Advertisement

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

12:34 PM Sep 20, 2024 | Team Udayavani |

ಪುತ್ತೂರು: ಪುತ್ತೂರು ನಗರವನ್ನು ಶೂನ್ಯ ತ್ಯಾಜ್ಯ ವಲಯವನ್ನಾಗಿ ಪರಿವರ್ತಿ ಸುವ ಪ್ರಯತ್ನಕ್ಕೆ ಇನ್ನೆರೆಡೆ ಹೆಜ್ಜೆ ಬಾಕಿ ಉಳಿದಿದೆ.

Advertisement

ಪ್ರಸ್ತುತ ಹಸಿ ಕಸ ಬಯೋಗ್ಯಾಸ್‌ ಆಗಿ ಪರಿವರ್ತನೆಗೊಂಡರೆ, ಉಳಿದ ಒಣ ಕಸವನ್ನು ವಿಲೇ ಮಾಡಲು ಸಂಸ್ಥೆಯೊಂದಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಬನ್ನೂರು ನೆಕ್ಕಿಲದ ಡಂಪಿಂಗ್‌ ಯಾರ್ಡ್‌ ತ್ಯಾಜ್ಯ ಮುಕ್ತವಾಗುವ ನಿರೀಕ್ಷೆ ಮೂಡಿದೆ.

ಹಸಿ ತ್ಯಾಜ್ಯದಿಂದ ಬಯೋಗ್ಯಾಸ್‌
ನಗರದಲ್ಲಿ ದಿನಂಪ್ರತಿ 20 ರಿಂದ 22 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಹಸಿಕಸ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ನಗರದ ನೆಕ್ಕಿಲ ಡಂಪಿಂಗ್‌ ಯಾರ್ಡ್‌ಗೆ ಕೊಂಡೊಯ್ಯಲಾಗುತ್ತದೆ. ಒಟ್ಟು ತ್ಯಾಜ್ಯದಲ್ಲಿ ಶೇ.48 ಹಸಿತ್ಯಾಜ್ಯ, ಶೇ.52 ಒಣ ತ್ಯಾಜ್ಯ ಎಂದು ಅಂದಾಜಿಸಲಾಗಿದೆ. ಹಸಿತ್ಯಾಜ್ಯದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಎಂಬಂತೆ ರೋಟರಿ ಕ್ಲಬ್‌ ಪುತ್ತೂರು ಪೂರ್ವ ಇದರ ನೇತೃತ್ವದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಬಯೋಗ್ಯಾಸ್‌ ಉತ್ಪಾದನ ಘಟಕ ನಿರ್ಮಾಣಗೊಂಡು ಕಾಮಗಾರಿ ಪೂರ್ಣಗೊಂಡಿದೆ.

ಒಣ ತ್ಯಾಜ್ಯ ಶೇ.30 ರಷ್ಟು ಉಳಿಕೆ
ಒಣ ತ್ಯಾಜ್ಯದ ವಿಲೇಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇದರ ಜವಾಬ್ದಾರಿಯನ್ನು ರೋಟರಿ ಸಂಸ್ಥೆ ವಹಿಸಿಕೊಳ್ಳುವಂತೆ ನಗರ ಸಭೆ ಕೋರಿತ್ತು. ಕರಾರು ಒಪ್ಪಂದದಲ್ಲಿ ಹಸಿ ತ್ಯಾಜ್ಯದೊಂದಿಗೆ ಒಣ ತ್ಯಾಜ್ಯದ ಸಂಸ್ಕರಣೆ ಮತ್ತು ವಿಲೇ ಅಂಶವನ್ನು ಸೇರಿಸಲಾಗಿತ್ತು. ರೋಟರಿ ಸಂಸ್ಥೆಯು ಶೇ.52 ರಷ್ಟು ಒಣ ತ್ಯಾಜ್ಯದಲ್ಲಿ ಪುನರ್‌ ಬಳಕೆಯ ವಸ್ತುಗಳನ್ನು ಮರು ಬಳಕೆ ಮಾಡುತ್ತಿದ್ದು ಶೇ.30 ರಷ್ಟು ಒಣ ತ್ಯಾಜ್ಯ ವಿಲೇ ಆಗದೆ ಡಂಪಿಂಗ್‌ ಯಾರ್ಡ್‌ನಲ್ಲಿ ಉಳಿಯುತ್ತಿದೆ. ಈ ತ್ಯಾಜ್ಯ ತೆರವಾದರೆ ಶೂನ್ಯ ತ್ಯಾಜ್ಯ ವಲಯ ಸಾಧ್ಯ ಎನ್ನುವ ದೃಷ್ಟಿಯಿಂದ ತೆರವಿಗೆ ಹೊಸ ಯೋಜನೆ ಸಿದ್ಧಪಡಿಸಲಾಗಿದೆ.

