Advertisement

ಪುತ್ತೂರು ಜಾತ್ರೆ ಸಂಪನ್ನ; ವೀರಮಂಗಲ- ದೇವರ ಅವಭೃಥ ಸ್ನಾನ

10:55 AM Apr 20, 2023 | Team Udayavani |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಬುಧವಾರ ಬೆಳಗ್ಗೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು. ಮಂಗಳವಾರ ಸಂಜೆ ದೇವಾಲಯದಿಂದ ತೆರಳಿದ ಶ್ರೀ ದೇವರ ಅವಭೃಥ ಸವಾರಿಯು ದಾರಿಯುದ್ದಕ್ಕೂ 56ಕ್ಕೂ ಹೆಚ್ಚು ಕಟ್ಟೆಪೂಜೆಗಳು, ಸುಮಾರು 10,000ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ವೀರಮಂಗಲಕ್ಕೆ ತಲುಪಿತು.

Advertisement

ತಳಿರು ತೋರಣ, ವಿದ್ಯುತ್‌ ದೀಪಗಳ ಅಲಂಕಾರದಿಂದ ಶೃಂಗಾರಗೊಂಡಿದ್ದ ಮಂಜೇಶ್ವರ-ಕಾಣಿಯೂರು ರಸ್ತೆಯಲ್ಲಿ 12 ಕಿ.ಮೀ. ದೂರದ ವೀರಮಂಗಲದ ಕುಮಾರಧಾರಾ ನದಿಗೆ ಸೋಮವಾರ ಬೆಳಗ್ಗೆ ತಲುಪಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ
ಅವಭೃಥ ಸ್ನಾನ ಮುಗಿಸಿ ದೇವಾಲಯಕ್ಕೆ ಮರಳಿತು.

ಬೆಳಗ್ಗೆ ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು. ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು. ಬಳಿಕ ಭಕ್ತರು ದೇವರ ಧರ್ಮನಡೆಯಲ್ಲಿ ನಿಂತು ಪ್ರಾರ್ಥಿಸಿ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಧ್ವಜಾವರೋಹಣ ಮುಗಿದ ಬೆನ್ನಲ್ಲೇ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯಿತು.

ಬುಧವಾರ ಬೆಳಗ್ಗೆ ವೀರಮಂಗಲ ಕುಮಾರಧಾರಾ ನದಿಯಲ್ಲಿ ಶ್ರೀ ದೇವರ ಅವಭೃಥ ಸ್ನಾನ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯಿತು. ಪಂಚ ದ್ರವ್ಯಗಳಿಂದ ಶ್ರೀ ದೇವರ ಅವಭೃಥ ನಡೆಯಿತು. ದೇವರ ಸ್ನಾನದ ಬಳಿಕ ಸಾವಿರಾರು ಸಂಖ್ಯೆಯ ಭಕ್ತರು ನದಿಯಲ್ಲಿ ಮಿಂದು ಪುನೀತರಾದರು. ಬಳಿಕ ಶ್ರೀ ದೇವರ ಪ್ರಭಾವಳಿಯೊಂದಿಗೆ ನದಿ ದಡದಲ್ಲಿರುವ ಕಟ್ಟೆಯಲ್ಲಿ ಪೂಜೆ ನಡೆದು
ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಶ್ರೀ ದೇವರ ಸವಾರಿ ಮರಳಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮರಳಿತು.

ಸಾವಿರಾರು ಭಕ್ತರು
ಶ್ರೀ ದೇವರ ಸವಾರಿ ಮರಳಿ ಬರುವ ಸಂದರ್ಭದಲ್ಲಿ ವಿವಿಧ ವಾಹನಗಳಲ್ಲಿ ವಾದ್ಯಘೋಷ, ಶ್ರೀ ಮಹಾಲಿಂಗೇಶ್ವರ
ದೇವರ ಭಕ್ತಿ ಗೀತೆ, ಭಕ್ತರಿಂದ ಶಿವನಾಮ ಸ್ಮರಣೆ ನಡೆಯಿತು. ದೇವರೊಂದಿಗೆ ಅವಭೃಥಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ನೂರಾರು ಭಕ್ತರು ವೀರಮಂಗಲ ಕುಮಾರಧಾರಾ ನದಿಯಲ್ಲಿ ಶ್ರೀ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಆಗಮಿಸಿದರು. ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.

Advertisement

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ, ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೀಣಾ ಬಿ.ಕೆ.,ಡಾ|ಸುಧಾ ಶ್ರೀಪತಿ ರಾವ್‌, ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಕೆ.ಎಸ್‌., ರಾಮದಾಸ ಗೌಡ ಎಸ್‌, ಶೇಖರ ನಾರಾವಿ, ರಾಮಚಂದ್ರ ಕಾಮತ್‌ ಮೊದಲಾದವರಿದ್ದರು.

ದೈವಗಳ ನೇಮ
ಕೊಡಿ ಇಳಿದ ಬಳಿಕ ಎರಡು ದಿನ ದೈವಗಳ ನೇಮ, ಚೂರ್ಣೋತ್ಸವ, ವಸಂತಕಟ್ಟೆ ಪೂಜೆ ನಡೆಯುತ್ತದೆ. ಬುಧವಾರ ರಾತ್ರಿ ಪಿಲಿಭೂತ, ರಕ್ತೇಶ್ವರಿ ನೇಮ ನಡೆದು ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ಇತ್ಯಾದಿ ದೈವಗಳ ನೇಮ ಜರಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next