಎಂಬ ಬೇಡಿಕೆ ಹಲವು ಸಮಯಗಳಿಂದ ಇದೆ. ಇದನ್ನು ಠರಾವಿನ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯುವ ಕೆಲಸವೂ ಆಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next