Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ: ವಿಷು ಕಣಿ ಉತ್ಸವ

01:03 AM Apr 16, 2019 | mahesh |

ಪುತ್ತೂರು: ಸೌರಯುಗಾದಿ ವಿಷುವಿನ ಅಂಗವಾಗಿ ರವಿವಾರ ಮಹ ತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಒಳಾಂಗಣ ದಲ್ಲಿ ವಿಷುಕಣಿ ಉತ್ಸವ ಬಲಿ ನಡೆಯಿತು. ಪ್ರಾತಃಕಾಲ ಶ್ರೀ ದೇವರ ಗರ್ಭಗುಡಿಯ ನಡೆ ತೆರೆದು ವಿಷುಕಣಿ ದರ್ಶನದ ಬಳಿಕ ಭಕ್ತರು ಶ್ರೀ ದೇವರನ್ನು ಭೇಟಿ ಮಾಡಿ ವಿಷು ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಅನಂತರ ದೇಗುಲದ ಒಳಾಂಗಣದಲ್ಲಿ ವಿಷು ಕಣಿ ಪ್ರಯುಕ್ತ ಶ್ರೀ ದೇವರ ಉತ್ಸವ ಬಲಿ ನಡೆಯಿತು.

Advertisement

ಸುತ್ತುಗಳ ಆಕರ್ಷಣೆ
ದೇವಾಲಯದಲ್ಲಿ ವಿಶೇಷವಾಗಿ ಮೊದ ಲಿಗೆ ತಂತ್ರ ಸುತ್ತು, ಅನಂತರ ಉಡಿಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ವಸಂತಕಟ್ಟೆ ಪೂಜೆ, ಸೇವೆಯ ವಾದ್ಯ ಸುತ್ತುಗಳು, ಶಂಖ, ಜಾಗಟೆ ಸುತ್ತು, ಬ್ಯಾಂಡ್‌ ವಾಲಗ ಸುತ್ತು ಮತ್ತು ಸರ್ವ ವಾದ್ಯ ಸುತ್ತು ನಡೆಯಿತು. ಬಳಿಕ ಶ್ರೀ ದೇವರು ಒಳಗಾಗಿ ಮಹಾಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವಿಶೇಷ ಅನ್ನಪ್ರಸಾದ
ಮಧ್ಯಾಹ್ನ ವಿಷು ಕಣಿಯ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲ ಯದಲ್ಲಿ ಸೌರ ಯುಗಾದಿ ವಿಷುಕಣಿಯು ಜಾತ್ರೆಯ ಸಂದರ್ಭದಲ್ಲಿಯೇ ಬರುವುದರಿಂದ ಪ್ರತಿ ವರ್ಷವೂ ಬೆಳಗ್ಗಿನ ಶ್ರೀ ದೇವರ ಉತ್ಸವ ಬಲಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಸಾವಿರಾರು ಮಂದಿ ವಿಷುವಿನ ವಿಶೇಷ ಅನ್ನಪ್ರಸಾದ ಸ್ವೀಕರಿಸಿದರು.

ಸಂಜೆ ಶ್ರೀ ದೇವಳದ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ದೇವರ ಚಂದ್ರಮಂಡಲ ಉತ್ಸವ ನಡೆದು ಅನಂತರ ಶ್ರೀ ದೇವರ ಪೇಟೆ ಸವಾರಿ ನಡೆಯಿತು.

ಹೂ ಸಮರ್ಪಣೆ
ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವು ಸಮರ್ಪಣೆ ಸೇವೆ ಮಾಡುತ್ತಾರೆ. ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲಾ°ಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್‌ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸುತ್ತಾರೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಮಲ್ಲಿಗೆ ಹೂವಿನ ವ್ಯಾಪಾರಸ್ಥರು ಪುತ್ತೂರಿಗೆ ಆಗಮಿಸುತ್ತಾರೆ. ಲಕ್ಷಾಂತರ ರೂ. ಮೌಲ್ಯದ ಮಲ್ಲಿಗೆ ಶ್ರೀ ದೈವಗಳಿಗೆ ಸಮರ್ಪಣೆಯಾಗುತ್ತದೆ. ಹರಕೆ ರೂಪದಲ್ಲಿ ಬಂದ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಕುಂಕುಮದೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ. ಎ. 17ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ಶ್ರೀ ದೈವಗಳ ಭಂಡಾರವನ್ನು ಬಂಗಾರ ಕಾಯರ್‌ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ. ಈ ವಿಶಿಷ್ಟ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಅನೂಚಾನವಾಗಿ ಪಾಲಿಸಲಾಗುತ್ತದೆ.

Advertisement

ದೀಪದ ಬಲಿ ವಿಶೇಷ
ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಬೆಳ್ಳಿ ಮೂಡುವ ಹೊತ್ತಿಗೆ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ. ಪ್ರತಿವರ್ಷ ಎ. 16ರಂದು ಸೂರ್ಯೋದಯಕ್ಕೆ ಮೊದಲು ಈ ಉತ್ಸವ ನಡೆಯುತ್ತದೆ. ದೀಪ ಬಲಿ ಉತ್ಸವ ನಡೆಯುವುದರಿಂದ ದೇವಾಲಯದಲ್ಲಿ ಜಾತ್ರಾ ಪ್ರಯುಕ್ತ ಬೆಳಗಿನ ಉತ್ಸವ ನಡೆಯುವುದಿಲ್ಲ. ವರ್ಷದಲ್ಲಿ ಒಂದು ದಿನ ಮಾತ್ರ ಅಂದರೆ ಜಾತ್ರೆಯ ಸಂದರ್ಭ ಎ. 16ರಂದು ಮಾತ್ರ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ.