ಒಂದು ವರ್ಷಕ್ಕೆ ಅವಕಾಶ
ನಿತ್ಯ ಉಳಿಕೆ ಒಣ ತ್ಯಾಜ್ಯ ತೆರವಿಗೆ ಮಂಗಳೂರಿನ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದ್ದು ನಗರಸಭೆ ಆಡಳಿತ ಟ್ರಯಲ್‌ ಬೇಸ್‌ನಡಿ 1ವರ್ಷಕ್ಕೆ ಅವಕಾಶ ನೀಡಿದೆ. ಇಪಿಆರ್‌ ನಿಯಮದ ಪ್ರಕಾರ ಸಂಸ್ಥೆಯು ಆವಶ್ಯಕತೆ ಇರುವ ಕಾರ್ಮಿಕರನ್ನು ನಿಯೋಜಿಸಿ, ನಗರಸಭೆಯ ಲಭ್ಯ ಯಂತ್ರಗಳನ್ನು ಬಳಿಸಿ ಒಣ ತ್ಯಾಜ್ಯ ಘಟಕದ ನಿರ್ವಹಣೆ ಮಾಡಲಿದೆ. ಪ್ರಾಯೋಗಿಕ ಅವಧಿ ತೃಪ್ತಿಕರ ಎಂದು ಕಂಡು ಬಂದಲ್ಲಿ ನಗರಸಭೆ ನಿಗದಿಪಡಿಸುವ ರಾಜಧನವನ್ನು ಪಾವತಿಸುವಂತೆ ಸೂಚಿಸಿ ಒಪ್ಪಂದವನ್ನು ಎರಡು ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.

Advertisement

ಹಳೆ ತ್ಯಾಜ್ಯ ತೆರವಿಗೆ ಕ್ರಮ
ಬನ್ನೂರು ನೆಕ್ಕಿಲದ ಡಂಪಿಂಗ್‌ ಯಾರ್ಡ್‌ ನಲ್ಲಿ ಕಳೆದ 18 ವರ್ಷಗಳಿಂದ ಮಣ್ಣಿನೊಳಗೆ ಹುದುಗಿರುವ 50 ಸಾವಿರ ಟನ್‌ ಹಳೆ ತ್ಯಾಜ್ಯವನ್ನು ತೆರವು ಮಾಡುವ ಪ್ರಸ್ತಾವನೆಯನ್ನು ನಗರಸಭೆಯು ಡಿಸಿ ನೇತೃತ್ವದ ಸಮಿತಿಗೆ ಕಳುಹಿಸಿದೆ. 3.42 ಕೋ.ರೂ.ವೆಚ್ಚದ ಯೋಜನೆ ಇದಾಗಿದ್ದು ಅನುಮೋದನೆ ನೀಡಿದ ಬಳಿಕ ಬೆಂಗಳೂರು ಮೂಲದ ಸಂಸ್ಥೆ ಇದರ ನಿರ್ವಹಣೆ ಮಾಡಲಿದೆ. ತ್ಯಾಜ್ಯ ತೆರವಿನಿಂದ 3ಎಕ್ರೆ ಜಾಗ ನಗರಸಭೆಗೆ ಲಭ್ಯವಾಗಲಿದೆ. ನಿಯಮ ಪ್ರಕಾರ ತಿಂಗಳಿಗೆ 15 ಟನ್‌ ತ್ಯಾಜ್ಯ ಸಿಮೆಂಟ್‌ ಕಾರ್ಖಾನೆಗಳಿಗೆ ಸಾಗಿಸಬೇಕು. ತ್ಯಾಜ್ಯ ತೆರವು ಮಾಡಿ ಬೇಲ್‌ ಮಾಡಿಡುವುದು ನಗರಸಭೆಯ ಜವಾಬ್ದಾರಿ.ಇದನ್ನು ಉಚಿತವಾಗಿ ಸಾಗಾಟ ಮಾಡಿ ಸಿಮೆಂಟ್‌ ಕಂಪೆನಿಗಳಿಗೆ ಪೂರೈಕೆ ಮಾಡುವುದು ಕಂಪೆನಿಯ ಕೆಲಸವಾಗಿದೆ.

