Advertisement

ಹೃದಯಾಘಾತ: ರಾಷ್ಟ್ರಮಟ್ಟದ ಮಾಜಿ ವೈಟ್‌ ಲಿಫ್ಟರ್‌ ಸಾವು

12:49 AM Dec 13, 2022 | Team Udayavani |

ಪುತ್ತೂರು : ಮೂಲತಃ ಸುಳ್ಯಪದವು ನಿವಾಸಿ ಪ್ರಸ್ತುತ ಪಡೀಲಿನಲ್ಲಿ ವಾಸ್ತವ್ಯ ಹೊಂದಿರುವ ರಾಷ್ಟ್ರಮಟ್ಟದ ಮಾಜಿ ವೈಟ್‌ ಲಿಫ್ಟರ್‌, ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ವೈಟ್‌ ಲಿಫ್ಟಿಂಗ್‌ ಕೋಚ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ಪ್ರಸಾದ್‌ (42) ಅವರು ಹೃದಯಾಘಾತದಿಂದ ಡಿ. 12ರಂದು ನಿಧನ ಹೊಂದಿದರು.

Advertisement

ಅವರಿಗೆ ಮನೆಯಲ್ಲಿದ್ದ ಸಂದರ್ಭ ಬೆಳಗ್ಗಿನ ಜಾವ ಎದೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭ ಸ್ವತಃ ತಮ್ಮ ಕಾರು ಡ್ರೈವ್‌ ಮಾಡಿಕೊಂಡು ರಾಜೇಂದ್ರ ಪ್ರಸಾದ್‌ ಅವರು ತಮ್ಮ ಪುತ್ರಿಯನ್ನು ಸುದಾನ ಶಾಲೆಗೆ ಬಿಟ್ಟು ಬಳಿಕ ಚಿಕಿತ್ಸೆಗೆಂದು ಚೇತನಾ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಇಸಿಜಿ ತೆಗೆಯುವ ಮೊದಲೇ ಅವರು ಮೃತಪಟ್ಟಿದ್ದರು.

ಅವರು ಪ್ರಸ್ತುತ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ವೈಟ್‌ ಲಿಫ್ಟಿಂಗ್‌ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಉಜಿರೆ ಎಸ್‌.ಡಿ.ಎಂ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮುಖ್ಯ ಕೋಚ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ನಾಲ್ಕು ಮಂದಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಉತ್ತಮ ತರಬೇತುದಾರ
ಪುತ್ತೂರಿನ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ರಾಜೇಂದ್ರ ಪ್ರಸಾದ್‌, ವೈಟ್‌ ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲದೆ ಫಿಲೋಮಿನಾ ಕಾಲೇಜಿನಲ್ಲಿ ವೈಟ್‌ ಲಿಫ್ಟಿಂಗ್‌ ಕೋಚ್‌ ಆಗಿ ಹಲವು ವರ್ಷ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು. ಅವರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಗುರುರಾಜ್‌ ಪೂಜಾರಿ ಇವರ ಶಿಷ್ಯ
ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಇಂಗ್ಲೆಂಡಿನ ಬರ್ಮಿಂಗ್‌ ಹ್ಯಾಂನಲ್ಲಿ ನಡೆದಿರುವ ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ (2018ರಲ್ಲಿ ಬೆಳ್ಳಿ ಪದಕ) ಪಡೆದಿರುವ ಗುರುರಾಜ್‌ ಪೂಜಾರಿಯವರು ರಾಜೇಂದ್ರ ಪ್ರಸಾದ್‌ ಅವರ ಶಿಷ್ಯರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next