ಒಮ್ಮೆ ಮಾತ್ರ ಬಟ್ಟಲು ಕಾಣಿಕೆ
ಬ್ರಹ್ಮರಥೋತ್ಸವದ ಎ. 17ರ ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಸೇವೆಯ ಬಳಿಕ ಭಕ್ತರಿಂದ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವರಿಗೆ ಬಟ್ಟಲು ಕಾಣಿಕೆ ಸಮರ್ಪಿಸುವ ಸಂಪ್ರದಾಯ ಇಲ್ಲಿದೆ. ದರ್ಶನ ಬಲಿಯೊಂದಿಗೆ ದೇವರ ಜತೆ ಇರುವ ಬಲಾ°ಡು ದಂಡನಾಯಕ ಉಳ್ಳಾಳ್ತಿ ಭಂಡಾರದ ಉಳ್ಳಾಳ್ತಿ ದೈವದ ಪಾತ್ರಿ ಅಪ್ಪಣೆ ನೀಡಿದ ಬಳಿಕವಷ್ಟೇ ಬಟ್ಟಲು ಕಾಣಿಕೆ ಸಮರ್ಪಣೆಯಾಗುವುದು ವಿಶೇಷ.

ಭೂತ ಬಲಿ ನೋಡಬಾರದು
ಎ. 17ರ ತಡರಾತ್ರಿ ಶ್ರೀ ದೇವಾಲಯದ ಒಳಾಂಗಣದಲ್ಲಿ ನಡೆಯುವ ಶ್ರೀ ಭೂತ ಬಲಿಯನ್ನು ದೇವರ ಸೇವಕರ ಹೊರತು ಯಾರೂ ನೋಡಬಾರದು ಎನ್ನುವ ವಿಶಿಷ್ಟ ಪದ್ಧತಿ ಇಲ್ಲಿದೆ. ಭೂತ ಬಲಿ ಮುಗಿಯದೇ ದೇವರ ಶಯನೋತ್ಸವಕ್ಕೆ ತೆರಳುವಂತಿಲ್ಲ. ಭೇರಿ ಪೂಜೆ ಮತ್ತು ಭಕ್ತರು ನೋಡಬಾರದ ಭೂತ ಬಲಿ ನಡೆಯುವುದು ಈ ದೇವಾಲಯದಲ್ಲಿ ಮಾತ್ರ.

ಇಂದು ಬಲ್ನಾಡಿನಿಂದ ಭಂಡಾರ ಆಗಮನ
ಜಾತ್ರೆಯ ಪ್ರಯುಕ್ತ ಎ. 16ರ ಸಂಜೆ ದೇಗುಲದ ಒಳಾಂಗಣದಲ್ಲಿ ದೇವರ ದೀಪ ಬಲಿ ಉತ್ಸವ, ರಾತ್ರಿ ಉತ್ಸವ ಬಲಿ, ಬಲಾ°ಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಭಂಡಾರ ಆಗಮಿಸಲಿದೆ. ಬಳಿಕ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.

ಅವಭೃಥ ಸವಾರಿ
ಜಾತ್ರೆಯ ಧಾರ್ಮಿಕ ವಿಶೇಷತೆಗಳಲ್ಲಿ ಶ್ರೀ ದೇವರ ವೀರಮಂಗಲ ಅವಭೃಥ ಸವಾರಿ ಕೂಡ ಪ್ರಮುಖವಾಗಿದೆ. ದೇಗುಲದಿಂದ 13 ಕಿ.ಮೀ. ದೂರದಲ್ಲಿರುವ ವೀರಮಂಗಲ ಕುಮಾರಧಾರಾ ನದಿಗೆ ಅವಭೃಥ ಸ್ನಾನಕ್ಕೆ ತೆರಳುವುದು. ಎ. 18ರ ಸಂಜೆ ದೇಗುಲದಿಂದ ಸಾವಿರಾರು ಭಕ್ತರೊಂದಿಗೆ ದೇವರ ಅವಭೃಥ ಸವಾರಿ ಹೊರಟು ಎ. 19ರಂದು ಮುಂಜಾನೆ ವೀರಮಂಗಲ ಕುಮಾರಧಾರಾ ನದಿ ತಟವನ್ನು ತಲುಪುತ್ತಾರೆ. ದಾರಿಯುದ್ದಕ್ಕೂ ಆರತಿ, ಹಣ್ಣುಕಾಯಿ, ಮತ್ತು ಕಟ್ಟೆಪೂಜೆಗಳನ್ನು ಸ್ವೀಕರಿಸುತ್ತಾ ದೇವರು ವೀರಮಂಗಲ ಜಳಕಕ್ಕೆ ಸಾಗುತ್ತಾರೆ. ಪುತ್ತೂರಿನಿಂದ ದೇವರ ಸವಾರಿಯ ಜತೆ ಪುರುಷರಕಟ್ಟೆಯ ತನಕ ತೆರಳುವ ಸಂಪ್ರದಾಯವನ್ನು ಕೆಲವು ಭಕ್ತರು ಈಗಲೂ ಪಾಲಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next