ಪ್ರಾಯೋಗಿಕ ಅವಧಿಯಲ್ಲಿ ನಗರಸಭೆಯ ಜವಾಬ್ದಾರಿ
ಒಣ ತ್ಯಾಜ್ಯ ಸಂಗ್ರಹಿಸಿ ನೀಡುವುದು

ಲಭ್ಯ ಇರುವ ಯಂತ್ರೋಪಕರಣ ಬಳಕಗೆ ಅನುಮತಿ ನೀಡುವುದು

ತ್ಯಾಜ್ಯ ವಿಂಗಡನೆ ಮತ್ತು ಇತರ ಕಾರ್ಯಕ್ಕೆ ಕಾರ್ಮಿಕರನ್ನು ನೀಡುವುದು

ಇಪಿಆರ್‌ ನಿಯಮದಂತೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ದೊರಕುವ ಆದಾಯದಲ್ಲಿ ಪಾಲು ನೀಡುವುದು

ಗುತ್ತಿಗೆ ಸಂಸ್ಥೆಯ ಜವಾಬ್ದಾರಿ
ಒಣ ತ್ಯಾಜ್ಯವನ್ನು ವಿಂಗಡಿಸಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡುವುದು

ಆವಶ್ಯಕತೆಗೆ ತಕ್ಕಂತೆ ಕಾರ್ಮಿಕರ ನಿಯೋಜನೆ

ಪ್ರಾಯೋಗಿಕ ಅವಧಿಯಲ್ಲಿ ಸ್ವಂತ ಬಂಡವಾಳ ಬಳಕೆ

ಶೂನ್ಯ ತ್ಯಾಜ್ಯ ವಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆ ಯುತ್ತಿದೆ. ಈಗಾಗಲೇ ಸಂಗ್ರಹವಾಗುವ ಹಸಿ ತ್ಯಾಜ್ಯ ಬಯೋಗ್ಯಾಸ್‌ ಆಗಿ ಮರು ಬಳಕೆಯಾದರೆ, ಉಳಿದ ಒಣ ಕಸವನ್ನು ತೆರವು ಮಾಡಲು ಸಂಸ್ಥೆಯೊಂದಕ್ಕೆ ಅವಕಾಶ ನೀಡಲಾಗಿದೆ. ಮಣ್ಣಿನಲ್ಲಿ ಹುದುಗಿರುವ ತ್ಯಾಜ್ಯ ತೆರವು ಮಾಡುವ ಪ್ರಸ್ತಾವನೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದಿದೆ.
-ಮಧು ಎಸ್‌. ಮನೋಹರ್‌, ಪೌರಾಯುಕ್ತ, ನಗರಸಭೆ ಪುತ್ತೂರು

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next