Advertisement

‘ಕನ್ನಡ ಆತ್ಮಾಭಿಮಾನ ನಿತ್ಯೋತ್ಸವವಾಗಲಿ’

11:17 AM Nov 02, 2018 | |

ಪುತ್ತೂರು : ಏಕೀಕೃತ ಕನ್ನಡ ಕಟ್ಟಿದ ಮಹನೀಯರು ನಮಗೆ ಆದರ್ಶವಾಗಬೇಕು. ಕನ್ನಡ ನಾಡು ಉದಯಿಸಿದ ಆತ್ಮಾಭಿಮಾನ, ಸ್ವಾಭಿಮಾನದ ದಿನ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವ ಆಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆಶಯ ವ್ಯಕ್ತಪಡಿಸಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಹುಟ್ಟಿದ ನಾಡಿಗೆ ನಾನೇನು ಕೊಡಬಲ್ಲೆ ಎನ್ನುವ ಯೋಚನೆ, ಯೋಜನೆ ನಮ್ಮಲ್ಲಿ ಇರಬೇಕು. ಕನ್ನಡ ನೆಲ, ಜಲದ ಋಣವನ್ನು ತೀರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಗಂಧದ ಬೀಡು, ವಜ್ರ ವೈಢೂರ್ಯವನ್ನು ಸಂತೆಯಲ್ಲಿ ಮಾರಾಟ ಮಾಡಿದ ಘನತೆ ಗೌರವದ ಇತಿಹಾಸವನ್ನು ಹೊಂದಿದ, ಸರ್ವರನ್ನೂ ಪ್ರೀತಿಯಿಂದ ಕಾಣುವ ಸಂಸ್ಕೃತಿಯ, ಘನತೆಯ ಸಾಹಿತ್ಯವನ್ನು ಹೊಂದಿದ ಕನ್ನಡ ನಾಡು ಸಂಪದ್ಭರಿತವಾಗಿದೆ ಎಂದರು.

ತಿಳಿದು ಬಳಸಿದಾಗ ಶ್ರೀಮಂತಿಕೆ
ಉದ್ಘಾಟನೆ ನೆರವೇರಿಸಿದ ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯವರು ಕನ್ನಡವನ್ನು ಶುದ್ಧವಾಗಿ ಮಾತನಾಡುವಂತೆ ರಾಜ್ಯದ ಬೇರೆ ಯಾರೂ ಮಾತನಾಡುವುದಿಲ್ಲ. ಭಾಷೆಯನ್ನು ಕಡಿಮೆ ಬಳಸಿದರೂ ಶುದ್ಧತೆ ಮುಖ್ಯ. ಭಾಷೆಯ ಸಾಹಿತ್ಯ, ಆಕರಗಳನ್ನು ತಿಳಿದುಕೊಂಡು ಬಳಸಿದಾಗ ಭಾಷೆ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ. ಕನ್ನಡ ಬಗ್ಗುವ, ಒಗ್ಗುವ, ಬಳುಕುವ ಭಾಷೆ ಎಂದರು.

ಕನ್ನಡ ಜಾಗೃತಿ ಉಪನ್ಯಾಸ ನೀಡಿದ ಸ.ಪ್ರ. ಮಹಿಳಾ ಕಾಲೇಜಿನ ಉಪನ್ಯಾಸಕ ಡಾ| ನರೇಂದ್ರ ರೈ ದೇರ್ಲ, ಮಾತನಾಡದ ಜಗತ್ತು ಇಂದು ಸೃಷ್ಟಿಯಾಗುತ್ತಿದೆ. ಆಧುನಿಕತೆ ಆಡುವ ಭಾಷೆಯನ್ನು ದೂರ ಮಾಡುತ್ತಿದೆ. ಸಹವಾಸ, ಸಂಬಂಧ, ಭಾಷೆ ಈ ಕಾರಣದಿಂದ ಸತ್ತುಹೋಗುತ್ತಿದೆ. ಇದರಿಂದ ಆಚೆಗೆ ಬಂದು ಹೊಸ ನಾಗರೀಕತೆಯನ್ನು ಬೇರಿನ ಕಡೆಗೆ ಕಿವಿಗೊಡುವಂತೆ ಮಾಡಬೇಕು. ಸಂಶೋಧಕರು, ವಿಶ್ವ ವಿದ್ಯಾನಿಲಯ ಗಳಿಂದ ಭಾಷೆ ಬದುಕಲು ಸಾಧಯವಿಲ್ಲ. ಭಾಷೆಯನ್ನು ಉಳಿಸಿದವರು, ಉಳಿಸುವವರು ನೆಲದವರೇ ಎಂದು ಅಭಿಪ್ರಾಯಿಸಿದರು.

ಗೌರವಾರ್ಪಣೆ
ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಿದ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಡಾ| ಶಿವರಾಮಕಾರಂತ ಸ. ಶಾಲೆ, ಸುದಾನ ವಸತಿಯುತ ಶಾಲೆಯನ್ನು ಗೌರವಿಸಲಾಯಿತು. ಮೆರವಣಿಗೆಯಲ್ಲಿ ತೊಡಗಿಸಿಕೊಂಡ ಕೊಂಬೆಟ್ಟು ಸರಕಾರಿ ಶಾಲೆ, ಬೆಥನಿ ಆಂ.ಮಾ. ಶಾಲೆ, ಲಿಟ್ಲ ಫ್ಲವರ್‌ ಶಾಲೆ, ಸಂತ ಫಿಲೋಮಿನಾ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಪಟ್ಟೆ ಪ್ರತಿಭಾ ಪ್ರೌಢಶಾಲೆ ಮತ್ತು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ಎ. ಅವರನ್ನು ಅಭಿನಂದಿಸಲಾಯಿತು.

Advertisement

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಶುಭ ಹಾರೈಸಿದರು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ, ತಹಶೀಲ್ದಾರ್‌ ಅನಂತಶಂಕರ್‌, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಉಪಸ್ಥಿತರಿದ್ದರು. ಉಪತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಸ್ವಾಗತಿಸಿದರು. ದೈ. ಶಿ. ಶಿಕ್ಷಕ ಬಾಲಕೃಷ್ಣ ಪೊರ್ದಾಳ್‌ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next